Advertisement

Koteshwara:ಕೋಟಿಲಿಂಗೇಶ್ವರ ಇತಿಹಾಸ ಸಾರುವ ಪುರಾತನ ಶಾಸನ ಕಲ್ಲುಗಳು

02:46 PM Nov 24, 2023 | Team Udayavani |

ಕೋಟೇಶ್ವರ: ಶ್ರೀ ಕೋಟಿಲಿಂಗೇಶ್ವರ ದೇಗುಲವು ಸಾವಿರಾರು ವರ್ಷಗಳ ಇತಿಹಾಸದಿಂದ ಕೂಡಿದ್ದು, ಕೋಟೇಶ್ವರನ ಉದ್ಭವವಾಗಿ ಯುಗಾಂತರಗಳಾಯಿತೆಂದು ಪುರಾಣಗಳಲ್ಲಿ ಹೇಳಲಾಗುತ್ತಿದ್ದರೂ ಇಲ್ಲಿ ದೇಗುಲದ ಕಟ್ಟಡದ ರಚನೆ ಇತಿಹಾಸ
ಕಾಲದ ವಿವಿಧ ಹಂತಗಳಲ್ಲಾಗಿದೆ. ಕ್ರಿ.ಶ 8-9ನೇ ಶತಮಾನ 10-11 ನೇ ಶತಮಾನ  14-15 ನೇ ಶತಮಾನ ಮತ್ತು ಅನಂತರದ
ರಚನೆಗಳೆಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.

Advertisement

7 ಪ್ರದಕ್ಷಿಣ ಪಥದ ಪೂರ್ವಾಭಿಮುಖ ದೇಗುಲ ಈ ದೇಗುಲವು 7 ಪ್ರದಕ್ಷಿಣಾ ಪಥಗಳನ್ನು ಹೊಂದಿದ್ದು, ಸುಮಾರು 60 ಸೆಂ.ಮೀ.
ವ್ಯಾಸದ ಶಿಲಾಬಾವಿ ಇದೆ. 40 ಸೆಂ. ಮೀ. ಆಳದಲ್ಲಿ ಮೊರಬು ಶಿಲೆಯಿದೆ. ಇದರ ತುದಿ ಭಾಗ ರುದ್ರಾಕ್ಷಿ ಮಣಿಗಳಂತೆ ಕಂಡುಬರುತ್ತದೆ. ಇದೇ ಕೋಟಿಲಿಂಗಗಳೆಂಬುವುದು ನಂಬಿಕೆ. ಶಿಲಾಬಾವಿಯ ಮೇಲೆ ಕರಿಶಿಲೆಯ ಬೃಹತ್‌ ಪಾಣಿಪೀಠವಿದ್ದು, ಅದರ ಮೇಲೆ ಶಿವನ ಕಂಚಿನ ಪ್ರತಿಮೆಯನ್ನು ಇಟ್ಟು ಪೂಜಿಸಲಾಗುತ್ತಿದೆ.

ಈ ಬಾವಿಯ ನೇರ ಮೇಲ್ಭಾಗದಲ್ಲಿ ಗಂಗಾ ಪಾತ್ರೆಯನ್ನು ತೂಗು ಹಾಕಿದ್ದು,ಅದರಿಂದ ನಿರಂತರವಾಗಿ ನೀರು ಬಾವಿಗೆ ತೊಟ್ಟಿಕ್ಕುವಂತೆ ಮಾಡಲಾಗಿದೆ. ಹೊರಭಾಗದಲ್ಲಿರುವ ದ್ವಾರದ ಬಳಿ ಬ್ರಹ್ಮ, ವಿಷ್ಣು, ಮಹೇಶ್ವರ ದೇವರ ಉಬ್ಬು ಶಿಲ್ಪವಿದೆ. ಅದರ ಇಕ್ಕೆಲಗಳಲ್ಲಿ ಈ ವಿಗ್ರಹಗಳು ಇದ್ದು, ಪ್ರಾಚೀನ ಕಾಲದ್ದು ಎನ್ನಲಾಗಿದೆ. ಎಡಭಾಗದಲ್ಲಿ ಮೂಲೆ ಗಣಪತಿಯ ಪ್ರಾಚೀನ ಶಿಲಾ ವಿಗ್ರಹವಿದೆ. ಇದರ ಸೊಂಡಿಲಿನ ತಿರುವು ಪ್ರಾಚೀನತೆಯ ಲಕ್ಷಣಗಳಿಗೆ ಸಾಕ್ಷಿಯಾಗಿದೆ. ಈ ವಿಗ್ರಹವು ಕ್ರಿ.ಶ. 8ನೇ ಶತಮಾನಕ್ಕೆ ಸೇರಿರಬಹುದು ಎಂದು ಡಾ| ಪಿ. ಗುರುರಾಜ ಭಟ್‌ ಅವರ ಅಭಿಪ್ರಾಯವಾಗಿದೆ.

ಹೊರದ್ವಾರದಲ್ಲಿ ಪರಶುಪಾಣಿ ಶೂಲ ಪಾಣಿಯೆಂದು ಕರೆಯಲ್ಪಡುವ ದ್ವಾರಪಾಲಕ ಪಂಚಲೋಹದ ಮೂರ್ತಿಇದೆ. ಇದು ವಿಜಯನಗರ ಅಥವಾ ಕೆಳದಿ ನಾಯಕರ ಕಾಲದಲ್ಲಿ ರಚಿಸಿರಬಹುದು ಎಂಬ ಅಭಿಪ್ರಾಯವಿದೆ.

ಈಶಾನ್ಯ ಮೂಲೆಯಲಿರುವ ಬಾವಿಯ ನೀರನ್ನು ಅಭಿಷೇಕಕ್ಕೆ ಬಳಸಲಾಗುತ್ತಿದೆ. ಸಪ್ತಮಾತೃಕೆಯರುಳ್ಳ ಗುಡಿ, ಬ್ರಾಹ್ಮಿ,
ಮಾಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ ಹಾಗು ಚಾಮುಂಡಿಯಾಗಿದೆ. ಗರ್ಭಗುಡಿಯ ನೇರ ಹಿಂಭಾಗದ ಗುಡಿಯಲ್ಲಿ ಷಣ್ಮುಖನ ಮೂರ್ತಿ ಇದೆ. ವಾಯುವ್ಯ ಮೂಲೆಯ ಜಗಲಿಯ ತುತ್ತತುದಿಯಲ್ಲಿ ಜೇಷ್ಠಾ ಲಕ್ಷ್ಮೀ ವಿಗ್ರಹವಿದೆ.

Advertisement

ಬಲಭಾಗದ ಪೌಳಿಯಲ್ಲಿ ಮಹಿಷಮರ್ದಿನಿ ಗುಡಿಯಿದೆ. ಹೀಗೆ ನಾನಾ ಪ್ರಾಕಾರಗಳ ವಿವಿಧ ದೇವರ ವಿಗ್ರಹಗಳನ್ನು ಹೊಂದಿರುವ ಅನಾದಿಕಾಲದ ಕ್ಷೇತ್ರವು ವೈಶಿಷ್ಟ್ಯಮಯವಾಗಿದೆ. ಡಾ| ಪಿ.ಎನ್‌. ನರಸಿಂಹಮೂರ್ತಿ, ಡಾ| ಗುರುರಾಜ್‌ ಭಟ್‌, ಡಾ| ಶಂಕರ ನಾರಾಯಣ ಉಡುಪ ಕೋಟೇಶ್ವರ ಅವರ ಸಂಶೋಧನೆಯ ಲೇಖನಗಳಲ್ಲಿ ವಿವರಿಸಲಾದ ಕ್ಷೇತ್ರ ಮಹಾತ್ಮೆ ಪ್ರಾಚೀನ ಪರಂಪರೆಯ ಅನಾವರಣಗೊಂಡ ದೇಗುಲಗಳ ವೈವಿಧ್ಯಮಯ ಗರ್ಭಗುಡಿಯ ವಿಶೇಷತೆ ಸಾರುತ್ತದೆ. ಕೋಟಿಲಿಂಗೇಶ್ವರನ ಸನ್ನಿ ಧಿಯು ಸಂಶೋಧಕರ ಪಾಲಿಗೆ ಅನೇಕ ಸವಾಲು, ಕುತೂಹಲ ಕೆರಳಿಸುವ ಪುರಾತನ ಕಾಲದ ವಿಗ್ರಹಗಳ ದಾಖಲೆ ಹೊಂದಿದ್ದು, ಇಲ್ಲಿನ ಇತಿಹಾಸ ಸಾರುವ ಶಾಸನದ ಕಲ್ಲುಗಳು ನಾಲ್ಕೂವರೆ ಎಕರೆ ವಿಸ್ತೀರ್ಣದ ಬೃಹತ್‌ ಕೋಟಿತೀರ್ಥ ಪುಷ್ಕರಿಣಿ ಸಾಕ್ಷಿಯಾಗಿದೆ.

ಪರಶುರಾಮ ಸೃಷ್ಟಿಯ ಈ ಕ್ಷೇತ್ರವು ನಾನಾ ವಿಧವಾದ ಪೌರಾಣಿಕ ಇತಿಹಾಸದೊಂದಿಗೆ ಸಾಕ್ಷಿ ಸ್ವರೂಪವಾದ ವೈವಿಧ್ಯಮಯ
ಸನಾತನ ಧರ್ಮದ ಸಂಸ್ಕೃತಿಯ ಸ್ವರೂಪ ಮೂರ್ತಿಯ ಬಿಂಬ ಪ್ರತಿಬಿಂಬಗಳು ಅದೆಷ್ಟೋ ವರ್ಷಗಳ ಹಿಂದಿನದು. ಆಧ್ಯಾತ್ಮಿಕ
ಚಿಂತನೆಯ ಧಾರ್ಮಿಕ ನಿಯತ್ತಿನ ಪರಂಪರೆ ಸಂಸ್ಕಾರಯುತ ಜೀವನಕ್ರಮದ ಪರಿಶುದ್ಧ ಭಾವನೆಗಳ ಕಲಾತ್ಮಕ ಜೀವನಕ್ರಮದ
ನೈಪುಣ್ಯತೆಯನ್ನು ಪ್ರತಿಬಿಂಬಿಸುತ್ತದೆ.

ಬೃಹತ್‌ ಕೋಟಿತೀರ್ಥ ಪುಷ್ಕರಿಣಿ
ಕೋಟೇಶ್ವರದ ನಾಲ್ಕೂವರೆ ಎಕರೆ ವಿಸ್ತೀರ್ಣದ ಕೆರೆಯನ್ನು ಪಾಂಡವರು ನಿರ್ಮಾಣ ಮಾಡಿ ದಣಿವಾರಿಸಿಕೊಂಡು
ಸುರಂಗಮಾರ್ಗವಾಗಿ ಮೊಸಳೆಯ ಸಹಾಯದಿಂದ ವಂಡಾರು ಎಂಬ ಊರಿಗೆ ಬಂದು ಕಂಬಳ ಗದ್ದೆ ನಿರ್ಮಾಣ ಮಾಡಿದರಂತೆ ಹಾಗಾಗಿ ಕೋಟೇಶ್ವರದ ಕೆರೆಗೂ ವಂಡಾರು ಕಂಬಳಕ್ಕೂ ಸಂಬಂಧ ಕಲ್ಪಿಸಲಾಗಿದೆ. ಕೊಡಿಹಬ್ಬದಂದು ರಥ ಎಳೆದಾಗ ವಂಡಾರು ಕಂಬಳ ಗದ್ದೆಯಲ್ಲಿ ಧೂಳು ಏಳುವುದು, ಅಂತೆಯೇ ವಂಡಾರು ಕಂಬಳದ ದಿನ ಇಲ್ಲಿನ ಕೆರೆ ನೀರು ಕೆಸರಾಗುವ ಬಗ್ಗೆ ಅನೇಕ ಕಡೆ ಉಲ್ಲೇಖಿಸಲಾಗಿದೆ. ವಸುಚಕ್ರವರ್ತಿ ತನ್ನ ವಶದಲ್ಲಿದ್ದ ಇಂದ್ರ ಧ್ವಜವನ್ನು ಋಷಿಗಳ ಸಮ್ಮುಖದಲ್ಲಿ ಶಿವನ ಮುಂಭಾಗದಲ್ಲಿ ಸ್ಥಾಪಿಸಿರುವುದರಿಂದ ಧ್ವಜೇಶ್ವರ ಎಂಬ ಹೆಸರು ದೇವರಿಗೂ ಊರಿಗೂ ಬಂದಿದೆ ಎನ್ನಲಾಗಿದೆ.

*ಡಾ| ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next