Advertisement

ಕುಂದಾಪುರ: ಜ.21ರಿಂದ ಸಿರಿಧಾನ್ಯ ಮೇಳ

01:00 AM Jan 20, 2019 | Harsha Rao |

ಕುಂದಾಪುರ: ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಇಲ್ಲಿನ ಕುಂದೇಶ್ವರ ದೇಗುಲದ ಆವರಣದಲ್ಲಿ ಜ. 21ರಿಂದ ಜ. 28ರ ವರೆಗೆ ಸಿರಿಧಾನ್ಯಮೇಳ ಹಾಗೂ ಸಿರಿ ಆಹಾರ ಮೇಳ ನಡೆಯಲಿದೆ ಎಂದು ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಯೋಜನಾಧಿಕಾರಿ ರೋಹಿತಾಕ್ಷ ಹೇಳಿದರು.

Advertisement

ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿರಿ ಸಂಸ್ಥೆಯು ಗ್ರಾಮಾಂತರ ಪ್ರದೇಶದ ಮಹಿಳೆಯರು ತಯಾರಿಸಿದ ರೆಡಿಮೇಡ್‌ ಬಟ್ಟೆಗಳನ್ನು ಈಗ ದೇಶದಲ್ಲಷ್ಟೇ ಅಲ್ಲ ; ಜಪಾನ್‌, ಆಸ್ಟ್ರೇಲಿಯಾ, ಅಮೆರಿಕಕ್ಕೂ ರಫ್ತು ಮಾಡುತ್ತಿದೆ. ಅಂತೆಯೇ ಸಿರಿಧಾನ್ಯಗಳ ಮೂಲಕ ಆಹಾರ  ಹಾಗೂ ಆರೋಗ್ಯ ಕಾಳಜಿಯನ್ನು ಸಾರುತ್ತಿದೆ ಎಂದರು.

ರಾಜ್ಯದ 18 ಕಡೆ ಸಿರಿಧಾನ್ಯ ಮೇಳ ಆಯೋಜಿಸಲಾಗಿದ್ದು ಮೇಳದಲ್ಲಿ ಏಕದಳ ಧಾನ್ಯಗಳಾದ ನವಣೆ, ಹಾರಕ, ಊದಲು, ಸಾವೆ, ಕೊರಲೆ, ಬರಗು, ರಾಗಿ, ಸಜ್ಜೆ, ಜೋಳ ಮೊದಲಾದ ಸಿರಿ ಧಾನ್ಯಗಳು ಲಭ್ಯ. ಇವು ನಮ್ಮ ದೇಹಕ್ಕೆ ಮುಖ್ಯವಾಗಿ ಬೇಕಾಗುವ ನಾರು, ಕಬ್ಬಿಣ, ಸುಣ್ಣ, ಪಿಷ್ಠ ಇತ್ಯಾದಿಗಳನ್ನು ನೀಡುತ್ತದೆ. ದೇಹದಲ್ಲಿ ಸಕ್ಕರೆ, ರಕ್ತದಲ್ಲಿ ಕೊಲೆಸ್ಟರಾಲ್‌, ಟ್ರೈಗ್ಲಿಸರೈಡ್‌ ನಿಯಂತ್ರಿಸಲು ಸಹಕಾರಿ. ಯೋಜನೆ ವತಿಯಿಂದ 2017-18ನೇ ಸಾಲಿನಲ್ಲಿ 20 ಸಾವಿರ ರೈತರಿಂದ 80 ಸಾವಿರ ಎಕರೆ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆದು ಮಾರುಕಟ್ಟೆಗೆ ಒದಗಿಸಲಾಗಿದೆ. ಧಾರವಾಡದಲ್ಲಿ ಗಿರಣಿ ಸ್ಥಾಪಿಸಲಾಗಿದೆ ಎಂದರು.

ಮೇಳದಲ್ಲಿ ಸಿರಿಧಾನ್ಯಗಳಿಂದ ಮಾಡಿದ ಆಹಾರ ಪ್ರದರ್ಶನ, ಪ್ರಾತ್ಯಕ್ಷಿಕೆ ಇದೆ. ಸಿರಿಧಾನ್ಯ ಖಾದ್ಯ ಸವಿಯಲು ಕೂಡಾ ಲಭ್ಯ. ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ವಿವಿಧ ಸಂಘ ಸಂಸ್ಥೆಗಳು ಸಹಯೋಗ ನೀಡಿದ್ದು ಉಚಿತ ಪ್ರವೇಶಾವಕಾಶ ಇದೆ. ಡಾ| ಶ್ರೀಶೈಲ ಬಾದಾಮಿ ಅವರ ಜತೆ ಸಂವಾದ ನಡೆಯಲಿದೆ ಎಂದರು.

ಧ.ಗ್ರಾ. ಯೋಜನೆಯ ಯೋಜನಾಧಿಕಾರಿ ಮುರಳೀಧರ ಕೆ. ಶೆಟ್ಟಿ, ಸಿರಿ ಸಂಸ್ಥೆಯ ಮಾರುಕಟ್ಟೆ ಅಧಿಕಾರಿ ಸುಧಾಕರ್‌, ರಾಮ್‌ಕುಮಾರ್‌, ಕೃಷಿ ಅಧಿಕಾರಿ ಚೇತನ್‌ ಕುಮಾರ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next