Advertisement

ಗಾನ ಗಂಗ: ಈಕೆ ಜ್ಯೂನಿಯರ್‌ ಎಸ್‌. ಜಾನಕಿ

03:47 PM Aug 04, 2018 | |

ಬದುಕಿನುದ್ದಕ್ಕೂ ನೂರಾರು ಸಂಕಷ್ಟ ಎದುರಿಸಿದಾಗಲೂ ಸಾಂತ್ವನ ಹೇಳುತ್ತಿದ್ದದ್ದು ಮನದೊಳಗೆ ಗುನುಗುತ್ತಿದ್ದ ಹಾಡುಗಳೇ.  ನಾನು ಗಾಯಕಳಾಗಬೇಕು ಅನ್ನುತ್ತಿದ್ದಳು ಆಕೆ. ಈ ಮಾತು ಕೇಳಿದವರೆಲ್ಲ ಅವಳನ್ನು ವ್ಯಂಗ್ಯದಿಂದ ನೋಡಿ, ಅಂತ ಕೇಳಿದವರೆಲ್ಲಾ ನಕ್ಕು ಮುಂದೆ ಹೋಗುತ್ತಿದ್ದರು. ಕಾರಣ, ಗಂಗಮ್ಮ ಕೂಲಿ ನಾಲಿ ಮಾಡಿ ಬದುಕುತ್ತಿದ್ದಳು. 

Advertisement

ಇವತ್ತು ಅದೇ ಗಾಯನದ ಮೂಲಕ ರಾಜ್ಯಾದ್ಯಂತ ಹೆಸರಾಗಿರುವ ಕೊಪ್ಪಳದ ಈ ಗಂಗಮ್ಮಗೆ ಜ್ಯೂನಿಯರ್‌ ಜಾನಕಿ ಅನ್ನೋ ಬಿರುದು ಸಿಕ್ಕಿದೆ. ಹಾಗಂತ, ಮಧುರ ಹಾಡುಗಾರ್ತಿ ಗಂಗಮ್ಮನ ಜೀವನ ಮಧುರವಾಗೇನೂ ಇಲ್ಲ.  ಕೊಪ್ಪಳದ ಅಂಬೇಡ್ಕರ್‌ ನಗರದ ಯಮನೂರಪ್ಪ, ಹನುಮವ್ವ ದೊಡ್ಡಮನಿ ದಂಪತಿಯ ಮೊದಲ ಪುತ್ರಿ ಈಕೆ.  ಚಿಕ್ಕಂದಿನಿಂದಲೇ ಗಾಯನದ ಕಡೆ ಒಲವು ಇತ್ತು.  ತಂದೆ ಕೊಪ್ಪಳದ ಚಿತ್ರ ಮಂದಿರದಲ್ಲಿ ಕೆಲಸ ಮಾಡುತ್ತಿದ್ದರು. ಜೊತೆಗೆ ಬಯಲಾಟ, ದೊಡ್ಡಾಟಗಳಲ್ಲಿ ಅಭಿನಯಿಸುತ್ತಿದ್ದರು. ಹಾರೊ¾àನಿಯಂ ನುಡಿಸುತ್ತಿದ್ದರು. ಭಜನೆಯ ಮೇಲೆ ಅಪಾರ ಪ್ರೀತಿ ಇತ್ತು. ಅಪ್ಪನ ಸಂಗೀತ ಮೋಹಿಗುಣಗಳು ಗಂಗಮ್ಮನಿಗೂ ಬಂದು  ಸಂಗೀತದ ಕಡೆ ಒಲವಾಯಿತು. ಯಾವ ಮಟ್ಟಿಗೆ ಎಂದರೆ,  ಯಾರಾದರೂ ಹಾಡಿದರೆ ಗಂಗಮ್ಮ ಅತ್ತ ಚಿತ್ತವಿಟ್ಟು ಪೂರ್ಣ ಹಾಡು ಆಲಿಸಿ, ತಕ್ಷಣ ಕಲಿತೇ ಬಿಡುತ್ತಿದ್ದಳು. 

ಗಂಗಮ್ಮ ಹೆಚ್ಚೇನೂ ಒದಿಕೊಂಡಿಲ್ಲ. ಕೊಪ್ಪಳದಲ್ಲಿ 4ನೇ ತರಗತಿ ಓದಿದ್ದಾಳೆ. ಆಗೆಲ್ಲ, ದೊಡ್ಡಮನಿ ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯೋದು.  ಗಂಗಮ್ಮನ ಪ್ರಜ್ಞೆಯೆಲ್ಲವೂ ಅಲ್ಲೇ ಇರುತ್ತಿತ್ತು.  ಪುಸ್ತಕದಲ್ಲಿನ ಹಾಡುಗಳನ್ನೇ ಮನೆಯಲ್ಲಿ ಗುನುಗುತ್ತಿದ್ದಳು. ಓಣಿಯಲ್ಲಿ ಸಂಗೀತ ಕಾರ್ಯಕ್ರಮವಾದರೆ ಸಾಕು; ಎಲ್ಲ ಕೆಲಸವನ್ನು ಬಿಟ್ಟು ಅಲ್ಲಿ ಹೋಗಿ ಕೂರುತ್ತಿದ್ದಳು. ಇದನ್ನು ಗಮನಿಸಿದ ಹೆತ್ತವರು, ಸಂಗೀತ ಶಾಲೆಗೆ ಸೇರಿಸಿದ್ದರು.  ಆದರೆ ನಿರಂತರ ಕಲಿಕೆ ಸಾಧ್ಯವಾಗಲಿಲ್ಲ. ಬಡತನ ಅಡ್ಡಗಾಲಾಕಿತು ಎಂದು ಗಂಗಮ್ಮಳ ತಾಯಿ ಹನುಮವ್ವ ದೊಡ್ಡಮನಿ ಬೇಸರದಿಂದಲೇ ಹೇಳುತ್ತಾರೆ. 

ಗಂಗಮ್ಮನಿಗೆ ಬಾಲ್ಯದಲ್ಲೇ ವಿವಾಹ ಮಾಡಿ, ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಚಿಕ್ಕ ಮ್ಯಾಗೇರಿ ಗ್ರಾಮಕ್ಕೆ ಕೊಟ್ಟರು. ಕೆಲವು ವರ್ಷಗಳ ಬಳಿಕ ತವರು ಮನೆಯಲ್ಲೇ ಜೀವನ ನಡೆಸಬೇಕಾಯಿತು. ಆಗ ತವರಲ್ಲಿ ಬಡ‚ತನದ ಬೇಗೆ.  ಕೊಪ್ಪಳದಲ್ಲೇ ನೆಲೆಸಿ, ತಾಯಿ ಜೊತೆ ಹೊಲದಲ್ಲಿ  50, 100 ರೂ.ಗೆ ಕೂಲಿ ಮಾಡುತ್ತಿದ್ದರು. ಅದರಲ್ಲೇ ಬದುಕು. ಹೊಲಗಳಲ್ಲಿ ಕಳೆ ತೆಗೆಯುವುದು, ಕಸಗುಡಿಸುವುದು, ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾಗಲೇ ಹಾಡುತ್ತಿದ್ದರು. ಇತರೇ ಕೂಲಿ ಕಾರ್ಮಿಕರು ತಮ್ಮ ಕೆಲಸವನ್ನೆಲ್ಲಾ ಬಿಟ್ಟು ಈಕೆಯ ಹಾಡಿನತ್ತ ಕಿವಿಗೊಡುತ್ತಿದ್ದರು. ಹೀಗೆ ಎಲ್ಲರ ಗಮನ ಸೆಳೆಯುವ ಶಕ್ತಿ ಗಂಗಮ್ಮನ ಕಂಠಕ್ಕಿತ್ತು. 

ಈಗಿನಂತೆ ಆಗ ಹಾಡಲು ಸೌಕರ್ಯಗಳೂ ಇರಲಿಲ್ಲ.  ಈಕೆ ಓದಿದ್ದೇ ನಾಲ್ಕನೇ ತರಗತಿ. ಹೀಗಾಗಿ  ಸಿನಿಮಾ ಹಾಡು ಹಾಡಬೇಕೆಂದರೆ ನಾಲ್ಕಾರು ಬಾರಿ ಕೇಳಿ, ಮನನ ಮಾಡಿಕೊಂಡು ಮಾಳಿಗೆಯ ಮೇಲೆ ಕುಳಿತು ಕಂಠಪಾಟ ಮಾಡಿಕೊಳ್ಳುತ್ತಿದ್ದಳಂತೆ.  ಆ ಬಳಿಕ ವೇದಿಕೆ, ಸಮಾರಂಭಗಳಲ್ಲಿ ಸುಮಧುರವಾಗಿ ಹಾಡಿ  ಎಲ್ಲರ ಗಮನ ಸೆಳೆಯುತ್ತಿದ್ದಳು. ಎಂಥ ಸಂಕಷ್ಟದ ಪರಿಸ್ಥಿತಿ ಬಂದರೂ ಗಂಗಮ್ಮ ತನ್ನ ಹಾಡುಗಾರಿಕೆ ನಿಲ್ಲಿಸಲಿಲ್ಲ ಎನ್ನುತ್ತಾರೆ ಕುಟುಂಬವರು. 

Advertisement

ದಶಕದ ಹಿಂದೆ ಕೊಪ್ಪಳಕ್ಕೆ ಆರ್ಕೆಸ್ಟ್ರಾ ಬಂತೆಂದರೆ ಸಾಕು, ಸುಮ್ಮನೆ ಅವರು ಹಾಡುವ ಶೈಲಿಯನ್ನೇ ಕೇಳುತ್ತಿದ್ದ ಗಂಗಮ್ಮ, ಅದನ್ನು ಮನನ ಮಾಡಿಕೊಂಡು ಮನೆಯಲ್ಲಿ ಅದೇ ರೀತಿ ಹಾಡುತ್ತಿದ್ದಳು. ಆರ್ಕೆಸ್ಟ್ರಾ ತಂಡದಲ್ಲಿ ಹಾಡಲು ನನಗೂ ಅವಕಾಶ ಕೊಡಿ ಎಂದು ಕೇಳಿದ್ದೂ ಉಂಟು. ಆರಂಭದಲ್ಲಿ ಮೆ.ಕೆ.ಮೆಲೋಡಿಸ್‌ ಅವರು ಅವಕಾಶ ಕೊಟ್ಟರು. ಆಮೇಲೆ ಆರ್‌.ಕೆ.ಮೆಲೋಡಿಸ್‌ನಲ್ಲಿ ಗಾಯನ  ಮುಂದುವರಿಸಿದಳು. ಬಳಿಕ ಶಿವಮೊಗ್ಗ, ಭದ್ರಾವತಿ, ಸೇರಿದಂತೆ ವಿವಿಧ ಜಿಲ್ಲೆಗಳಿಗೆ ತೆರಳಿ,  ಹಾಡಿ ವಾಪಸ್‌ ಬರುತ್ತಿದ್ದಳು.  ಹೀಗೆ ಬದುಕು ಕಟ್ಟಲಾರಂಭಿಸಿದ ಗಂಗಮ್ಮಳ ಕಂಠಸಿರಿಗೆ ಎಲ್ಲೆಡೆ ಮನ್ನಣೆ ದೊರೆತು, ಕೈ ತುಂಬ ಕಾಸು ಸಿಗುವಂತಾಯಿತು. ಹಾಡಿನ ಆದಾಯದಲ್ಲೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಯಾವ ಕಾರ್ಯಕ್ರಮವೂ ಇಲ್ಲವೆಂದರೆ ಮತ್ತೆ ನಿತ್ಯ ಕೂಲಿ ಕೆಲಸಕ್ಕೆ ಹಾಜರಾಗುತ್ತಿದ್ದಳು. ಈಗಲೂ ಅಷ್ಟೇ.   ಈಕೆಯ ಹಾಡಿನ ಹವ್ಯಾಸಕ್ಕೆ 20 ವರ್ಷ ಆಗಿದೆ. ಉತ್ಸಾಹ ಇನ್ನೂ ಬತ್ತಿಲ್ಲ. 

ಬಯಲು ದಾರಿ, ಗೆಜ್ಜೆ ಪೂಜೆ, ಜನ್ಮ ಜನ್ಮದ ಅನುಬಂಧದ ಹಾಡುಗಳೆಂದರೆ ಗಂಗಮ್ಮಳಿಗೆ ಪಂಚಪ್ರಾಣ. ಹಿಂದಿ, ತೆಲುಗು ಸಿನಿಮಾ ಹಾಡುಗಳನ್ನೂ ಈಕೆ ಹಾಡಬಲ್ಲಳು.   ಸಿನಿಮಾಗಳಲ್ಲಿ ಹಾಡುವ ಹಂಬಲವನ್ನು ಎಲ್ಲರಲ್ಲೂ ತೋಡಿಕೊಂಡೆ. ಸಾಧ್ಯವಾಗಲಿಲ್ಲ. ಕೊಪ್ಪಳದ ಬೀಡಿ ಪ್ರಚಾರ ಹಾಡುಗಳನ್ನು ಹಾಡಿದ್ದೇನೆ ಎಂದು ನೆನಪಿಸಿಕೊಳ್ಳುತ್ತಾರೆ ಗಂಗಮ್ಮ.  

 ಗಂಗಮ್ಮಗೆ ಈಗ 50 ವರ್ಷ.  ಸಿನಿಮಾದಲ್ಲಿ ಹಾಡುವ ಆಕೆಯ ಆಸೆ ಈಗ ಈಡೇರುತ್ತಿದೆ. ಪರದೇಶಿ ಕೇರ್‌ ಆಫ್ ಲಂಡನ್‌, ಪದ್ಮಾವತಿ ಎನ್ನುವ ಕನ್ನಡದ ಚಿತ್ರಗಳಿಗೆ ಹಾಡುತ್ತಿದ್ದಾರೆ. ಅಚ್ಚರಿ ಎಂದರೆ, ಗಂಗಮ್ಮಳ ಹೆಸರಲ್ಲಿ ರಾಷ್ಟ್ರೀಕೃತ ಬ್ಯಾಂಕಲ್ಲಿ ಖಾತೆ ಇಲ್ಲ. ಸ್ವಂತ ಮನೆ ಇಲ್ಲ. ಬದುಕನ್ನು ನಡೆಸಲು ಈಕೆ ಗಾಯನವನ್ನೇ ನಂಬಿಕೊಂಡಿದ್ದಾರೆ. 

ದತ್ತಪ್ಪ ಕಮ್ಮಾರ 

Advertisement

Udayavani is now on Telegram. Click here to join our channel and stay updated with the latest news.

Next