Advertisement

ಐಗಳ ಮಠವಾಗಿ ಆರಂಭವಾದ ಸಂಸ್ಥೆಗೆ ಈಗ 115 ವರ್ಷಗಳ‌ ಇತಿಹಾಸ

12:39 AM Nov 19, 2019 | Sriram |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

ಕೋಟ: ಕೋಟದ ಪ್ರತಿಷ್ಠಿತ ಭೂ ಮಾಲಿಕ ಕುಟುಂಬ ಬಲರಾಮ ಹಂದೆಯವರ ಮನೆಯ ಐಗಳ ಮಠದಲ್ಲಿ ಮರಳಿನ ಮೇಲೆ “ಓಂ ಗಣಾಧಿಪತೆಯೇ ನಮಃ’ ಎಂದು ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸ ಮಾಡಿಸುತ್ತಿದ್ದ ಶಿಕ್ಷಣ ಸಂಸ್ಥೆ ಕ್ರಮೇಣ ಕೋಟ ಬೋರ್ಡ್‌ ಶಾಲೆಯಾಗಿ ಪರಿವರ್ತನೆಯಾಗಿತ್ತು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ನಡೆದಾಡುವ ವಿಶ್ವಕೋಶ ಡಾ|ಕೋಟ ಶಿವರಾಮ ಕಾರಂತರು 5ನೇ ತರಗತಿ ತನಕ ಇಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ್ದರು. ಐಗಳ ಮಠ ಯಾವಾಗ ಆರಂಭವಾಯಿತು ಎನ್ನುವ ಸ್ಪಷ್ಟ ದಾಖಲೆ ಇಲ್ಲ. ಆದರೆ ಬೋರ್ಡ್‌ ಶಾಲೆಯಾಗಿ 1904ರಲ್ಲಿ ಬದಲಾಗಿತ್ತು.

ಅಂದು ಸುಮಾರು ಮೂರ್‍ನಾಲ್ಕು ಕಿ.ಮೀ. ದೂರದ ಗಿಳಿಯಾರು, ಹಂದಟ್ಟು, ಕಾರ್ತಟ್ಟು, ಚಿತ್ರಪಾಡಿ, ಕೋಟತಟ್ಟು, ಪಾರಂಪಳ್ಳಿ, ಮಣೂರಿನ ನೂರಾರು ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಿದ್ದರು. ರಂಗರಾಯರು, ಮರಿಯಪ್ಪ ಹಂದೆ , ನರಸಿಂಹ ಹಂದೆ ಆರಂಭದದಲ್ಲಿ ಮುಖ್ಯ ಶಿಕ್ಷಕರಾಗಿದ್ದರು ಮತ್ತು 4 ಶಿಕ್ಷಕರಿದ್ದರು.

ದೇಗುಲದ ಹೆಬ್ಟಾಗಿಲು, ಯಾಗಮಂಟಪವೇ ಶಾಲೆ
ಐಗಳ ಮಠದ ಅನಂತರ ಕೋಟದ ಪ್ರಸಿದ್ಧ ಹಿರೇ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಶಾಲೆ ಸ್ಥಳಾಂತರಗೊಂಡಿತ್ತು. ಆಗ ದೇಗುಲದ ಹೆಬ್ಟಾಗಿಲು, ಯಾಗಶಾಲೆಯ ನೆಲೆದ ಮೇಲೆ ಮಕ್ಕಳಿಗೆ ತರಗತಿ ನಡೆಯುತಿತ್ತು. ಅನಂತರ ಹಂದೆಯವರು ಕೊಡಮಾಡಿದ ಜಾಗಕ್ಕೆ (ಈಗಿನ ಪೆಟ್ರೋಲ್‌ ಬಂಕ್‌ ಬಳಿ) ಸ್ವಂತ ಕಟ್ಟಡಕ್ಕೆ ಶಾಲೆ ಸ್ಥಳಾಂತರಗೊಂಡಿತ್ತು.

ಇದೀಗ ಶಾಲೆಯಲ್ಲಿ 1ರಿಂದ 7ರ ತನಕ ತರಗತಿಗಳಿದ್ದು, 4ಶಿಕ್ಷಕರು, 2 ಗೌರವ ಶಿಕ್ಷಕರು, 52 ವಿದ್ಯಾರ್ಥಿಗಳಿದ್ದಾರೆ.

Advertisement

ಸ್ಮಾರ್ಟ್‌ ಕ್ಲಾಸ್‌, ವಾಹನ ಸೌಲಭ್ಯ ಮುಂತಾದ ವ್ಯವಸ್ಥೆ ಇದೆ. ಇಲ್ಲಿನ 2015-16ನೇ ಸಾಲಿನ ವಿದ್ಯಾರ್ಥಿ ಆಕಾಶ್‌ ರಾಷ್ಟ್ರಮಟ್ಟದ ಇನ್ಸ್‌ಸ್ಪಾರ್ಡ್‌ ಪ್ರಶಸ್ತಿ ಭಾಜನನಾಗಿದ್ದ ಮತ್ತು ಸುಮುಖ ರಾಜ್ಯ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್ತಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಸಂದರ್ಶನದಲ್ಲಿ ಭಾಗಿಯಾಗಿದ್ದ. ಹಿಂದಿನ ಮುಖ್ಯ ಶಿಕ್ಷಕಿ ಸಂಪಾ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಾತ್ರರಾಗಿದ್ದರು.

ಕಾರಂತರು, ಕೋಟ ವೈಕುಂಠ ಹಳೆವಿದ್ಯಾರ್ಥಿಗಳು
ಡಾ| ಕೆ.ಶಿವರಾಮ ಕಾರಂತ ಹಾಗೂ ಯಕ್ಷಗಾನ ಕ್ಷೇತದ ದಿಗ್ಗಜ ಕೋಟ ವೈಕುಂಠ, ಮದ್ರಾಸ್‌ ಸರಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಹಂದೆಯವರು, ವಿಶ್ವವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕ ಶ್ರೀಧರ ಹಂದೆ ಹಾಗೂ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಿತ್ರಪಾಡಿ ಉಪೇಂದ್ರ ಸೋಮಯಾಜಿ, ಸಾಹಿತಿ ಬೆಳಗೋಡು ರಮೇಶ ಭಟ್‌ ಮತ್ತು ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಹಲವಾರು ಮಂದಿ ವೈದ್ಯರು,ಸೈನಿಕರು, ಉದ್ಯಮಿಗಳು ಇಲ್ಲಿನ ಹಳೆ ವಿದ್ಯಾರ್ಥಿಗಳು.

ಕಾರಂತರ ಜೀವನ ಚರಿತ್ರೆಯಲ್ಲಿ ಶಾಲೆ
ಡಾ| ಶಿವರಾಮ ಕಾರಂತರು ತನ್ನ ಜೀವನ ಚರಿತ್ರೆಯಲ್ಲಿ ಶಾಲೆಯ ಬಗ್ಗೆ ಈ ರೀತಿ ಉಲ್ಲೇಖೀಸಿದ್ದಾರೆ. ನಮ್ಮ ಮನೆ ಸಮೀಪದ ಶಿವಾಲಯದ ಯಾಗ ಶಾಲೆಯಲ್ಲಿ ನೆಲೆದ ಮೇಲೆ ಕುಳಿತು ನಾನು ಓದಿದ್ದೆ. ಶಿಕ್ಷಕ ರಂಗ ರಾಯರು ನನ್ನ ಮೊದಲ ಗುರು ಹಾಗೂ ಕಶಪ್ಪಯ್ಯ ನನ್ನ ಮೆಚ್ಚಿನ ಗುರುಗಳಾಗಿದ್ದರು.

ಎರಡು ವರ್ಷ ಕಲಿತ ಅನಂತರ ಶಾಲೆ ದೇಗುಲದಿಂದ ಸ್ವಂತ ಕಟ್ಟಡಕ್ಕೆ ಸ್ಥಳಾಂತರವಾಗಿತ್ತು. ಇಲ್ಲಿ 5ನೇ ತರಗತಿ ಮುಗಿಯುವುದರೊಳಗೆ ನಾನು ಪತ್ರ ಬರೆಯಲು, ಡಿಮಾಂಡ್‌ ನೋಟು, ಅಡವು ದಸ್ತಾವೇಜು ಬರಹ, ಕ್ರಯಚೀಟಿ ಮತ್ತು ಮೋಡಿ ಬರಹ ಬರೆಯಲು ಕಲಿತಿದ್ದೆ ಎಂದು ಉಲ್ಲೇಖೀಸಿದ್ದಾರೆ.

ಕಾರಂತರು ಕಲಿತ ಶಾಲೆಯಲ್ಲಿ ಸೇವೆ ಸಲ್ಲಿಸಲು ಹೆಮ್ಮೆ ಇದೆ. ಶಾಲೆಯ ಪ್ರಸ್ತುತ ಅಭಿವೃದ್ಧಿಗೆ ಹಳೆವಿದ್ಯಾರ್ಥಿಗಳು, ಊರಿನವರು, ಶಾಲಾಭಿವೃದ್ಧಿ ಸಮಿತಿ ಪಾತ್ರ ಮಹತ್ವದ್ದು. ನಮ್ಮಲ್ಲಿ ಶಿಕ್ಷಕರು-ಮುಖ್ಯಶಿಕ್ಷಕರು ಭೇದವಿಲ್ಲದೆ ಒಟ್ಟಾಗಿ ಒಂದಾಗಿ ದುಡಿಯುತ್ತೇವೆ.
-ಪುಷ್ಪಾವತಿ, ಮುಖ್ಯ ಶಿಕ್ಷಕಿ

ಅಂದು ಶಿಕ್ಷೆಯ ಮೂಲಕ ಶಿಕ್ಷಣ ಇತ್ತು. ಪಠ್ಯದ ಜತೆಗೆ ಸಾಹಿತ್ಯ ಮುಂತಾದ ಜೀವನಾನುಭವದ ಪಾಠವಿತ್ತು. ಅಂದಿನ ಶಿಕ್ಷಣಕ್ಕೂ ಇಂದಿನ ಶಿಕ್ಷಣಕ್ಕೂ ಸಾಕಷ್ಟು ವ್ಯತ್ಯಾಸ ಇದೆ..
-ಉಪೇಂದ್ರ ಸೋಮಯಾಜಿ,
ಶಾಲೆಯ ಹಳೆ ವಿದ್ಯಾರ್ಥಿ

-ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next