Advertisement

ಕುಂಜೂರು ಶ್ರೀ ದುರ್ಗೆಯ ಅನುಗ್ರಹದಿಂದ ಪ್ರಾರಂಭಗೊಂಡ ಶಾಲೆ

10:06 AM Dec 09, 2019 | mahesh |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1912 ಶಾಲೆ ಸ್ಥಾಪನೆ
107ನೇ ವರ್ಷಾಚರಣೆಯ ಸಂಭ್ರಮದಲ್ಲಿರುವ ಶಾಲೆ

ಕಾಪು: ಶತಮಾನ ಪೂರ್ವದಲ್ಲಿ ಗ್ರಾಮದ ಮಕ್ಕಳ ಶಿಕ್ಷಣದ ದಾಹವನ್ನು ತಣಿಸುವ ಉದ್ದೇಶದೊಂದಿಗೆ ಕುಂಜೂರು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಅನುಗ್ರಹದೊಂದಿಗೆ ಪಣಿಯೂರಿನಲ್ಲಿ ಮುಳಿಹುಲ್ಲಿನ ಛಾವಣಿಯಡಿ ಪ್ರಾರಂಭಗೊಂಡ ಪಣಿಯೂರು ಶ್ರೀ ದುರ್ಗಾದೇವಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಅಭಿವೃದ್ಧಿಯ ಪಥದತ್ತ ಸಾಗಿದೆ.

ಬೆಳಪು ಮತ್ತು ಎಲ್ಲೂರು ಗ್ರಾಮಗಳ ನಡುವಿನ ಪಣಿಯೂರಿನಲ್ಲಿ 1912ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಹಾಯಕ ಇನ್‌ಸ್ಪೆಕ್ಟರ್‌ ಆಫ್‌ ಸ್ಕೂಲ್ಸ್‌ ಇವರಿಂದ ಅಧಿಕೃತವಾಗಿ ಘೋಷಿಸಲ್ಪಟ್ಟ ಈ ಶಾಲೆಗೆ 1ರಿಂದ 4ನೇ ತರಗತಿಯವರೆಗಿನ ಖಾಯಂ ಮಂಜೂರಾತಿ ದೊರಕಿತ್ತು. 2007ರಲ್ಲಿ ಶತಮಾನೋತ್ಸವ ಆಚರಿಸಲಾಗಿತ್ತು. ಅಧಿಕೃತ ದಾಖಲೆಗಳ ಪ್ರಕಾರ ಶಾಲೆಗೆ 2012ರಲ್ಲಿ ನೂರು ವರ್ಷ ಪೂರ್ಣಗೊಂಡಿದ್ದು, ಪ್ರಸ್ತುತ 107ನೇ ವರ್ಷಾಚರಣೆಯ ಸಂಭ್ರಮದಲ್ಲಿದೆ.

ಮನೆಗಳಿಗೆ ತೆರಳಿ ಶಿಕ್ಷಣ
ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ದಿ| ವೈ. ಯೋಗೇಂದ್ರಯ್ಯ ಅವರ ಹಿರಿಯ ಸಹೋದರ ದಿ| ವೈ. ದಾಸಪ್ಪಯ್ಯ ಅವರು ಆಸುಪಾಸಿನ ಮನೆಗಳಿಗೆ ತೆರಳಿ ಆಸಕ್ತ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದರು. ಅವರ ಮುತುವರ್ಜಿಯಿಂದಾಗಿ ಶಾಲೆಗೆ ಪ್ರಾರಂಭಗೊಂಡಿತು. ದಾಸಪ್ಪಯ್ಯ ಅವರ ಅನಂತರ 1913ರಲ್ಲಿ ವೈ. ಯೋಗೇಂದ್ರಯ್ಯ ಶಾಲೆಯ ಜವಾಬ್ದಾರಿ ಹೊತ್ತರು. ಅವರ ಸಹೋದರ ತಿಮ್ಮಪ್ಪಯ್ಯ ಹಾಗೂ ಎಲ್ಲೂರುಗುತ್ತು, ಬಡಗರಗುತ್ತು ಮತ್ತು ಪಣಿಯೂರು ಗುತ್ತಿನವರ ಸಹಕಾರವೂ ಸ್ಮರಣೀಯವಾಗಿದೆ. 1960ರಲ್ಲಿ 1ರಿಂದ 5ನೇ ತರಗತಿವರೆಗೆ ಎಲ್ಲ ತರಗತಿಗಳಿಗೂ 2 ವಿಭಾಗಗಳನ್ನು ತೆರೆಯಲು ಅನುಮತಿ ದೊರಕಿದ್ದು, ಮಕ್ಕಳ ಸಂಖ್ಯೆ ಹೆಚ್ಚಾದಂತೆ ಪಣಿಯೂರಿನ ಮಹಾದಾನಿ ದಿ| ಎಲ್‌. ನರಸಿಂಗ ರಾವ್‌ ಅವರು 1967ರಲ್ಲಿ ಹಳೇ ಕಟ್ಟಡದ ಪೂರ್ವ ಭಾಗದಲ್ಲಿ ಕಟ್ಟಡವನ್ನು ನಿರ್ಮಿಸಿ ಕೊಟ್ಟಿದ್ದರು. ಊರಿನ ಮಹಾದಾನಿ ಡಾ| ವಿಷ್ಣುಮೂರ್ತಿ ಪೋತಿ ಅವರ ಸಹಕಾರವೂ ಶಾಲೆಯ ಬೆಳವಣಿಗೆಗೆ ಪೂರಕವಾಗಿ ದೊರಕಿತ್ತು.

Advertisement

ಪರ್ವ ಕಾಲ
1970-1990ರ ಕಾಲಘಟ್ಟದಲ್ಲಿ ಶಾಲೆ ಪರ್ವ ಕಾಲವನ್ನು ತಲುಪಿದ್ದು ಮಕ್ಕಳ ಸಂಖ್ಯೆ 750 ಮತ್ತು ಅದಕ್ಕೆ ಅನುಗುಣವಾಗಿ ಶಿಕ್ಷಕರ ಸಂಖ್ಯೆಯೂ 17ನ್ನು ತಲುಪಿತ್ತು. 1982ರಲ್ಲಿ ಪಣಿಯೂರು ಶಾಲೆಗೆ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಉತ್ತಮ ಶಾಲೆ ಎಂಬ ಪ್ರಶಸ್ತಿಯೂ ಲಭಿಸಿತ್ತು.

ಹಳೆ ವಿದ್ಯಾರ್ಥಿಗಳು
ಮಾಜಿ ಅಡ್ವೊಕೇಟ್‌ ಜನರಲ್‌ ಬಿ.ವಿ. ಆಚಾರ್ಯ, ಮಾಜಿ ಮಂಡಲ ಪ್ರಧಾನ ವೈ. ಪ್ರಫುಲ್ಲ ಶೆಟ್ಟಿ, ಬೆಳಪು ಗ್ರಾ.ಪಂ. ಅಧ್ಯಕ್ಷ ಡಾ| ದೇವಿಪ್ರಸಾದ್‌ ಶೆಟ್ಟಿ, ಎಲ್ಲೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಯಶವಂತ್‌ ಶೆಟ್ಟಿ, ಮಾಜಿ ಜಿ.ಪಂ. ಸದಸ್ಯ ಅರುಣ್‌ ಶೆಟ್ಟಿ ಪಾದೂರು, ಸಿ.ಎ. ಸುಧೀರ್‌ ಆರ್‌.ಎಲ್‌. ಶೆಟ್ಟಿ ಮುಂಬಯಿ, ಉದ್ಯಮಿ ದಯಾನಂದ ಹೆಗ್ಡೆ ಮುಂಬಯಿ, ಖ್ಯಾತ ಭಾಗವತ ಸುರೇಂದ್ರ ಪಣಿಯೂರು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರುಣಾಕರ ಶೆಟ್ಟಿ ಮೊದಲಾದವರು ಶಾಲೆಯ ಹೆಮ್ಮೆಯ ಹಳೆ ವಿದ್ಯಾರ್ಥಿಗಳು.

ಪ್ರಸ್ತುತ 70 ಮಂದಿ ವಿದ್ಯಾಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಸರಕಾರದಿಂದ ವೇತನ ಪಡೆಯುವ ಓರ್ವ ಶಿಕ್ಷಕ ಮತ್ತು 4 ಮಂದಿ ಗೌರವ ಶಿಕ್ಷಕಿಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಕ್ರಿಯಾಶೀಲರಾಗಿದ್ದಾರೆ.

ಪಣಿಯೂರು ಶಾಲೆಯು ಆಡಳಿತ ಮಂಡಳಿ, ಶಾಲಾಭಿವೃದ್ಧಿ ಸಮಿತಿ, ಹಳೆ ವಿದ್ಯಾರ್ಥಿಗಳು ಮತ್ತು ದಾನಿಗಳ ನೆರವಿನೊಂದಿಗೆ ಉತ್ತಮ ರೀತಿಯಲ್ಲಿ ಮುನ್ನಡೆಯುತ್ತಿದೆ. ಶಿಕ್ಷಕರ ಕೊರತೆ ತುಂಬಿದ‌ಲ್ಲಿ ಶಾಲೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯವಿದೆ.
-ಶಂಕರ ಎಸ್‌., ಮುಖ್ಯ ಶಿಕ್ಷಕರು

ನನ್ನ ಜೀವನದ ಎಲ್ಲ ಸಾಧನೆಗಳಿಗೂ ಪ್ರಾಥಮಿಕ ಹಂತದ ಶಿಕ್ಷಣವನ್ನು ನೀಡಿದ ಶಾಲೆ ಮತ್ತು ಆಗಿನ ಅಧ್ಯಾಪಕರೇ ಮುಖ್ಯ ಕಾರಣರಾಗಿದ್ದಾರೆ. ಅಂದಿನ ಪಾಠ ಕ್ರಮವು ನಮ್ಮಲ್ಲಿ ಸಂಸ್ಕಾರ, ಸಂಸ್ಕೃತಿ ತುಂಬಿದೆ. ನಾಯತ್ವದ ಗುಣಗಳನ್ನೂ ಬೆಳೆಸಿಕೊಳ್ಳುವಲ್ಲಿ ಶಾಲೆಯ ಪಾತ್ರ ಮಹತ್ವದ್ದಾಗಿದೆ. ಪ್ರಾಥಮಿಕ ಶಾಲಾ ಅವಧಿಯಲ್ಲಿ ಶಾಲಾ ನಾಯಕನಾಗುವ ಅವಕಾಶವೂ ದೊರಕಿತ್ತು. ಅದುವೇ ನನಗೆ ಇಷ್ಟು ಎತ್ತರದವರೆಗೆ ಸಾಗಿ ಬರಲು ಸಹಕಾರ ನೀಡಿದೆ.
-ಡಾ| ದೇವಿಪ್ರಸಾದ್‌ ಶೆಟ್ಟಿ, ಅಧ್ಯಕ್ಷರು, ಬೆಳಪು ಗ್ರಾಮ ಪಂಚಾಯತ್‌, (ಹಳೆ ವಿದ್ಯಾರ್ಥಿ)

-  ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next