Advertisement

ನಾಲ್ಕು ಭಾಷೆಗಳಲ್ಲಿ “ಕುರುಕ್ಷೇತ್ರ’ಪೋಸ್ಟರ್‌

09:12 PM Mar 18, 2020 | Lakshmi GovindaRaju |

ಸೆಟ್ಟೇರಿದಾಗಿನಿಂದಲೂ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿರುವ “ಮುನಿರತ್ನ ಕುರುಕ್ಷೇತ್ರ’ ಚಿತ್ರದ ಕಡೆಯಿಂದ ಮತ್ತೂಂದು ಸುದ್ದಿ ಹೊರಬಿದ್ದಿದೆ. ಹಾಗಾದ್ರೆ, “ಮುನಿರತ್ನ ಕುರುಕ್ಷೇತ್ರ’ ಚಿತ್ರದ ಬಿಡುಗಡೆಯ ದಿನಾಂಕ ಅನೌನ್ಸ್‌ ಮಾಡಿದ್ದಾರ ಅಂತ ಕೇಳಬೇಡಿ. ನಾವು ಹೇಳುತ್ತಿರುವುದು ಮುನಿರತ್ನ ನಿರ್ಮಾಣದ ಕುರುಕ್ಷೇತ್ರದ ಚಿತ್ರದ ಬಗ್ಗೆಯೇ ಆದರೂ, ಬಿಡುಗಡೆಯ ಬಗ್ಗೆ ಅಲ್ಲ.

Advertisement

ಸದ್ಯದ ಸುದ್ದಿ ಏನಪ್ಪ ಅಂದ್ರೆ, “ಕುರುಕ್ಷೇತ್ರ’ ಚಿತ್ರದ ಪೋಸ್ಟರ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಫೇಸ್‌ಬುಕ್‌ ಸೇರಿದಂತೆ ಸೋಷಿಯಲ್‌ ಮೀಡಿಯಾಗಳಲ್ಲಿ ಕನ್ನಡ, ತಮಿಳು, ತೆಲುಗು ಮತ್ತು ಮಲೆಯಾಳಂ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಈ ಪೋಸ್ಟರ್‌ ಏಕ ಕಾಲಕ್ಕೆ ಬಿಡುಗಡೆಯಾಗಿದ್ದು, ಚಿತ್ರ ಬಿಡುಗಡೆಯ ಬಗ್ಗೆ ಅಭಿಮಾನಿಗಳ ನಿರೀಕ್ಷೆಗೆ ಮತ್ತೆ ಗರಿಗೆದರಿದೆ.

ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗಾಗಲೇ “ಮುನಿರತ್ನ ಕುರುಕ್ಷೇತ್ರ’ ನಾಲ್ಕು ಭಾಷೆಗಳಲ್ಲಿ ಬಿಡುಗಡೆಗೊಳ್ಳಬೇಕಿತ್ತು. ಆರಂಭದಲ್ಲಿ ಈ ವರ್ಷದ ಮೊದಲ ವಾರದಲ್ಲಿಯೇ ಮುನಿರತ್ನ ಕುರುಕ್ಷೇತ್ರ ಬಿಡುಗಡೆ ಆಗಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಚಿತ್ರದ ನಿರ್ಮಾಣ, ನಂತರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಿಗೆ ಚಿತ್ರತಂಡ ಸಾಕಷ್ಟು ಸಮಯ ತೆಗೆದುಕೊಂಡಿದ್ದರಿಂದ ಅಂದುಕೊಂಡ ಸಮಯಕ್ಕೆ ಕುರುಕ್ಷೇತ್ರವನ್ನು ಪ್ರೇಕ್ಷಕರ ಮುಂದೆ ತರಲು ಸಾಧ್ಯವಾಗುತ್ತಿಲ್ಲ.

ಅಂತೆಯೇ ಎಲ್ಲ ನಾಲ್ಕು ಭಾಷೆಗಳಲ್ಲಿ ಡಬ್ಬಿಂಗ್‌ ಕೆಲಸ ನಡೆಯುತ್ತಿದ್ದರಿಂದ ಸಿನಿಮಾ ರಿಲೀಸ್‌ ತಡವಾಗುತ್ತಿದೆ. ಚಿತ್ರದ ತಾಂತ್ರಿಕ ಕೆಲಸಗಳಿಗೆ ಸಾಕಷ್ಟು ಸಮಯ ಹಿಡಿಯುತ್ತಿರುವುದರಿಂದ, ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿಕೆ ಆಗುತ್ತಿದೆ ಎಂದು ನಿರ್ಮಾಪಕ ಮುನಿರತ್ನ ಈ ಹಿಂದೆ ತಿಳಿಸಿದ್ದರು. ಆದರೆ, ಚಿತ್ರ ಬಿಡುಗಡೆ ಯಾವಾಗ ಆಗಬಹುದು ಎಂಬ ಪ್ರಶ್ನೆಗೆ ಮಾತ್ರ ಮುನಿರತ್ನ ಉತ್ತರಿಸಿರಲಿಲ್ಲ.

ಇನ್ನು “ಕುರುಕ್ಷೇತ್ರ’ ಚಿತ್ರದಲ್ಲಿ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವುದರಿಂದ, ಚಿತ್ರ ಈ ವಾರ ಬಿಡುಗಡೆಯಾಗಬಹುದು, ಮುಂದಿನ ವಾರ ಬಿಡುಗಡೆಯಾಗಬಹುದು ಎಂದು ಕಾದು ಕುಳಿತಿದ್ದ ಡಿ ಬಾಸ್‌ ಫ್ಯಾನ್ಸ್‌ ಕೊನೆಗೆ ಚಿತ್ರತಂಡದ ಕಡೆಯಿಂದ ಯಾವುದೇ ಮಾಹಿತಿಗಳು ಹೊರಬೀಳದೆ ಇದ್ದರಿಂದ ಚಿತ್ರದ ಬಗ್ಗೆ ಕೈಚೆಲ್ಲಿ ಕುಳಿತಿದ್ದರು.

Advertisement

ಇವೆಲ್ಲದರ ನಡುವೆ ಸರ್‌ಪ್ರೈಸ್‌ ಎನ್ನುವಂತೆ, ಚಿತ್ರತಂಡ “ಕುರುಕ್ಷೇತ್ರ’ ಚಿತ್ರದ ಪೋಸ್ಟರ್‌ ಅನ್ನು ಬಿಡುಗಡೆಗೊಳಿಸಿದೆ. ಕನ್ನಡ, ತಮಿಳು, ತೆಲಗು ಮತ್ತು ಮಲಯಾಳಂ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಕುರುಕ್ಷೇತ್ರ ಪೋಸ್ಟರ್‌ ಬಿಡುಗಡೆ ಮಾಡುವ ಮೂಲಕ ಸಿನಿಮಾ ನಾಲ್ಕೂ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ ಎಂಬ ಭರವಸೆಯನ್ನು ಮತ್ತೆ ಚಿಗುರುವಂತೆ ಮಾಡಿದೆ.

ಇನ್ನು ಕುರುಕ್ಷೇತ್ರ ಚಿತ್ರದಲ್ಲಿ ದರ್ಶನ್‌ ಅವರೊಂದಿಗೆ, ಅಂಬರೀಶ್‌, ರವಿಚಂದ್ರನ್‌, ಅರ್ಜುನ್‌ ಸರ್ಜಾ, ಶಶಿಕುಮಾರ್‌, ನಿಖೀಲ್‌ ಕುಮಾರಸ್ವಾಮಿ, ಭಾರತಿ ವಿಷ್ಣುವರ್ಧನ್‌, ಮೇಘನಾ ರಾಜ್‌, ಹರಿಪ್ರಿಯಾ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ಜನಪ್ರಿಯ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಇನ್ನು ಚಿತ್ರತಂಡ ಮೂಲಗಳ ಪ್ರಕಾರ ಸದ್ಯ ನಿಧಾನವಾಗಿ ಚಿತ್ರದ ಪ್ರಮೋಷನ್‌ ಕೆಲಸಗಳಿಗೆ ಚಾಲನೆ ನೀಡಲು ನಿರ್ಧರಿಸಿರುವ ಚಿತ್ರತಂಡ, ಇದೇ ಜೂನ್‌ ವೇಳೆಗೆ “ಕುರುಕ್ಷೇತ್ರ’ವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next