Advertisement

ಕೆರೆ ಹೂಳೆತ್ತುವುದು ಅನಿವಾರ್ಯ

11:07 AM Jan 20, 2019 | |

ಕುಷ್ಟಗಿ: ಪಟ್ಟಣದ ಸೇರಿದಂತೆ 30ಕ್ಕೂ ಅಧಿಕ ಗ್ರಾಮಗಳಿಗೆ ನಿಡಶೇಸಿ ಕೆರೆ ಅಂತರ್ಜಲದ ಮೂಲವಾಗಿರುವ ಹಿನ್ನೆಲೆಯಲ್ಲಿ ಕೆರೆಯ ಹೂಳೆತ್ತುವುದು ಅನಿವಾರ್ಯವಾಗಿದೆ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

Advertisement

ತಾಲೂಕಿನ ವಜ್ರಬಂಡಿ ಕ್ರಾಸ್‌ ದೇವೇಂದ್ರಪ್ಪ ಬಳೂಟಗಿ ಅವರ ತೋಟದಲ್ಲಿ ನಿಡಶೇಷಿ ಕೆರೆ ಪುನಶ್ಚೇತನ ಹಿನ್ನೆಲೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕೆರೆಯ ಹೂಳೆತ್ತುವುದು ಸದ್ಯ ಸಕಾಲಿಕವಾಗಿದೆ. ಈಗಲಾದರೂ ಕೆರೆ ಹೂಳೆತ್ತಲು ಮನಸ್ಸು ಮಾಡಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ತಾವು ಶಾಸಕರಾಗಿದ್ದಾಗ ಈ ಕೆರೆಯ ಹೂಳೆತ್ತುವುದು, ಆಳ ಹೆಚ್ಚಿಸಲು ಸಮಗ್ರ ಅಭಿವೃದಿœಗಾಗಿ ಸಿ.ಎಂ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ 5 ಕೋಟಿ ರೂ. ಮಂಜೂರಾಗಿತ್ತು. ಆದರೆ ಇಲ್ಲಿನ ಸಣ್ಣ ನೀರಾವರಿ ಇಲಾಖೆಯ ಬಹುಕೋಟಿ ತುಂಡು ಗುತ್ತಿಗೆ ಹಗರಣದಿಂದಾಗಿ ಮಂಜೂರಿಯಾದ ಅನುದಾನ ವಾಪಸ್ಸಾಯಿತು. ತನಿಖೆ ನಂತರ ಬಿಡುಗಡೆಗೊಳಿಸುವ ಭರವಸೆ ಸಿಕ್ಕಿದ್ದರೂ ಪುನಃ ಸದರಿ ಮೊತ್ತ ಬಿಡುಗಡೆಗೊಳಿಸುವ ಪ್ರಯತ್ನವೂ ನಡೆಯಲಿ, ಇತ್ತ ಜನತೆಯ ಸಹಭಾಗಿತ್ವದಲ್ಲಿ ಹೂಳೆತ್ತುವ ಕೆಲಸವು ನಡೆಯಲಿ. ಈ ಹೂಳೆತ್ತುವ ಕಾರ್ಯಯೋಜನೆಗೆ ನಮ್ಮ ಬೆಂಬಲವಿದ್ದು, ಸಮಿತಿ ಕೈಗೊಳ್ಳುವ ನಿರ್ಧಾರಗಳಿಗೆ ಬದ್ಧನಾಗಿರುವೆ ಎಂದರು.

ಕೆರೆ ಹೂಳೆತ್ತುವ ಸಮಿತಿಯ ದೇವೇಂದ್ರಪ್ಪ ಬಳೂಟಗಿ ಮಾತನಾಡಿ, ಮಳೆ ಬಂದಾಗ ಮಳೆಯ ನೀರನ್ನು ಹಿಡಿದಿಟ್ಟುಕೊಳ್ಳಲು ಕೆರೆಯಿಂದ ಮಾತ್ರ ಸಾಧ್ಯವಿದೆ. ಈ ಕೆರೆಯ ಪ್ರದೇಶದಲ್ಲಿ ಆಳವಾಗಿ ಹೂಳೆತ್ತುವುದರಿಂದ ನೀರು ಸಂಗ್ರಹಣೆ ಸಾಮಾರ್ಥ್ಯ ಹೆಚ್ಚುವುದಲ್ಲದೇ ಅಂತರ್ಜಲ ಪ್ರಮಾಣ ಗಣನೀಯವಾಗಿ ಹೆಚ್ಚಲಿದೆ ಎಂದರು.

ಬಸವರಾಜ್‌ ಕುದರಿಮೋತಿ ಮಾತನಾಡಿ, ಕೆರೆಯ ಪ್ರದೇಶದಲ್ಲಿ ನೀರು ಬರಿದಾದಾಗ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಕ್ಷೀಣಿಸಿ, ತಾಪತ್ರಯ ಎದುರಿಸಿದ ಅನುಭವವೂ ಇದೆ. ಹೀಗಾಗಿ ಕೆರೆ ಪ್ರದೇಶದಲ್ಲಿ ನೀರಿದ್ದರೆ ಅಂತರ್ಜಲ ಉಳಿಸಿಕೊಳ್ಳಲು ಸಾಧ್ಯವಿದೆ ಎಂದರು.

ಪುರಸಭೆ ಸದಸ್ಯ ವಸಂತ ಮೇಲಿನಮನಿ ಮಾತನಾಡಿ, ಕೆರೆಯೊಂದಿಗೆ ಭಾವನಾತ್ಮಕ ಸಂಬಂಧ ಉಳಿಯಲು ನಮ್ಮೂರ ಕೆರೆ ಎನ್ನುವ ಭಾವನೆ ಎಲ್ಲರಲ್ಲಿರಬೇಕು ಎಂದರು. ಕರ್ನಾಟಕ ಪ್ರಾಂತ ರೈತ ಸಂಘದ ಆರ್‌.ಕೆ. ದೇಸಾಯಿ ಮಾತನಾಡಿ, ಆಳ ಹೆಚ್ಚಾದಂತೆ ಕೊಳವೆಬಾವಿಯ ನೀರು ವಿಷಕಾರಿಯಾಗುತ್ತಿದೆ. ಇದನ್ನು ತಪ್ಪಿಸಲು ಕೆರೆ ಹೂಳೆತ್ತಿ ನೀರಿನ ಸಂಗ್ರಹ ಸಾಮಾರ್ಥ್ಯ ಹೆಚ್ಚಿಸಬೇಕಿದೆ. ತಾಲೂಕಿನ 41 ಕೆರೆಗಳಿದ್ದು, ಎಲ್ಲ ಕೆರೆಗಳ ಹೂಳೆತ್ತುವ ಕಾರ್ಯ ನಡೆದರೆ ಉಳಿದ ಕೆರೆಗಳ ಹೂಳೆತ್ತುವುದಕ್ಕೆ ಪ್ರೇರಣೆ ಸಿಗಲಿದೆ ಎಂದರು.

Advertisement

ಮಲ್ಲಿಕಾರ್ಜುನ ಮೇಟಿ ಮಾತನಾಡಿ, ಕೆರೆ ಹೂಳೆತ್ತುವ ಕೆಲಸಕ್ಕೆ ಒಂದೊಂದು ದಿನ ಒಂದು ಗ್ರಾಮ ಶ್ರಮದಾನ ನಿರ್ವಹಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾರ್ಯನಿರ್ವಹಿಸುವ ಕೂಲಿಕಾರರು ಒಂದು ದಿನದ ಕೂಲಿ ನೀಡಿ ಬೆಂಬಲಿಸಬೇಕೆಂದರು.

ಇದೇ ವೇಳೆ ಪರಸಪ್ಪ ಕತ್ತಿ, ದೊಡ್ಡಬಸವ ಬಯ್ನಾಪುರ, ಅಮರೇಶ್ವರ ಶೆಟ್ಟರ್‌, ಬಸೆಟೆಪ್ಪ ಕುಂಬಳಾವತಿ, ಪುರಸಭೆ ಸದಸ್ಯರಾದ ಕಲ್ಲೇಶ ತಾಳದ, ಚಿರಂಜೀವಿ ಹಿರೇಮಠ, ವೀರೇಶ ಬಂಗಾರಶೆಟ್ಟರ, ಸಿದ್ಧನಗೌಡ ತಳವಗೇರಾ, ಮಂಜುನಾಥ ಕಟ್ಟಿಮನಿ, ತಾಜುದ್ದೀನ್‌ ದಳಪತಿ, ಸಂಗನಗೌಡ ಜೇನರ್‌, ಹನಮಂತಪ್ಪ ಚೌಡ್ಕಿ, ಎಸ್‌.ಎಸ್‌. ಹಿರೇಮಠ, ಟಿ. ಬಸವರಾಜ್‌, ಜಗನ್ನಾಥ ಗೋತಗಿ, ಮಹಾಂತಯ್ಯ ಅರಳಲಿಮಠ ಮತ್ತಿತರಿದ್ದರು.

ಪ್ರಮುಖ ಅಂಶಗಳಿವು
■    ಕೊಪ್ಪಳ ಗವಿಸಿದ್ಧೇಶ್ವರ ಶ್ರೀಗಳ ನೇತೃತ್ವದಲ್ಲಿ ಕೆರೆ ಹೂಳೆತ್ತುವ ಶ್ರಮದಾನ.

■    ಕೆರೆ ಹೂಳೆತ್ತುವ ಕಾರ್ಯ. ನಿರ್ವಹಣೆಗೆ ಸಮಿತಿ ಅಸ್ತಿತ್ವ

■    ಜೆಸಿಬಿ, ಟಿಪ್ಪರ್‌, ಟ್ರ್ಯಾಕ್ಟರ್‌ ಸೇವೆಗೆ ಮುಕ್ತ ಅವಕಾಶ.

■    ಪಕ್ಷಬೇಧ ಮರೆತು ಶ್ರಮದಾನ.

■    ಕೆರೆ ಹೂಳೆತ್ತುವ ಕಾರ್ಯಕ್ಕೆ ಶಾಲಾ ಮಕ್ಕಳಿಂದ 1 ರೂ. ವಂತಿಗೆ

■    ನರೇಗಾ ಯೋಜನೆ ಕೂಲಿಕಾರರಿಂದ ಒಂದು ದಿನದ ವೇತನ.

■    ಕೆರೆ ಪ್ರದೇಶದಲ್ಲಿ ಹೂಳೆತ್ತುವುದಕ್ಕೆ ಸಕಾರಾತ್ಮಕ ಸ್ಪಂದನೆ.

Advertisement

Udayavani is now on Telegram. Click here to join our channel and stay updated with the latest news.

Next