Advertisement

ಕಾಲುವೆ ಕಾರ್ಯಾಚರಣೆ ಶೇ. 80ರಷ್ಟು ಯಶಸ್ವಿ

01:21 PM Aug 17, 2019 | Naveen |

ಕೊಪ್ಪಳ: ತುಂಗಭದ್ರಾ ಜಲಾಶಯದ ಎಡದಂಡೆ ಮೇಲ್ಮಟ್ಟದ ಕಾಲುವೆ ಕಿತ್ತು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ನಾಲ್ಕು ದಿನಗಳಿಂದ ಕಾರ್ಯಾಚರಣೆ ನಡೆಸಿದ್ದು, ಶುಕ್ರವಾರ ಸಂಜೆ ವೇಳೆ ಶೇ. 80ರಷ್ಟು ಕಾರ್ಯಾಚರಣೆ ಯಶಸ್ವಿಯಾಗಿದ್ದು, ಅಧಿಕಾರಿ ವರ್ಗ ಹಾಗೂ ಜನ ನಾಯಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Advertisement

ತುಂಗಭದ್ರಾ ಡ್ಯಾಂಗೆ ಈ ವರ್ಷ ಭಾರಿ ಪ್ರಮಾಣದಲ್ಲಿ ಒಳ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಡ್ಯಾಂನಲ್ಲಿ ಆ. 13ರೊಳಗೆ 90 ಟಿಎಂಸಿಯಷ್ಟು ನೀರು ಸಂಗ್ರಹವಾಗಿತ್ತು. ನದಿಪಾತ್ರದಡಿ ಮಳೆ ಸುರಿದ ಹಿನ್ನೆಲೆಯಲ್ಲಿ ಒಳ ಹರಿವಿನ ಪ್ರಮಾಣವೂ 2 ಲಕ್ಷ ಕ್ಯೂಸೆಕ್‌ಗೂ ಹೆಚ್ಚಾಗಿತ್ತು. ಹಾಗಾಗಿ ನೀರಾವರಿ ಇಲಾಖೆ ಅಧಿಕಾರಿಗಳು ನೀರನ್ನು ನದಿಪಾತ್ರಗಳಿಗೆ ಹರಿ ಬಿಟ್ಟಿದ್ದರು. ಆದರೂ ಡ್ಯಾಂ ಎಡದಂಡೆ ಮೇಲ್ಮಟ್ಟದ ಕಾಲುವೆ ಗೇಟ್ ಸರಿಯಾದ ನಿರ್ವಹಣೆ ಇಲ್ಲದೇ ಮುರಿದು ಹೋದ ಹಿನ್ನೆಲೆಯಲ್ಲಿ ಡ್ಯಾಂನಿಂದ ಆ. 13ರಂದು ಬೆಳಗ್ಗೆ 8:30ಕ್ಕೆ ಅತ್ಯಧಿಕ ಪ್ರಮಾಣದಲ್ಲಿ ನೀರು ಹರಿಯುತ್ತಿತ್ತು. ಇದರಿಂದ ಆತಂಕಗೊಂಡ ಅಧಿಕಾರಿ ವರ್ಗ ಮೊದಲ ದಿನವೇ ನೀರು ನಿಲ್ಲಿಸುವ ಪ್ರಯತ್ನ ನಡೆಸಿ ವಿಫಲವಾಗಿತ್ತು. ಇದು ಸುತ್ತಲಿನ ಅಚ್ಚುಕಟ್ಟು ಪ್ರದೇಶದ ರೈತರಲ್ಲೂ ಆತಂಕ ಮೂಡಿಸಿದ್ದಲ್ಲದೇ, ಈ ಬಾರಿ ಕಾಲುವೆಗೆ ನೀರು ಹರಿದು ಬರುತ್ತದೆಯೋ ಇಲ್ಲವೋ ಎನ್ನುವ ಆತಂಕ ವ್ಯಕ್ತಪಡಿಸಿದ್ದರು.

ಕಾರ್ಯಾಚರಣೆಯಲ್ಲಿದ್ದ ತಂಡ: ಗೇಟ್ ಮುರಿದು ಹೋದ ವಿಷಯ ತಿಳಿಯುತ್ತಿದ್ದಂತೆ ನೀರಾವರಿ ನಿಗಮದ ಎಂಡಿ ಮಲ್ಲಿಕಾರ್ಜುನ ಗುಂಗೆ, ಸಿಇ ಮಂಜಪ್ಪ ಸ್ಥಳದಲ್ಲೇ ಠಿಕಾಣಿ ಹೂಡಿ ಹಲವು ಕಾರ್ಯತಂತ್ರಗಳ ಕುರಿತು ಯೋಜನೆ ರೂಪಿಸುತ್ತಿದ್ದರು. ಗೇಟ್‌ನ ಭಾಗದಲ್ಲಿ ಕೈಗೊಳ್ಳುವ ಕಾರ್ಯದ ಕುರಿತು ಚರ್ಚೆ ನಡೆಸಿದ್ದರು. ಇವರೊಂಡಿಗೆ ಬೆಳಗಾವಿ ಮುಳುಗು ತಜ್ಞರ ತಂಡ, ಜಿಂದಾಲ್ ತಜ್ಞರ ತಂಡ ಸೇರಿದಂತೆ ತುಂಗಭದ್ರಾ ಸ್ಟೀಲ್ ಪ್ರೊಡೆಕ್ಟ್ ತಂಡವು ನಿರಂತರ ಕಾರ್ಯಾಚರಣೆ ನಡೆಸಿ ಒಂದು ಹಂತಕ್ಕೆ ಯಶಸ್ವಿ ಕಂಡಿದೆ.

ನಾಲ್ಕು ದಿನಗಳಿಂದ ನಡೆದ ಕಾರ್ಯಾಚರಣೆಯಲ್ಲಿ ಶುಕ್ರವಾರ 100 ಟನ್‌ ಸಾಮರ್ಥ್ಯದ ಕ್ರೇನ್‌ ಮೂಲಕ 12 ಟನ್‌ ಮರಳಿನ ಮೂಟೆಯನ್ನು ನೀರು ಹರಿಯುವ ಸ್ಥಳದಲ್ಲಿ ಇಳಿ ಬಿಟ್ಟಿದ್ದೆವು. ಇದರಲ್ಲಿ ಶೇ. 70ರಿಂದ 80ರಷ್ಟು ನಾವು ಯಶಸ್ವಿಯಾಗಿದ್ದೇವೆ. ಡ್ಯಾಂನಲ್ಲಿ ಅಧಿಕ ನೀರಿರುವುದರಿಂದ ಶೇ. 100ರಷ್ಟು ಯಶಸ್ವಿ ಸಾಧ್ಯವಿಲ್ಲ. ಈಗ ನೀರು ಹರಿಯುವ ಪ್ರಮಾಣ ಕಡಿಮೆಯಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ಮಾಡಿಸಲಿದ್ದೇನೆ.
ಮಲ್ಲಿಕಾರ್ಜುನ ಗುಂಗೆ
 ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next