Advertisement

ಕುಂದಾಪುರ: ಜಿಲ್ಲೆಯ ಮೊದಲ ಮಂಗನಕಾಯಿಲೆ ಸೋಂಕು ಪತ್ತೆ

05:46 PM Feb 26, 2024 | Team Udayavani |

ಕುಂದಾಪುರ: ಕಳೆದ ಕೆಲ ದಿನಗಳಿಂದ ನೆರೆಯ ಜಿಲ್ಲೆಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದ ಮಂಗನ ಕಾಯಿಲೆ (ಕ್ಯಾಸನೂರು ಫಾರೆಸ್ಟ್‌ ಡಿಸಿಸ್‌- ಕೆಎಫ್‌ಡಿ) ಪ್ರಕರಣವು ಈಗ ಉಡುಪಿ ಜಿಲ್ಲೆಯಲ್ಲಿಯೂ ಪತ್ತೆಯಾಗಿದೆ. 2019ರ ಬಳಿಕ ಜಿಲ್ಲೆಯಲ್ಲಿ ಪತ್ತೆಯಾದ ಮೊದಲ ಕೆಎಫ್‌ಡಿ ಸೋಂಕು ಇದಾಗಿದೆ. ಇದರಿಂದ ಮುಖ್ಯವಾಗಿ ಪಶ್ಚಿಮ ಘಟ್ಟದ ತಪ್ಪಲಿನ, ಕಾಡಂಚಿನ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

Advertisement

ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾಣಿಸಿಕೊಂಡಿದ್ದ ಮಂಗನ ಕಾಯಿಲೆ ಸೋಂಕು ಈಗ ಉಡುಪಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕುಂದಾಪುರ ತಾಲೂಕಿನ ವಂಡ್ಸೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಮಹಿಳೆಯೊಬ್ಬರಿಗೆ ದೃಢಪಟ್ಟಿದೆ.

ಗಡಿ ಜಿಲ್ಲೆಗಳಲ್ಲಿ ಈ ಹಿಂದಿನ ವರ್ಷಗಳಲ್ಲಿ ಕೆಎಫ್‌ಡಿ ಕಾಣಿಸಿಕೊಂಡಿದ್ದರೂ, ಉಡುಪಿಯಲ್ಲಿ ಮಾತ್ರ 2019ರಿಂದ ಯಾವುದೇ ಪ್ರಕರಣ ಕಂಡು ಬಂದಿರಲಿಲ್ಲ. ಆಗ ಸಿದ್ದಾಪುರ ಹಾಗೂ ಬೈಂದೂರಿನಲ್ಲಿ 2 ಪ್ರಕರಣಗಳು ಪತ್ತೆಯಾಗಿದ್ದವು.

ವ್ಯಾಪಕ ಹರಡುವಿಕೆ ಭೀತಿ?
ಕಳೆದ ಕೆಲ ವರ್ಷಗಳಿಂದ ಅಷ್ಟೊಂದು ತೀವ್ರತೆ ಇಲ್ಲದಿದ್ದರೂ, ಈ ವರ್ಷ ಮಾತ್ರ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಈ ಮಂಗನ ಕಾಯಿಲೆ ಸೋಂಕು ವ್ಯಾಪಕವಾಗಿ ಹಬ್ಬುವ ಆತಂಕ ಶುರುವಾಗಿದೆ. ರಾಜ್ಯದಲ್ಲಿ ಈ ವರ್ಷ ಒಟ್ಟಾರೆ ಶುಕ್ರವಾರದವರೆಗೆ 117 ಮಂದಿಗೆ ಪಾಸಿಟಿವ್‌ ಬಂದಿದ್ದು, ಈ ಪೈಕಿ ಮೂವರು ಮೃತಪಟ್ಟಿದ್ದು,82 ಮಂದಿ ಚೇತರಿಸಿ ಕೊಂಡಿದ್ದಾರೆ. 19 ಸಕ್ರಿಯ ಪ್ರಕರಣಗಳಿವೆ. ಈ ನಿಟ್ಟಿನಲ್ಲಿ ಈ ವರ್ಷ ಕಾಡಿಗೆ ಹೊಂದಿಕೊಂಡಂತಿರುವ ಗ್ರಾಮಗಳಲ್ಲಿ ಜನರು ಅಗತ್ಯ ಮುಂಜಾಗ್ರತೆ ವಹಿಸ ಬೇಕಾಗಿದೆ.

ಆರೋಗ್ಯ ಇಲಾಖೆಯು ಗ್ರಾಮ ಮಟ್ಟದಲ್ಲಿ ತಂಡಗಳನ್ನು ರಚಿಸಿ, ಕರಪತ್ರಗಳನ್ನು ಹಂಚಿ, ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ. ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು, ಹೆಬ್ರಿ, ಕಾರ್ಕಳ, ಬ್ರಹ್ಮಾವರ ತಾಲೂಕುಗಳ ಬಹುತೇಕ ಗ್ರಾಮಗಳು ಕಾಡು ಪ್ರದೇಶಗಳನ್ನು ಹೊಂದಿಕೊಂಡಿದೆ.

Advertisement

ಈ ಪ್ರದೇಶದ ಜನರು ಕಾಡಿಗೆ ತೆರಳುವಾಗ, ಜಾನುವಾರುಗಳನ್ನು ಮೇಯಲು ಕಾಡಿಗೆ ಬಿಡುವವರು ಕೆಲವೊಂದು ಅಗತ್ಯ ಕ್ರಮ
ಕೈಗೊಳ್ಳಬೇಕು. ಮಂಗಗಳು ಸಾವನ್ನಪ್ಪಿದ ಪ್ರಕರಣ ಕಂಡು ಬಂದರೆ ಗ್ರಾ.ಪಂ., ಆರೋಗ್ಯ ಇಲಾಖೆ, ಅರಣ್ಯ ಇಲಾಖೆಗೆ ಮಾಹಿತಿ
ನೀಡಬೇಕು, ಜ್ವರ ಬಂದರೆ ನಿರ್ಲಕ್ಷé ವಹಿಸುವಂತಿಲ್ಲ.

ಭೀತಿ ಬೇಡ ; ಚಿಕಿತ್ಸೆಯಿದೆ
ಪ್ಲೋವಿ ವೈರಸ್‌ನಿಂದ ಈ ಕೆಎಫ್‌ಡಿ ಸೋಂಕು ಹರಡುತ್ತಿದ್ದು, ನವೆಂಬರ್‌ನಿಂದ ಮೇ ತಿಂಗಳ ಅವಧಿಯಲ್ಲಿ ಹೆಚ್ಚಾಗಿ ಹರಡುತ್ತದೆ. ಈ ಸೋಂಕು ಉಣುಗುಗಳಿಗೆ ಬಂದು, ಅದು ಮಂಗಗಳು, ಜಾನುವಾರು ಅಥವಾ ಬೇರೆ ಯಾವುದಾದರೂ ರೂಪದಲ್ಲಿ ಮನುಷ್ಯರಿಗೆ ಹರಡುತ್ತದೆ. ಮಂಗಗಳು ಸಾಯುವುದು ಈ ಕಾಯಿಲೆಯ ಮೊದಲ ಸೂಚನೆಯಾಗಿದೆ. ರಕ್ತ ಪರೀಕ್ಷೆಯಿಂದ ಈ ಕಾಯಿಲೆ ಪತ್ತೆ ಹಚ್ಚಬಹುದು. ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸೌಲಭ್ಯ ಒದಗಿಸಲಾಗಿದೆ.

ತಡೆಗಟುವ ವಿಧಾನಗಳೇನು?
*ಕಾಡಿಗೆ ಹೋಗುವಾಗ ಡಿಎಂಪಿ ತೈಲ ಕೈ, ಕಾಲಿಗೆ ಹಚ್ಚಬೇಕು.
*ಕಾಡಿಗೆ ಹೋಗುವವರು ಮೈ ತುಂಬಾ ಬಟ್ಟೆ ಧರಿಸಬೇಕು.
*ಕಾಡಿನಿಂದ ಬಂದ ಬಳಿಕ ಬಿಸಿ ನೀರಲ್ಲಿ ಸ್ನಾನ ಮಾಡಬೇಕು.
*ಜ್ವರ ಬಂದರೆ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಿ.

ಕಾರ್ಯಪಡೆ ರಚನೆ
ಆರೋಗ್ಯ ಇಲಾಖೆಯ ನೇತೃತ್ವದಲ್ಲಿ ಪ್ರತೀ ಗ್ರಾ.ಪಂ. ಮಟ್ಟದಲ್ಲಿ ಪಿಡಿಒ, ಆರೋಗ್ಯಾಧಿಕಾರಿ, ಪಶು ವೈದ್ಯರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡಿರುವ ತಂಡವನ್ನು ರಚಿಸಲಾಗಿದೆ. ಕರಪತ್ರಗಳ ಮೂಲಕವೂ ಜಾಗೃತಿ ಮೂಡಿಸಲಾಗುತ್ತಿದೆ. ಮಂಗಗಳ ಸಾವಾದರೆ ಅಲ್ಲಿಗೆ ಈ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ, ಸ್ಯಾಂಪಲ್‌ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗುತ್ತಿದೆ. ಜ್ವರ ಬಂದಲ್ಲಿ ನಿಗಾ ವಹಿಸಿ.
ಡಾ| ಪ್ರೇಮಾನಂದ, ಕುಂದಾಪುರ
ತಾಲೂಕು ಆರೋಗ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next