Advertisement

ಇಂಜಿನಿಯರ್‌ಗಳ ನಿರ್ಲಕ್ಷ್ಯ : ಅಗ್ರಹಾರ ಕೆರೆ ಏರಿ ಬಿರುಕು, ಜನರ ಜೀವಕ್ಕೆ ಕಾದಿದೆ ಭಾರೀ ಕಂಟಕ

08:40 PM Jul 20, 2022 | Team Udayavani |

ಕೊರಟಗೆರೆ: ಅಗ್ರಹಾರದ ಕೆರೆ ಏರಿ ಬಿರುಕು ಬಂದಿದ್ದು ಜನರಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿದೆ. ಅಗ್ರಹಾರ ಜಂಪೇನಹಳ್ಳಿ ಸೇರಿದಂತೆ ಕೊರಟಗೆರೆ ಪಟ್ಟಣದ ಜನತೆಗೆ ಭಾರೀ ಗಂಡಾಂತರ ಕಾದಿದೆ. ಅಗ್ರಹಾರ ಜಂಪೇನಹಳ್ಳಿ ಭಾಗದ ರೈತರಿಗೆ ಸೇರಿದ ತೋಟಗಳೆಲ್ಲ ಸಂಪೂರ್ಣ ನಾಶವಾಗುವ ಬೀದಿಯಲ್ಲಿ ಜನರು ಗಾಬರಿಗೊಂಡಿದ್ದಾರೆ.

Advertisement

ಕೊರಟಗೆರೆ ಪಟ್ಟಣದ ಶೇ.90 ಭಾಗದಷ್ಟು ಜನರಿಗೆ ಕುಡಿಯುವ ನೀರಿನ ಮೂಲ ಮಾರ್ಗ ಅಗ್ರಹಾರದ ಕೆರೆ ಆಗಿದೆ. ಆದರೆ ಈ ಕೆರೆ ಏರಿ ಬಿರುಕು ಮೂಡಿರುವುದು ಜನರಲ್ಲಿ ಆತಂಕವನ್ನು ಸೃಷ್ಟಿಸಿದೆ. ಕೆರೆಗಳ ಜವಾಬ್ದಾರಿ ಹೊತ್ತಿರುವ ಮೈನರ್ ಇರಿಗೇಶನ್ ಇಂಜಿನಿಯರ್‌ಗಳ ನಿರ್ಲಕ್ಷತನ ಇದಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕೆರೆ ಏರಿ ಬಿರುಕು ಸುತ್ತಲೂ ಬೆಳೆದಿರುವ ದಟ್ಟ ಅರಣ್ಯದಿಂದಾಗಿ, ಗಿಡ ಮರಗಳಿಂದ ತುಂಬಿರುವ ಕೆರೆ ಏರಿ ಗಿಡ ಮರಗಳ ಬೇರಿನಿಂದ ಕೆರೆಯ ಏರಿ ಬಿರುಕು ಬಿಟ್ಟಿದೆ. ಕಂಡೂ ಕಾಣದಂತೆ ಇರುವ ಎಂಜಿನಿಯರ್‌ಗಳ ನಿರ್ಲಕ್ಷತನ ಎಷ್ಟರ ಮಟ್ಟಿಗೆ ಸರಿ ಎಂದು ಸ್ಥಳೀಯ ಜನರು ಹಾಗೂ ರೈತರು ಆಕ್ರೋಶ ಭರಿತರಾಗಿದ್ದಾರೆ. ಎಷ್ಟು ಬಾರಿ ಸ್ಥಳೀಯರು ಅಧಿಕಾರಿಗಳಿಗೆ ದೂರು ಕೊಟ್ಟರು ಕೆರೆ ಬಗ್ಗೆ ತಲೆಕೆಡಿಸಿಕೊಳ್ಳದ ಪರಿಣಾಮ ಇಂದು ಕೆರೆಯ ಏರಿ ಬಿರುಕು ಬಿಟ್ಟು ಸಮಸ್ಯೆಗೆ ಕಾರಣವಾಗಿದೆ.

ಇನ್ನೂ ಇಂಜಿನಿಯರ್‌ಗಳು ಯಾವುದೇ ಅಧಿಕಾರಿಗಳ ಮಾತಿಗೂ ಬೆಲೆಕೊಡದೆ, ಸ್ಥಳೀಯರ ಮನವಿಗೂ ಮಣಿಯದೇ ಇರುವುದೇ ಈ ಘಟನೆಗೆ ಕಾರಣವಾಗಿದೆ. ಕೆರೆ ಏರಿ ಒಡೆದರೆ ೪ ರಿಂದ ೫ ಗ್ರಾಮಗಳು ಸೇರಿದಂತೆ ಜನ ಜಾನುವಾರುಗಳು ಸಂಪೂರ್ಣ ನಾಶವಾಗುತ್ತವೆ. ಇದಕ್ಕೆಲ್ಲ ನೇರ ಹೊಣೆ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್‌ಗಳೇ ಆಗಿದ್ದಾರೆ. ತುಕ್ಕು ಹಿಡಿದಂತೆ ಕುಳಿತಿರುವ ಇಂಜಿನಿಯರುಗಳು ಎಷ್ಟು ಬಾರಿ ಮನವಿ ಕೊಟ್ಟರೂ, ಮೇಲಧಿಕಾರಿಗಳು ತಿಳಿಸಿದರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸದೇ ಇರುವುದು ಅವರ ಕರ್ತವ್ಯ ನಿಷ್ಠೆಯ ಬಗ್ಗೆ ತಿಳಿಸುತ್ತದೆ.

ಇದನ್ನೂ ಓದಿ : ಯೋಗಿ ಸರ್ಕಾರದಲ್ಲಿ ಒಡಕು! ರಾಜೀನಾಮೆಯ ಬೆದರಿಕೆ ಹಾಕಿದ ಜಲಶಕ್ತಿ ಸಚಿವ

Advertisement

ಕೊರಟಗೆರೆ ತಾಲ್ಲೂಕು ತಹಶೀಲ್ದಾರ್ ನಾಹಿದಾ ಜಮ್ ಜಮ್ ಸ್ಥಳಕ್ಕೆ ಭೇಟಿ ಕೊಟ್ಟು ವರದಿ ಸಲ್ಲಿಸಿದರೂ ಸ್ಥಳಕ್ಕೆ ಬರದ ಇಂಜಿನಿಯರ್‌ಗಳು ಈಗಲಾದರೂ ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾಗುತ್ತಾರಾ ಕಾದು ನೋಡಬೇಕಾಗಿದೆ.

2009 ರಲ್ಲಿ ಈ ಕೆರೆಯನ್ನು ಸಣ್ಣ ನೀರಾವರಿ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕುಡಿಯುವ ನೀರಿಗಾಗಿ ಉಸ್ತುವಾರಿ ವಹಿಸಿಕೊಂಡರು. ಪ್ರಸ್ತುತ ಕೆರೆ ಏರಿ 10ರಿಂದ 15ಕಡೆ ಬಿರುಕು ಬಿಟ್ಟಿದೆ. ಹಾಗೂ ಕಾಡು ಪ್ರಾಣಿಗಳ ವಾಸಸ್ಥಳವಾಗಿದೆ. ಗಿಡ ಮರಗಳು ಬೆಳೆದು ನಿಂತು ದೊಡ್ಡ ಕಾಡಾಗಿ ಮಾರ್ಪಟ್ಟಿದೆ. ಈ ಕೆರೆ ಒಡೆದರೆ 1200ಎಕರೆ ಜಮೀನು,150 ಎಕರೆ ಅಡಕೆ ತೋಟ ಸಂಪೂರ್ಣ ನೀರು ಪಾಲಾಗುತ್ತೆ. ಅಲ್ಲದೇ 4 ರಿಂದ 5 ಊರಿನ ಗ್ರಾಮಸ್ಥರು ಹಾಗೂ ಜಾನುವಾರುಗಳು ನಿರಾಶ್ರಿತರಾಗುತ್ತಾರೆ. 25 ಲಕ್ಷ ಟೆಂಡರ್ ಆಗಿದೆ ಎಂದರು. ಇವರು ಕೆಲಸ ಮಾಡಿಸುವುದು ಯಾವಾಗ ಎಂದರೆ ಈ ಕೆರೆ ಒಡೆದು ಸುತ್ತ ಮುತ್ತಲಿನ ಪ್ರದೇಶವೆಲ್ಲಾ ಕೊಚ್ಚಿ ಹೋದ ಮೇಲೆ. ಆಮೇಲೆ ರೈತರು ಬಂದು ನಮ್ಮ ಜಾಗವನ್ನು ಹುಡುಕಲು 3 ರಿಂದ 4 ವರ್ಷ ಆಗತ್ತೆ. ಅಧಿಕಾರಿಗಳಲ್ಲಿ ಮತ್ತೊಮ್ಮೆ ಬೇಡಿಕೊಳ್ಳುತ್ತೇನೆ ಈ ಕೆರೆ ಯಾವ ಇಲಾಖೆಗೆ ಬರತ್ತೋ ಅದು ನಮಗೆ ಗೊತ್ತಿಲ್ಲಾ. ಈಗಲಾದರೂ ಎಚ್ಚೆತ್ತು ರೈತರ ಜೀವನ ಹಾಳಾಗುವುದಕ್ಕಿಂತ ಮುಂಚೆ ಸರಿಯಾಗಿ ಕಾರ್ಯ ನಿರ್ವಹಿಸಿ. ಎಷ್ಟು ಮನವಿ ಸಲ್ಲಿಸಿದರು ಇಲ್ಲಿಗೆ ಯಾವ ಅಧಿಕಾರಿಯು ಬಂದಿಲ್ಲ. ತಹಶೀಲ್ದಾರ್ ಒಬ್ಬರು ಬಂದು ಹೋದರು ಅಸ್ಟೆ,ಇವರು ರೈತರೆಲ್ಲ ಸತ್ತ ಮೇಲೆ ಬರುತ್ತಾರೋ ಗೊತ್ತಿಲ್ಲಾ.

-ಸುರೇಂದ್ರಬಾಬು, ಅಗ್ರಹಾರ ಸ್ಥಳಿಯ.

2008-09ರಲ್ಲಿ ಆಗಿನ ಶಾಸಕರಾಗಿದ್ದ ಡಾ.ಜಿ.ಪರಮೇಶ್ವರ ಅವರು ಕುಡಿಯುವ ನೀರಿನ ಉದ್ದೇಶದಿಂದ ಆಯ್ಕೆ ಮಾಡಿಕೊಂಡರು. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲಾ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಮ್ಮ ಕಣ್ಣಿಗೆ ಮಣ್ಣೆರಚಿ ನಮಗೆ ಮೋಸ ಮಾಡಿದ್ದಾರೆ. ಅವತ್ತಿನ ಕಾಲಕ್ಕೆ ನಾವು 5 ಸಾವಿರ ಕ್ವಿಂಟಾಲ್‌ನಿಂದ 8 ಸಾವಿರ ಕ್ವಿಂಟಾಲ್‌ವರೆಗೂ ರಾಜ್ಯ ಸರ್ಕಾರದ ಬಿತ್ತನೆ ಬೀಜ ನಿಗಮಕ್ಕೆ ಕೊಡುತ್ತಾ ಬಂದಿದ್ದೇವೆ. ಇವತ್ತು ಸರ್ಕಾರ ಕೊಡುವ 2-3 ಕೆ.ಜಿ. ಅಕ್ಕಿಗೋಸ್ಕರ ಕಾಯುತ್ತಾ ಕುಳಿತುಕೊಳ್ಳುವ ಪರಿಸ್ಥಿತಿ ಬಂದಿದೆ. 2008 ರಿಂದ ಇವತ್ತಿನ ವರೆಗೂ ಯಾರೋಬ್ಬ ಅಧಿಕಾರಿಯೂ ಕೂಡಾ ಕೆರೆಯ ಏರಿ ಮೇಲೆ ಬಂದೇ ಇಲ್ಲ.

-ನಂದೀಶ್, ಮಾಜಿ ಗ್ರಾ.ಪಂ. ಅಧ್ಯಕ್ಷ.

ಇದನ್ನೂ ಓದಿ : ಯೋಗಿ ಸರ್ಕಾರದಲ್ಲಿ ಒಡಕು! ರಾಜೀನಾಮೆಯ ಬೆದರಿಕೆ ಹಾಕಿದ ಜಲಶಕ್ತಿ ಸಚಿವ

ಇದು ಅಗ್ರಹಾರದ ಕೆರೆ ಎಂತ ಮಾತ್ರ ಹೆಸರುವಾಸಿ, ಆದರೆ ಇದರಿಂದ ಯಾವುದೇ ಅನುಕೂಲವನ್ನು ನಾವು ಪಡೆದುಕೊಂಡಿಲ್ಲ. ಆದರೆ ಈಗ ಈ ಕೆರೆಯಿಂದ ಅನಾನುಕೂಲವಾಗುವ ಭಯ ಆಗ್ತಾ ಇದೆ. ಕೆರೆ ಒಡೆದರೆ ಕೆಳ ಭಾಗದಲ್ಲಿರುವ ಎಲ್ಲಾ ಜನರು, ರೈತರ ಜಮೀನುಗಳು ಹಾಗು ಜಾನುವಾರುಗಳಿಗೆ ಬಹುಡೊಡ್ಡ ಅನಾಹುತವಾಗಲಿದೆ. ತಕ್ಷಣ ಸಂಬಂಧಪಟ್ಟ ಇಂಜಿನಿಯರ್‌ಗಳು ಕ್ರಮ ಕೈಗೊಳ್ಳಬೇಕು.
– ವಿನಯ್ ಕುಮಾರ್, ಅಗ್ರಹಾರ ಗ್ರಾಮಸ್ಥ.

ಕೆರೆ ಸಮಸ್ಯೆ ಬಗ್ಗೆ ಇದೇ ತಿಂಗಳು 8ನೇ ತಾರೀಖು ನಮಗೆ ಸಾರ್ವಜನಿಕರಿಂದ ದೂರು ಬರತ್ತೆ, ಅದೇ ದಿನ ಸಂಜೆ ನಮ್ಮ ಕಂದಾಯ ಅಧಿಕಾರಿಗಳೊಂದಿಗೆ ಹೋಗಿ ಸ್ಥಳ ಪರಿಶೀಲನೆ ನಡೆಸಿದಾಗ ಬಿರುಕು ಬಿಟ್ಟಿರುವುದು ಕಂಡು ಬಂದಿರುತ್ತದೆ. ತಕ್ಷಣ ನಾನು ಎಂಐಇಡಬ್ಲ
ಮಾಹಿತಿ ಕಳಿಸಿದ್ದೆ. ಮಾರನೇ ದಿನ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಇದು ಸಾರ್ವಜನಿಕರಿಗೆ ತಿಳಿದಿಲ್ಲ. ಈ ವಾರದಲ್ಲೇ ಒಂದು ಸಭೆಯನ್ನು ನಡೆಸಿ ಕ್ರಮ ಕೈಗೊಳ್ಳುತ್ತೇವೆಎಂದು ತಿಳಿಸಿದರು.

-ನಾಹಿದಾ ಜಮ್ ಜಮ್, ತಹಶೀಲ್ದಾರ್

ಈಗಾಗಲೇ ಅಗ್ರಹಾರ ಕೆರೆಗೆ ಬೇಟಿ ನೀಡಿ ಪರಿಶೀಲಿಸಿ ಮೊದಲ ಹಂತದಲ್ಲಿ ಏರಿ ದುರಸ್ಥಿ ಮತ್ತು ನಿರ್ವಹಣೆಗೆ 25 ಲಕ್ಷ ಹಣವನ್ನು ಇಲಾಖೆ ಬಿಡುಗಡೆ ಗೊಳಿಸಿದೆ, ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ.
– ರಮೇಶ್, ಸಣ್ಣ ನೀರಾವರಿ ಇಲಾಖೆ ಎ.ಇ.

ಕೆರೆ ನಿರ್ವಹಣೆ ಸಣ್ಣ ನೀರಾವರಿ ಇಲಾಖೆ ನಿರ್ವಹಿಸುತ್ತಿದ್ದರೂ ಪ.ಪಂ. ಕುಡಿಯುವ ಘಟಕದ ನಿರ್ವಹಣೆ ಮಾಡುತ್ತಿದೆ. ಶೀಘ್ರದಲ್ಲಿ ನಮ್ಮ ಇಲಾಖೆ ಶ್ರಮದಾನ ಮಾಡಿ ಏರಿ ಅಚ್ಚುಕಟ್ಟು ಗೊಳಿಸುವ ಕೆಲಸ ಮಾಡಲಾಗುವುದು, ಇನ್ನು ಮುಂದೆ ಸ್ವಚ್ಚತೆಗೆ ಹೆಚ್ಚು ಗಮನ ಹರಿಸುತ್ತೇವೆ.

-ಭಾಗ್ಯಮ್ಮ, ಪ.ಪಂ.ಮುಖ್ಯಾಧಿಕಾರ

– ಸಿದ್ದರಾಜು. ಕೆ ಕೊರಟಗೆರೆ

Advertisement

Udayavani is now on Telegram. Click here to join our channel and stay updated with the latest news.

Next