Advertisement

Koratagere: ಸರಕಾರಿ ಜಮೀನು, ರಾಜಕಾಲುವೆ ಒತ್ತುವರಿ ತೆರವು; ತಹಶೀಲ್ದಾರ್‌ ಕಾರ್ಯಾಚರಣೆ

10:25 PM Aug 25, 2024 | Team Udayavani |

ಕೊರಟಗೆರೆ: ಸರಕಾರಿ ಕೆರೆಕಟ್ಟೆ, ಬೆಟ್ಟಗುಡ್ಡ, ಗೋಮಾಳ ಜಮೀನು ಮತ್ತು ರಾಜಕಾಲುವೆ ಒತ್ತುವರಿ ತೆರವಿಗೆ ಕಟ್ಟುನಿಟ್ಟಾಗಿ ಸೂಚಿಸಿದ ಗೃಹಸಚಿವ ಜಿ.ಪರಮೇಶ್ವರ್‌ , ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್ ಆದೇಶದಂತೆ ಕೊರಟಗೆರೆ ತಹಶೀಲ್ದಾರ್ ಮಂಜುನಾಥ ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾದರೆ ಜಮೀನೇ ನಮ್ಮದಲ್ಲ ಎಂದು ಭೂಗಳ್ಳರು ಹೇಳುವಂತಾಗಿದೆ.

Advertisement

ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಜೆಟ್ಟಿಅಗ್ರಹಾರ ಗ್ರಾಪಂಯ ಸುವರ್ಣಮುಖಿ ನದಿ ಮತ್ತು ಜಂಪೇನಹಳ್ಳಿ ಕೆರೆಯ ಹತ್ತಾರು ಎಕರೇ ಸರಕಾರಿ ಭೂಮಿ ಭೂಗಳ್ಳರಿಂದ ಒತ್ತುವರಿಯಾಗಿದೆ. ಒತ್ತುವರಿ ತೆರವು ಮಾಡಿದರೇ ಮಾತ್ರ ಮಳೆ ನೀರು ಜಂಪೇನಹಳ್ಳಿಯ ಕೆರೆಯ ಮೂಲಕ ಸುವರ್ಣಮುಖಿ ನದಿಗೆ ಹರಿಯಲು ಸಾಧ್ಯ. ಇಲ್ಲವಾದರೇ ರೈತರ ಕೃಷಿ ಜಮೀನು ಮತ್ತು ಬಡವರ ಮನೆಗಳಿಗೆ ಮಳೆಯ ನೀರು ನುಗ್ಗಲಿದೆ.

ಮಳೆಬಂದ್ರೇ ಪಟ್ಟಣದಲ್ಲಿ ಪ್ರವಾಹ
ಕೆರೆಕಟ್ಟೆ ಮತ್ತು ಬೆಟ್ಟದ ತಪ್ಪಲಿನಿಂದ ಪಟ್ಟಣದ ಮೂಲಕ ಹಾದುಹೋಗುವ ಮಳೆನೀರಿನ ರಾಜಕಾಲುವೆಯೇ ಕಾಣೆಯಾಗಿದೆ. ಜೋರು ಮಳೆಬಂದ್ರೇ ಸಾಕು ನೀರಿಗೆ ದಾರಿಯೇ ಕಾಣದೇ ರಸ್ತೆಬದಿಯ ಅಂಗಡಿ ಮತ್ತು ಮನೆಗಳಿಗೆ ನೇರವಾಗಿ ನುಗ್ಗುತ್ತಿವೆ. ಪರಿಶೀಲನೆ ನಡೆಸಿ ಒತ್ತುವರಿ ತೆರವು ನಡೆಸಬೇಕಾದ ಪಪಂ ಸದಸ್ಯರು ಮತ್ತು ಅಧಿಕಾರಿವರ್ಗ ಮೂಕ ಪ್ರೇಕ್ಷಕವಾಗಿದೆ.

ನದಿಯ ಒತ್ತುವರಿ ತೆರವು ಸವಾಲು
ಸಿದ್ದಬೆಟ್ಟದ ತಪ್ಪಲಿನಲ್ಲಿ ಉದಯಿಸುವ ಸುವರ್ಣಮುಖಿ ನದಿಯು ಜಂಪೇನಹಳ್ಳಿಯ ಮೂಲಕ ಹರಿದು ಬೈರೇನಹಳ್ಳಿ ಸಮೀಪ ಜಯಮಂಗಲಿ ನದಿಗೆ ಸಂಗಮ ಆಗಲಿದೆ. ಕೊರಟಗೆರೆ ಪಟ್ಟಣಕ್ಕೆ ಹೊಂದಿಕೊಂಡ ಸುವರ್ಣಮುಖಿ ನದಿಯ ಮುಕ್ಕಾಲು ಭಾಗ ಒಡಲಿಗೆ ಭೂಗಳ್ಳರು ಕನ್ನಹಾಕಿದ್ದಾರೇ. ನದಿ ತುಂಬಿ ಹರಿದರೇ ಬಡವರ ಕೃಷಿ ಜಮೀನು ಕೊಚ್ಚಿಹೋಗಲಿದೆ.  ಜಿಲ್ಲಾಧಿಕಾರಿಯವರೇ ಮುಂದೆ ನಿಂತು ನದಿಯ ಒತ್ತುವರಿ ತೆರವು ಮಾಡಿಸಬೇಕಾದ ಅನಿವಾರ್ಯತೆ ಇದೆ.

Advertisement

ಡಿಸಿಗೆ ಗೃಹಸಚಿವ ಖಡಕ್ ಆದೇಶ
ಕೊರಟಗೆರೆ ಪಟ್ಟಣದಲ್ಲಿ ಮಳೆಹಾನಿ ಪರಿಶೀಲನೆ ವೇಳೆ ಗೃಹಸಚಿವ ಡಾ.ಜಿ.ಪರಮೇಶ್ವರ ಅವರಿಗೆ ಜಂಪೇನಹಳ್ಳಿ ಕೆರೆ, ಸುವರ್ಣಮುಖಿ ನದಿ ಮತ್ತು ರಾಜಕಾಲುವೆ ಒತ್ತುವರಿಗೆ ಬಗ್ಗೆ ದೂರಿದರು. ಸ್ಥಳದಲ್ಲೇ ಇದ್ದ ಜಿಲ್ಲಾಧಿಕಾರಿಯವರ  ಕರೆದು ತಕ್ಷಣ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಿ ಗೃಹಸಚಿವರು  ಸೂಚಿಸಿದರು. ಗೃಹಸಚಿವರ ನಿರ್ದೇಶನದಂತೆ ಕೊರಟಗೆರೆ ತಹಶೀಲ್ದಾರ್  ತೆರವು ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.

4487ಕಡೆ ಸರಕಾರಿ ಜಾಗ ಗುರುತು
ಸರಕಾರಿ ಗೋಮಾಳ, ಕೆರೆಕಟ್ಟೆ, ಬೆಟ್ಡಗುಡ್ಡ, ಸ್ಮಶಾನದ ಜಮೀನು, ರಾಜಕಾಲುವೆಯು ಸೇರಿ 4487ಕ್ಕೂ ಅಧಿಕ ಸರ್ವೆ ನಂಬರಿನ ಸರಕಾರಿ ಜಮೀನು ಗುರುತಿಸಿ ಲ್ಯಾಂಡ್‍ಬೀಟ್ ತಂತ್ರಾಂಶದಲ್ಲಿ ಅಡಕವಾಗಿದೆ. ಕಂದಾಯ, ಸರ್ವೆ, ಪೊಲೀಸ್, ಸಣ್ಣ ನೀರಾವರಿ ಇಲಾಖೆ, ಪಪಂ ಮತ್ತು ಗ್ರಾಪಂ ಅಧಿಕಾರಿಗಳ ನೇತೃತ್ವದಲ್ಲಿ ಪ್ರತಿ ತಿಂಗಳು, ಪ್ರತಿವಾರವು ಸರ್ವೆ ಕೆಲಸ ನಡೆಯಲಿದೆ.

ಹಂತ ಹಂತವಾಗಿ ತೆರವು
“ಗೃಹಸಚಿವರ ಆದೇಶದಂತೆ ಸರಕಾರಿ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ  6 ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಆಗುತ್ತಿದೆ. ಪ್ರಸ್ತುತ ಜಂಪೇನಹಳ್ಳಿ ಕೆರೆ ಮತ್ತು ಗೋಕಟ್ಟೆಯ ಒತ್ತುವರಿ ತೆರವು ಆಗಿದೆ. ಸುವರ್ಣಮುಖಿ ನದಿ, ರಾಜಕಾಲುವೆ, ಸರಕಾರಿ ಗೋಮಾಳ, ಕೆರೆಕಟ್ಟೆ ಮತ್ತು ಸ್ಮಶಾನಗಳ ಒತ್ತುವರಿ ತೆರವು ಹಂತ ಹಂತವಾಗಿ ಮಾಡೇ ಮಾಡ್ತಿವಿ.”
– ಮಂಜುನಾಥ.ಕೆ. ಕೊರಟಗೆರೆ, ತಹಸೀಲ್ದಾರ್ 

Advertisement

Udayavani is now on Telegram. Click here to join our channel and stay updated with the latest news.

Next