Advertisement

ಭರ್ತಿಯಾಗದ ಜೀವನಾಡಿ ಕೆಆರ್‌ಎಸ್‌ ಜಲಾಶಯ

03:19 PM Sep 29, 2021 | Team Udayavani |

ಮಂಡ್ಯ: ಸತತ ಮೂರು ವರ್ಷಗಳಿಂದ ಭರ್ತಿಯಾಗಿದ್ದ ಜಿಲ್ಲೆಯ ಜೀವನಾಡಿ ಕೆಆರ್‌ಎಸ್‌ ಜಲಾಶಯ ಈ ಬಾರಿ ಭರ್ತಿಯಾಗದಿರುವುದು ಕಾವೇರಿಕೊಳ್ಳದ ಭಾಗದ ರೈತರಲ್ಲಿ ನಿರಾಸೆ ಮೂಡಿಸಿದೆ.

Advertisement

ಮುಂದಿನ ಬೇಸಿಗೆ ಬೆಳೆಗೆ ಹಾಗೂ ಕುಡಿಯುವ ನೀರಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಹಿಂಗಾರು ಹಾಗೂ ಮುಂಗಾರು ಮಳೆ ಬೀಳದ ಕಾರಣ ಕೆಆರ್‌ಎಸ್‌ ಜಲಾಶಯ ಈ ಬಾರಿ ಭರ್ತಿ ಯಾಗಿಲ್ಲ. ಹೀಗಾಗಿ ಬೇಸಿಗೆ ಕಾಲದಲ್ಲಿ ಬೆಂಗಳೂರು, ಮೈಸೂರು, ಮಂಡ್ಯ ಭಾಗದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗುವ ಸಾಧ್ಯತೆ ಇದೆ.

ಕೈಕೊಟ್ಟ ಹಿಂಗಾರು: ಕೆಆರ್‌ಎಸ್‌ ಜಲಾಶಯಭರ್ತಿಯಾದರೆ, ರೈತರಲ್ಲಿ ಹಾಗೂ ಜನರಲ್ಲಿ ನೆಮ್ಮದಿ ಮೂಡುತ್ತಿತ್ತು. ಆದರೆ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಹಾಗೂ ಹಿಂಗಾರು ಮಳೆಯಾಗದ ಕಾರಣ ಜಲಾಶಯ ಭರ್ತಿಯಾಗಿಲ್ಲ. ಸೆಪ್ಟೆಂಬರ್‌ನಲ್ಲಿ ಹಿಂಗಾರು ಮಳೆ ಕೈಹಿಡಿಯಬಹುದು ಎಂದು ಭಾವಿಸಲಾಗಿತ್ತು. ಆದರೆ ಮಳೆ ಬರಲೇ ಇಲ್ಲ. 113 ಅಡಿಗೆ ಕುಸಿತ: ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುತ್ತಿರುವುದರಿಂದ ಜಲಾಶಯದ ನೀರಿನ ಮಟ್ಟ 113.20 ಅಡಿಗೆ ಕುಸಿದಿದೆ. ನದಿ ಹಾಗೂ ನಾಲೆ ಸೇರಿದಂತೆ ಒಟ್ಟಾರೆ ಪ್ರತಿನಿತ್ಯ 10 ಸಾವಿರದಿಂದ 12 ಸಾವಿರ ಕ್ಯೂಸೆಕ್‌ ನೀರು ಹರಿಸಲಾಗುತ್ತಿದೆ.

ಇದರಿಂದ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಮಂಗಳವಾರ ಸಂಜೆ ವೇಳೆಗೆ 113 ಅಡಿಗೆ ಕುಸಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 124.50 ಅಡಿ ನೀರು ಇತ್ತು. ಒಳಹರಿವು 10 ಸಾವಿರ ಕ್ಯೂಸೆಕ್‌ ಇದ್ದರೆ, ಹೊರ ಹರಿವು 2,406 ಕ್ಯೂಸೆಕ್‌ ಇತ್ತು. 49.033 ಟಿಎಂಸಿ ನೀರು ಸಂಗ್ರಹವಾಗಿತ್ತು. ತಮಿಳುನಾಡಿಗೆ 60 ಟಿಎಂಸಿ ನೀರು: ತಮಿಳುನಾಡಿಗೆ ಹಂಚಿಕೆ ಸೂತ್ರದಂತೆ ಜೂನ್‌ನಲ್ಲಿ 10 ಟಿಎಂಸಿ, ಜುಲೈ 34 ಟಿಎಂಸಿ, ಆಗಸ್ಟ್‌ 50 ಟಿಎಂಸಿ, ಸೆಪ್ಟೆಂಬರ್‌ನಲ್ಲಿ 30 ಟಿಎಂಸಿ ನೀರು ಹರಿಸಬೇಕು. ಆದರೆ ಸಾಮಾನ್ಯ ಮಳೆಯಾದ

ಸಂದರ್ಭದಲ್ಲಿ ಹಂಚಿಕೆ ಸೂತ್ರದಂತೆ ಜೂನ್‌ನಲ್ಲಿ 9.1 ಟಿಎಂಸಿ, ಜುಲೈ ನಲ್ಲಿ 31.27 ಟಿಎಂಸಿ, ಆಗಸ್ಟ್‌ ನಲ್ಲಿ 45.95 ಟಿ  ಎಂ ಸಿ ನೀರು ಹರಿಸಬೇಕಾಗಿದೆ. ಆದರೆ ಪ್ರಸ್ತುತ ವರ್ಷ ಇದು ವರೆಗೂ ತಮಿಳುನಾಡಿಗೆ 60 ಟಿಎಂಸಿಗೂ ಹೆಚ್ಚು ನೀರು ಹರಿದಿದ್ದು, ಇನ್ನೂ 57 ಟಿಎಂಸಿ ನೀರು ಹರಿಸಬೇಕಾದ ಅನಿವಾರ್ಯತೆ ಇದ್ದು, ಆಕ್ಟೋಬರ್‌ ತಿಂಗಳ 22 ಟಿಎಂಸಿ ನೀರು ಹರಿಸಿದರೆ ಜಲಾಶಯ ಬರಿದಾಗುವ ಸಾಧ್ಯತೆ ಇದೆ.

Advertisement

ನೀರು ಬಿಡಲು ಸಾಧ್ಯವಿಲ್ಲ ಎಂದ ಕರ್ನಾಟಕ : ಕಾವೇರಿ ನೀರು ನಿರ್ವಹಣಾ ಮಂಡಳಿಯ ಕಳೆದ ಬಾರಿಯ ಸಭೆಯಲ್ಲಿ ತಮಿಳುನಾಡಿಗೆ 9 ಟಿಎಂಸಿ ನೀರು ಹರಿಸಬೇಕು ಎಂದು ಸೂಚಿಸಿತ್ತು. ಅದರಂತೆ ತಮಿಳುನಾಡಿಗೆ ನೀರು ಹರಿಸಲಾಗುತ್ತಿತ್ತು. ರಾತ್ರಿ ವೇಳೆ ಅತಿ ಹೆಚ್ಚು ನೀರು ಹರಿಸುವ ಮೂಲಕ ನೀರಾವರಿ ಅ ಧಿಕಾರಿಗಳು ತಮಿಳುನಾಡಿಗೆ ಬಿಡಬೇಕಾಗಿದ್ದ ನೀರಿನ ಪ್ರಮಾಣ ಹರಿಸಲು ಪ್ರಯತ್ನಿಸುತ್ತಿದ್ದಾರೆ. ಇತ್ತ ಸೋಮವಾರ ನಡೆದ ಕಾವೇರಿ ನೀರು ನಿರ್ವಹಣಾ ಮಂಡಳಿಯ ಸಭೆಯಲ್ಲಿ ಕಾವೇರಿ ಕೊಳ್ಳದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮುಂಗಾರು ಹಾಗೂ ಹಿಂಗಾರು ಮಳೆಯಾಗದ ಕಾರಣ ನೀರು ಹರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ವಾದಿಸಿದೆ. ತಮಿಳುನಾಡಿಗೆ ಒಂದು ವೇಳೆ ಹರಿಸಿದರೆ, ಆ ಭಾಗದ ರೈತರ ಬೆಳೆಗಳಿಗೆ ಹಾಗೂ ಕುಡಿಯುವ ನೀರಿಗೆ ತೊಂದರೆಯಾಗಲಿದೆ ಎಂದು ತಿಳಿಸಿದೆ.  ಅದರಂತೆ ಅ.7ರೊಳಗೆ ಕಾವೇರಿ ಕೊಳ್ಳದ ಜಲಾಶಯಗಳ ನೀರಿನ ಮಟ್ಟ, ಮಳೆಯ ಪ್ರಮಾಣದ ವರದಿ ಸಲ್ಲಿಸುವಂತೆ ಮಂಡಳಿ ಸೂಚಿಸಿದ್ದು, ವರದಿ ಪರಿಶೀಲನೆ ನಂತರ ಎಷ್ಟು ಟಿಎಂಸಿ ನೀರು ಹರಿಸಬೇಕು ಎಂಬುದು ತಿಳಿಯಲಿದೆ.

ಸಂಕಷ್ಟ ಸೂತ್ರ:

ಕಳೆದ ಮೂರು ವರ್ಷಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದ ಕಾರಣ, ಮುಂಗಾರು ಮಳೆ ಮುಗಿಯುವ ಹೊತ್ತಿಗೆ ತಮಿಳುನಾಡಿನ ಕೋಟಾದ ನೀರು ಹರಿಸಲಾಗುತ್ತಿತ್ತು. ಆದರೆ ಈ ಬಾರಿ ಜಲಾಶಯ ತುಂಬದ ಕಾರಣ ಇನ್ನೂ ಅರ್ಧದಷ್ಟು ಕೋಟಾದ ನೀರನ್ನು ಬಿಡಲು ಸಾಧ್ಯವಾಗಿಲ್ಲ. ಒಂದು ವೇಳೆ ಮುಂದಿನ ದಿನಗಳಲ್ಲಿ ಮಳೆಯಾಗದೇ ಇದ್ದರೆ ತಮಿಳುನಾಡಿಗೆ ನೀರು ಬಿಡಲು ಸಂಕಷ್ಟ ಸೂತ್ರ ಅನುಸರಿಸಬೇಕಾಗುತ್ತದೆ. ಆ ವೇಳೆಗೆ ಬೇಸಿಗೆ ಕಾಲ ಆರಂಭವಾಗಲಿದ್ದು, ಬೆಂಗಳೂರು,ಮೈಸೂರು, ಮಂಡ್ಯ ಭಾಗಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಸಾಧ್ಯತೆ ಇದೆ.

ಸಿಎಂಗೆ ಸದ್ಯಕ್ಕೆ ತಪ್ಪಿದ ಬಾಗಿನ ಭಾಗ್ಯ :

ಈ ಬಾರಿ ಕೆಆರ್‌ಎಸ್‌ ಜಲಾಶಯ ಭರ್ತಿಯಾಗದ ಕಾರಣ ಜಲಾಶಯಕ್ಕೆ ಪ್ರತಿವರ್ಷ ಸಿಎಂ ಬಾಗಿನ ನೀಡುವ ಸಂಪ್ರದಾಯ ಈ ಬಾರಿ ಇಲ್ಲದಂತಾಗಿದ್ದು, ಇದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾವೇರಿಗೆ ಬಾಗಿನ ಬಿಡುವ ಭಾಗ್ಯ ತಪ್ಪಿದಂತಾಗಿದೆ.ಈ ಹಿಂದೆ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ವೇಳೆ 2015 ರಿಂದ 2017ರವರೆಗೆ ಸತತ ಮೂರು ವರ್ಷಗಳ ಕಾಲ ಕೆಆರ್‌ಎಸ್‌ ಜಲಾಶಯ ಭರ್ತಿಯಾಗಿರಲಿಲ್ಲ. ಹೀಗಾಗಿ ಮೂರು ಬಾರಿ ಬಾಗಿನ ನೀಡುವ ಭಾಗ್ಯ ಕಳೆದುಕೊಂಡಿದ್ದರು. ಯಡಿಯೂರಪ್ಪ ಅವರು ಸಿಎಂ ಆಗಿದ್ದ ಅವಧಿಗಳಲ್ಲಿ ಕೆಆರ್‌ಎಸ್‌ ಭರ್ತಿಯಾಗಿದ್ದ ಕಾರಣ ಐದು ಬಾರಿ ಕಾವೇರಿ ಮಾತೆಗೆ ಬಾಗಿನ ನೀಡಿ ಅತೀ ಹೆಚ್ಚು ಬಾರಿ ಕೆಆರ್‌ಎಸ್‌ಗೆ ಬಾಗಿನ ಸಲ್ಲಿಸಿದ ಏಕೈಕ ಮುಖ್ಯಮಂತ್ರಿಯಾಗಿದ್ದಾರೆ.

ನಾಲೆ ಆಧುನೀಕರಣ ಕಾಮಗಾರಿ ಕೈಗೊಳಲು ಸಿದ್ಧತೆ  :

ನಾಲೆಗಳ ಆಧುನೀಕರಣಕ್ಕೂ ಕಾವೇರಿ ನೀರಾವರಿ ಇಲಾಖೆ ಅಧಿಕಾರಿಗಳು ಸಿದ್ಧತೆ ಕೈಗೊಂಡಿದ್ದಾರೆ. ಬೇಸಿಗೆಯಲ್ಲಿ ನಾಲೆಗಳಿಗೆ ನೀರು ನಿಲ್ಲಿಸಿ ಕಾಮಗಾರಿ ನಡೆಸಲು ಉದ್ದೇಶಿಸಲಾಗಿದೆ. ಇದಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ನಾಲೆ ಆಧುನೀಕರಣ ಕಾಮಗಾರಿ ನಡೆಸುವ ಸಂಬಂಧ ಈಗಾಗಲೇ ಸಚಿವ ಕೆ.ಸಿ.ನಾರಾಯಣಗೌಡ ಅಧ್ಯಕ್ಷತೆಯಲ್ಲಿ ರೈತರು ಹಾಗೂ ಅಧಿಕಾರಿಗಳ ಸಭೆ ನಡೆಸಲಾಗಿತ್ತು. ಆದರೆ ಸಭೆಯಲ್ಲಿ ಬೇಸಿಗೆ ಬೆಳೆಗೆ ನೀರು ಬಿಡಬೇಕೋ, ಕಾಮಗಾರಿನಡೆಸಬೇಕೋ ಎಂಬುದರ ಬಗ್ಗೆ ಯಾವುದೇ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ನಂತರಇನ್ನೊಂದು ಸಭೆ ಕರೆದು ತೀರ್ಮಾನಿಸಲಾಗುವುದುಎಂದು ಭರವಸೆ ನೀಡಲಾಗಿತ್ತು. ಆದರೆ ಇದುವರೆಗೂ ಸಭೆ ನಡೆದಿಲ್ಲ.

ಬೆಳೆ, ಕುಡಿಯುವ ನೀರಿಗೆ ತೊಂದರೆ:

ಪ್ರತಿವರ್ಷ ತಮಿಳುನಾಡಿಗೆ 177 ಟಿಎಂಸಿ ನೀರನ್ನು ಹರಿಸಬೇಕು. ಅದರಂತೆ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ಸದ್ಯ 124.80 ಅಡಿ ಸಾಮರ್ಥ್ಯ ಜಲಾಶಯದಲ್ಲಿ 113.20 ಅಡಿ ಮಾತ್ರ ನೀರಿದೆ. 35.063 ಟಿಎಂಸಿ ನೀರುಸಂಗ್ರಹವಾಗಿದೆ. ಇದರಲ್ಲಿ ಮುಂಗಾರು ಬೆಳೆಗಳಿಗೆ ಇನ್ನೂ ನೀರಿನ ಅಗತ್ಯವಿದೆ.ಅಲ್ಲದೆ, ಮುಂದಿನ ಬೇಸಿಗೆ ಹಾಗೂ ಕುಡಿಯುವ ನೀರು ಸರಬರಾಜಿನಜತೆಗೆ ತಮಿಳುನಾಡಿಗೆ ಬಿಡಬೇಕಾದ ನೀರಿನ ಕೋಟಾವನ್ನು ಮ್ಯಾನೇಜ್‌ ಮಾಡಬೇಕಿದೆ. ಸದ್ಯ ಜಲಾಶಯದ ಒಳಹರಿವು 4,645 ಕ್ಯೂಸೆಕ್‌ ಇದ್ದರೆ, ಹೊರಹರಿವು 7,765 ಕ್ಯೂಸೆಕ್‌ ಇದೆ. ಇದೇ ರೀತಿ ನೀರು ಹರಿದರೆ ನಾಲ್ಕೆçದು ದಿನಗಳಲ್ಲಿ 110 ಅಡಿಗೆ ಕುಸಿಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next