Advertisement

ಕೋರೆ, ಸುರೇಶ ಅಂಗಡಿ ಮಾತಿನ ಚಕಮಕಿ

07:28 AM Dec 26, 2018 | Team Udayavani |

ಬೆಳಗಾವಿ: ರೈಲ್ವೆ ಮೇಲ್ಸೇತುವೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸದ ಸುರೇಶ ಅಂಗಡಿ ಹಾಗೂ ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಅವರು ಸಚಿವ ಸತೀಶ ಜಾರಕಿಹೊಳಿ ಸೇರಿ ಎಲ್ಲರ ಸಮ್ಮುಖದಲ್ಲೇ ವಾಗ್ವಾದ ನಡೆಸಿದರು. ನಗರದ ಗೋಗಟೆ ವೃತ್ತದಲ್ಲಿ ನಿರ್ಮಾಣಗೊಂಡಿರುವ ರೈಲ್ವೆ ಮೇಲ್ಸೇ ತುವೆ ಉದ್ಘಾಟನಾ ಕಾರ್ಯಕ್ರಮಕ್ಕೆ ತಮಗೆ ಆಮಂತ್ರಣ ನೀಡಿಲ್ಲ ಹಾಗೂ
ಆಸನದ ಮೇಲೆ ತಮ್ಮ ಹೆಸರು ಹಾಕಿಲ್ಲವೆಂದು ಡಾ.ಕೋರೆ ಮುನಿಸಿಕೊಂಡು ವೇದಿಕೆ ಮೇಲೆ ಬಾರದೇ ಕೆಳಗೆ ಆಸೀನರಾಗಿದ್ದರು. ತಾವು ರಾಜ್ಯಸಭಾ ಸದಸ್ಯರಾಗಿದ್ದರೂ ಉದ್ದೇಶಪೂರ್ವಕವಾಗಿ ನನ್ನ ಹೆಸರು ಹಾಕದೇ ಅವಮಾನ ಮಾಡಲಾಗಿದೆ ಎಂದು ಕೋರೆ ಆಕ್ಷೇಪಿಸಿದರು. ಇದನ್ನು ನೋಡಿ ವೇದಿಕೆಯಿಂದ ಕೆಳಗೆ ಬಂದ ಸಂಸದ ಅಂಗಡಿ “ಎರಡು ತಿಂಗಳ ಹಿಂದೆಯೇ ನಿಮಗೆ ಆಮಂತ್ರಣ
ನೀಡಿದ್ದೇವೆ. ನೀವು ಹಿರಿಯರು. ಹೀಗೇಕೆ ಮಾಡುತ್ತಿದ್ದೀರಿ. ನಿಮಗೆ ಕಾಮನ್‌ ಸೆನ್ಸ್‌ ಇಲ್ಲವಾ’ ಎಂದು ಹರಿಹಾಯ್ದರು. ಅದಕ್ಕೆ “ಏನೋ
ದಾದಾಗಿರಿ ಮಾಡುತ್ತೀಯಾ’ ಎಂದು ಪ್ರಭಾಕರ ಕೋರೆ ಮಾರುತ್ತರ ನೀಡಿದರು.

Advertisement

“ಇದು ನಿನ್ನ ಕಾರ್ಯಕ್ರಮ ಅಲ್ಲ.ರೈಲ್ವೆ ಇಲಾಖೆ ಕಾರ್ಯಕ್ರಮ. ನೀ ಸುಮ್ಮನಿರು. ನಾನು ಯಾವತ್ತೂ ಹೆಸರಿಗಾಗಿ ಜಗಳ ಮಾಡಿದವನಲ್ಲ. ಆದರೆ ಇಲ್ಲಿ ಜಗಳ ಮಾಡಬೇಕಾಗಿದೆ’ ಎಂದು ಕೋರೆ ದನಿ ಏರಿಸಿದರು. ಇದಕ್ಕೆ ಆವೇಶದಿಂದಲೇ ಮಾತನಾಡಿದ
ಸುರೇಶ ಅಂಗಡಿ “ನಾ ಕರಿತೀದಿನಿ, ಬರಿ¤ರೋ ಇಲ್ಲವೋ’ ಎಂದು ಏರು ದನಿಯಲ್ಲೇ ಕೇಳಿದರು. ಸುಮಾರು 10 ನಿಮಿಷಗಳ ಕಾಲ ನಡೆದ ಈ ವಾಗ್ವಾದಕ್ಕೆ ಸಚಿವ ಸತೀಶ ಜಾರಕಿಹೊಳಿ ಮೌನ ವೀಕ್ಷಕರಾಗಿದ್ದರು. “ಎಲ್ಲವನ್ನೂ ನೀನೇ ಜವಾಬ್ದಾರಿ ತೆಗೆದುಕೊಂಡು ಮಾಡುತ್ತಿದ್ದೀಯಾ. ಜಿಲ್ಲೆಯಲ್ಲಿ ಮೂವರು ಸಂಸದರಿದ್ದೇವೆ. ಯಾರೊಬ್ಬರ ಹೆಸರೂ ಇಲ್ಲ. ಎಲ್ಲದರಲ್ಲಿ ನಿಮ್ಮದೇ ಇದೆ. ನೀವೇ ಕಾರ್ಯಕ್ರಮ ಮಾಡಿಕೊಳ್ಳಿ’ ಎಂದು ಕೋರೆ ಹರಿಹಾಯ್ದರು. ನಂತರ ಸುರೇಶ ಅಂಗಡಿ ಬಲವಂತವಾಗಿ ಕೋರೆ ಅವರ ಕೈಹಿಡಿದು ವೇದಿಕೆಯತ್ತ ಕರೆದುಕೊಂಡು ಹೋಗಿ ಜಗಳಕ್ಕೆ ತೆರೆ ಎಳೆದರು. ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಭಾಕರ ಕೋರೆ “ಈ ರೈಲು ಮೇಲ್ಸೇತುವೆಗೆ ಮುಂದೆ ಸುರೇಶ ಅಂಗಡಿ ಸ್ಮರಣಾರ್ಥ ಎಂದು ಹೆಸರಿಡಿ’ ಎಂದು ಛೇಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next