Advertisement
ಮಹಾರಾಷ್ಟ್ರದ ಸತಾರ ಜಿಲ್ಲೆಯ ಮಹಾಬಲೇಶ್ವರ ಬೆಟ್ಟದಲ್ಲಿ ಜೋರ್ ಹಳ್ಳಿ ಇದೆ. ಪಶ್ಚಿಮಘಟ್ಟದ ಸಮುದ್ರ ಮಟ್ಟದಿಂದ 4,386 ಅಡಿ ಎತ್ತರದ ಈ ಕಾಡಿನೂರಲ್ಲಿ ಕೃಷ್ಣಾ ನದಿಯ ಜನನವಾಗಿದೆ. ಅಲ್ಲಿಂದ ಪಶ್ಚಿಮದ ಅರಬ್ಬಿಯ ಕಡಲು ನಿಕ್ಕೀ 64 ಕಿಲೋ ಮೀಟರ್ ಮಾತ್ರ ದೂರ. ಕಡಲು ತಲುಪುವುದೇ ನದಿಯ ಗುರಿಯಾಗಿರುವಾಗ ಹತ್ತಿರದ ಅರಬ್ಬಿಗೆ ನಿರಾಯಾಸವಾಗಿ ಹೋಗಬಹುದಿತ್ತು. ಆದರೆ ಪ್ರಕೃತಿಯ ಗುಟ್ಟು ಬೇರೆಯೇ ಇದೆ. ಕೃಷ್ಣಾ ನದಿ, ಹತ್ತಿರದ ಅರಬ್ಬಿ ಸಮುದ್ರವನ್ನು ಹಾಗೆಯೇ ಬಿಟ್ಟು, ಇಲ್ಲಿಂದ 1,400 ಕಿಲೋ ಮೀಟರ್ ದೂರದ ಬಂಗಾಳಕೊಲ್ಲಿಗೆ ಹರಿದಿದೆ. ಕಾಡು, ಜನಜೀವನ, ಕೃಷಿ, ಭಾಷೆ ಸೇರಿದಂತೆ ಎಲ್ಲ ನೆಲೆಗಳಲ್ಲಿ ವೈವಿಧ್ಯ ಮೇಳೈಸಿದೆ. ಅರಬ್ಬೀಯತ್ತ ಅರವತ್ನಾಲ್ಕು ಕಿ.ಲೋ ಮೀಟರ್ ತಿರುಗುವ ಬದಲು ಮುಖ ತಿರುಗಿಸಿ ಸಾವಿರ ಕಿ.ಲೋ ಮೀಟರ್ ಪಯಣಕ್ಕೆ ಸಜಾjಗಿದ್ದೇ ಕೃಷ್ಣ ನದಿಯ ಸಕಲ ಸೊಬಗಿನ ಮೂಲ.
Related Articles
Advertisement
ಚರಿತ್ರೆಯ ಪುಟ ತೆಗೆದರೆ ಕೃಷ್ಣಾ ನದಿ ಕಣಿವೆಗೆ ಬಂದಷ್ಟು ಬರದ ಕಷ್ಟ ರಾಜ್ಯದ ಯಾವ ಪ್ರದೇಶದಲ್ಲಿಯೂ ಬಂದಿಲ್ಲ. ಡೌಗಿ ಬರ, ಎತ್ತಿನ ಬರ, ಸಜ್ಜೆ ಬರ, ಬಹತ್ತರ (1972)ಬರ ಸೇರಿದಂತೆ ಹಲವು ಬರವನ್ನು ಊರು ಕಂಡಿದೆ. ಹತ್ತು ವರ್ಷಕ್ಕೆ ಒಮ್ಮೆ ಉತ್ತಮ ಮಳೆ ಕಾಣುವ ಪ್ರದೇಶಗಳು ಇಲ್ಲಿವೆ. ಒಂದು ವರ್ಷ ಮಳೆ ಸುರಿದರೆ ಎರಡು ವರ್ಷ ನೀರಿನ ಸಮಸ್ಯೆ ಇಲ್ಲವೆಂಬ ಗ್ರಾಮಗಳೂ ಇವೆ. ದಕ್ಷಿಣ ಮಹಾರಾಷ್ಟ್ರ ಸಂಸ್ಥಾನಗಳು ಸೇರಿದಂತೆ ಧಾರವಾಡ, ಬೆಳಗಾವಿ, ವಿಜಾಪುರ, ಕಾನಡಾ ಜಿಲ್ಲೆಗಳ ವಿವರಗಳುಳ್ಳ ಮುಂಬೈ ಇಲಾಖೆಗೆ ಸೇರಿದ ಗೆಜಿಟಿಯರ್ ಕ್ರಿ.ಶ. 1893ರಲ್ಲಿ ಪ್ರಕಟವಾಗಿದೆ. ಇದರಲ್ಲಿ ಕ್ರಿ.ಶ. 1876-77ರ ಬರಗಾಲದಲ್ಲಿ ಕೃಷ್ಣಾ ಕಣಿವೆಯ ಜನರು ಸೇವಿಸಿದ ನೂರಾರು ಕಾಡು ಸಸ್ಯಗಳ ಪಟ್ಟಿ ಇದೆ. ಹೊಲದಲ್ಲಿ ಅನ್ನ ಸಿಗದಿದ್ದಾಗ ಅರಣ್ಯ ಆಹಾರ ನೀಡಿದೆ. ಕೆರೆಗಳ ಸುವರ್ಣ ಯುಗ ರೂಪಿಸಿದ ಕಲ್ಯಾಣದ ಚಾಲುಕ್ಯರು, ನೀರಾವರಿ ಯೋಜನೆಗೆ ಹೆಸರಾದ ವಿಜಯನಗರ ಸಾಮ್ರಾಜ್ಯಗಳೆಲ್ಲ ಕೃಷ್ಣಾ ಕಣಿವೆಯಲ್ಲಿ ಬೆಳೆದವು. ಮೈಸೂರು ಸೀಮೆಗೆ ಹೋಲಿಸಿದರೆ ಕೆರೆಗಳು ಕಡಿಮೆ, ಅದರಲ್ಲಿಯೂ ಕಣಿವೆಯ ಸರಣಿ ಕೆರೆಗಳಂತೂ ಅಪುರೂಪ. “ಎರೆ ಇದ್ದವ ದೊರೆ’ ‘ ದೋಣಿ (ನದಿ) ಹರಿದರೆ ಓಣಿಯೆಲ್ಲ ಕಾಳು’ ಮಾತು ಲಾಗಾಯ್ತಿನಿಂದ ನಂಬಿದ ನೆಲೆ. ಅತ್ಯಂತ ಕಡಿಮೆ ಮಳೆಯಲ್ಲಿ ಬಿಳಿ ಜೋಳ, ಕಡಲೆ, ಸದಕ, ಹತ್ತಿ, ಕುಸುಬಿ ಬೆಳೆದು ಗೆಲ್ಲುವವರು ಇಲ್ಲಿನ ರೈತರು. ಅಕ್ಕಡಿ ಬೇಸಾಯದ ಮೂಲಕ ಬರ ಗೆಲ್ಲುವ ತಂತ್ರ ಗೊತ್ತಿದೆ. ಉಳುಮೆಗೆ ಯಾವ ಯಂತ್ರಗಳಿಲ್ಲದ ಕಾಲದಲ್ಲಿ ಕೃಷ್ಣಾ ವ್ಯಾಲಿ, ದೇವಣಿ ಎತ್ತಿನ ದೈತ್ಯ ಶಕ್ತಿ ಪ್ರದೇಶದ ಭೂಮಿಗಳನ್ನು ಹಸನಾಗಿಸಿವೆ.
ಕೃಷ್ಣಾ ಜಲಾನಯನದಲ್ಲಿ 1,13,271 ಚದರ ಕಿ.ಲೋ ಮೀಟರ್ ಪ್ರದೇಶ, ರಾಜ್ಯದಲ್ಲಿದೆ. ಇವುಗಳಲ್ಲಿ 75.86ರಷ್ಟು ಕ್ಷೇತ್ರಗಳಲ್ಲಿ ಕೃಷಿ ತುಂಬಿದೆ. ಜನಜೀವನದ ವಿಚಾರದಲ್ಲಿ ಇದು ಖುಷಿಯ ಸಂಗತಿಯಾದರೂ ನದಿ ಪರಿಸರದ ಸುಸ್ಥಿರತೆಯ ವಿಚಾರದಲ್ಲಿ ಇದು ಭಯದ ಬೆಳವಣಿಗೆಯಾಗಿದೆ. ಕಾಡೇ ನದಿಗಳ ತಾಯಿ ಎನ್ನುತ್ತೇವೆ. ಆದರೆ ಈ ಜಲಾನಯನದಲ್ಲಿ ಕಾಡು ಬಹಳ ಕಡಿಮೆ ಇದೆ. ನದಿ, ಅಣೆಕಟ್ಟು, ಬ್ಯಾರೇಜುಗಳಲ್ಲಿ ಅಪಾರ ಹೂಳು ತುಂಬಲು ಇದು ಕಾರಣವಾಗಿದೆ. ಅಲ್ಲೊಂದು ಇಲ್ಲೊಂದು ಬೆಟ್ಟಗುಡ್ಡಗಳಲ್ಲಿ ಕಾಲದ ಕಾಡಿನ ಪಳೆಯುಳಿಕೆಗಳಿವೆ. ಬಾಗಲಕೋಟೆಯ ಜಮಖಂಡಿಯ ಕಲ್ಲಹಳ್ಳಿಯ ಗುಡ್ಡಗಳಲ್ಲಿ ಶತಮಾನಗಳ ಹಿಂದಿನ ಇದ್ದಲು ಭಟ್ಟಿಯ ಕುರುಹು ಕಾಡು ಕರಗಿದ ಕಥೆ ಹೇಳುತ್ತವೆ. ಗಡಿನಾಡಿನ ಕಲಬುರ್ಗಿಯ ಚಿಂಚೋಳಿಯ ಕೊಂಚಾವರಮ್ ಅರಣ್ಯ ಸುತ್ತಿದರೆ ಕಾಡು ಬೆಳೆಯುವ ನೆಲದ ಸಾಧ್ಯತೆ ಗೋಚರಿಸುತ್ತದೆ. ಯಾದಗಿರಿಯ ಸುರಪುರದ ಅರಮನೆ ಕಟ್ಟಡದ ದೈತ್ಯ ಕಂಬ, ತೊಲೆಗಳಲ್ಲಿ ಕಾಡಿನ ನೆನಪುಗಳಿವೆ. ಇಲ್ಲಿನ ರಾಜವಂಶದ ಹಿರಿಯರಾದ ರಾಜ ಪಿಂಡ ನಾಯಕರು, ಬಾಗಲಕೋಟೆಯ ಬೀಳಗಿ ಯಡಹಳ್ಳಿಯ ದೇಸಾಯಿ ವಾಡಾದಲ್ಲಿ ಕುಳಿತು ಹೇಳುವ ಬೇಟೆಯ ಕಥೆ ಕೇಳಿದರಂತೂ ಕೃಷ್ಣಾ ಕಣಿವೆಯ ಕಾಡಿನ ಕತೆಗಳನ್ನು “ಚಿರತೆಗಳ ಚರಿತ್ರೆ’ ಮೂಲಕ ಹೇಳಬಹುದು ! ಬದಾಮಿಯ ಬೆಟ್ಟದಲ್ಲಿ ಕಾಡು ಮಂಗಗಳ ಸಂರಕ್ಷಣೆಗೆ “ಮಂಗನ ಕಾಡು’ ರೂಪಿಸಿದ ಜನಪದರ ಮಾತುಗಳಲ್ಲಿ ಕಲ್ಯಾಣದ ಚಾಲುಕ್ಯರ ಅರಣ್ಯ ನೀತಿ ಹುಡುಕಬಹುದು. ಆಲಮಟ್ಟಿಯ ಅಣೆಕಟ್ಟೆಗೆ ಗ್ರಾಮಗಳು ಮುಳುಗಡೆಯಾಗಿ ಹಳೆ ಮನೆಯ ಕಟ್ಟಿಗೆಗಳನ್ನು ಎತ್ತಿ ನಿರಾಶ್ರಿತ ರೈತರು ಹೊರಟಾಗ ಕೆಲವು ಹಳೆ ದೊಡ್ಡಿಗಳಲ್ಲಿ ಶ್ರೀಗಂಧದ ತೊಲೆಗಳು ಪರಿಮಳ ಬೀರಿದವಂತೆ. ದೊಡ್ಡಿಗೆ ಶ್ರೀಗಂಧದ ತುಂಡನ್ನು ಬಳಸುವ ಪರಿಪಾಠ ಶತಮಾನದ ಹಿಂದೆ ಅದೆಂಥ ಶ್ರೀಮಂತ ಅರಣ್ಯವಿತ್ತು ಎಂಬ ಊಹೆಗೆ ಸಾಕ್ಷಿಯಾಗಿವೆ.
ಕ್ರಿ.ಶ. 1972 ರ ಬರಸಾಥ್ ಬರದ ನಂತರದಲ್ಲಿ ನಿದ್ದೆಯಿಂದೆದ್ದು ಕೃಷ್ಣಾ ನದಿಯತ್ತ ನೋಡಿದ್ದೇವೆ. ಆಲಮಟ್ಟಿ, ನಾರಾಯಣಪುರ, ಹಿಡ್ಕಲ್ ಅಣೆಕಟ್ಟು ಕಟ್ಟಿದ್ದೇವೆ. ನದಿ ಮೂಲದಿಂದ ಸಾಗರ ಸಂಗಮದವರೆಗೆ ಪ್ರಸ್ತುತ ಬೃಹತ್ ಹಾಗೂ ಮಧ್ಯಮ ನೀರಾವರಿಯ 150 ಯೋಜನೆಗಳು ಜಾರಿಯಾಗಿವೆ. ಇವುಗಳಲ್ಲಿ 77 ಯೋಜನೆ ಮಹಾರಾಷ್ಟ್ರದ್ದಾಗಿದೆ. 47 ಯೋಜನೆ ಜಾರಿಗೊಳಿಸಿದ ಕರ್ನಾಟಕ ಈ ಪೈಕಿ 32 ಯೋಜನೆ ಮುಗಿಸಿದ್ದು 15 ಯೋಜನೆಗಳು ಕುಂಟುತ್ತಿವೆ. ಒಂದು ಕಾಲದಲ್ಲಿ ಬರ ಬಂದಾಗ ಕಾಡಿನ ಸೊಪ್ಪು ತಿಂದು ಬದುಕಿದ ನೆಲೆ ಈಗ ಅಣೆಕಟ್ಟೆ, ಬ್ಯಾರೇಜುಗಳ ನೀರಿನಿಂದ ಬರಗೆಲ್ಲಲು ಕಲಿತಿದೆ. ಬೆಲೆ ಇಲ್ಲದ ಮಸಾರಿ ಭೂಮಿಗೆ ಹಣ್ಣು, ತರಕಾರಿ ತೋಟಗಾರಿಕೆಯ ಶಕ್ತಿ ಬಂದಿದೆ. ಕೃಷ್ಣಾ ಕೃಷಿಗೆ ಸಿಕ್ಕ ಬಳಿಕ ಬೆಳೆಗಳು ಬದಲಾಗಿವೆ.
ಶಿವಾನಂದ ಕಳವೆ