Advertisement

ಗತ ವೈಭವವನ್ನು ನೆನಪಿಸಿದ ಅರೆ ಶತಮಾನ ಹಿಂದಿನ ಕೋಟಿ ಚೆನ್ನಯ

07:13 PM Jul 25, 2019 | mahesh |

ತುಳುನಾಡಿನ ಅವಳಿ ವೀರರಾದ ಕೋಟಿ ಚೆನ್ನಯರ ಕತೆಯನ್ನು ಆಧರಿಸಿ 1939ರಲ್ಲಿ ಪಂದುಬೆಟ್ಟು ವೆಂಕಟರಾಯರು ಮೊತ್ತ ಮೊದಲು ರಚಿಸಿದ ಪ್ರಸಂಗವೇ ಕೋಟಿ ಚೆನ್ನಯ.ದೇಯಿ ಹಾಗೂ ಕಾಂತಣ್ಣ ಬೈದರ ಮಕ್ಕಳಾದ ಕೋಟಿ ಚೆನ್ನಯರು ಪಡುಮಲೆ ಬೀಡಿನಲ್ಲಿ ಜನ್ಮ ತಳೆದು ತಂದೆ ತಾಯಿಯನ್ನು ಕಳೆದುಕೊಂಡು ಪೆರುಮಳ ಬಲ್ಲಾಳರ ಆಶ್ರಯದಲ್ಲಿ ಬೆಳೆದರು.ಆ ಕಾಲದ ಸಾಮಾಜಿಕ ವ್ಯವಸ್ಥೆಯಲ್ಲಿ ಅಸಮಾನತೆಯ ವಿರುದ್ಧ ಸಿಡಿದೆದ್ದು ಮಂತ್ರಿ ಮಲ್ಲಯ್ಯ ಬುದ್ಧಿವಂತನನ್ನು ವಧಿಸಿದ ಅಪರಾಧಕ್ಕೆ ಪೆರುಮಳ ಬಲ್ಲಾಳರಿಂದ ಮರಣ ದಂಡನೆಗೆ ಒಳಪಟ್ಟರೂ ತೀರ್ಪು ನ್ಯಾಯೋಚಿತವಾಗಿ ಒದಗಲಿಲ್ಲ ಎಂಬ ಕಾರಣ ಒಡ್ಡಿ ಪಡುಮಲೆಯನ್ನು ತೊರೆದು ಪಂಜದ ಬೀಡಲ್ಲಿದ್ದ ಅಕ್ಕ ಕಿನ್ನಿದಾರು ಹಾಗೂ ಭಾವ ಪಯ್ಯಬೈದ್ಯರನ್ನು ಆಸರೆಗಾಗಿ ಸೇರುತ್ತಾರೆ.

Advertisement

ಪಂಜದಲ್ಲಿ ಸ್ವಜಾತಿ ಬಾಂಧವನಾದ ಮಂತ್ರಿ ಚಂದುಗಿಡಿಯ ಮೋಸದ ಬಂಧನದಿಂದ ತಪ್ಪಿಸಿಕೊಂಡು ಎಣ್ಮೂರು ಬೀಡಲ್ಲಿ ಸುಭದ್ರ ನೆಲೆಯನ್ನು ಕಂಡುಕೊಳ್ಳುತ್ತಾರೆ.ಎಣ್ಮೂರು ಬೀಡಿನ ದೇವ ಬಲ್ಲಾಳರು ಕೋಟಿ ಚೆನ್ನಯರ ಆಗಮನದ ನಂತರ ಸುದೃಢ ಸೈನ್ಯ ಕಟ್ಟಿ ನೆಮ್ಮದಿಯಿಂದ ಇರುವ ಹೊತ್ತಲ್ಲಿ ಕೊಲೆ ಅಪರಾಧಿಗಳಾದ ಕೋಟಿ ಚೆನ್ನಯರಿಗೆ ಆಶ್ರಯ ಕೊಟ್ಟ ಆರೋಪ ಹೊರಿಸಿ ಪೆರುಮಳ ಬಲ್ಲಾಳರು ಪಂಜದ ಕೇಮರ ಬಲ್ಲಾಳರ ಜೊತೆಗೂಡಿ ಎಣ್ಮೂರು ಬೀಡಿನ ಮೇಲೆ ಯುದ್ಧ ಸಾರಿದರು.

ಯುದ್ಧದ ಕೊನೆಯಲ್ಲಿ ಪೆರುಮಳ ಬಲ್ಲಾಳರೇ ಹಿಂಬದಿಯಲ್ಲಿ ನಿಂತು ಪ್ರಯೋಗ ಮಾಡಿದ ಶರದಿಂದ ಘಾಸಿಗೊಂಡ ಕೋಟಿ ಅಸುನೀಗುವ ಮೊದಲು ಮೂರು ಬೀಡಿನ ಬಳ್ಳಾಲರಲ್ಲಿ ಒಮ್ಮತ ಮೂಡಿಸಿ ಸತ್ಯ ಧರ್ಮ ನ್ಯಾಯ ನೀತಿಯ ಆಡಳಿತವನ್ನು ನೀಡುವ ವಾಗ್ಧಾನ ಪಡೆದು ಉತ್ತಮ ಸಮಾಜ ಕಟ್ಟುವಲ್ಲಿ ಸುದೃಢ ಯುವಕರ ತಯಾರು ಮಾಡಲೋಸುಗ ತುಳುನಾಡಿನಾದ್ಯಂತ ಗರಡಿ ಸ್ಥಾಪಿಸುವ ವಾಗ್ಧಾನ ಪಡೆದು ಇಹಲೋಕ ತ್ಯಜಿಸುತ್ತಾನೆ.ತಮ್ಮನಾದ ಚೆನ್ನಯ್ಯನೂ ಅಣ್ಣನ ಹಾದಿ ಹಿಡಿಯಲು ಆತ್ಮಸಮರ್ಪಣೆ ಮಾಡಿಕೊಳ್ಳುತ್ತಾನೆ. ಈ ರೀತಿಯಲ್ಲಿ ಅಮರರಾಗಿ ತುಳುನಾಡಿನಾದ್ಯಂತ ಕಾರಣಿಕ ಪುರುಷರಾಗಿ ಗರಡಿಯಲ್ಲಿ ಸರ್ವಜನರಿಂದ ಪೂಜೆಗೊಳ್ಳುತ್ತಾರೆ. ಈ ಪ್ರಸಂಗ ಜು.20ರಂದು ಮಂಗಳೂರು ಪುರಭವನದಲ್ಲಿ ಯಕ್ಷಕಲಾ ಕಟೀಲು ಇದರ ಆಶ್ರಯದಲ್ಲಿ ಪ್ರದರ್ಶನಗೊಂಡು ಗತವೈಭವವನ್ನು ಮರು ನೆನಪಿಸಿತು.

ಪೆರುಮಳ ಬಲ್ಲಾಳನಾಗಿ ಪ್ರಥಮಾರ್ಧದಲ್ಲಿ ಬಾಯಾರು ರಘುನಾಥ ಶೆಟ್ಟಿಯವರು ಹಾಗೂ ದ್ವಿತೀಯಾರ್ಧದಲ್ಲಿ ಸುಣ್ಣಂಬಳ ವಿಶ್ವೇಶ್ವರ ಭಟ್ಟರ ನಿರ್ವಹಣೆ ಅಚ್ಚುಕಟ್ಟಾಗಿತ್ತು. ಯುವ ಹಾಸ್ಯಗಾರರಾದ ಪೂರ್ಣೇಶ್‌ ಆಚಾರ್ಯ ವನಪಾಲಕ, ಚಂದುಗಿಡಿ, ದೂತ ವೇಷಗಳಲ್ಲಿ ಉತ್ತಮವಾಗಿ ನಟಿಸಿದರು. ದೇಯಿ ಬೈದ್ಯೆತಿಯಾಗಿ ಅಕ್ಷಯ್‌ ಮಾರ್ನಾಡ್‌ರವರು ತಮ್ಮ ಗಂಭೀರ ಅಭಿನಯದಿಂದ ಕಳೆಗಟ್ಟಿಸಿದರು.

ಬೊಮ್ಮಯ,ರಾಮ ಜೋಯಿಸ, ನರ್ಸಯ್ಯ ಪಾತ್ರದಲ್ಲಿ ಮಿಜಾರು ತಿಮ್ಮಪ್ಪನವರು ಮಿಜಾರ್‌ ಅಣ್ಣಪ್ಪನವರನ್ನು ನೆನಪಿಸಿದರು. ಸಂಕೀರ್ಣ ಪಾತ್ರವಾದ ಮಲ್ಲಯ್ಯ ಬುದ್ಧಿವಂತನಾಗಿ ಕೊಳ್ತಿಗೆ ನಾರಾಯಣ ಗೌಡರು ತಮ್ಮ ಪೂರ್ವಾನುಭವದ ಅಭಿನಯದಿಂದ ರಂಜಿಸಿದ್ದು, ಬುದ್ಧಿವಂತನ ಹೆಂಡತಿಯಾಗಿ ಕಡಬ ಶ್ರೀನಿವಾಸ ರೈಯವರು ಅಷ್ಟೇ ಸಮರ್ಪಕವಾಗಿ ಸಾಥಿಯಾದರು.

Advertisement

ಬುದ್ಧಿವಂತನ ಮಕ್ಕಳಾಗಿ ಮಿಜಾರು ತಿಮ್ಮಪ್ಪ, ಪೂರ್ಣೇಶ್‌ ಆಚಾರ್ಯ ಜೊತೆಗೆ ತುಳು ನಾಟಕ ಹಾಗೂ ಸಿನೆಮಾರಂಗದ ಬಹು ಬೇಡಿಕೆಯ ನಟರಾದ ಅರವಿಂದ ಬೋಳಾರ್‌ರವರು ನಟಿಸಿದ್ದು, ನಗೆಗಡಲಲ್ಲಿ ತೇಲಿಸಿ ಯಕ್ಷಗಾನ ರಂಗಕ್ಕೂ ಸೈ ಅನಿಸಿಕೊಂಡರು.ಸಂಜಯ್‌ ಕುಮಾರ್‌ ಶೆಟ್ಟಿ ಗೋಣಿಬೀಡು ಇವರ ಕಿನ್ನಿದಾರು ಪಾತ್ರಾಭಿನಯ ಅನುಪಮವಾಗಿತ್ತು.

ಪ್ರಸಂಗದ ಬಹುರಂಜಿತ ಹಾಸ್ಯ ಭೂಮಿಕೆ ಗಳಾದ ಸಾಯನ,ಪಯ್ಯಬೈದ್ಯ ಪಾತ್ರವನ್ನು ಬಂಟ್ವಾಳ ಜಯರಾಮ ಆಚಾರ್ಯರು ಸೊಗಸಾಗಿಸಿದರು. ಕೋಟಿ ಚೆನ್ನಯ ಪಾತ್ರಗಳು ನಾಲ್ಕು ಸೆಟ್‌ಗಳಲ್ಲಿದ್ದು, ಆರಂಭದಲ್ಲಿ ಸಣ್ಣ ಮಕ್ಕಳು ಕೋಟಿ ಚೆನ್ನಯರಾಗಿ ಯುಕ್ತಿ ಕೋಟ್ಯಾನ್‌- ಚಿರಾಗ್‌ರವರು ರಂಗದ ಅಳುಕಿಲ್ಲದೆ ಅಭಿನಯಿಸಿದರು. ಎರಡನೇ ಸೆಟ್‌ನಲ್ಲಿ ಬಾಲ ಕೋಟಿ ಚೆನ್ನಯರಾಗಿ ರವಿ ಮುಂಡಾಜೆ ಹಾಗೂ ಗಿರಿಕಿ ವೀರರೆನಿಸಿದ ಲೋಕೇಶ್‌ ಮುಚ್ಚಾರು ಇವರ ಪ್ರವೇಶದಿಂದ ರಂಗದಲ್ಲಿ ಸಂಚಲನ ಮೂಡಿತು. ಮೂರನೇ ಸೆಟ್‌ನಲ್ಲಿ ಯುವಕ ಕೋಟಿ ಚೆನ್ನಯರಾಗಿ ಲಕ್ಷ್ಮಣ ಮರಕಡ-ಸದಾಶಿವ ಕುಲಾಲ್‌ ರವರು ರಂಜಿಸಿದ್ದು, ಸದಾಶಿವ ಕುಲಾಲರಿಗೆ ಈ ವೇಷವನ್ನು ಹಿಂದೆ ನಿರ್ವಹಿಸಿದ ಸಾಕಷ್ಟು ಅನುಭವವಿದ್ದು, ಈರ್ವರೂ ವಾಚಿಕದಲ್ಲಿ ಅನುಭವದ ನಡೆಯಿಂದ ಗಮನ ಸೆಳೆದದ್ದು ವಿಶೇಷ. ನಾಲ್ಕನೇ ಸೆಟ್‌ನಲ್ಲಿ ಪ್ರಾಯ ಪ್ರಬುದ್ಧರಾದ ಕೋಟಿ ಚೆನ್ನಯರಾಗಿ ಅರುವ ಕೊರಗಪ್ಪ ಶೆಟ್ಟಿ -ಪೆರ್ಲ ಜಗನ್ನಾಥ ಶೆಟ್ಟಿಯವರ ವೇಷಗಳು ಅತ್ಯುತ್ತಮ ಜೋಡಿಯಾಗಿ ಮೂಡಿಬಂತು.ಅರುವದವರು 75ರ ಹರೆಯದಲ್ಲೂ ಕೊನೆಯ ಕೋಟಿಯಾಗಿ ಮಿಂಚಿ ತನ್ನ ಅನುಭವನ್ನು ಸಾಬೀತುಪಡಿಸಿದರು. ಪೆರ್ಲದವರ ಠೇಂಕಾರದ ಚೆನ್ನಯನ ಪಾತ್ರ ನಿರ್ವಹಣೆ ಅನನ್ಯವಾಗಿತ್ತು.

ಸರಪಾಡಿದ ಸರ್ಪ ಖ್ಯಾತಿಯ ಅಶೋಕ್‌ ಶೆಟ್ಟಿಯವರು, ಮತ್ಸರಿ ಕುಯುಕ್ತಿಯುಕ್ತ ಚಂದುಗಿಡಿಯ ಪಾತ್ರದಲ್ಲಿ ಮುಂಚಿನ ಠೀವಿ ತೋರಿಸಿದರು.ರಾಧಾಕೃಷ್ಣ ನಾವಡ ಕೇಮರ ಬಲ್ಲಾಳರಾಗಿ ಗತ್ತುಗಾರಿಕೆಯಲ್ಲಿ ರಂಜಿಸಿದರು. ದೇವಣ್ಣ ಬಲ್ಲಾಳ ಪಾತ್ರಾಭಿನಯದಲ್ಲಿ ವಾದಿರಾಜ ಕಲ್ಲೂರಾಯರು ಹೊಸ ಪ್ರಸಂಗಕ್ಕೂ ಸೈ ಎನಿಸಿಕೊಂಡರು.ದೀಪಕ್‌ ರಾವ್‌ ಪೇಜಾವರವರ ಮಂಜು ಪೆರ್ಗಡೆಯ ವೇಷಕ್ಕೆ ಅವಕಾಶ ಸಣ್ಣದಾದರೂ ಅಭಿನಯ ಹಿರಿದಾಗಿತ್ತು.

ಭಾಗವತರಾಗಿ ದಿನೇಶ್‌ ಅಮ್ಮಣ್ಣಾಯ, ರವಿಚಂದ್ರ ಕನ್ನಡಿಕಟ್ಟೆ, ಗಿರೀಶ್‌ ಕಕ್ಕೆಪದವು, ಸತೀಶ್‌ ಶೆಟ್ಟಿ ಬೋಂದೆಲ್‌, ಚೆಂಡೆ ಮದ್ದಳೆಯಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್‌,ದಯಾನಂದ ಶೆಟ್ಟಿಗಾರ ಮಿಜಾರು, ಕೃಷ್ಣಪ್ರಕಾಶ್‌ ಉಳಿತ್ತಾಯ, ಲೋಕೇಶ್‌ ಕಟೀಲು, ಚಕ್ರತಾಳದಲ್ಲಿ ಕಿರಣ್‌ ಆಚಾರ್ಯರು ಪ್ರಸಂಗ ಯಶಸ್ವಿಗೆ ಕಾರಣರಾದರು.

ತೆಂಕುತಿಟ್ಟಿನ ಪುಂಡು ವೇಷಗಳ ದಗಲೆಗಳಿಗೆ ನೆರಿಯಿಂದ ಕೂಡಿದ ಕೈ ಜೋಡಣೆಯು ವೇಷಗಳ ಮುಖವೇ ಕಾಣದಷ್ಟು ಅತಿಯಾಗಿದ್ದು ಈ ಬಗ್ಗೆ ವೇಷ ಭೂಷಣ ತಯಾರಕರು ಹಾಗೂ ಕಲಾವಿದರೂ ಗಮನಿಸಬೇಕಾದ ಅಗತ್ಯ ಇದೆ.

ಸುರೇಂದ್ರ ಪಣಿಯೂರು

Advertisement

Udayavani is now on Telegram. Click here to join our channel and stay updated with the latest news.

Next