Advertisement

ಮೊಹಲ್ಲಾ ಕ್ಲಿನಿಕ್ ಶ್ಲಾಘಿಸಿ ಕೂಡಲೇ ಯು-ಟರ್ನ್ ಹೊಡೆದ ದಿನೇಶ್ ಗುಂಡೂರಾವ್

10:32 PM Aug 04, 2023 | Team Udayavani |

ಹೊಸದಿಲ್ಲಿ:ಕರ್ನಾಟಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಮ್ ಆದ್ಮಿ ಸರ್ಕಾರದ ಮೊಹಲ್ಲಾ ಕ್ಲಿನಿಕ್ ಉಪಕ್ರಮವನ್ನು ಶುಕ್ರವಾರ ಶ್ಲಾಘಿಸಿದ ಕೆಲವೇ ಗಂಟೆಗಳ ನಂತರ ಇದು “ಅತಿಯಾದ ಪ್ರಚಾರ” ಎಂದು ಹೇಳಿದ್ದಾರೆ. ಒಂದು ಮೊಹಲ್ಲಾ ಕ್ಲಿನಿಕ್ ಗೆ ಭೇಟಿ ನೀಡಿದ ನಂತರ ನಾನು ನಿರಾಶೆಗೊಂಡೆ ಎಂದು ಹೇಳಿದ್ದಾರೆ.

Advertisement

ಸಚಿವ ಗುಂಡೂರಾವ್ ಅವರ ಹೇಳಿಕೆ ಬದಲಾವಣೆಗೆ ”ಬೆಳಗ್ಗೆ ಮೊಹಲ್ಲಾ ಕ್ಲಿನಿಕ್‌ನಲ್ಲಿದ್ದಾಗ ಬಡಾಯಿ ಕೊಚ್ಚಿಕೊಂಡ ನೀವು ಕರ್ನಾಟಕ ಭವನ ತಲುಪಿದ ಕೂಡಲೇ ಬಿಜೆಪಿ ಮಟ್ಟದ ರಾಜಕೀಯಕ್ಕೆ ಇಳಿದಿದ್ದೀರಲ್ಲ”ಎಂದು ಆಪ್ ಶಾಸಕ ನರೇಶ್ ಬಲ್ಯಾನ್ ಟ್ವೀಟ್ ಮಾಡಿ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿ ವಿರೋಧ ಪಕ್ಷಗಳ ಒಕ್ಕೂಟ INDIAದ ಸದಸ್ಯರಾಗಿದ್ದಾರೆ.

ಶುಕ್ರವಾರ ಪಂಚಶೀಲ್ ಪಾರ್ಕ್‌ನಲ್ಲಿರುವ ‘ಆಮ್ ಆದ್ಮಿ ಮೊಹಲ್ಲಾ ಕ್ಲಿನಿಕ್’ಗೆ ಭೇಟಿ ನೀಡಿದ್ದರು. ಅಧಿಕೃತ ಹೇಳಿಕೆಯ ಪ್ರಕಾರ ದೆಹಲಿ ಆರೋಗ್ಯ ಸಚಿವ ಸೌರಭ್ ಭಾರದ್ವಾಜ್ ಮತ್ತು ಕರ್ನಾಟಕ ಭವನದ ವೈದ್ಯಕೀಯ ಅಧಿಕಾರಿ ಕಾರ್ತಿಕ್ ಅವರೊಂದಿಗೆ ಇದ್ದರು.

ಮೊಹಲ್ಲಾ ಕ್ಲಿನಿಕ್ ಉಪಕ್ರಮವನ್ನು ಹೊಗಳಿದ ಸುಮಾರು ನಾಲ್ಕು ಗಂಟೆಗಳ ನಂತರ, ಗುಂಡೂ ರಾವ್ ಯು-ಟರ್ನ್ ಹೊಡೆದು ”ದೆಹಲಿಯ ಮೊಹಲ್ಲಾ ಕ್ಲಿನಿಕ್‌ ನಲ್ಲಿ ಯಾವುದೇ ಜನರಿರಲಿಲ್ಲ. ಕರ್ನಾಟಕದಲ್ಲಿರುವ ನಮ್ಮ ಕ್ಲಿನಿಕ್‌ಗಳು ರೋಗಿಗಳಿಗೆ ತಕ್ಷಣದ ಪರೀಕ್ಷೆಗಳನ್ನು ಮಾಡಲು ಪ್ರಯೋಗಾಲಯ ಸೇರಿದಂತೆ ಹೆಚ್ಚಿನ ಸೌಲಭ್ಯಗಳನ್ನು ಹೊಂದಿವೆ. ಇದು ಅತಿಯಾಗಿ ಪ್ರಚಾರಗೊಂಡಿದೆ ಎಂದು ನಾನು ಭಾವಿಸುತ್ತೇನೆ ಮತ್ತು ನಾನು ನಿರಾಶೆಯಿಂದ ಹಿಂತಿರುಗಿದೆ”ಎಂದು ಟ್ವೀಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next