Advertisement

ಗುಡುದೂರು ಶಾಲೆಗೆ ಸೌಲಭ್ಯ ಮರೀಚಿಕೆ!

01:02 PM Jan 02, 2020 | Naveen |

ಕುರುಗೋಡು: ವಿದ್ಯಾರ್ಥಿಗಳಿಗೆ ಕುಡಿಯಲು ನೀರಿಲ್ಲ. ಶಿಕ್ಷಕರ ಕೊರತೆ. ಶಾಲೆಯ ಸುತ್ತಮುತ್ತ ಸ್ವಚ್ಛತೆ ಮರೀಚಿಕೆ. ಕೊಠಡಿಗಳು ಹಾಳು, ಮಳೆ ಬಂದರೆ ಮಕ್ಕಳ ಸ್ಥಿತಿ ಹೇಳತಿರದು.

Advertisement

ಇದು ಸಮೀಪದ ಗುಡುದೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ. ಶಾಲೆಯಲ್ಲಿ 203 ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ 1 ಅತಿಥಿ ಶಿಕ್ಷಕರು ಹಾಗೂ 6 ಕಾಯಂ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಇನ್ನೂ 1 ರಿಂದ 5ನೇ ತರಗತಿ ಮಕ್ಕಳಿಗೆ ಗಣಿತ ವಿಷಯಕ್ಕೆ ಶಿಕ್ಷಕರಿಲ್ಲದಾಗಿದೆ. 6 ರಿಂದ 8ನೇ ತರಗತಿ ಮಕ್ಕಳಿಗೆ ದೈಹಿಕ ಶಿಕ್ಷಕರು ಮತ್ತು ಹಿಂದಿ ಶಿಕ್ಷಕರ ಹುದ್ದೆ ಖಾಲಿ ಉಳಿದುಕೊಂಡಿದೆ.

ಇದರಿಂದ ವಿದ್ಯಾರ್ಥಿಗಳಿಗೆ ಸರಿಯಾದ ಗುಣಮಟ್ಟದ ಶಿಕ್ಷಣ ಸಿಗದಾಗಿದ್ದು, ಹೆಚ್ಚುವರಿ ಶಿಕ್ಷಕರ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು ಕಾಯುತ್ತಿದ್ದಾರೆ.

ಮೇಲ್ಛಾವಣಿ ಶಿಥಿಲ: ಶಾಲೆಯ ಕೊಠಡಿಗಳ ಮೇಲ್ಛಾವಣಿಗಳು ಶಿಥಿಲಾವ್ಯವಸ್ಥೆಗೆ ತಲುಪಿದೆ. ಕೊಠಡಿಗಳಲ್ಲಿ ಮೇಲ್ಛಾವಣಿಯ ಕಾಂಕ್ರೀಟ್‌ ಪದರು ಬೀಳಲಾರಂಭಿಸಿದೆ. ಮಳೆ ಬಂದರಂತು ಶಾಲೆಯ ಮುಖ್ಯಗುರುಗಳ ಕೊಠಡಿಯಿಂದ ಹಿಡಿದು ಮಕ್ಕಳ ತರಗತಿ ಕೊಠಡಿಗಳು ಸೋರುತ್ತಿವೆ.

ಶೌಚಾಲಯ ಇಲ್ಲ: ಶಾಲೆಯ ವಿದ್ಯಾರ್ಥಿಗಳಿಗೆ ಸರಿಯಾದ ಶೌಚಾಲಯವಿಲ್ಲದೆ ಬಯಲು ಜಾಗದಲ್ಲಿ ಶೌಚ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ. ಸರಕಾರ ಸ್ವಚ್ಛತೆ ಬಗ್ಗೆ ನಾನಾ ರೀತಿಯ ಜಾಗೃತಿ ಮೂಡಿಸುತ್ತಿದ್ದು, ಇದು ಕೇವಲ ಹೆಸರಾಗಿ ಉಳಿದಿದೆ. ಸರಕಾರಿ ಶಾಲೆಗಳಲ್ಲಿ ಶೌಚಾಲಯ ಇಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

Advertisement

ಕುಡಿಯಲು ನೀರಿಲ್ಲ: ಶಾಲೆಯಲ್ಲಿ ಕುಡಿಯುವ ನೀರಿಲ್ಲದ ಪರಿಣಾಮ ವಿದ್ಯಾರ್ಥಿಗಳು ನಿತ್ಯ ನೀರಿನ ದಾಹ ತೀರಿಸಿಕೊಳ್ಳಲು ಕಷ್ಟಕರವಾಗಿದೆ. ಶಾಲೆ ಎದುರು ಮಿನಿ ನೀರಿನ ಟ್ಯಾಂಕರ್‌ ಇದ್ದು, ಅದು ನನೆಗುದಿಗೆ ಬಿದ್ದಿದೆ. ಇದರಿಂದ ಶಾಲೆಗೆ ಸರಿಯಾದ ನೀರಿನ ವ್ಯವಸ್ಥೆ ಇಲ್ಲದಾಗಿದೆ. ಈ ಸಮಸ್ಯೆಯಿಂದ ಹಲವು ವಿದ್ಯಾರ್ಥಿಗಳು ಬೋರ್‌ವೆಲ್‌ ನೀರು ಸೇವಿಸುತ್ತಿದ್ದು, ಇನ್ನು ಕೆಲವು ವಿದ್ಯಾರ್ಥಿಗಳು ಮನೆಯಿಂದ ಬಾಟಲ್‌ಗ‌ಳಲ್ಲಿ ನೀರು ತಂದು ಸೇವಿಸಬೇಕಾಗಿದೆ.

ತಡೆಗೋಡೆ ಇಲ್ಲ: ಶಾಲೆಯ ಮುಂಭಾಗದಲ್ಲಿ ಸರಿಯಾಗಿ ತಡೆಗೋಡೆಯ ವ್ಯವಸ್ಥೆ ಇಲ್ಲದಾಗಿದೆ. ಶಾಲೆಯ ಸುತ್ತಮುತ್ತ ಗಿಡಗಂಟೆಗಳು ಬೆಳದಿದ್ದು, ಇದರ ಪರಿಣಾಮ ಮಕ್ಕಳು ಆಟವಾಡುವ ಸಮಯದಲ್ಲಿ ಕ್ರಿಮಿಕೀಟಗಳು ವಿಷಜಂತುಗಳು ಆವರಿಸುವ ಸೂಚನೆಗಳು ಎದ್ದು ಕಾಣುತ್ತಿವೆ.

ಮಕ್ಕಳ ಸಂಖ್ಯೆ ಕುಂಠಿತ: ಶಾಲೆಗೆ ಸರಿಯಾದ ಸೌಕರ್ಯಗಳು ಇಲ್ಲದ ಕಾರಣ ಹಾಗೂ ಶಿಕ್ಷಕರ ಕೊರತೆಯಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗದಿರುವುದರಿಂದ ಗ್ರಾಮದ ಜನರು ತಮ್ಮ ಮಕ್ಕಳನ್ನು ಶಾಲೆಯಿಂದ ಬೇರೆ ಶಾಲೆಗೆ ಸೇರಿಸುತ್ತಿದ್ದು, ಪ್ರತಿ ವರ್ಷ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದೆ.

ಶಾಲೆಗೆ ಸರಿಯಾಗಿ ಕಾಂಪೌಂಡ್‌ ವ್ಯವಸ್ಥೆ ಇಲ್ಲ. ಕಾಂಪೌಂಡ್‌ ಮಾಡಲು ಜಾಗ ಇಲ್ಲವಾಗಿದೆ. ಈ ಹಿಂದೆ ಸರಕಾರ ಶಾಲೆಗೆ ತಡೆಗೋಡೆ ನಿರ್ಮಾಣಕ್ಕೆ 10 ಲಕ್ಷ ಮಂಜೂರು ಮಾಡಲಾಗಿತ್ತು. ಖಾಸಗಿ ವ್ಯಕ್ತಿ ಹೆಸರಲ್ಲಿ ಜಾಗ ಇರುವುದರಿಂದ ತಡೆಗೋಡೆ ನಿರ್ಮಾಣಕ್ಕೆ ಅಡ್ಡಿಯಾಗಿದೆ. ಇದಲ್ಲದೆ ಮೇಲ್ಛಾವಣಿಗಳು ತುಂಬಾ ಶಿಥಿಲಾವಸ್ಥೆಗೆ ತಲುಪಿವೆ. ಇದರಿಂದ ಸಮಸ್ಯೆಗಳು ಉಂಟಾಗುತ್ತಿವೆ. ಇದರ ಬಗ್ಗೆ ಹಲವು ಬಾರಿ ಗ್ರಾಪಂಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಇದರ ಬಗ್ಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನಹರಿಸಬೇಕಾಗಿದೆ.
ಎಚ್‌. ಶಾಂತಮ್ಮ,
ಶಾಲೆ ಮುಖ್ಯ ಶಿಕ್ಷಕರು.

„ಸುಧಾಕರ್‌ ಮಣ್ಣೂರು

Advertisement

Udayavani is now on Telegram. Click here to join our channel and stay updated with the latest news.

Next