Advertisement

ಮಂಗಳಮುಖೀಯರಿಂದ ರಾಕಿ ಕಟ್ಟಿ ಜಾಗೃತಿ

06:11 PM Apr 07, 2020 | Naveen |

ಕೊಪ್ಪಳ: ನಗರದಲ್ಲಿ ಅನಗತ್ಯವಾಗಿ ಸಂಚರಿಸುವವರಿಗೆ ಮಂಗಳಮುಖೀಯರು ಹಣೆಗೆ ಕುಂಕುಮ ಹಚ್ಚಿ, ರಕ್ಷಾ ಬಂಧನ ಕಟ್ಟುವ ಮೂಲಕ ಮನೆಯಲ್ಲಿಯೇ ಇದ್ದು, ಕೊರೊನಾ ವೈರಸ್‌ ಹೊಡೆದೋಡಿಸಿ ಅಣ್ಣಂದಿರಾ ಎಂದು ಜಾಗೃತಿ ಮೂಡಿಸಿದರು.

Advertisement

ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಆದರೂ ಜನರು ಬೈಕ್‌ಗಳಲ್ಲಿ ಸಂಚಾರ ನಡೆಸುತ್ತಿದ್ದಾರೆ. ಪೊಲೀಸರು ಹಲವು ಬಾರಿ ಎಚ್ಚರಿಸಿ ಬೇಸತ್ತಿದ್ದಾರೆ. ಕೆಲವು ಬಾರಿ
ಲಾಠಿ ರುಚಿ ತೋರಿಸಿದ್ದಾರೆ. ಇಷ್ಟಾದರೂ ಜನರು ಸಂಚಾರ ಮಾಡುವುದನ್ನು ಬಿಡುತ್ತಿಲ್ಲ. ಕೆಲವು ದಿನಗಳ ಹಿಂದೆ ಪೊಲೀಸರೇ ಜನರಿಗೆ ಕುಂಕುಮ ಹಚ್ಚಿ, ಮಂಗಳಾರತಿ ಮಾಡಿದ್ದರು. ಇನ್ನು ಜನರಿಗೆ ಈಡುಗಾಯಿ ದೃಷ್ಟಿ ತೆಗೆದು ಮನೆಯಲ್ಲಿಯೇ ಇರಿ, ರಸ್ತೆಗೆ ಇಳಿಯಬೇಡಿ ಎಂದು ಮನವಿ ಮಾಡಿದ್ದರು.

ಇಷ್ಟಾದರೂ ಜನರ ಸಂಚಾರ ಮಾತ್ರ ನಿಂತಿಲ್ಲ. ಸೋಮವಾರ ಇದನ್ನರಿತ ಮಂಗಳ ಮುಖೀಯರು
ಕೆಲ ಸ್ವಯಂಸೇವಕರ ಜೊತೆಗೆ ರಸ್ತೆಗಿಳಿದು ಬೈಕ್‌ ಸವಾರರನ್ನು ತಡೆದು ರಕ್ಷಾ ಬಂಧನ ಕಟ್ಟಿ ದಯವಿಟ್ಟು ಮನೆಯಲ್ಲಿಯೇ ಇರಿ ಅಣ್ಣಂದಿರಾ..ಕೊರೊನಾ ಸೋಂಕು ದೂರ ಮಾಡಬೇಕೆಂದರೆ
ಮನೆ ಬಿಟ್ಟು ಹೊರಗಡೆ ಬರಬೇಡಿ ಎಂದು ಮನವಿ ಮಾಡಿದರು. ಇದರಿಂದ ಮುಜುಗುರಕ್ಕೊಳಗಾದ ಬೈಕ್‌ ಸವಾರರು ರಸ್ತೆಗಿಳಿಯುವುದಿಲ್ಲ ಎಂದು ಹೇಳಿ ಮುಂದೆ ಸಾಗಿದರು. ಇನ್ನೂ ಡಿಸಿ ಸುನೀಲ್‌ ಕುಮಾರ ಅವರೇ ಸೋಮವಾರ ರಸ್ತೆಗಳಿದು ವಿವಿಧೆಡೆ ಚೆಕ್‌ಪೋಸ್ಟ್‌ ತಪಾಸಣೆ ನಡೆಸಿದರಲ್ಲದೇ, ರಸ್ತೆಯಲ್ಲಿ ಅನಗತ್ಯ ಸುತ್ತಾಟ ನಡೆಸುವವರನ್ನು ತರಾಟೆ ತೆಗೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next