Advertisement

​​​​​​​ಈಶ್ವರಪ್ಪ ಜತೆ ವಾಗ್ವಾದ

01:27 AM Jan 28, 2019 | |

ವಿಜಯಪುರ: ಬರ ಅಧ್ಯಯನ ಮಾಡಲು ಭಾನುವಾರ ಜಿಲ್ಲೆಗೆ ಆಗಮಿಸಿದ್ದ ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪ ರೈತರೊಂದಿಗೆ ವಾಗ್ವಾದಕ್ಕಿಳಿದ ಘಟನೆ ಜರುಗಿತು.

Advertisement

ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದ ರೈತರೊಂದಿಗೆ ಬೆಳೆ ಹಾನಿ ವೀಕ್ಷಣೆ ಮಾಡುತ್ತಿದ್ದ ವೇಳೆ ಸ್ಥಳದಲ್ಲಿದ್ದ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ರೈತರು ಮಳೆ, ಬೆಳೆ ಇಲ್ಲದೇ ಭೀಕರ ಸಂಕಷ್ಟ ಎದುರಿಸುತ್ತಿದ್ದಾರೆ. ವಿಜಯಪುರಕ್ಕೆ ಎಷ್ಟು ಬಾರಿ ಬರ ಅಧ್ಯಯನ ಮಾಡುತ್ತೀರಿ. ಎಷ್ಟು ರೈತರಿಗೆ ಪರಿಹಾರ ಕೊಡಿಸಿದ್ದೀರಿ ಎಂದು ಕಿಡಿಕಾರಿದರು. ಈ ಹಂತದಲ್ಲಿ ಈಶ್ವರಪ್ಪ ಕಾರು ಏರಿ ಹೊರಡಲು ಅನುವಾದರು. ಆಗ ಸ್ಥಳದಲ್ಲಿದ್ದ ಓರ್ವ ರೈತ, ಬಿಜೆಪಿ ತೊರೆದಿರುವ ಮಾಜಿ ಸಚಿವ ಎಸ್‌.ಕೆ. ಬೆಳ್ಳುಬ್ಬಿ ಅವರನ್ನು ಪಕ್ಷಕ್ಕೆ ಮರಳಿ ಕರೆ ತರಬೇಕು ಎಂದಾಗ ರೈತ ಮುಖಂಡ ಕುಲಕರ್ಣಿ, ಯಾವ ರಾಜಕೀಯ ನಾಯಕನನ್ನು ಕರೆ ತಂದು ಏನು ಮಾಡಬೇಕಿದೆ. ಎಲ್ಲ ರಾಜಕೀಯ ಪಕ್ಷಗಳು, ನಾಯಕರ ಸ್ಥಿತಿ ಇದೆ ಆಗಿದೆ. ರೈತ ಸಂಕಷ್ಟದಲ್ಲಿದ್ದರೆ ಇವರೆಲ್ಲ ಪಕ್ಷಬೇಧ ಇಲ್ಲದೇ ರೆಸಾರ್ಟ್‌ನಲ್ಲಿ ಕುಳಿತು ಮೋಜು ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.

ಇದನ್ನು ಕೇಳಿಸಿಕೊಂಡ ಈಶ್ವರಪ್ಪ, ನಿಮ್ಮ ರೈತ ಸಂಘಟನೆಗಳು ರಾಜಕೀಯ ಮಾಡಲು ಹೋಗಿ ಒಡೆದು ಹಾಳಾಗಿವೆ. ಮೊದಲು ನಿಮ್ಮ ಸಂಘಟನೆ ಕುರಿತು ಚಿಂತನೆ ಮಾಡಿ. ರಾಜಕೀಯ ನಾಯಕರಾದ ನಾವು ಒಮ್ಮೆ ಬಡಿದಾಡಿಕೊಂಡರೂ ಮತ್ತೂಮ್ಮೆ ಒಂದಾಗುತ್ತೇವೆ. ಮೊದಲು ದಿಕ್ಕಿಗೊಂದು ಮುಖಾಮುಖೀಯಾಗಿರುವ ನಿಮ್ಮ ಸ್ಥಿತಿ ನೋಡಿಕೊಳ್ಳಿ ಎಂದು ಛೇಡಿಸಿದರು. ಇದಕ್ಕೆ ಎದುರುತ್ತರ ನೀಡಿದ ಅರವಿಂದ ಕುಲಕರ್ಣಿ, ರಾಜಕೀಯ ನಾಯಕರ ಒಡೆದಾಳುವ ನೀತಿಗಳಿಂದಾಗಿಯೇ ರೈತ ಸಂಘಟನೆಗಳು ಛಿದ್ರವಾಗಿವೆ. ಹೀಗಾಗಿ ರಾಜಕೀಯ ನಾಯಕರ ಆಟ ನಡೆದಿದೆ ಎಂದು ಹೇಳಿದಾಗ, ಈಶ್ವರಪ್ಪ ಗೊಣಗುತ್ತಲೇ ಕಾರು ಏರಿ ಹೊರಟು ಹೋದರು.

‘ಕೈ ಶಾಸಕರು ಸಭೆಗೆ ಹೋದ್ರೆ ಪತ್ನಿಯರ ತಾಳಿಗೆ ಕುತ್ತು’

ಬಾಗಲಕೋಟೆ: ರಾಜ್ಯ ಕಾಂಗ್ರೆಸ್‌ ಪಕ್ಷದ ಶಾಸಕರು ಆ ಪಕ್ಷದ ಸಭೆಗೆ ಹೋದರೆ ತಮ್ಮ ಮಾಂಗಲ್ಯ ಕಳೆದುಕೊಳ್ಳುತ್ತೇವೆ ಎಂಬ ಭಯದಲ್ಲಿ ಕಾಂಗ್ರೆಸ್‌ ಶಾಸಕರ ಪತ್ನಿಯರು ಇದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪ ಗಂಭೀರ ಆರೋಪ ಮಾಡಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಸಭೆಗೆ ಹೋದರೆ ಎಲ್ಲಿ ನಮ್ಮ ತಾಳಿ ಕಳೆದುಕೊಳ್ಳುತ್ತೇವೆಂದು ಶಾಸಕರ ಪತ್ನಿಯರು ಹೆದರುತ್ತಿದ್ದಾರೆ. ಅಂತಹ ಪರಿಸ್ಥಿತಿ ಕಾಂಗ್ರೆಸ್‌ಗೆ ಬಂದಿದೆ. ಬಿಜೆಪಿ ಲಫಂಗರ ಪಕ್ಷ, ಸುಳ್ಳು ಹೇಳುವುದೇ ಬಿಜೆಪಿಗರ ಕೆಲಸ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ನೈಜವಾಗಿ ಕಾಂಗ್ರೆಸ್‌ ಲಫಂಗರ ಪಕ್ಷ. ಅವರ ನಾಯಕನೇ ಸಿದ್ದರಾಮಯ್ಯ. ಶಾಸಕ ಆನಂದ ಸಿಂಗ್‌ ಹಲ್ಲೆ ಪ್ರಕರಣದಲ್ಲಿ ಯಾರು ಎಷ್ಟು ಸುಳ್ಳು ಹೇಳಿದರು ಎಂಬುದು ಜನರಿಗೆ ಗೊತ್ತಿದೆ ಎಂದರು.

Advertisement

ರಾಜ್ಯದಲ್ಲಿ ಭೀಕರ ಬರವಿದ್ದರೂ ಸರ್ಕಾರ ಕ್ರಮಕೈಗೊಂಡಿಲ್ಲ. ಎಲ್ಲ ಸಚಿವರು ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದು, ಕ್ಷೇತ್ರಗಳ ಕಡೆ ಗಮನ ಹರಿಸುತ್ತಿಲ್ಲ. ನಾವು ಬರ ಅಧ್ಯಯನ ಮಾಡಿ ಬಜೆಟ್ ಅಧಿವೇಶನದಲ್ಲಿ ಜನರ ಪರಿಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತರುತ್ತೇವೆ. ● ಬಿ. ಶ್ರೀರಾಮುಲು, ಶಾಸಕ

‘ನಡೆದಾಡುವ ದೇವರು’ ಶಿವಕುಮಾರ ಸ್ವಾಮೀಜಿಯವರಿಗೆ ‘ಭಾರತ ರತ್ನ’ ದೊರೆಯದಿರುವುದು ನೋವು ತಂದಿದೆ. ಸಿದ್ಧಗಂಗಾ ಶ್ರೀಗಳಿಗೆ ‘ಭಾರತ ರತ್ನ’ ಕೊಡಿಸಲು ಶಕ್ತಿ ಮೀರಿ ಪ್ರಯತ್ನಿಸಿದ್ದೇವೆ. ಈ ವಿಚಾರದಲ್ಲಿ ರಾಜ್ಯಕ್ಕೆ ಮೋದಿ ಸರ್ಕಾರ ತಾರತಮ್ಯ ಮಾಡುವುದಿಲ್ಲ ಎಂಬ ನಂಬಿಕೆ ಇದೆ. ● ಬಿ.ಎಸ್‌. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next