Advertisement

ಬಸ್‌ ಸ್ಟ್ಯಾಂಡ್‌ ಎಲ್ಲಿ ಎಂದು ಕೇಳಿದರೆ ಪ್ರಸ್ತಾವನೆಯಲ್ಲಿದೆ ಎನ್ನಬೇಕಷ್ಟೇ !

10:59 PM Feb 25, 2021 | Team Udayavani |

ಮರವಂತೆ/ಕಂಬದಕೋಣೆ: ಕುಂದಾಪುರ-ಶಿರೂರುವರೆಗಿನ‌ ಹೆದ್ದಾರಿ ಕಾಮಗಾರಿ ಬಗ್ಗೆ ಜನರು ಸಲ್ಲಿಸುತ್ತಿರುವ ಮತ್ತೂಂದು ಪ್ರಮುಖ ಆಕ್ಷೇಪಣೆಯೆಂದರೆ ಬಸ್‌ ನಿಲ್ದಾಣಗಳ ಕೊರತೆ.

Advertisement

ಈ ಹೆದ್ದಾರಿ ಆಕ್ಕಪಕ್ಕದಲ್ಲಿ ಹಲವು ಗ್ರಾಮಗಳಿವೆ. ಬಹುತೇಕ ಕಡೆ ಬಸ್‌ ನಿಲ್ದಾಣಗಳನ್ನು ಕಲ್ಪಿಸಲು ಅಧಿಕಾರಿಗಳು ಯೋಚಿಸಿಯೇ ಇಲ್ಲ. ಯೋಜನೆಯ ಪ್ರಕಾರ ಇರುವ ಬಸ್‌ ನಿಲ್ದಾಣಗಳೂ ಸಂಪೂರ್ಣ ಆಗಿಲ್ಲ. ಆದರೆ, ರಸ್ತೆ ಅಭಿವೃದ್ಧಿ ಮಾಡುವಾಗ ದೊಡ್ಡ ಊರು ಅಥವಾ ಸಣ್ಣ ಊರು, ಚಿಕ್ಕ ಜಂಕ್ಷನ್‌ ಅಥವಾ ದೊಡ್ಡ ಜಂಕ್ಷನ್‌ ಎಂಬ ತಾರತಮ್ಯ ಮಾಡದೆ ಎಲ್ಲ ಹಳೆ ಬಸ್‌ ನಿಲ್ದಾಣಗಳನ್ನು ತೆರವುಗೊಳಿಸಲಾಗಿದೆ.

ಸ್ಥಳೀಯರಿಗೆ ಈ ಬಗ್ಗೆ ಕೇಳಿದರೆ, ಮೊದಲೇ ಚೆನ್ನಾಗಿತ್ತು. ನಮ್ಮೂರಿನಲ್ಲೆಲ್ಲಾ ಬಸ್‌ ನಿಲ್ದಾಣವಿತ್ತು. ಬಸ್‌ಗಾಗಿ ಕಾಯಲು ಸಮಸ್ಯೆ ಇರಲಿಲ್ಲ. ಈಗ ಯಾವುದೋ ಅಂಗಡಿ ಕಟ್ಟೆ ಹುಡುಕಬೇಕು.ನೆರಳಿಗೆ ಒಂದೂ ಮರವಿಲ್ಲ ಎನ್ನುತ್ತಾರೆ.

ಈ ಹೆದ್ದಾರಿಯಲ್ಲಿ ಸಾಗುವಾಗ ಜನರು ಹೇಳುವ ಮಾತು ನಿಜ ಎನಿಸುತ್ತದೆ. ಬೈಂದೂರು, ಉಪ್ಪುಂದ, ತಲ್ಲೂರು, ಹೆಮ್ಮಾಡಿ, ತ್ರಾಸಿಯಂತಹ ಪ್ರಮುಖ ಪೇಟೆಗಳಲ್ಲೂ ಬಸ್‌ ನಿಲ್ದಾಣಗಳನ್ನು ನಿರ್ಮಿಸಿಲ್ಲ. ಪ್ರಮುಖವಾಗಿ ಈ ಜಂಕ್ಷನ್‌ಗಳು ಹತ್ತಿರದ ಹತ್ತಾರು ಊರುಗಳಿಗೆ ಸಂಪರ್ಕ ಕೊಂಡಿ. ಸಾಕಷ್ಟು ಜನರ ಓಡಾಟವಿದ್ದೇ ಇರುತ್ತದೆ. ಆದರೂ ಬಸ್‌ ನಿಲ್ದಾಣ ಕಲ್ಪಿಸದಿರುವುದು ನಮ್ಮ ಅಗತ್ಯಗಳಿಗೆ ಮನ್ನಣೆ ನೀಡಿಲ್ಲ ಎಂಬ ಸ್ಥಳೀಯರ ಟೀಕೆಗೆ ಸಾಕ್ಷ್ಯವಾಗಿದೆ.

ಎಲ್ಲೆಲ್ಲಿ ಬಸ್‌ ನಿಲ್ದಾಣ ಪ್ರಸ್ತಾವವಿದೆ?

Advertisement

ತ್ರಾಸಿ, ಹೆಮ್ಮಾಡಿ, ಶಿರೂರು, ಉಪ್ಪುಂದ, ನಾಗೂರು, ಕಿರಿ ಮಂಜೇಶ್ವರ ಹತ್ತಿರ, ನಾವುಂದದಲ್ಲಿ ಬಸ್‌ ನಿಲ್ದಾಣ ನಿರ್ಮಾಣ ಮಾಡಲು ಹೆದ್ದಾರಿ ಪ್ರಾಧಿಕಾರದಿಂದ ಯೋಜನೆ ರೂಪಿಸಲಾಗಿದೆ. ಇದರಲ್ಲಿ ಈಗ ಶಿರೂರು, ನಾವುಂದ, ಉಪ್ಪುಂದ, ನಾಗೂರು, ಕಿರಿಮಂಜೇಶ್ವರದಲ್ಲಿ ಮಾತ್ರ ಬಸ್‌ನಿಲ್ದಾಣ ನಿರ್ಮಿಸಲಾಗಿದೆ.

ಎಲ್ಲೆಲ್ಲಿ ಬಾಕಿಯಿದೆ?

ತ್ರಾಸಿ (ಎಡಗಡೆ)ಯಲ್ಲಿ ಹಿಂದಿದ್ದ ಹಳೆಯ ಬಸ್‌ ನಿಲ್ದಾಣವನ್ನೇ ಉಳಿಸಿಕೊಂಡಿದ್ದು, ಕುಂದಾಪುರ ಕಡೆಗೆ ಹೋಗುವಲ್ಲಿ ಬಸ್‌ ನಿಲ್ದಾಣ ಆಗಬೇಕಿದೆ. ಹೆಮ್ಮಾಡಿಯಲ್ಲಿ ಬಾಕಿಯಿದೆ. ಇನ್ನು ತಲ್ಲೂರು, ಮುಳ್ಳಿಕಟ್ಟೆ, ಕಂಬದಕೋಣೆ, ಅರೆಹೊಳೆ ಕ್ರಾಸ್‌, ಬೈಂದೂರು ಸರ್ವೀಸ್‌ ರಸ್ತೆ ಬಳಿ ಬೇಡಿಕೆಯಿದ್ದರೂ, ಯೋಜನೆ ಪ್ರಕಾರ ಇಲ್ಲವಾಗಿದ್ದು, ಈ ಬಗ್ಗೆ ಪ್ರಾಧಿಕಾರದ ಅನುಮತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲಿಂದ ಒಪ್ಪಿಗೆ ಇನ್ನೂ ಸಿಕ್ಕಿಲ್ಲ.

ಬೈಂದೂರು: ರಸ್ತೆಯೇ ನಿಲ್ದಾಣ
ಬೈಂದೂರಿನಲ್ಲಿ ರಸ್ತೆಯೇ ನಿಲ್ದಾಣ. ಇದು ತಾಲೂಕು ಕೇಂದ್ರ, ಪಟ್ಟಣ ಪಂಚಾಯತ್‌, ಕುಂದಾಪುರ, ಭಟ್ಕಳ ಮತ್ತಿತರ ಊರುಗಳನ್ನು ಸಂಧಿಸುವ ಪ್ರಮುಖ ಪೇಟೆ. ಬಸ್‌ ಬೇ ಸಹ ಇಲ್ಲ. ಬಸ್‌ಗಳು ರಸ್ತೆಯಲ್ಲೇ ನಿಲ್ಲುತ್ತಿದ್ದು, ಇತರ ವಾಹನಗಳ ಸಂಚಾರಕ್ಕೂ ಅಡ್ಡಿಯಾಗುತ್ತಿದೆ. ತುಸು ಮುಂದೆ ಬಂದರೆ ಸಿಗುವ ಹೊಸ ಬಸ್‌ ನಿಲ್ದಾಣ ಜಂಕ್ಷನ್‌ನಲ್ಲೂ ಬಸ್‌ ನಿಲ್ದಾಣವಿಲ್ಲ. ಸರಕಾರಿ ಕಚೇರಿಗಳು, ಶಾಲಾ- ಕಾಲೇಜುಗಳು, ರೈಲು ನಿಲ್ದಾಣ ಸಂಪರ್ಕ ಕಲ್ಪಿಸುವ ಜಂಕ್ಷನ್‌ ಇದು. ಇಲ್ಲಿಗೆ ನಿತ್ಯವೂ ಬರುವ ಸಾವಿರಾರು ಮಂದಿ ರಸ್ತೆಯಲ್ಲೇ ಬಸ್‌ಗೆ ಕಾಯಬೇಕು.

ಹೆಮ್ಮಾಡಿ: ಅಂಗಡಿ ಬದಿಯೇ ಆಸರೆ
ಕೊಲ್ಲೂರು, ಮರವಂತೆಯಂತಹ ಪ್ರಮುಖ ಧಾರ್ಮಿಕ, ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ಹೆಮ್ಮಾಡಿಯಲ್ಲೂ ಬಸ್‌ ನಿಲ್ದಾಣವಿಲ್ಲ. ಜನರು ಅಂಗಡಿ ಬದಿಯೋ, ರಿಕ್ಷಾ ನಿಲ್ದಾಣ ಬಳಿ, ಮತ್ತೂಂದು ಕಡೆ ಮರ ಹುಡುಕಿ ನಿಲ್ಲಬೇಕು. ತಾಲೂಕು ಕೇಂದ್ರಕ್ಕೆ ಹೋಗುವ ನಾಗರಿಕರು, ಶಾಲಾ- ಕಾಲೇಜಿಗೆ ಹೋಗುವ ಮಕ್ಕಳ ಕಷ್ಟ ಕೇಳುವವರಿಲ್ಲ. ಮೊದಲು ಇಲ್ಲಿ ಸುಸಜ್ಜಿತ ನಿಲ್ದಾಣವಿತ್ತು. ಇಲ್ಲಿ ಬೈಂದೂರು ಕಡೆ, ಕುಂದಾಪುರ ಹೋಗುವ ಬದಿಯಲ್ಲಿ, ಕೊಲ್ಲೂರು ಹೋಗುವ ಕಡೆ ಹೀಗೆ 3 ಕಡೆಗಳಲ್ಲಿ ನಿಲ್ದಾಣ ನಿರ್ಮಾಣದ ಅಗತ್ಯವಿದೆ.

ತಲ್ಲೂರು: ನಿಲ್ದಾಣ ಆಗುವುದೇ ಅನುಮಾನ?
ಹಟ್ಟಿಯಂಗಡಿ, ಉಪ್ಪಿನಕುದ್ರು, ಕುಂದಾಪುರ, ಬೈಂದೂರು, ಕೊಲ್ಲೂರು, ನೇರಳಕಟ್ಟೆ, ಆಜ್ರಿ ಮತ್ತಿತರ ಅನೇಕ ಊರುಗಳನ್ನು ಸಂಧಿಸುವ ಪ್ರಮುಖ ಪೇಟೆ ತಲ್ಲೂರು. ಹಳೆ ಬಸ್‌ ನಿಲ್ದಾಣ ತೆಗೆದಿದ್ದು, ಹೊಸತನ್ನು ನಿರ್ಮಿಸಿಲ್ಲ. ಸದ್ಯಕ್ಕೆ ಮತ್ತೂಂದು ಕಡೆ ಜಂಕ್ಷನ್‌ಗಾಗಿ ನಿರ್ಮಿಸಿದ ಡಿವೈಡರೇ ನಿಲ್ದಾಣ. ತಲ್ಲೂರು, ಉಪ್ಪಿನಕುದ್ರು, ಹಟ್ಟಿಯಂಗಡಿ ಕಡೆಯಿಂದ ನಿತ್ಯವೂ ನೂರಾರು ಮಂದಿ ಮಕ್ಕಳು ಇಲ್ಲಿಂದ ಕುಂದಾಪುರ, ಕೋಟೇಶ್ವರ ಕಾಲೇಜುಗಳಿಗೆ, ಶಾಲೆಗಳಿಗೆ ತೆರಳುವವರು. ಅವರೆಲ್ಲರೂ ರಸ್ತೆಯಲ್ಲೇ ನಿಲ್ಲಬೇಕು, ಸುರಕ್ಷೆಯೇ ಇಲ್ಲ. ಯೋಜನೆ ಪ್ರಕಾರ ಇಲ್ಲಿ ಬಸ್‌ ನಿಲ್ದಾಣ ನಿರ್ಮಿಸುವುದಿಲ್ಲ. ಸ್ಥಳೀಯಾಡಳಿತ, ಜನಪ್ರತಿನಿಧಿಗಳು ರಾಷ್ಟ್ರೀಯ ಇಲಾಖೆ ಅಧಿಕಾರಿಗಳ ಮೇಲೆ ಈ ಬಗ್ಗೆ ಮತ್ತಷ್ಟು ಬಲವಾಗಿ ಒತ್ತಡ ಹೇರಬೇಕಿದೆ.

ಸಂಗಮ್‌: ಡಿವೈಡರೇ ನಿಲ್ದಾಣ
ಸಂಗಮ್‌ ಜಂಕ್ಷನ್‌ ಕುಂದಾಪುರ ನಗರ, ಬೈಂದೂರು ಪೇಟೆಗಳನ್ನು ಸಂಧಿಸುತ್ತದೆ. ಇಲ್ಲಿ ಖಾಸಗಿ ಕಾಲೇಜು, ಆಸ್ಪತ್ರೆಯಿದ್ದು, ನಿತ್ಯ ನೂರಾರು ಮಂದಿ ಇಲ್ಲಿ ಬಸ್‌ಗಾಗಿ ಕಾಯುತ್ತಿರುತ್ತಾರೆ. ನಿಲ್ದಾಣವಿಲ್ಲದೆ ಇಲ್ಲದೆ ಮಕ್ಕಳು, ಸಾರ್ವಜನಿಕರು ಡಿವೈಡರ್‌ ಮೇಲೆಯೇ ಕಾಯಬೇಕು.

ತ್ರಾಸಿ: ಇನ್ನೊಂದು ಬದಿ ಯಾವಾಗ?
ಗಂಗೊಳ್ಳಿ, ಕುಂದಾಪುರ, ಬೈಂದೂರು, ಮೊವಾಡಿ, ಪಡುಕೋಣೆ ಮತ್ತಿತರ ಊರುಗಳಿಗೆ ಸಂಪರ್ಕ ಕಲ್ಪಿಸುವ ತ್ರಾಸಿ ಪೇಟೆಯ ಒಂದು ಬದಿ ಪುಣ್ಯವಶಾತ್‌ ಹಿಂದಿನ ಹಳೆಯ ನಿಲ್ದಾಣವೇ ಇದೆ. ಆದರೆ ಕುಂದಾಪುರ ಕಡೆಗೆ ಹೋಗುವಲ್ಲಿ ಬಸ್‌ ನಿಲ್ದಾಣವಿಲ್ಲ. ಬಸ್‌ಗಳು ಎಲ್ಲೆಲ್ಲಿಯೋ ನಿಲ್ಲುತ್ತಿದ್ದು, ನಿಲ್ದಾಣ ನಿರ್ಮಾಣವಾದರೆ ಇದಕ್ಕೊಂದು ಶಾಶ್ವತ ಪರಿಹಾರ ಸಿಕ್ಕಂತಾಗಲಿದೆ.

ಮುಳ್ಳಿಕಟ್ಟೆ : ಬೇಕಿದೆ ನಿಲ್ದಾಣ
ಕುಂದಾಪುರ, ಬೈಂದೂರು, ಆಲೂರು, ಹಕ್ಲಾಡಿ, ಗಂಗೊಳ್ಳಿ ಮತ್ತಿತರ ಪ್ರಮುಖ ಊರುಗಳನ್ನು ಸಂಧಿಸುವ ಮುಳ್ಳಿಕಟ್ಟೆ ಜಂಕ್ಷನ್‌ನಲ್ಲಿ ನಿಲ್ದಾಣವೇ ಇಲ್ಲವಾಗಿದೆ. ಹಕ್ಲಾಡಿ, ಬಂಟ್ವಾಡಿ, ಹೊಸಾಡು, ಅರಾಟೆ, ಮುಳ್ಳಿಕಟ್ಟೆ, ಮತ್ತಿತರ ಊರುಗಳಿಂದ ಹೆದ್ದಾರಿಗೆ ಬಂದು ಇಲ್ಲಿ ಕುಂದಾಪುರ ಅಥವಾ ಬೈಂದೂರು ಕಡೆಗೆ ಹೋಗಲು ಬಸ್‌ಗಾಗಿ ನಿತ್ಯ ನೂರಾರು ಮಂದಿ ಕಾಯುತ್ತಿರುತ್ತಾರೆ. ಹಾಗಾಗಿ ನಿಲ್ದಾಣ ಬಹುಬೇಗ ಆಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next