Advertisement

ಕುಂದಾಪುರ: ಅಪಾಯದಲ್ಲಿ ಕೋಡಿ ಸೀವಾಕ್‌- ಇಲಾಖೆ ನಿರ್ಲಕ್ಷ್ಯ

04:48 PM May 22, 2024 | Team Udayavani |

ಕುಂದಾಪುರ: ಸಾವಿರಾರು ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾದ ಕುಂದಾಪುರದ ಕೋಡಿ ಸೀ ವಾಕ್‌ ಅಪಾಯದಲ್ಲಿದೆಯೇ ಎಂಬ ಅನುಮಾನ ಕಾಡುತ್ತಿದೆ. ಸದ್ಯ ಪರಿಸ್ಥಿತಿ ಸರಿ ಇದ್ದರೂ ಮುಂಬರುವ ಮಳೆಗಾಲದಲ್ಲಿ ಕಡಲ ಅಲೆಯ ಅಬ್ಬರಕ್ಕೆ ಸೀವಾಕ್‌ ಗೋಡೆಗೆ ಅಪಾಯವಾಗುವ ಸಾಧ್ಯತೆ ದಟ್ಟವಾಗಿದೆ. ಅದರ ಬುಡದಲ್ಲಿದ್ದ ಕಲ್ಲುಗಳು, ವಿಶಿಷ್ಟ ವಿನ್ಯಾಸದ ಕಾಂಕ್ರಿಟ್‌ ಸ್ಲಾಬ್‌ಗಳು ಜಾರಿವೆ.

Advertisement

ಕಳೆದ ಮಳೆಗಾಲದಲ್ಲಿ ಅಲೆಗಳ ಅಬ್ಬರಕ್ಕೆ ನಲುಗಿದ್ದ ಕೋಡಿ ಸೀವಾಕ್‌ ಸೈಡ್‌ವಾಲ್‌ ಇನ್ನೂ ದುರಸ್ತಿಯಾಗಿಲ್ಲ. ಮಳೆಗಾಲ ಆಗಮಿಸಿದಾಗಲೆಲ್ಲ ಅಪಾಯಕಾರಿ ಹಂತದ ನೆನಪಾಗುತ್ತದೆ. ದಿನೇ ದಿನೇ ಹೆಚ್ಚುತ್ತಿರುವ ಅಲೆಗಳ ಅಬ್ಬರಕ್ಕೆ ಕಲ್ಲುಗಳು ಕಡಲಿಗೆ ಜಾರುತ್ತಿದ್ದು, ತಡೆಗೋಡೆಯಲ್ಲಿ ಬಿರುಕು ಮೂಡಿದೆ. ಮುಂಗಾರು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸಂಭವನೀಯ ಅಪಾಯ ತಡೆಯುವ ನಿಟ್ಟಿನಲ್ಲಿ ಸಂಬಂಧಿತ ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂಬ ಸ್ಥಳೀಯರು ಆಗ್ರಹಿಸಿದ್ದಾರೆ.

ಬ್ರೇಕ್‌ವಾಟರ್‌
2016ರಲ್ಲಿ ಗಂಗೊಳ್ಳಿ-ಕೋಡಿ ಅಳಿವೆ ಪ್ರದೇಶದಲ್ಲಿ 102 ಕೋಟಿ ರೂ. ವೆಚ್ಚದ ಬ್ರೇಕ್‌ ವಾಟರ್‌ ನಿರ್ಮಾಣ ಆರಂಭಗೊಂಡು ಕೋಡಿ ಭಾಗದಿಂದ 900 ಮೀ. ಪಶ್ಚಿಮಕ್ಕೆ ಸಮುದ್ರದಲ್ಲಿ ಬ್ರೇಕ್‌ ವಾಟರ್‌ ಕಾಮಗಾರಿ ನಡೆದಿತ್ತು. ಗಂಗೊಳ್ಳಿಯಲ್ಲೂ ಇದೇ ಮಾದರಿಯಲ್ಲಿದೆ. ಬ್ರೇಕ್‌ ವಾಟರ್‌ ತಡೆಗೋಡೆಯನ್ನೇ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ  ಇಲಾಖೆ ಸೀವಾಕ್‌ ಆಗಿ ಪರಿವರ್ತಿಸಿದೆ.

ಮನವಿ
ಕಳೆದ ಮಳೆಗಾಲದಲ್ಲಿ ಅಲೆಯ ಅಬ್ಬರಕ್ಕೆ ತಡೆಗೋಡೆ ಅಪಾಯಕ್ಕೆ ಸಿಲುಕಿತ್ತು. ಗೋಡೆ ರಕ್ಷಣೆಗೆಂದು ಸುತ್ತಲೂ ಹಾಕಿರುವ ಟೆಟ್ರಾ ಪೋಡ್‌, ಶಿಲೆಯ ಕಲ್ಲುಗಳು ಜಾರಿದ್ದವು. ಸ್ಥಳೀಯರು ಈ ವಿಚಾರವಾಗಿ ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸಿದ್ದು, ಅವರು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿ ತ ಇಲಾಖಾಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ವರ್ಷ ಸಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕಳೆದ ಕೆಲವು ದಿನಗಳಿಂದ ಅಲೆಗಳ ಅಬ್ಬರ ತೀವ್ರಗೊಂಡಿದ್ದು, ಸೀವಾಕ್‌ ತಡೆಗೋಡೆ ಅಪಾಯ ಎದುರಿಸುತ್ತಿದೆ. ಕಲ್ಲುಗಳು ಒಂದೊಂದಾಗಿ ಕಡಲಿಗೆ ಸೇರುತ್ತಿದ್ದರೂ ಯಾವುದೇ ಕ್ರಮ ವಹಿಸದ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾವಿರಾರು ಪ್ರವಾಸಿಗರು
ಇಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಸಾರ್ವಜನಿಕ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಪುರಸಭೆ ನೇತೃತ್ವದಲ್ಲಿ ಕಲ್ಲಿನ ಬೆಂಚು, ಸೋಲಾರ್‌ ದೀಪ ಅಳವಡಿಕೆ ಮಾಡಲಾಗಿದೆ. ಸೀವಾಕ್‌ನಲ್ಲಿ ಅನೈತಿಕ ಚಟುವಟಿಕೆಗಳು, ಮದ್ಯಪಾನಾದಿ ಗೋಷ್ಠಿಗಳು, ಗಾಂಜಾದಂತಹ ಅಮಲು ಸೇವನೆ, ಜೂಜಿನಂತಹ ಅಡ್ಡೆಗಳು ನಡೆಸಲ್ಪಡುತ್ತವೆ ಎನ್ನುವ ಸಾರ್ವಜನಿಕ ದೂರಿನ ಅನ್ವಯ ಭದ್ರತೆಗಾಗಿ ಸೈನ್‌ ಇನ್‌ ಸೆಕ್ಯುರಿಟಿ ಮೂಲಕ ಸಿಸಿ ಕೆಮರಾ ಅಳವಡಿಸಲಾಗಿದೆ. ಪುರಸಭೆ ಮೂಲಕ ಹಾಕಿದ ಸಿಸಿ ಕೆಮೆರಾಗಳು ದಿನದ 24 ತಾಸು ಕಣ್ಗಾವಲಿನಲ್ಲಿ ಇರುತ್ತವೆ. ಇದರ ಒಂದು ಚಿತ್ರಣ ಪೊಲೀಸ್‌ ಠಾಣೆಯಲ್ಲಿ ಇರುತ್ತದೆ.

Advertisement

ವಾರಾಂತ್ಯದಲ್ಲಿ ಮಕ್ಕಳು, ಮಹಿಳೆಯರು ಎಂದು 5ರಿಂದ 7 ಸಾವಿರ ಪ್ರವಾಸಿಗರು ಆಗಮಿಸುತ್ತಾರೆ. ಅಂದಾಜು 1.5 ಕಿ.ಮೀ. ಉದ್ದದ ಸೀವಾಕ್‌ ಪಥ ಸದ್ಯ ಆಕರ್ಷಣೆಯ ಕೇಂದ್ರಬಿಂದು. ಪ್ರವಾಸಿಗರು ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು. ಅಲೆಗಳ ಹೊಡೆತದಿಂದ ಕಲ್ಲುಗಳು ಜಾರಿದ್ದು ಸೀವಾಕ್‌ ತುದಿಗೆ ಹೋಗುವವರು ಮುನ್ನೆಚ್ಚರಿಕೆ ವಹಿಸಬೇಕು ಎನ್ನುತ್ತಾರೆ ಪುರಸಭೆ ಮಾಜಿ ಸದಸ್ಯ ನಾಗರಾಜ್‌ ಕಾಂಚನ್‌.

ಅಪಾಯದಲ್ಲಿದೆ
ಕೋಡಿ ಬೀಚ್‌ ಸೀವಾಕ್‌ ತಡೆಗೋಡೆ ಅಪಾಯ ಎದುರಿಸುತ್ತಿದೆ. ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಸಂಬಂಧಪಟ್ಟ ಇಲಾಖೆಯವರಿಗೆ ಸೂಚನೆ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದೀಗ ಅಲೆಯ ಹೊಡೆತಕ್ಕೆ ಅಳಿದುಳಿದ ಕಾಂಕ್ರೀಟ್‌ ಸ್ಲಾಬ್‌ಗಳು, ಕಲ್ಲುಗಳು ಸಮುದ್ರಪಾಲಾಗಿದೆ. ತಡೆಗೋಡೆಯಲ್ಲಿ ಬಿರುಕು ಮೂಡಿದೆ.
*ಅಶೋಕ ಪೂಜಾರಿ ಕೋಡಿ, ಸ್ಥಳೀಯರು

ತತ್‌ಕ್ಷಣ ದುರಸ್ತಿಗೆ ಸೂಚನೆ ಕೋಡಿ ಸೀವಾಕ್‌ ಅಪಾಯದಲ್ಲಿದ್ದರೆ ಪ್ರವಾಸಿಗರಿಗೆ ತೊಂದರೆಯಾಗದಂತೆ, ತತ್‌ಕ್ಷಣ ಪರಿಶೀಲಿಸಿ ದುರಸ್ತಿಪಡಿಸಲು ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡುತ್ತೇನೆ. ಕುಂದಾಪುರಕ್ಕೆ ಪ್ರವಾಸಿಗರ ಆಗಮನ ಹೆಚ್ಚಾಗಲು, ಕುಂದಾಪುರ ಪ್ರವಾಸೋದ್ಯಮ ಕೇಂದ್ರವಾಗಲು ಸೀವಾಕ್‌ ಕೂಡ ಕಾರಣ.
*ರಶ್ಮೀ ಎಸ್‌.ಆರ್‌. ಸಹಾಯಕ ಕಮಿಷನರ್‌, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next