Advertisement

ಕರಡಿ ಕಾಟಕ್ಕೆ ಜನ ಕಕ್ಕಾಬಿಕ್ಕಿ…!

01:18 PM Jul 04, 2019 | Naveen |

ಕೊಪ್ಪಳ: ತಾಲೂಕಿನ ಹನುಕುಂಟಿ ಭಾಗದಲ್ಲಿ ಇತ್ತೀಚೆಗೆ ಚಿರತೆ ಕಾಣಿಸಿಕೊಂಡಿದೆ ಎನ್ನುವ ವದಂತಿ ಹರಡಿವೆ. ಕೆಲವರು ಅಳವಂಡಿ ಪೊಲೀಸ್‌ ಠಾಣೆಗೂ ಮಾಹಿತಿ ನೀಡಿದ್ದಾರೆ. ಹನುಕುಂಟಿ ಭಾಗದಲ್ಲಿ ಖಾಸಗಿ ಡೈರಿ ಫಾರಂ ಇದೆ. ಅಲ್ಲಿ ಹಲವು ಹಸುಗಳನ್ನು ಸಾಕಾಣಿಕೆ ಮಾಡಲಾಗುತ್ತಿದೆ. ಈ ಭಾಗದಲ್ಲಿ ಚಿರತೆ ಕಾಣಿಸಿಕೊಂಡಿದೆ ಎನ್ನುವ ಮಾಹಿತಿ ಕೇಳಿ ಬಂದಿದೆ. ಸಿಸಿ ಟಿವಿಯಲ್ಲಿ ಅಂತಹ ಸಣ್ಣದೊಂದು ದೃಶ್ಯವಿದ್ದು ಈ ಕುರಿತು ಸ್ಥಳೀಯರು ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಸಹ ಅಲ್ಲಿಗೆ ಭೇಟಿ ನೀಡಿ ಹೆಜ್ಜೆ ಗುರುತುಗಳನ್ನು ಪರಿಶೀಲಿಸಿದ್ದು, ಆದರೆ ಅವು ಚಿರತೆ ಹೆಜ್ಜೆ ಗುರುತುಗಳು ಎಂಬುದನ್ನು ಅಲ್ಲಗಳೆದಿದ್ದಾರೆ. ನಮಗೂ ಈ ಬಗ್ಗೆ ಮಾಹಿತಿ ಬಂದಿತ್ತು. ನಮ್ಮ ಸಿಬ್ಬಂದಿ ಅಲ್ಲಿಗೆ ಭೇಟಿ ನೀಡಿ ಬಂದಿದ್ದಾರೆ. ಅಂತಹ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ನಿರಾಕರಿಸಿದ್ದಾರೆ.

Advertisement

ಇನ್ನೂ ಸ್ಥಳೀಯರು ಹೇಳುವ ಪ್ರಕಾರ, ಹನುಕುಂಟಿ ಭಾಗದಲ್ಲಿ ರೈತರು ದನಗಳನ್ನು ಹೊಲದಲ್ಲೇ ಕಟ್ಟುತ್ತಾರೆ. ಇನ್ನು ಇಲ್ಲೊಂದು ಡೈರಿ ಫಾರಂ ಇದೆ. ಇತ್ತೀಚೆಗೆ ಚಿರತೆ ಬಂದಿದ್ದ ಸಂದರ್ಭದಲ್ಲಿ ದನಗಳು ಗಡಬಡಿಸುವುದು. ಬೆದರುವುದು. ನಾಯಿ ಕೂಗುವ ಶಬ್ಧಗಳು ಕೇಳಿ ಬಂದಿವೆ. ಇದನ್ನೆಲ್ಲ ಗಮನಿಸಿದರೆ ಕಾಡು ಪ್ರಾಣಿ ಬಂದಿರುವ ಹಾಗೆ ಕಾಣುತ್ತದೆ ಎನ್ನುವ ಮಾತನ್ನಾಡುತ್ತಿದ್ದಾರೆ. ಈ ಕುರಿತು ಅಳವಂಡಿ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದು, ಪಿಎಸ್‌ಐ ಸಹಿತ ಈ ಬಗ್ಗೆ ಪರಿಶೀಲನೆ ಮಾಡುವ ಕುರಿತು ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ.

ಕೊಪ್ಪಳ: ನಗರದಲ್ಲಿ ಮೊಟ್ಟ ಮೊದಲ ಬಾರಿಗೆ ಕರಡಿ ಕಾಣಿಸಿಕೊಳ್ಳುವ ಮೂಲಕ ಜನತೆಯಲ್ಲಿ ಆತಂಕ ಸೃಷ್ಟಿಸಿದೆ. ಇಲ್ಲಿನ ಎಪಿಎಂಸಿ, ಮಾರುಕಟ್ಟೆ ಸೇರಿ ಇತರೆಡೆ ಸುತ್ತಾಡಿ ಜನರಲ್ಲಿ ಆತಂಕ ಮೂಡಿಸಿತ್ತು. ಅರಿವಳಿಕೆ ತಜ್ಞರು, ಪೊಲೀಸ್‌ ತಂಡ, ಅರಣ್ಯ ಇಲಾಖೆ ಸಿಬ್ಬಂದಿ 5 ಗಂಟೆಗಳ ಕಾರ್ಯಾಚರಣೆಯಿಂದ ಕರಡಿ ಸೆರೆ ಹಿಡಿದರು.

ಬುಧವಾರ ವನ್ಯ ಜೀವಿ ಕರಡಿ ನಗರದೆಲ್ಲೆಡೆ ಓಡಾಡಿದ ಸದ್ದು ಕೇಳಿ ಬೆಚ್ಚಿ ಬಿದ್ದಿದ್ದರು. ಏನಪ್ಪಾ ಇದು ಕಾಡಿನಲ್ಲಿರುವ ಪ್ರಾಣಿ ನಾಡಿಗೆ ದಾಳಿಯಿಟ್ಟಿದೆ. ಜನರ ಮೇಲೆ ದಾಳಿ ಮಾಡಿ ಹಾನಿ ಮಾಡಿದರೆ ಹೇಗೆ ಎಂಬ ಚಿಂತೆಯಲ್ಲಿದ್ದರು. ಇನ್ನೊಂದೆಡೆ ಕರಡಿ ನಗರದ ವಿವಿಧೆಡೆ ಓಡಾಡುತ್ತಿರುವುದನ್ನು ಗಮನಿಸಿದ ಜನತೆ ಅದರ ಹಿಂದೆಯೇ ಬೆನ್ನು ಹತ್ತಿ ಮೊಬೈಲ್ನಲ್ಲಿ ದೃಶ್ಯ ಸೆರೆ ಹಿಡಿದರು.

ತಾಲೂಕಿನ ಚಿಲಕಮುಖೀ, ಚಾಮಲಾಪೂರ, ಸೂಳಿಕೇರಿ ಸೇರಿದಂತೆ ಇರಕಲ್ಗಡಾ ಭಾಗದಲ್ಲಿ ಕರಡಿಗಳ ಹಾವಳಿ ವಿಪರೀತವಾಗಿದೆ. ಈ ಹಿಂದೆ ಹಲವು ರೈತರ ಮೇಲೆ ಹಗಲು ವೇಳೆಯಲ್ಲೇ ಕರಡಿ ದಾಳಿ ಮಾಡಿದ್ದವು. ಜನರು ಕರಡಿ ದಾಳಿಗೆ ತುತ್ತಾಗಿ ಚಿಕಿತ್ಸೆ ಪಡೆದ ಉದಾಹರಣೆ ಇವೆ. ಆದರೆ ಅರಣ್ಯ ಪ್ರದೇಶದಲ್ಲಿ ಸತತ ಮೂರು ವರ್ಷಗಳಿಂದ ಮಳೆಯ ಕೊರತೆಯಿಂದ ವನ್ಯ ಪ್ರಾಣಿಗಳಿಗೆ ಆಹಾರ ಇಲ್ಲದಂತಾಗಿ ನಾಡಿನತ್ತ ಮುಖ ಮಾಡುತ್ತಿವೆ. ಎನ್ನುವ ಮಾತು ಅಧಿಕಾರಿ ವಲಯದಿಂದಲೇ ಕೇಳಿ ಬಂದವು.

Advertisement

ಬೆಳಗ್ಗೆ ನಗರದ ಎಪಿಎಂಸಿ ಆವರಣದಲ್ಲಿ ಕಾಣಿಸಿಕೊಂಡಿದ್ದ ಕರಡಿ ಬಳಿಕ ಜಾಲಿಗಿಡದ ಪೊದೆಯಲ್ಲಿ ಅವಿತು ಕುಳಿತಿತ್ತು. ಜನತೆ ಕಲ್ಲು, ಕಟ್ಟಿಗೆ ಎಸೆದ ಕಾರಣ ಮತ್ತೆ ಎಪಿಎಂಸಿ ಆವರಣದಲ್ಲಿ ಸುತ್ತಾಡಿತು. ಜನರ ಗುಂಪು ಹೆಚ್ಚಾಗುತ್ತಿದ್ದಂತೆ ಕರಡಿ ಜೀವ ಭಯಕ್ಕೆ ವಿವಿಧ ಓಣಿಗಳಲ್ಲಿ ಓಡಾಟ ನಡೆಸಿತು. ಕರಡಿ ಬಂತು ಕರಡಿ ಎಂದು ಜನ ಭಯ ಪಡುತ್ತಲೇ ಮನೆ ಸೇರಿದರು. ಇನ್ನೂ ಕೆಲವರು ಕರಡಿ ಹಿಂದೆಯೇ ಹೋಗಿ ಮೊಬೈಲ್ನಲ್ಲಿ ಫೋಟೋ, ವೀಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟರು. ಇದರಿಂದ ಮತ್ತಷ್ಟು ಜನ ಕರಡಿ ವೀಕ್ಷಣೆಗೆ ಸ್ಥಳಕ್ಕೆ ಓಡೋಡಿ ಬಂದರು.ಜನರ ನಿಯಂತ್ರಣಕ್ಕೆ ಸಾಹಸ: ಇಲ್ಲಿನ ಈಶ್ವರ ಪಾರ್ಕ್‌ನಲ್ಲಿ ಕರಡಿ ಓಡಾಟ ನಡೆಸಿದೆ. ಅದರ ಹಿಂದೆಯೇ ಜನರು ಓಡಾಟ ಮಾಡಿದ್ದರಿಂದ ಕರಡಿ ಆರ್ಭಟಿಸುತ್ತಲೇ ನಾಯಿ ಮೇಲೆ ದಾಳಿ ಮಾಡಿತು. ಜನರ ಮೇಲೂ ದಾಳಿ ಮಾಡುವ ಪ್ರಯತ್ನ ಮಾಡಿತಾದರೂ ಜನತೆ ಸ್ವಲ್ಪ ಅಂತರದಲ್ಲಿಯೇ ಪಾರಾಗುತ್ತಿದ್ದರು. ಇನ್ನೂ ಪೇದೆಯ ಮೇಲೆ ದಾಳಿ ಮಾಡುವ ಪ್ರಯತ್ನ ನಡೆಯಿತು. ನಂತರ ಎಸಿಬಿ ಕಚೇರಿ ಪಕ್ಕದಲ್ಲಿಯೇ ಹಲವು ನ್ಯಾಯಾಧಿಧೀಶರ ಸರ್ಕಾರಿ ನಿವಾಸಗಳಿದ್ದು, ಅಲ್ಲೆ ಕಾರು ಪಾರ್ಕಿಂಗ್‌ ಸ್ಥಳದಲ್ಲಿ ಅವಿತು ಕುಳಿತ್ತಿತ್ತು. ಅಷ್ಟರೊಳಗೆ ಜನದಟ್ಟಣೆ ಹೆಚ್ಚಾದ ಕಾರಣ ಪೊಲೀಸರು ಸ್ಥಳಕ್ಕಾಗಮಿಸಿ ಕರಡಿಗಿಂತ ಜನರನ್ನು ನಿಯಂತ್ರಣ ಮಾಡುವಲ್ಲೇ ಸುಸ್ತಾದರು. ಪೊಲೀಸರು ಜನರತ್ತ ಲಾಠಿ ಬೀಸಿ ಗುಂಪು ಚದುರಿಸುವ ಪ್ರಯತ್ನ ಮಾಡಿದರು.

ಹಂದಿ ಹಿಡಿಯುವ ಬಲೆ ಬಳಕೆ: ಕರಡಿ ನಗರದಲ್ಲಿ ಸುತ್ತಾಡಿದ್ದರಿಂದ ಅರಣ್ಯ ಇಲಾಖೆ ಸಿಬ್ಬಂದಿ ಈಶ್ವರ ಪಾರ್ಕ್‌ನತ್ತ ಬಂದಿದ್ದರೂ ಕರಡಿ ಸೆರೆ ಹಿಡಿಯಲು ಅವರ ಬಳಿ ಯಾವುದೇ ಸಾಧನಗಳಿರಲಿಲ್ಲ. ಕರಡಿ ಹಿಡಿಯಲು ತಮ್ಮ ಬಳಿ ಏನೂ ಇಲ್ಲ ಎಂಬ ಭಾವನೆ ಸ್ಥಳದಲ್ಲಿಯೇ ಜನರಿಗೆ ಕಾಣಿಸಿತು. ಅವರ ಬಳಿ ಬಲೆ, ಬೋನ್‌ ಸೇರಿದಂತೆ ಮುಂಜಾಗ್ರತಾ ಕ್ರಮಕ್ಕೆ ಬೇಕಾದ ಸಾಮಗ್ರಿಗಳೇ ಇರಲಿಲ್ಲ. ಕೊನೆಗೆ ಹಂದಿ ಹಿಡಿಯುವ ಬಲೆಯಲ್ಲೇ ಕರಡಿ ಹಿಡಿದರು.

ಅರಿವಳಿಕೆ ಔಷಧಿ ಸಿಡಿಸಿದರು: ಗದಗ ಜಿಲ್ಲೆಯ ಬಿಂಕದಕಟ್ಟೆಯಿಂದ ಪಶುಪಾಲನಾ ಇಲಾಖೆ ಸಹಾಕ ನಿಖೀಲ್, ಹಂಪಿಯ ರಮೇಶ ತಂಡವು ಆಗಮಿಸಿ ಕರಡಿಗೆ ಪ್ರಜ್ಞೆ ತಪ್ಪಿಸುವ ಅರಿವಳಿಕೆ ಔಷಧಿಯನ್ನು ಗುರಿಯಿಟ್ಟು ಹೊಡೆಯುವ ಮೂಲಕ ಕರಡಿ ಬಲೆಗೆ ಬೀಳುವಂತೆ ಮಾಡಿದರು. ಮೊದಲು ಪ್ರಯೋಗಿಸಿದ ಅರಿವಳಿಕೆ ಔಷಧ ಬಲೆಗೆ ಬಿದ್ದು ಕರಡಿಗೆ ನಾಟಲಿಲ್ಲ. ಹಾಗಾಗಿ ತಕ್ಷಣ ಎರಡನೇ ಸೂಜಿ ಹೊಡೆಯುವ ಮೂಲಕ ಕರಡಿ ಹಿಡಿಯುವ ಪ್ರಯತ್ನ ನಡೆಸಿದರು. ಆದರೂ ಕರಡಿಯ ಆರ್ಭಟ ಜೋರಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next