Advertisement

ಚಾಲಕರಾಗಲು ಹಿಂಜರಿಕೆ

06:40 AM May 03, 2018 | |

ಬೆಂಗಳೂರು: ಸರ್ಕಾರಿ ನೌಕರಿಗೆ ಸಾಮಾನ್ಯವಾಗಿ ನಾ ಮುಂದು ತಾ ಮುಂದು ಎಂದು ಮುಗಿಬೀಳುತ್ತಾರೆ.ಆದರೆ, ಕೆಎಸ್‌ಆರ್‌ಟಿಸಿಯ ಮೂರು ವಿಭಾಗಗಳಲ್ಲಿ ಚಾಲಕ ಕಂ ನಿರ್ವಾಹಕ ಕೆಲಸಕ್ಕೆ ಮಾತ್ರ ನಾನೊಲ್ಲೆ, ನಾನೊಲ್ಲೆ ಎಂದು ದೂರ ಓಡುತ್ತಿದ್ದಾರೆ.

Advertisement

ಮಂಗಳೂರು, ಪುತ್ತೂರು ಮತ್ತು ಚಾಮರಾಜನಗರದಲ್ಲಿ ಕೆಎಸ್‌ಆರ್‌ಟಿಸಿಯ ಚಾಲಕ ಕಂ ನಿರ್ವಾಹಕ ಹುದ್ದೆಗೆ ಯಾರೊಬ್ಬರೂ ಮುಂದೆ ಬರುತ್ತಿಲ್ಲ. ಅಲ್ಲಿ ಖಾಲಿಯಿರುವ 833 ಹುದ್ದೆಗಳಿಗೆ 9,354 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ಪರೀಕ್ಷೆಗೆ ಹಾಜರಾಗಿದ್ದು 2 ಸಾವಿರ ಅಭ್ಯರ್ಥಿಗಳು. ಈ ಪೈಕಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರ ಸಂಖ್ಯೆ 800 ಕೂಡ ದಾಟುವುದಿಲ್ಲ.

ಈ ಮೂರೂ ವಿಭಾಗಗಳಿಗೆ 2015ರಲ್ಲೇ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಆದರೆ, ಇದುವರೆಗೆ ಒಬ್ಬ ಅಭ್ಯರ್ಥಿಯ ನೇಮಕಾತಿಯೂ ಆಗಿಲ್ಲ. ಅರ್ಜಿ ಹಾಕಿದವರಲ್ಲಿ ಬಹುತೇಕರು ಪ್ರವೇಶಪತ್ರ ಡೌನ್‌ ಲೋಡ್‌ ಕೂಡ ಮಾಡಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ನಿಗಮವು ಎರಡೆರಡು ಬಾರಿ ಅವಕಾಶ ನೀಡಿದರೂ, ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಏಪ್ರಿಲ್‌ 23ರವರೆಗೆ ಕೇವಲ 4,423 
ಅಭ್ಯರ್ಥಿಗಳು ಪ್ರವೇಶಪತ್ರ ಪಡೆದಿದ್ದು, ಅಂದಾಜು 2 ಸಾವಿರ ಜನ ಪರೀಕ್ಷೆಗೆ ಹಾಜರಾಗಿದ್ದಾರೆ. ಆದರೆ, ಖಾಲಿಯಿರುವ ಒಟ್ಟಾರೆ ಹುದ್ದೆಗಳಿಗಿಂತ ಪರೀಕ್ಷೆ ಪಾಸಾದವರ ಸಂಖ್ಯೆಯೇ ಕಡಿಮೆ ಇದೆ. ಹಾಗಾಗಿ, ಕೆಎಸ್‌ಆರ್‌ಟಿಸಿಗೆ ಈ ನೇಮಕಾತಿ ಪ್ರಕ್ರಿಯೆಯೇ ತಲೆನೋವಾಗಿ ಪರಿಣಮಿಸಿದೆ.

ಅಸಹಾಯಕರಾದ ಅಧಿಕಾರಿಗಳು:
ಈ ಹಿಂದೆ ಆಯ್ಕೆಯಾದವರಾರೂ ಮೂರು ವಿಭಾಗಗಳಲ್ಲಿ ಹೆಚ್ಚು ದಿನ ಮುಂದುವರಿಯುವುದಿಲ್ಲ. ಹಲವು ಕಾರಣಗಳನ್ನು ನೀಡಿ ವರ್ಗಾವಣೆ ಆಗುತ್ತಾರೆ. ಆದ್ದರಿಂದ “ವಿಶೇಷ ನೇಮಕಾತಿ’ ಅಡಿ ಅರ್ಜಿ ಆಹ್ವಾನಿಸಲಾಗಿದ್ದು, ನೇಮಕಗೊಂಡವರು ಅಲ್ಲಿಯೇ ಕಾಯಂ ಇರತಕ್ಕದ್ದು.ವರ್ಗಾವಣೆಗೆ ಅವಕಾಶ ಇರುವುದಿಲ್ಲ ಎಂದು ನಿಯಮ ವಿಧಿಸಲಾಗಿದೆ.ಪರಿಣಾಮ ಯಾರೂ ಈ ಹುದ್ದೆಗಳಿಗೆ ಮುಂದೆ ಬರುತ್ತಿಲ್ಲ ಎಂದು ಕೆಎಸ್‌ಆರ್‌ಟಿಸಿ ನೇಮಕಾತಿ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಅರಬ್‌ ದೇಶಗಳ ಸೆಳೆತ: ಇದಲ್ಲದೆ, ಮಂಗಳೂರು ಮತ್ತು ಪುತ್ತೂರು ಮೂಲದವರಾರೂ ಕೆಎಸ್‌ಆರ್‌ಟಿಸಿ ಚಾಲಕ-ನಿರ್ವಾಹಕ ಹುದ್ದೆಗೆ ಮುಂದೆ ಬರುವುದಿಲ್ಲ. ಏಕೆಂದರೆ, ಅಲ್ಲಿನ ಬಹುತೇಕ ವಾಹನ ಚಾಲಕರು ಸಾಗರದಾಚೆ ಇರುವ ಸೌದಿ ಅರೇಬಿಯ, ಮಲೇಷಿಯಾ, ದುಬೈ ಸೇರಿ ಅರಬ್‌ ದೇಶಗಳಿಗೆ ಹಾರುತ್ತಾರೆ.

Advertisement

ವಿದೇಶಗಳಲ್ಲಿ ಆ ಚಾಲಕರಿಗೆ ತಿಂಗಳಿಗೆ ಲಕ್ಷಗಟ್ಟಲೆ ಸಂಬಳ ಸಿಗುತ್ತದೆ. ಹೀಗಿರುವಾಗ, 15-20 ಸಾವಿರ ವೇತನ ಸಿಗುವ ಕೆಎಸ್‌ಆರ್‌ಟಿಸಿ ಯತ್ತ ಅಪ್ಪಿತಪ್ಪಿಯೂ ನೋಡುವುದಿಲ್ಲ ಎಂದು ಸ್ವತಃ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸುತ್ತಾರೆ. ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ಸಾಮಾನ್ಯವಾಗಿ ಮುಂದೆ ಬರುವವರು ಉತ್ತರ ಕರ್ನಾಟಕ ಮೂಲದವರು.

ಕರಾವಳಿ ಮತ್ತು ಚಾಮರಾಜನಗರ ಈ ಎರಡೂ ಪ್ರದೇಶಗಳು ಗಡಿಯಲ್ಲಿ ಬರುತ್ತವೆ. ಎಲ್ಲವನ್ನೂ ತೊರೆದು ಗಡಿಯಲ್ಲಿ ಇರಬೇಕಾಗುತ್ತದೆ. ವಾತಾವರಣ ಕೂಡ ಉತ್ತರ ಕರ್ನಾಟಕದವರಿಗೆ ಒಗ್ಗುವುದಿಲ್ಲ. ಇನ್ನು ಚಾಮರಾಜನಗರ ಜಿಲ್ಲೆ ತಮಿಳುನಾಡು ಗಡಿ ಪ್ರದೇಶವಾಗಿದ್ದು, ಆಗಾಗ್ಗೆ ಎರಡೂ ರಾಜ್ಯಗಳ ನಡುವೆ ಗುದ್ದಾಟ ನಡೆಯುತ್ತಲೇ ಇರುತ್ತದೆ. ಆದ್ದರಿಂದ ಅಭ್ಯರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು”ಉದಯವಾಣಿ’ಗೆ ಸ್ಪಷ್ಟಪಡಿಸಿದರು.

ನೇಮಕಾತಿ ಪ್ರಕ್ರಿಯೆ ಹೀಗೆ
ಪ್ರವೇಶಪತ್ರ ಡೌನ್‌ಲೋಡ್‌ ಮಾಡಿಕೊಂಡು ಪರೀಕ್ಷೆ ಎದುರಿಸಲು ಬಂದವರೆಲ್ಲರಿಗೂ ಹಾಜರಾಗುವ ಅವಕಾಶ ಇರುವುದಿಲ್ಲ. ಮೊದಲು ಅಭ್ಯರ್ಥಿಯ ಎತ್ತರ, ತೂಕ ನೋಡಲಾಗುತ್ತದೆ. ನಂತರ ದಾಖಲೆಗಳ ಪರಿಶೀಲನೆ ಆಗುತ್ತದೆ. ಆಮೇಲೆ ಬಸ್‌ಗಳ ಚಾಲನಾ ಪರೀಕ್ಷೆ ನಡೆಯುತ್ತದೆ.

ಈ ಎಲ್ಲ ಪ್ರಕ್ರಿಯೆಯಲ್ಲಿಯೇ ಶೇ.30-40ರಷ್ಟು ಅಭ್ಯರ್ಥಿಗಳು ತಿರಸ್ಕೃತಗೊಳ್ಳುತ್ತಾರೆ. ತದನಂತರ ಉಳಿದವರಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ, ಅಲ್ಪಸಂಖ್ಯಾತ, ಸಾಮಾನ್ಯ ಸೇರಿ ವಿವಿಧ ಕೆಟಗರಿಗಳ ಅಭ್ಯರ್ಥಿಗಳು ಎಷ್ಟು ಮಂದಿ ಎಂಬುದನ್ನು ಪರಿಶೀಲಿಸಬೇಕು. ಈ ನಿಟ್ಟಿನಲ್ಲಿ ನೋಡಿದಾಗ ಖಾಲಿ ಇರುವ ಹುದ್ದೆಗಿಂತಲೂ ಪರೀಕ್ಷೆಗೆ ಹಾಜರಾದ ಹುದ್ದೆಗಳೇ ಕಡಿಮೆ ಇರುವುದು ಕಂಡು ಬಂದಿದೆ ಎಂದು ನಿಗಮದ ಮೂಲಗಳು ತಿಳಿಸಿವೆ.

– ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next