Advertisement

ವಿಶ್ವ ಮಾನವ ಮಹಾಕವಿ ಕುವೆಂಪು

11:24 PM Dec 28, 2021 | Team Udayavani |

“”ಯುಗದ ಕವಿಗೆ, ಜಗದ ಕವಿಗೆ
ಶ್ರೀರಾಮಾಯಣ ದರ್ಶನದಿಂದಲೇ ಕೈ
ಮುಗಿದ ಕವಿಗೆ-ಮಣಿಯದವರು ಯಾರು?
ರಾಮಕೃಷ್ಣ ವಚನೋದಿತ ಪ್ರತಿಭೆ ತೆರೆದ
ಕವನ ತತಿಗೆ ತಣಿಯದವರು ಆರು?
ಮಲೆನಾಡಿನ ಸೌಂದರ್ಯಕೆ ಕುಣಿದಾಡಿದ
ಕವಿಯ ಜತೆಗೆ ಕುಣಿಯದವರು ಆರು?”
-ಡಾ| ದ.ರಾ. ಬೇಂದ್ರೆ
ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯ ವೆಂಕಟಪ್ಪ ಮತ್ತು ಸೀತಮ್ಮ ದಂಪತಿಗಳಿಗೆ ಚಿಕ್ಕಮಗಳೂರು ಜಿಲ್ಲೆಯ ಹಿರಿಕೂಡಿಗೆಯಲ್ಲಿ 1904ರ ಡಿಸೆಂಬರ್‌ 29 ರಂದು ಗಂಡು ಮಗುವೊಂದು ಜನಿಸಿದಾಗ ಅವರ ಸಂಭ್ರಮ ಹೇಳತೀರದು. ಅಷ್ಟೊಂದು ಸಂತಸಪಟ್ಟ ಆ ಪುಣ್ಯವಂತ ಮಾತಾ-ಪಿತರಿಗೆ ಅದೇ ಮಗು ಮುಂದೊಂದು ದಿನ ಸಮಸ್ತ ಕನ್ನಡನಾಡಿನ ಸಂಭ್ರಮವಾಗುತ್ತದೆಂದು ಆಗಲೇ ತಿಳಿದಿದ್ದರೆ ಅದಿನ್ನೆಷ್ಟು ಸಂಭ್ರಮಿಸುತ್ತಿದ್ದರೋ ಏನೋ! ಅಂಥ ಕನ್ನಡದ ಸೌಭಾಗ್ಯ ಆ ಮಗುವೇ ಕನ್ನಡಕ್ಕೆ ಮೊಟ್ಟ ಮೊದಲಿಗೆ ಜ್ಞಾನಪೀಠ ಪ್ರಶಸ್ತಿ ಯನ್ನು ತಂದುಕೊಟ್ಟ ಕನ್ನಡ ಸಾರಸ್ವತ ಲೋಕದ ಕುವೆಂಪು ಎಂಬ ಮೂರಕ್ಷರದ ಕನ್ನಡದ ಗಾಯತ್ರಿ ಮಂತ್ರ.

Advertisement

ಪ್ರಾಥಮಿಕ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಮುಗಿಸಿ ಪ್ರೌಢಶಿಕ್ಷಣಕ್ಕೆ ಮೈಸೂರಿಗೆ ಬಂದ ಕುವೆಂಪು ಅಲ್ಲಿಂದ ತಮ್ಮ ಸಂಪೂರ್ಣ ವಿದ್ಯಾಭ್ಯಾಸವನ್ನು ಮೈಸೂರಿನಲ್ಲೇ ಪೂರೈಸಿದರು. ಟಿ.ಎಸ್‌. ವೆಂಕಣ್ಣಯ್ಯ, ಎ.ಆರ್‌. ಕೃಷ್ಣಶಾಸ್ತ್ರಿ, ಬಿ.ಎಂ.ಶ್ರೀ. ಅವರಂಥ ಗುರುಗಳನ್ನು ಪಡೆದಿದ್ದ ಇವರು ಮೈಸೂರಿನ ಮಹಾ ರಾಜ ಕಾಲೇಜಿನಿಂದ 1927ರಲ್ಲಿ ಬಿ.ಎ. ಪದವಿ  ಯನ್ನೂ, 1929ರಲ್ಲಿ ಕನ್ನಡ ಎಂಎ. ಪದವಿಯನ್ನು ಪಡೆದು ಆ ವರ್ಷದಿಂದಲೇ ಮೈಸೂರು ಮಹಾರಾಜ ಕಾಲೇಜಿನ ಕನ್ನಡ ಅಧ್ಯಾಪಕರಾಗಿ ತಮ್ಮ ವೃತ್ತಿಜೀವನ ಆರಂಭಿಸಿದರು. ಅನಂತರ ಅದೇ ಕಾಲೇಜಿನಲ್ಲಿ ಉಪಪ್ರಾಧ್ಯಾಪಕ, ಪ್ರಾಧ್ಯಾಪಕ ರಾಗಿ ಸೇವೆ ಸಲ್ಲಿಸಿ, 1955ರಲ್ಲಿ ಪ್ರಿನ್ಸಿಪಾಲ್‌ ಆಗಿ 1956 ರಿಂದ 1960ರ ವರೆಗೆ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಯಾಗಿ ನಿವೃತ್ತರಾದರು. ಕುಲಪತಿಯಾಗಿ ಅವರು ಸಾಧನೆ ಗೈದು ಕಂಡ ಕನಸನ್ನು ಸಾûಾತ್ಕಾರಗೊಳಿಸಿಕೊಂಡಿದ್ದಕ್ಕೆ ಸಾಕ್ಷಿ ಮೈಸೂರಿನ ಮಾನಸಗಂಗೋತ್ರಿಯೇ ಆಗಿದೆ!

ಹೊಸಗನ್ನಡ ಸಾಹಿತ್ಯದ ದಿಗ್ಗಜರಲ್ಲೊಬ್ಬರಾದ ಕುವೆಂಪು ಅವರ ಹುಟ್ಟು ಹೆಸರು ಕೆ.ವಿ. ಪುಟ್ಟಪ್ಪ. ಬರೆಯುತ್ತಾ, ಬೆಳೆ ಯುತ್ತಾ ಕುವೆಂಪು ಎಂಬ ಕಾವ್ಯನಾಮದಿಂದ ಪ್ರಸಿದ್ಧಿಯ ಹಿಮಾ ಚಲವಾಗಿ ರೂಪುಗೊಂಡ ಇವರು ತಮ್ಮ ಬರ ವಣಿಗೆಯ ಆರಂಭದ ದಿನಗಳಲ್ಲಿ ಕಿಶೋರಚಂದ್ರ ಎಂಬ ಹೆಸರಿ ನಿಂದಲೂ ಸಾಹಿತ್ಯಕೃಷಿಯನ್ನು ಮಾಡಿದ್ದರು. ಜೈಮಿನಿ ಭಾರತ, ತೊರವೆ ರಾಮಾಯಣಗಳ ವಾಚನ ಮತ್ತು ಅಕ್ಷರಾ ಭ್ಯಾಸದ ಮೂಲಕ ಬಾಲ್ಯದಲ್ಲೇ ಸಾಹಿತ್ಯ ಸಂಸ್ಕಾರ ಪಡೆದಿದ್ದ ಕುವೆಂಪು ಅವರು ತೀರ್ಥಹಳ್ಳಿ ಮತ್ತು ಮೈಸೂರಿನಲ್ಲಿ ಓದುತ್ತಿ ರುವಾಗಲೇ ಓದಿನ ಜತೆಜತೆಗೆ ಶೆಲ್ಲಿ, ವರ್ಡ್ಸ್‌  ವರ್ಥ್ ಕೀಟ್ಸ್‌ ಮುಂತಾದ ಆಂಗ್ಲಕವಿಗಳನ್ನು ಚೆನ್ನಾಗಿ ಓದಿ ಕೊಂಡಿ ದ್ದರು. ಪರಿಣಾಮ ಇವರೆಲ್ಲರ ಪ್ರಭಾವದಿಂದಾಗಿ ಇಂಗ್ಲಿಷ್‌ ಸಾಹಿತ್ಯದತ್ತ ಹೆಜ್ಜೆಯಿರಿಸಿದ ಇವರು 1922ರಲ್ಲಿ ತಮ್ಮ 18ನೇ ವಯಸ್ಸಿಗೇ ಬಿಗಿನರ್ ಮ್ಯೂಸ್‌ ಎಂಬ ಇಂಗ್ಲಿಷ್‌ ಕವನ ಸಂಕ ಲನವನ್ನು ಪ್ರಕಟಿಸಿದ್ದರು. ಇದನ್ನು ಓದಿದ ಐರಿಶ್‌ ಕವಿ ಜೇಮ್ಸ್‌ ಕಸಿನ್ಸ್‌ ಅವರು ಕುವೆಂಪು ಅವರ ಪ್ರತಿಭೆಯನ್ನು ಮೆಚ್ಚಿ  ಹುಟ್ಟಿನೊಡನೆ ಬಂದ ಭಾಷೆಯಲ್ಲಿ ಮಾತ್ರ ಸೃಜನಶೀಲ ಸಾಹಿತ್ಯ ಉತ್ತಮವಾಗಿ ಸೃಷ್ಟಿಯಾಗಬ ಲ್ಲದು ಎಂದು ಕನ್ನಡ ದಲ್ಲೇ ಬರೆಯುವಂತೆ ಕುವೆಂಪು ಅವರಿಗೆ ಸಲಹೆ ನೀಡಿದರು.

ಜೇಮ್ಸ್‌ ಕಸಿನ್ಸ್‌ ಅವರ ಪ್ರಭಾವದಿಂದ ಕನ್ನಡ ದೀಕ್ಷೆ ತೊಟ್ಟವರಂತೆ ಬರವಣಿಗೆ ಯಲ್ಲಿ ಕನ್ನಡ ಡಿಂಡಿಮ ಬಾರಿಸುತ್ತಾ ನಡೆದ ಕುವೆಂಪು ಅವರು ಮಕ್ಕಳಿಗಾಗಿ ಬರೆದ ಲಘು ಕಾಲ್ಪನಿಕ ಕಾವ್ಯ ಅಮಲನ ಕಥೆ ಎಂಬ ಕೃತಿಯನ್ನು 1924ರಲ್ಲಿ ಪ್ರಕಟಿಸಿದರು. ಇದು ಕುವೆಂಪು ಅವರ ಪ್ರಪ್ರಥಮ ಕನ್ನಡ ಪುಸ್ತಕ. ಅಲ್ಲಿಂದೀಚೆಗೆ ದೀಕ್ಷೆಯ ತೊಡು ಇಂದೇ; ಕಂಕಣ ಕಟ್ಟಿಂದೇ; ಕನ್ನಡ ನಾಡೊಂದೇ… ಎನ್ನುತ್ತಲೇ ಎಣೆಯಿಲ್ಲದ ಕನ್ನಡಾ ಭಿಮಾನವನ್ನು ಎದೆಯಲ್ಲಿ ತುಂಬಿಕೊಂಡು ತಮ್ಮ ಲೇಖನಿಯ ಮೂಲಕ ಕನ್ನಡ ಕೃತಿಗಳ ಮಾಲೆಯನ್ನೇ ಕಟ್ಟತೊಡಗಿದರು. ಇಲ್ಲಿ ಪ್ರಕೃತಿಯ ಮಹತ್ತೆಲ್ಲವನ್ನೂ ತೆರೆದಿಡುವ ಕೊಳಲು, ಪಕ್ಷಿಕಾಶಿ, ನವಿಲು, ಕದರಡಕೆ, ಕಲಾಸುಂದರಿಯಂಥ ಕವನ ಸಂಕಲನಗಳಿವೆ. ಪ್ರೇಮ ಕಾಶ್ಮೀರ, ಚಂದ್ರಮಂಚಕೆ ಬಾ ಚಕೋರಿ, ಷೋಡಶಿ, ಜೇನಾಗುವ, ಅನುತ್ತರಾದಂತಹ ಹದಿಹರೆಯದವರೆದೆ ಅರಳಿಸುವ ಮಹದದ್ಭುತ ಪ್ರೇಮಗೀತಾ ಗುತ್ಛಗಳಿವೆ. ಮೇಘಪುರ, ಮರಿವಿಜ್ಞಾನಿ, ನನ್ನ ಮನೆ ತರಹದ ಅರಿವಿನ ಬೆಳಕಿನ ಶಿಶುಗೀತಾ ಸಂಗ್ರಹಗಳಿವೆ.

ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದು ಮಗಳು ಅಂತಹ ಮಹಾಕಾದಂಬರಿಗಳೂ ಇವೆ. ಶ್ರೀ ರಾಮಾ ಯಣದರ್ಶನಂನಂಥ ಮಹಾಕಾವ್ಯವೂ ಇದೆ. ಮಹಾ ಶಿವರಾತ್ರಿ, ಯಮನ ಸೋಲು, ಸ್ಮಶಾನ ಕುರುಕ್ಷೇತ್ರಂ, ಶೂದ್ರ ತಪಸ್ವಿಯಂತಹ ಉತ್ತಮೋತ್ತಮ ನಾಟಕಗಳಿವೆ. ಮೋಡಣ್ಣನ ತಮ್ಮ, ನನ್ನ ಗೋಪಾಲದಂತಹ ಚಿಣ್ಣರ ಸೆಳೆವ ಮಕ್ಕಳ ನಾಟಕಗಳಿವೆ. ಸನ್ಯಾಸಿ ಮತ್ತು ಇತರ ಕಥೆಗಳು, ನನ್ನ ದೇವರು ಮತ್ತು ಇತರ ಕಥೆಗಳು, ಕಥೆಗಳೊಡನೆ ಆರಂಭ ದಂತಹ ಶಕ್ತಿಪೂರ್ಣ ಕಥಾ ಸಂಕಲನಗಳಿವೆ. ಮಲೆನಾಡಿನ ಚಿತ್ರಗಳು ರೀತಿಯ ಸಶಕ್ತ ಗದ್ಯ ಚಿತ್ರಗಳ ಸಂಕಲನಗಳಿವೆ. ಕಾವ್ಯ ವಿಹಾರ, ವಿಭೂತಿ ಪೂಜೆ, ತಪೋನಂದನ, ದ್ರೌಪದಿಯ ಶ್ರೀ ಮುಡಿಯಂತಹ ಸಾಹಿತ್ಯ ವಿಮರ್ಶೆ ಮತ್ತು ಕಾವ್ಯ ಮೀಮಾಂಸೆಗಳಿವೆ. ವಿಚಾರ ಕ್ರಾಂತಿಗೆ ಆಹ್ವಾನ, ಮನುಜ ಮತ ವಿಶ್ವಪಥ, ಜನತಾ ಪ್ರಜ್ಞೆ ಮತ್ತು ವೈಚಾರಿಕ ಜಾಗೃತಿಯಂತಹ ಸಾರಸ್ವತ ಲೋಕದಲ್ಲಿ ವೈಚಾರಿಕ ಬೆಳಕು ಚೆಲ್ಲುವ ಭಾಷಣಗಳ ಸಂಗ್ರಹಗಳಿವೆ. ಸ್ವಾಮಿ ವಿವೇಕಾನಂದ, ಶ್ರೀ ರಾಮಕೃಷ್ಣ ಪರಮಹಂಸರಂತಹ ಮಹನೀಯರ ಜೀವನ ಚರಿತ್ರೆಗಳಿವೆ. ಆತ್ಮಕಥೆ ಪ್ರಕಾರದಲ್ಲೇ ಅದ್ಭುತವೆನಿಸುವ ನೆನಪಿನ ದೋಣಿಯಂತಹ ಆತ್ಮ ಕಥೆಯೂ ಇದೆ. ಜನಪ್ರಿಯ ವಾಲ್ಮೀಕಿ ರಾಮಾಯಣ, ಗುರು ವಿನೊಡನೆ ದೇವರಡಿಗೆ, ವಿವೇಕವಾಣಿ, ವೇದಾಂತದಂತಹ ಶ್ರೇಷ್ಠ ಅನುವಾದಿತ ಕೃತಿಗಳೂ ಇವೆ. ಕರ್ನಾಟಕ ಭಾರತ ಕಥಾ ಮಂಜರಿಯಂಥ ಅಗ್ರಮಾನ್ಯ ಸಂಪಾದಿತ ಗ್ರಂಥವೂ ಉಂಟು.

Advertisement

ಇದನ್ನೂ ಓದಿ:ನೀಟ್‌ ಪಿಜಿ 2021ರ ಕೌನ್ಸೆಲಿಂಗ್‌ ವಿಳಂಬ : ರಸ್ತೆಗಿಳಿದು ಪ್ರತಿಭಟನೆಗೆ ಮುಂದಾದ ವೈದ್ಯರು

ಸಂಖ್ಯೆಯ ದೃಷ್ಟಿಯಿಂದ ಕುವೆಂಪು ಅವರ ಕೃತಿಗಳು ಎಪ್ಪತ್ತೆçದನ್ನೂ ದಾಟದಿದ್ದರೂ ಕೂಡ ಸತ್ವದ ದೃಷ್ಟಿಯಲ್ಲಿ ಇವರಿಂದ ರಚಿತವಾಗಿರುವ ಒಂದೊಂದು ಕೃತಿ ರತ್ನಗಳೂ ಸಾಹಿತ್ಯದ ಮಹತ್ವಗಳಾಗಿವೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನವನ್ನು ಮತ್ತು ಭಾರತೀಯ ಜ್ಞಾನಪೀಠ ಪ್ರಶಸ್ತಿ ಯನ್ನು ಪಡೆದಿರುವ ಇವರ ಶ್ರೀರಾಮಾಯಣ ದರ್ಶನಂ ಮಹಾಕಾವ್ಯವೊಂದೇ ಸಾಕು ನೂರು ಕೃತಿಗಳನ್ನು ಮೀರಿ ಸೀತು! ಅದಕ್ಕೇ ವರಕವಿ ಬೇಂದ್ರೆಯವರು ಕುವೆಂಪು ಅವರನ್ನು ಯುಗದ ಕವಿ ಜಗದ ಕವಿ ಎಂದು ಎದೆತುಂಬಿ ಹಾಡಿ ಹೊಗಳಿರುವುದು.
ಪ್ರಶಸ್ತಿ-ಪುರಸ್ಕಾರ, ಮಾನ-ಸನ್ಮಾನ, ಹೆಸರು-ಕೀರ್ತಿ, ಅಂತ ಕುವೆಂಪು ಅವರು ಎಂದೂ ಕೂಡ ಅವುಗಳ ಹಿಂದೆ ಬಿದ್ದವರಲ್ಲ. ಕೀರ್ತಿ ಶನಿ ತೊಲಗಾಚೆ ಎಂದವರು ಅವರು. ಆದರೆ ಅವುಗಳೇ ಅವರನ್ನು ಬೆನ್ನತ್ತಿ ಬಂದು ಆಲಂಗಿಸಿಕೊಂಡವು. ಹಾಗಾಗಿ ತಮ್ಮ ಸಾಹಿತ್ಯ ಸಾಧನೆಯಿಂದ ಹಲವು ಮೊದಲುಗಳಿಗೆ ಭಾಜನರಾದ ಕುವೆಂಪು ಅವರು ತಮ್ಮ “”ಶ್ರೀ ರಾಮಾಯಣ ದರ್ಶನಂ” ಮಹಾಕಾವ್ಯದ ಮೂಲಕ ರಾಷ್ಟ್ರದ ಪ್ರತಿಷ್ಠಿತ ಪ್ರಶಸ್ತಿಗಳಾದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಜ್ಞಾನಪೀಠ ಪ್ರಶಸ್ತಿ ಸೇರಿದಂತೆ ಹಲವು ಹತ್ತು ಪ್ರಶಸ್ತಿಗಳನ್ನು ಮೊಟ್ಟ ಮೊದಲಿಗೆ ಕನ್ನಡಕ್ಕೆ ತಂದುಕೊಟ್ಟ ಕೀರ್ತಿಯೊಡನೆ ಕರ್ನಾಟಕ ಸರಕಾರದ ಪ್ರಮುಖ ನಾಗರಿಕ ಪ್ರಶಸ್ತಿಗಳಾದ ಕರ್ನಾಟಕ ರತ್ನ ಪ್ರಶಸ್ತಿ ಮತ್ತು ಪಂಪ ಪ್ರಶಸ್ತಿ ಪಡೆದ ಮೊದಲಿಗರೆನಿಸಿದ್ದಾರೆ. ಹಾಗೆಯೇ ಪದ್ಮಭೂಷಣ ಪಡೆದ ಕನ್ನಡದ ಮೊದಲ ಕವಿಯೂ ಆಗಿದ್ದಾರೆ.

ಕುವೆಂಪು ಅವರ ವಿಶೇಷವೆಂದರೆ ಕನ್ನಡಕ್ಕೊಂದು ಓಜಸ್ವಿಯಾದ ಶೈಲಿಯನ್ನು ತಂದುಕೊಟ್ಟದ್ದು. ಹಾಗೆಯೇ ಸಾಹಿತ್ಯದ ಮೂಲಕ ಕನ್ನಡ ಪ್ರಜ್ಞೆ, ವೈಜ್ಞಾನಿಕ ಪ್ರಜ್ಞೆ, ವೈಚಾರಿಕ ಪ್ರಜ್ಞೆ, ಭಾವೈಕ್ಯ ಪ್ರಜ್ಞೆ, ಮನುಜಮತ ಪ್ರಜ್ಞೆ, ವಿಶ್ವಪಥ ಪ್ರಜ್ಞೆ ಒಟ್ಟಾರೆ ವಿಶ್ವಮಾನವ ಪ್ರಜ್ಞೆ ಮೂಡಿಸಿದರು. ಆದಿಕವಿ ಪಂಪ ನುಡಿದ ಮನುಷ್ಯ ಜಾತಿ ತಾನೊಂದೆ ವಲಂ ಎಂಬುದನ್ನು ತಮ್ಮ ಬದುಕಿನ ಧ್ಯೇಯ ವಾಕ್ಯವನ್ನಾಗಿಸಿಕೊಂಡು ಅದರಂತೆಯೇ ಬರೆದು ಬದುಕಿದವರು. ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ; ಬಡತನವ ಬುಡಮಟ್ಟ ಕೀಳಬನ್ನಿ; ಮೌಡ್ಯತೆಯ ಮಾರಿಯನು ಹೊರದೂಡಲೈತನ್ನಿ; ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ ಎಂದವರು. ಅವರು ತಮ್ಮ ಜೀವನ ಸಂಧ್ಯಾ ಕಾಲದಲ್ಲಿ ವಿಶ್ವಮಾನವತ್ವಕ್ಕೆ ಮಿಡಿದ ಬಗೆ ಇಡೀ ಮಾನವ ಕುಲಕ್ಕೆ ಮಾದರಿ. ತಮ್ಮ ಬದುಕಿನ ಕಟ್ಟಕಡೆಯ ಸಂದೇಶ ವಿಶ್ವಮಾನವ ಸಂದೇಶ ಎನ್ನುತ್ತಲೇ 1994ರ ನವೆಂಬರ್‌ 11 ರಂದು ನಿಸರ್ಗಲೀನರಾದ ಕುವೆಂಪು ಮಹಾ ಮಾನವತಾವಾದಿಯಾಗಿ ಬದುಕಿದವರು. ಅಂತೆಯೇ ಕನ್ನಡ ಸಾಹಿತ್ಯ ಮತ್ತು ಭಾರತೀಯ ಸಾಹಿತ್ಯಕ್ಕಷ್ಟೇ ಅಲ್ಲದೇ ವಿಶ್ವ ಸಾಹಿತ್ಯಕ್ಕೆ ವಿಚಾರ ಕ್ರಾಂತಿಯ ಮಹಾಬೆಳಕು ನೀಡಿದ ಯುಗ ಪುರುಷರು.

– ಬನ್ನೂರು ಕೆ.ರಾಜು, ಸಾಹಿತಿ-ಪತ್ರಕರ್ತ

Advertisement

Udayavani is now on Telegram. Click here to join our channel and stay updated with the latest news.

Next