Advertisement

ಕಾರ್ಮಿಕರ ದಿನಾಚರಣೆಗಿದೆ ಚಾರಿತ್ರಿಕ ದೀರ್ಘ‌ ಚರಿತ್ರೆ

03:08 PM May 04, 2019 | Team Udayavani |

ಹಾವೇರಿ: ಜಗತ್ತಿನಾದ್ಯಂತ ಆಚರಿಸಲ್ಪಡುವ ಕಾರ್ಮಿಕರ ದಿನಾಚರಣೆ ಅದೊಂದು ಅಂತಾರಾಷ್ಟ್ರೀಯ ಮಹತ್ವದ ದಿನ ಮಾತ್ರವಲ್ಲ, ಚಾರಿತ್ರಿಕವಾಗಿ ಒಂದು ದೀರ್ಘ‌ ಚರಿತ್ರೆ ತನ್ನೊಡಲಲ್ಲಿ ಇಟ್ಟಿಕೊಂಡಿರುವ ದಿನ ಎಂದು ವಕೀಲ, ಕಾರ್ಮಿಕ ಸಂಘಟನೆ ಮುಖಂಡ ನಾರಾಯಣ ಕಾಳೆ ಹೇಳಿದರು.

Advertisement

ನಗರದ ಮುರುಘರಾಜೇಂದ್ರ ಮಠದ ಆವರಣದಲ್ಲಿ ಸಿಐಟಿಯು ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಡೆದ ಕಾರ್ಮಿಕ ದಿನಾಚರಣೆಯಲ್ಲಿ ಮಾತನಾಡಿದ ಅವರು, ಬಂಡವಾಳಶಾಹಿ ವ್ಯವಸ್ಥೆಯನ್ನು ಕಿತ್ತುಹಾಕುವಲ್ಲಿ ಕಾರ್ಮಿಕ ವರ್ಗದ ಪಾತ್ರದ ಕುರಿತು ಕಾರ್ಮಿಕರ ಪ್ರಜ್ಞೆ ಎತ್ತರಿಸಲು ಮತ್ತು ಎಲ್ಲ ಶೋಷಣೆ ಕೊನೆಗಾಣಿಸುವ ಅಂತಿಮ ಸಂಘಕ್ಕಾಗಿ ಕಾರ್ಮಿಕ ವರ್ಗವನ್ನು ಸಜ್ಜುಗೊಳಿಸಲು ಸಿಐಟಿಯು ಪ್ರತಿಜ್ಞೆಗೈಯುತ್ತದೆ. ತಮ್ಮ ಜೀವನಾಧಾರಗಳು, ಜೀವನ ಮತ್ತು ದುಡಿಮೆಯ ಪರಿಸ್ಥಿತಿಗಳನ್ನು ರಕ್ಷಿಸಿಕೊಳ್ಳಲು ಕಾರ್ಮಿಕರು, ರೈತರು, ಕೃಷಿ ಕೂಲಿಕಾರರು, ಯುವಜನ, ವಿದ್ಯಾರ್ಥಿಗಳು ಹೀಗೆ ಸಮಾಜದ ಎಲ್ಲ ವಿಭಾಗದ ಜನರ ಹೆಚ್ಚುತ್ತಿರುವ ಹೋರಾಟಗಳನ್ನು ಸಿಐಟಿಯು ಸ್ವಾಗತಿಸುತ್ತದೆ ಎಂದರು.

ಸಂವಿಧಾನಿಕ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ಪ್ರತಿಪಾದನೆಗೆ ದಲಿತರು ಮತ್ತು ಆದಿವಾಸಿಗಳು ಸೇರಿದಂತೆ ವಿವಿಧ ವಿಭಾಗಗಳ ಹೆಚ್ಚುತ್ತಿರುವ ಹೋರಾಟಗಳನ್ನು ಕೂಡ ಸ್ವಾಗತಿಸುತ್ತದೆ. ಚುನಾವಣೆಯ ನಂತರ ಯಾವುದೇ ಸರ್ಕಾರ ಬಂದರೂ, ನವ ಉದಾರವಾದಿ ನೀತಿಗಳನ್ನು ಸೋಲಿಸುವ ಉದ್ದೇಶದಿಂದ ಈ ಹೋರಾಟಗಳನ್ನು ಮತ್ತಷ್ಟು ತೀವ್ರಗೊಳಿಸಲು ಕಾರ್ಮಿಕ ವರ್ಗಕ್ಕೆ ಮತ್ತು ದುಡಿಯುವ ವರ್ಗಕ್ಕೆ ಕರೆ ನೀಡುತ್ತದೆ. ಕಾರ್ಪೊರೇಟ್ ಪರದಿಂದ ಜನ ಪರದ ಕಡೆಗೆ ನೀತಿಗಳ ದಿಕ್ಕನ್ನು ಬದಲಾಯಿಸಲು ಹೋರಾಟ ತೀವ್ರಗೊಳಿಸಬೇಕು ಎಂದರು.

ಸಿಐಟಿಯು ಜಿಲ್ಲಾ ಸಂಚಾಲಕ ವಿನಾಯಕ ಕುರುಬರ ಮಾತನಾಡಿ, ಯಾರು ಸಂಪತ್ತನ್ನು ಸೃಷ್ಟಿಸುತ್ತಾರೋ ಅವರಿಗೇ ಅದು ಸೇರಬೇಕು. ಎಂಬ ಘೋಷಣೆಯೊಂದಿಗೆ ಈ ವರ್ಗದ ಮೇ ದಿನಾಚರಣೆಯನ್ನು ಆಚರಿಸಬೇಕೆಂಬ ಕಾರ್ಮಿಕ ಸಂಘಗಳ ವಿಶ್ವ ಒಕ್ಕೂಟ ಕರೆಯನ್ನು ಸಿಐಟಿಯುಪೂರ್ಣವಾಗಿ ಬೆಂಬಲಿಸುತ್ತದೆ. ಬಂಡವಾಳಶಾಹಿ ಶೋಷಣೆ ವ್ಯವಸ್ಥೆಯ ವಿರುದ್ಧ ಸಂಘವನ್ನು ಗಟ್ಟಿಗೊಳಿಸುವ ಪ್ರಯತ್ನ ಸಿಐಟಿಯು ಮುಂದುವರಿಸಲಿದೆ. ಮಾನವ ಕುಲದ ಸಾಮೂಹಿಕ ಪ್ರಯತ್ನಗಳ ಮೂಲಕ ಸಾಧಿಸಲಾದ ಅಪಾರ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಗಳನ್ನು ಕೆಲವೇ ದೇಶಗಳು ಮತ್ತು ಕೆಲವೇ ಕಾರ್ಪೋರೇಟ್‌ಗಳು ಕಬಳಿಸಿವೆ. ಇವುಗಳನ್ನು ಜನತೆಯ ಅನುಕೂಲಕ್ಕಾಗಿ ಬಳಸುತ್ತಿಲ್ಲ. ಬದಲಿಗೆ ತಮ್ಮ ಲಾಭಗಳನ್ನು ಹೆಚ್ಚಿಸಿಕೊಳ್ಳಲು ಮತ್ತು ದುಡಿಯುವ ಜನತೆಯನ್ನು ದಿವಾಳಿ ಮಾಡಲು ಬಳಸಲಾಗುತ್ತಿದೆ. ಇಂತಹ ಲಾಭಕೋರ ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಸಿಐಟಿಯು ತನ್ನ ಆಕ್ರೋಶ ವ್ಯಕ್ತಪಡಿಸುತದೆ ಎಂದರು.

ಈಗಲೂ ಜನರು ನಿರುದ್ಯೋಗ, ಬಡತನ, ಅನಕ್ಷರತೆ, ಅನಾರೋಗ್ಯ, ನಿರ್ವಸತಿ, ಮೂಲ ಸೌಲಭ್ಯಗಳ ಕೊರತೆಯಿಂದ ನರಳುತ್ತಿರುವುದು ಮಾನವ ಕುಲವೇ ನಾಚಿಕೆ ಪಡುವ ವಿಷಯವಾಗಿದೆ. ಆದ್ದರಿಂದ ಇಂತಹ ಅಮಾನವೀಯ ಬಂಡವಾಳಶಾಹಿ ವ್ಯವಸ್ಥೆಯು ಮುಂದುವರಿಯುವ ಹಕ್ಕಿಲ್ಲ. ಇದನ್ನು ಮುಂದುವರಿಯಲು ಬಿಡಬಾರದು ಎಂದರು.

Advertisement

ಈ ಸಂದರ್ಭದಲ್ಲಿ ಸಿಐಟಿಯು ಮುಖಂಡರಾದ ವಿ.ಕೆ.ಬಾಳಿಕಾಯಿ, ಎಸ್‌ಎಫ್‌ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಭೋವಿ, ಜ್ಯೋತಿ ದೊಡ್ಡಮನಿ, ಎಸ್‌ಪಿಜೆ ಮುಖ್ಯಸ್ಥರಾದ ಹಸೀನಾ ಹೆಡಿಯಾಲ, ಹೆಸ್ಕಾಂ ನೌಕರರ ಮುಖಂಡರಾದ ಚಂದ್ರು ಬೆನಕನಹಳ್ಳಿ, ಗುಡದಯ್ಯ ಬರಡಿ, ಸಂತೋಷ ಕುಂಸಿ, ಶಂಕರ ಜಂಗಳೆ, ಟಿ.ಎನ್‌. ಪಾಟೀಲ, ಗ್ರಾಪಂ ನೌಕರರ ಮುಖಂಡರಾದ ಅಜ್ಜಪ್ಪ ಬಾರ್ಕಿ, ದಯಾನಂದ ಚೌಟಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next