Advertisement

ಕೃಷ್ಣಾಪುರ ಮಠದಲ್ಲಿ ಅವಗಾಹನ ಸ್ನಾನಕ್ಕೆ ಮಹತ್ವ

01:19 AM Jan 15, 2022 | Team Udayavani |

ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರ ಪ್ರಕಾರ “ಹಿಂದೆ (ಸುಮಾರು 1960-70ರ ವರೆಗೂ) ಶ್ರೀಕೃಷ್ಣಮಠದ ಮಧ್ವಸರೋವರದಲ್ಲಿ ಬೆಳಗ್ಗೆ ಸ್ನಾನ ಮಾಡಿ ಹಾಗೆಯೇ ನೇರ ರಥಬೀದಿಯಲ್ಲಿ ನಡೆದು ಮಠಗಳಿಗೆ ಹೋಗಿ ಪೂಜೆ ಮಾಡುವ ಕ್ರಮವಿತ್ತು. ಜನಜಂಗುಳಿ ಹೆಚ್ಚಿಗೆಯಾದ ಬಳಿಕ ಶುದ್ಧತೆ ಕಾಪಾಡುವುದು ಕಷ್ಟವಾದ ಕಾರಣ ಈ ಪದ್ಧತಿಯನ್ನು ಕೈಬಿಟ್ಟು, ಮಠದಲ್ಲಿ ಪೂಜೆ ಮಾಡುವುದಾದರೆ ಮಠದ ಆವರಣದೊಳಗೆ ಸ್ನಾನ ಮಾಡುವ ಕ್ರಮವನ್ನು ಚಾಲ್ತಿಗೆ ತರಲಾಯಿತು’.

Advertisement

ಉಡುಪಿ: ಶ್ರೀಕೃಷ್ಣಮಠದಲ್ಲಿ ಪೂಜಾವ್ರತ ಕೈಗೊಳ್ಳಲಿರುವ ಕೃಷ್ಣಾಪುರ ಮಠ ಸಂಪ್ರದಾಯವನ್ನು ಉಳಿಸಿಕೊಂಡು ಮುನ್ನಡೆಯುವ ಬಗೆ ಅಚ್ಚರಿ ತರುತ್ತದೆ.

ಕೃಷ್ಣಾಪುರ ಮಠದ ಆವರಣದೊಳಗೆ ಒಂದು ಇಳಿಬಾವಿ ಇದೆ. ಇದರ ಮೆಟ್ಟಿಲಿಳಿದು ಕೆಳಗೆ ಹೋಗಿ ಮುಳುಗು ಹಾಕಿ ಸ್ನಾನ ಮಾಡಬಹುದು. ಇದೇಕೆಂದರೆ ಇಲ್ಲಿನ ಮಠದ ಪಟ್ಟದ ದೇವರನ್ನು ಪೂಜಿಸಬೇಕಾದರೆ ಅವಗಾಹನಸ್ನಾನ (ಮುಳುಗು ಹಾಕಿ) ಮಾಡಬೇಕು. ಯತಿಗಳಿಗೆ ಮುಳುಗು ಹಾಕಿ ಮಾಡುವ ಸ್ನಾನ ಶ್ರೇಷ್ಠ. ಆದರೆ ಇದನ್ನು ಪಾಲಿಸುವುದು ಈಗಿನ ಕಾಲದಲ್ಲಿ ಕಷ್ಟ. ಹಿಂದೆ ಸಾಮಾನ್ಯ ಜನರಲ್ಲಿ ನದಿ ಸ್ನಾನ ಮಾಡುವ ಕ್ರಮವಿದ್ದರೆ ಈಗ ಅದೂ ಕಡಿಮೆಯಾಗಿದೆ.

ಕಡ್ಡಾಯ ಮುಳುಗು ಹಾಕುವ ಬಗ್ಗೆ ಕೇಳಿದಾಗ “ಎಲ್ಲ ಮಠಗಳ ಕ್ರಮವೂ ಹೀಗೆಯೇ. ಆದರೆ ಈ ಕ್ರಮ ಉಳಿಸಿಕೊಳ್ಳುವುದು ಕಷ್ಟವಾಯಿತು’ ಎನ್ನುತ್ತಾರೆ. ಬೇರೆಲ್ಲ ಮಠಗಳಲ್ಲಿ ಬಾವಿ ಅಥವಾ ಕೊಳವೆ ಬಾವಿಯ ನೇರ ನೀರು ಸಿಕ್ಕಿದರೆ ಪೂಜೆ ಮಾಡುತ್ತಾರೆ. ಕೃಷ್ಣಾಪುರ ಮಠದಲ್ಲಿ ಮಾತ್ರ ಮುಳುಗುಹಾಕಿ ಸ್ನಾನ ಮಾಡುವ ಸೌಲಭ್ಯವಿಲ್ಲದೆ ಇದ್ದರೆ, ಪಟ್ಟದ ದೇವರನ್ನು ಕೊಂಡೊಯ್ಯುವುದೇ ಇಲ್ಲ. ಹಿಂದೆ ಬೆಂಗಳೂರಿನಂತಹ ಪ್ರದೇಶದಲ್ಲಿ ಮುಳುಗು ಹಾಕುವ ಸೌಲಭ್ಯಗಳಿದ್ದವು. ಈಗ ಇಂತಹ ವಾತಾವರಣ ಸಿಗುವುದಿಲ್ಲ. ಹೀಗಾಗಿ ಇಂತಹ ಸಂಚಾರ ಸಂದರ್ಭ ಪಟ್ಟದ ದೇವರನ್ನು ಕೃಷ್ಣಾಪುರ ಶ್ರೀಗಳು ಶ್ರೀಕೃಷ್ಣಮಠದಲ್ಲಿರಿಸುತ್ತಾರೆ.

ಕೃಷ್ಣಮಠದಲ್ಲಿ ಕೃಷ್ಣದೇವರ ಜತೆ ಪರ್ಯಾಯ ಪೀಠಸ್ಥ ಸ್ವಾಮೀಜಿಯವರು ಪೂಜೆ ಮಾಡುತ್ತಾರೆ. ಕೃಷ್ಣಾಪುರ ಶ್ರೀಗಳು ಇತರ ಚಿಕ್ಕಪಟ್ಟದ ದೇವರನ್ನು ಮಾತ್ರ ಸಂಚಾರದಲ್ಲಿ ಕೊಂಡೊಯ್ದು ದೈನಂದಿನ ಪೂಜೆ ನಡೆಸುತ್ತಾರೆ. ಇತ್ತೀಚೆಗೆ ಪರ್ಯಾಯ ಸಂಚಾರದಲ್ಲಿ ಕೃಷ್ಣಾಪುರ ಶ್ರೀಗಳು ಹೀಗೆಯೇ ಮಾಡಿದ್ದಾರೆ. ಕೃಷ್ಣಾಪುರ ಶ್ರೀಗಳು ಸಂಚಾರ ಮಾಡುವುದು ತುಲನೆ ಮಾಡಿದರೆ ಕಡಿಮೆ ಎನ್ನಬಹುದು. ಇದಕ್ಕೆ ಮುಳುಗು ಹಾಕುವ ಸೌಕರ್ಯವಿಲ್ಲದಿರುವುದೂ ಒಂದು ಕಾರಣ ಎನ್ನಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next