Advertisement

ಮುಗಿಯದ ಕೋವಿಡ್‌ ರೂಪಾಂತರ ಪರ್ವ!

12:20 AM Nov 27, 2021 | Team Udayavani |

ವಿಶ್ವಾದ್ಯಂತ ಕೊರೊನಾ ಸಾಂಕ್ರಾಮಿಕವು ಇನ್ನೇನು ನಿಯಂತ್ರಣಕ್ಕೆ ಬರ ತೊಡಗಿತು ಎನ್ನುವಾಗಲೇ ಕೊರೊನಾ ವೈರಸ್‌ ಹೊಸ ಹೊಸ ಅವತಾರ ಗಳೊಂದಿಗೆ ವಿವಿಧ ದೇಶಗಳಲ್ಲಿ ಜನರನ್ನು ಬಾಧಿಸತೊಡಗಿದೆ.

Advertisement

ಭಾರತದಲ್ಲಿ ಕೊರೊನಾದ ಎರಡನೇ ಅಲೆ ನಿಯಂತ್ರಣಕ್ಕೆ ಬಂದು ಎಲ್ಲ ಕ್ಷೇತ್ರಗಳಲ್ಲಿ ಚಟುವಟಿಕೆಗಳು ಪುನರಾರಂಭಗೊಂಡು ಸಹಜಸ್ಥಿತಿಗೆ ಮರಳುತ್ತಿವೆ. ಈಗ ವಿದೇಶಗಳಲ್ಲಿ ಕೊರೊನಾ ವೈರಸ್‌ನ ಹೊಸ ರೂಪಾಂತರಗಳು ಕಾಣಿಸಿಕೊಳ್ಳುವ ಮೂಲಕ ಮತ್ತೆ ಜನರನ್ನು ಆತಂಕಕ್ಕೀಡು ಮಾಡಿದೆ.

ಯುರೋಪ್‌ನ ದೇಶಗಳಲ್ಲಿ ಕೊರೊನಾ ಇನ್ನೂ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲವಾಗಿದ್ದು ಸದ್ಯ ವಿಶ್ವದೆಲ್ಲೆಡೆಯ ಸೋಂಕು ಪ್ರಕರಣಗಳ ಪೈಕಿ ಶೇ. 62ರಷ್ಟು ಪ್ರಕರಣಗಳು ಈ ದೇಶಗಳಲ್ಲಿಯೇ ಇವೆ. ಇದರ ಜತೆಯಲ್ಲಿ ವಿಶ್ವದ ಇನ್ನೂ ಅನೇಕ ದೇಶಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿಢೀರನೇ ಹೆಚ್ಚಲಾರಂಭಿಸಿದ್ದು ಸಹಜವಾಗಿಯೇ ವೈದ್ಯಕೀಯ ಲೋಕಕ್ಕೆ ಬಲುದೊಡ್ಡ ಸವಾಲಾಗಿ ಪರಿಣಮಿಸಿದೆ.

ಏತನ್ಮಧ್ಯೆ ಕಳೆದೊಂದು ವಾರದಿಂದೀಚೆಗೆ ದಕ್ಷಿಣ ಆಫ್ರಿಕಾ ಮತ್ತು ಆಫ್ರಿ ಕಾದ ದಕ್ಷಿಣ ಭಾಗದ ದೇಶಗಳಲ್ಲಿ ಕೊರೊನಾ ವೈರಸ್‌ನ ಹೊಸ ತಳಿ ಬಿ.1.1. 529 ಅನ್ನು ವೈದ್ಯಕೀಯ ತಜ್ಞರು ಪತ್ತೆಹಚ್ಚಿದ್ದು ಇದು ಈವರೆಗೆ ಪತ್ತೆಯಾದ ತಳಿಗಳಿಗಿಂತ ಹೆಚ್ಚು ಪ್ರಭಾವಶಾಲಿ ಮತ್ತು ಅಧಿಕ ಪ್ರಸರಣ ಸಾಮರ್ಥ್ಯ ಉಳ್ಳದ್ದಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ನಿವೃತ್ತ ಜಡ್ಜ್ ವಿರುದ್ಧ ಚಾರ್ಜ್‌ಶೀಟ್‌ಗೆ ಅನುಮತಿ

Advertisement

ದಕ್ಷಿಣ ಆಫ್ರಿಕಾ ಮತ್ತು ಬೋಟ್ಸ್‌ ವಾನಾದಲ್ಲಿ ಮೊದಲ ಬಾರಿಗೆ ಪತ್ತೆಯಾದ ಈ ಹೊಸ ತಳಿ 50ಕ್ಕೂ ಅಧಿಕ ರೂಪಾಂತರಗಳನ್ನು ಹೊಂದಬಲ್ಲವಾಗಿದೆ. ಕಳೆದ ಕೆಲವು ದಿನ ಗಳಿಂದೀಚೆಗೆ ಆಫ್ರಿಕಾದ ದಕ್ಷಿಣ ಭಾಗದ ಹಲವಾರು ದೇಶಗಳಲ್ಲಿ ಈ ರೂಪಾಂ ತರಿ ಕಾಣಿಸಿಕೊಂಡಿದ್ದು ಕ್ಷಿಪ್ರಗತಿಯಲ್ಲಿ ಹರಡತೊಡಗಿದೆ. ಹಾಂ ಕಾಂಗ್‌ ನಲ್ಲೂ ಈ ಹೊಸ ಪ್ರಭೇದದ ಕೊರೊನಾ ವೈರಸ್‌ ಪ್ರಕರಣಗಳು ದಾಖಲಾಗಿವೆ.

ವೈದ್ಯಕೀಯ ತಜ್ಞರು ಈ ತಳಿಯ ಮೂಲ, ಪ್ರಭಾವ, ಪ್ರಸರಣ ಸಾಮರ್ಥ್ಯ ಆದಿಯಾಗಿ ಆಮೂಲಾಗ್ರ ಅಧ್ಯಯನ ಮತ್ತು ಸಂಶೋಧನೆ ಯಲ್ಲಿ ನಿರತ ರಾಗಿದ್ದಾರೆ. ಇವರ ಪ್ರಾಥಮಿಕ ಸಂಶೋಧನೆಯ ವರದಿಗಳ ಪ್ರಕಾರ ಈ ಹೊಸ ರೂಪಾಂತರಿ ಡೆಲ್ಟಾ ವೈರಸ್‌ಗಿಂತಲೂ ಹೆಚ್ಚು ಮಾರಕವಾಗಿದ್ದು ತೀವ್ರ ತೆರನಾದ ಲಕ್ಷಣಗಳೂ ಕಂಡುಬಂದಿವೆ. ಅತ್ಯಂತ ಆತಂಕಕಾರಿ ವಿಷಯ ಎಂದರೆ ಕೊರೊನಾ ವೈರಸ್‌ನ ಹೊಸ ರೂಪಾಂತರಿಯು ಕೊರೊನಾ ನಿರೋಧಕ ಲಸಿಕೆಗೂ ಪ್ರತಿರೋಧ ಒಡ್ಡಬಲ್ಲದು ಮಾತ್ರವಲ್ಲದೆ ಗಾಳಿಯ ಮೂಲಕವೂ ಹರಡಬಲ್ಲದಾಗಿದೆ. ಸೂಕ್ತ ಚಿಕಿತ್ಸೆ ಪಡೆದುಕೊಳ್ಳದ ಎಚ್‌ಐವಿ-ಏಡ್ಸ್‌ ಬಾಧಿತರಲ್ಲಿ ಹೊಸ ಕೊರೊನಾ ರೂಪಾಂತರಿಯು ಕಾಣಿಸಿಕೊಂಡಿದೆ ಎಂದು ತಜ್ಞರು ಹೇಳಿರುವರಾದರೂ ಇದಿನ್ನೂ ಖಚಿತವಾಗಿಲ್ಲ.

ಕೊರೊನಾ ಸೋಂಕಿನ ಹೊಸ ತಳಿ ಪತ್ತೆಯಾದ ಹಿನ್ನೆಲೆಯಲ್ಲಿ ಬ್ರಿಟನ್‌, ಸಿಂಗಾಪುರ, ಇಸ್ರೇಲ್‌, ಜರ್ಮನಿ, ಇಟಲಿ ಸಹಿತ ಕೆಲವೊಂದು ರಾಷ್ಟ್ರಗಳು ಈಗಾಗಲೇ ದಕ್ಷಿಣ ಆಫ್ರಿಕಾ ಸಹಿತ ಅಫ್ರಿಕಾದ ಏಳು ರಾಷ್ಟ್ರಗಳೊಂದಿಗಿನ ಸಂಪರ್ಕವನ್ನು ಕಡಿತಗೊಳಿಸಲು ನಿರ್ಧರಿಸಿವೆಯಲ್ಲದೆ ಹಲವಾರು ನಿರ್ಬಂಧಗಳನ್ನೂ ಹೇರಿವೆ. ಇದೇ ವೇಳೆ ಭಾರತವೂ ದಕ್ಷಿಣ ಆಫ್ರಿಕಾ, ಹಾಂಕಾಂಗ್‌ ಮತ್ತು ಬೋಟ್ಸ್‌ವಾನಾಗಳಿಂದ ಬರುವವರ ಮೇಲೆ ಹೆಚ್ಚಿನ ನಿಗಾ ಇರಿಸುವಂತೆ ರಾಜ್ಯ ಸರಕಾರಗಳಿಗೆ ಸೂಚನೆ ನೀಡಿದೆ.

ಕಳೆದೆರಡು ವರ್ಷಗಳಿಂದ ಇಡೀ ವಿಶ್ವವನ್ನು ಕಾಡುತ್ತಿರುವ ಕೊರೊನಾ ವೈರಸ್‌ ರೂಪಾಂತರ ಹೊಂದುತ್ತಲೇ ಇದ್ದು ಜನರನ್ನು ಪದೇ ಪದೆ ಆತಂಕದ ಮಡುವಿಗೆ ತಳ್ಳುತ್ತಿದೆ. ಕೊರೊನಾ ಸೋಂಕು ಮತ್ತು ಲಸಿಕೆ ನೀಡಿಕೆಯ ಅಂಕಿಅಂಶಗಳು ಏನೇ ಇದ್ದರೂ ಈ ವೈರಸ್‌ ಇನ್ನೂ ಜನರಿಂದ ದೂರವಾಗಿಲ್ಲ ಎಂಬುದನ್ನು ಜನರು ಮತ್ತು ಸರಕಾರ ಮೊದಲು ಅರ್ಥ ಮಾಡಿಕೊಳ್ಳಬೇಕು. ಜನರು ಸ್ವಯಂ ನಿಯಂತ್ರಣ ಮಾರ್ಗವನ್ನು ಮುಂದುವರಿಸದೇ ಹೋದಲ್ಲಿ ಕೊರೊನಾ ವೈರಸ್‌ “ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷೀಲಿ’ ಎಂಬಂತೆ ನಮ್ಮ ಬೆನ್ನು ಬಿಡಲಾರದು.

Advertisement

Udayavani is now on Telegram. Click here to join our channel and stay updated with the latest news.

Next