Advertisement

ನಮ್ಮೂರು ಸಮಸ್ಯೆ ಇನ್ನಾದ್ರೂ ಬಗೆಹರಿಸ್ಲಿ

05:40 PM Feb 21, 2021 | Team Udayavani |

ಕೊಪ್ಪಳ: ನಮ್ಮೂರಿನ ಸಮಸ್ಯೆ 42 ವರ್ಷಗಳಿಂದಲೂ ಬಗೆಹರಿದ್ದಿಲ್ಲ. ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿಗೆ ಸುತ್ತಾಡಿ ಸುತ್ತಾಡಿ ನಮ್ಮ ಕಾಲಾಗಿನ ಚಪ್ಲಿ ಹರದು ಹೋಗಿದ್ರು. ಅದೇನೋ ಪುಣ್ಯ ಬಂದೈತೋ ಜಿಲ್ಲಾ ಅಧಿಕಾರಿಗಳೇ ನಮ್ಮೂರಿಗೆ ಬಂದಾರ.. ಇನ್ನಾದರೂ ನಮ್ಮೂರಿನ ಸಮಸ್ಯೆ ಬಗೆ ಹರಿಸಿದ್ರ ಅವ್ರಿಗೆ ಪುಣ್ಯ ಬತೈತ್ರಿ.. ಯಲಬುರ್ಗಾ ತಾಲೂಕಿನ ಹಿರೇವಡ್ರಕಲ್‌ ಗ್ರಾಮದಲ್ಲಿ ಶನಿವಾರ ನಡೆದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯಕ್ಕೆ ತೆರಳಿ ಜನರ ಸಮಸ್ಯೆ ಆಲಿಸಲು ಮುಂದಾದಾಗ ಗ್ರಾಮಸ್ಥರಿಂದ ಕೇಳಿಬಂದ ಮಾತುಗಳಿವು..

Advertisement

ನಮ್ಮೂರು ಹಲವು ವರ್ಷಗಳಿಂದಲೂ ತುಂಬ ತೊಂದರೆ ಅನುಭವಿಸೈತಿ.. ಏನ್‌ ಮಾಡೋದು.. ಎಲ್ಲರಿಗೂ ಹೇಳಿದ್ವಿ.. ನಮ್ಮೂರಿನ ಭೂಮಿ ಸಮಸ್ಯೆ ಹೇಳ್ಬಾರ್ಧು.. ಅದರಲ್ಲೇ ನಮ್ಮ ಹಿರಿಯರ ತಲೆ ಮುನಿಗ್ಯಾವ.. ನಮ್ಮ ಪಹಣಿ ತಿದ್ದುಪಡಿ ತುಂಬಾನೇ ಅದಾವ..ನಮ್ಮ ಹೊಲ ಒಂದ್‌ ಕಡೆ ಇದ್ರ.. ಸರ್ವೇ ಮ್ಯಾಪಿನ್ಯಾಗ ನಮ್ಮ ನೇ ಬ್ಯಾರೆ ಕಡೆ ತೋರಿಸ್ತಾವ.. ಇದ್ರಿಂದ ನಮಗಾ ಹೊಲ ಮಾರಂಗಿಲ್ಲ. ಖರೀದಿ ಮಾಡಂಗಿಲ್ಲ. ಸಾಲ ಸೂಲ ಸಿಗಲಾರದಂಗ ಆಗಿತ್ತು. ಇವತ್ತು ನಮ್ಮ ಪುಣ್ಯ ಅನ್ನಸ್ತೈತಿ.. ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್‌ ಅವರು ನಮ್ಮೂರನ್ನ ಗ್ರಾಮ ವಾಸ್ತವ್ಯಕ್ಕೆ ಆಯ್ಕೆ ಮಾಡಿಕೊಂಡಾಗಿನಿಂದ ಒಂದ್‌ ವಾರದಿಂದ ಬರಿ ನಮ್ಮೂರಿನ ರಸ್ತೆಯಾಗ.. ಸರ್ಕಾರಿ ವಾಹನಗಳ ಸದ್ದೇ ಕೇಳಕತ್ತಾವ್ರ. ನಮ್ಮೂರಿಗೆ ಬಂದ್‌ ನಿಮ್ಮ ಸಮಸ್ಯೆ ಏನದಾವಾ.. ನಮ್‌ ಗಮನಕ್ಕೆ ತನ್ನಿ ಅಂತಾರ.. ನಾವು ನಿಮಗ ಮಾಸಾಶನ ಕೊಡಿಸ್ತೀವಿ.. ಆಧಾರ್‌ ಕಾರ್ಡ್‌ ಮಾಡಿಸಿಲ್ಲಾ.. ರೇಷನ್‌ ಕಾರ್ಡ್‌ ಮಾಡಿಸಿಲ್ಲಾ.. ಆರೋಗ್ಯ ಕಾರ್ಡ್‌ ಮಾಡಿಸಿಲ್ಲಾ.. ನಿಮಗ ಸರ್ಕಾರದಿಂದ ಯಾವ ಸೌಲಭ್ಯ ಸಿಕ್ಕಿಲ್ಲ. ನಿಮ್ಮ ಅರ್ಜಿ ಎಲ್ಲಿಪೆಂಡಿಂಗ್‌ ಅದಾವು ಅವನ್ನ ನಮ್ಮ ಗಮನಕ್ಕೆ ತಗೊಂಡ ಬನ್ನಿ ಅಂತ ಹೇಳಿ ಎಲ್ಲಾ ಪಟ್ಟಿ ಮಾಡ್ಕೊಂಡಾರ ಎಂದು “ಉದಯವಾಣಿ’ ಜತೆ ಗ್ರಾಮಸ್ಥರು ಅಭಿಪ್ರಾಯ ಹಂಚಿಕೊಂಡರು.

ತಳಿರು ತೋರಣದಿಂದ ಸ್ವಾಗತ :

ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್‌ ಆಗಮನದ ಹಿನ್ನೆಲೆಯಲ್ಲಿ ಶನಿವಾರ ಜನರು ಮನೆಯ ಮುಂದೆ ರಂಗೋಲಿ ಹಾಕಿದ್ದರು. ಸರ್ಕಾರಿ ಶಾಲೆಯನ್ನು ಬಾಳೆದಿಂಡು, ತಳಿರು ತೋರಣ ಕಟ್ಟಿಸಿಂಗರಿಸಲಾಗಿತ್ತು. ರಸ್ತೆಗೆ ಮರಂ ಹಾಕಿ ತಗ್ಗು ಗುಂಡಿಗಳನ್ನು ಮುಚ್ಚಿರುವುದು ಕಂಡುಬಂತು. ಚರಂಡಿಗಳೆಲ್ಲವೂ ಸ್ವತ್ಛವಾಗಿದ್ದವು. ಅಧಿಕಾರಿಗಳಿಗೆ ಆರತಿ ಮಾಡಿ ಸ್ವಾಗತ ಮಾಡಿದ್ದು ವಿಶೇಷವಾಗಿತ್ತು.

ಕಂದಾಯ ಇಲಾಖೆಗೆ ಹೆಚ್ಚು ಆದ್ಯತೆ :

Advertisement

ಹಿರೇವಡ್ರಕಲ್‌ ಗ್ರಾಮದಲ್ಲಿ 1972ರಲ್ಲಿ ಸರ್ವೇ ಮಾಡಿದಾಗ 100 ಸರ್ವೇ ನಂಬರ್‌ಗಳಿದ್ದರೆ, ಇಂದು 400 ಸರ್ವೇ ನಂಬರ್‌ ಗಳಾಗಿವೆ. ಇವೆಲ್ಲವನ್ನು ಆಯಾ ಜಮೀನಿನ ಮಾಲೀಕರ ಸಮ್ಮತಿಯ ಮೇರೆಗೆ ಸ್ಥಳದಲ್ಲಿಯೇ ಇತ್ಯರ್ಥಕ್ಕೆ ಒತ್ತುನೀಡಿದ್ದು ಕಂಡು ಬಂದಿತು. ತಾತ್ಕಾಲಿಕ ಉಪ ವಿಭಾಗಾಧಿಕಾರಿ ಕಚೇರಿಯನ್ನು ಗ್ರಾಮದ ಸರ್ಕಾರಿ ಶಾಲೆಯಲ್ಲೇ ಆರಂಭಿಸಿದ್ದು ವಿಶೇಷವಾಗಿತ್ತು. ಎಸಿ ಅವರು ರೈತರಿಂದ ಕೆಲ ದಾಖಲೆಗಳನ್ನು ಸಂಗ್ರಹಿಸಿ ಸ್ಥಳದಲ್ಲೇ ಆದೇಶ ಮಾಡುತ್ತಿದ್ದರು

ಪಿಂಚಣಿ, ಆಧಾರ್‌, ಪಡಿತರದ ಕೆಲಸ :

ಗ್ರಾಮದ ವಿವಿಧ ಓಣಿಯಲ್ಲಿ ಜನರು ಆಧಾರ್‌ ಕಾರ್ಡ್‌ ನೊಂದಣಿ ಮಾಡಿಸದಿದ್ದರೆ, ತಿದ್ದುಪಡಿಯಿದ್ದರೆ ಅವುಗಳನ್ನುಸ್ಥಳದಲ್ಲಿಯೇ ಮಾಡಲಾಗುತ್ತಿತ್ತು. 70-80 ವರ್ಷದ ವೃದ್ಧರನ್ನುಪಿಂಚಣಿಗೆ ಅರ್ಹತೆಯನ್ನು ಪರಿಗಣಿಸಿ ಅವರಿಗೆ ಮಾಸಾಶನಕ್ಕೆಅರ್ಜಿ ಪ್ರಕ್ರಿಯೆ ಆರಂಭಿಸಲಾಯಿತು. ಇನ್ನು ರೇಷನ್‌ಕಾರ್ಡ್‌ನಲ್ಲಿ ಸೇರ್ಪಡೆ ಹಾಗೂ ತಿದ್ದುಪಡಿದ್ದರೆ ಆ ಕೆಲಸವೂಸುಗಮವಾಗಿ ಜರುಗಿತು. ವಿಕಲಚೇತನರ ಆರೋಗ್ಯದ ಸಮಸ್ಯೆಯನ್ನೂ ವೈದ್ಯರ ತಂಡವು ಪರೀಕ್ಷೆ ಮಾಡಿತು.

ರಕ್ತದಾನ, ರಕ್ತ ಪರೀಕ್ಷೆ, ನೇತ್ರ ಪರೀಕ್ಷೆ :

ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯಿಂದ ರಕ್ತದಾನ, ನೇತ್ರ ಪರೀಕ್ಷೆ ಹಾಗೂ ರಕ್ತದ ಗುಂಪು ಪರೀಕ್ಷೆ ಕೈಗೊಳ್ಳಲಾಯಿತು. ಜನರು ರಕ್ತದಾನ ಮಾಡಿ ಮಾದರಿಯಾದರು. ಇನ್ನೂ ತಮ್ಮ ರಕ್ತದ ಗುಂಪು ಗೊತ್ತಿಲ್ಲದವರು ಕೇಂದ್ರದಲ್ಲಿ ತಮ್ಮ ರಕ್ತದ ಗುಂಪು ಯಾವುದು ಎಂದು ತಿಳಿದುಕೊಂಡರು.

ಕೆರೆ ನಿರ್ಮಾಣಕ್ಕೆ ಯೋಚನೆ :

ಗ್ರಾಮದ ಪಕ್ಕದಲ್ಲಿ ಸರ್ಕಾರಿ ಜಮೀನು ಇದ್ದು ಅಲ್ಲಿ ಸರ್ಕಾರದ ಅನುದಾನದ ನೆರವಿನೊಂದಿಗೆ ಕೆರೆ ನಿರ್ಮಾಣ ಮಾಡಿದರೆಅನುಕೂಲವಾಗಲಿದೆ. ನೀರಿನ ಕೊರತೆಯಾದ ಸಂದರ್ಭದಲ್ಲಿ ಈ ಕೆರೆ ಆಸರೆಯಾಗಲಿದೆ ಎಂದು ಡಿಸಿ ಅವರು ಸಭೆಯಲ್ಲಿ ಗಮನಕ್ಕೆತರುತ್ತಿದ್ದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿ ಕಾರಿಗಳುಗ್ರಾಮದ ಪಕ್ಕದಲ್ಲಿಯೇ ಇದ್ದ ಸ್ಥಳಕ್ಕೆ ತೆರಳಿ ಅಲ್ಲಿ ಕೆರೆ ನಿರ್ಮಾಣದ ಸಾಧ್ಯತೆಗಳ ಕುರಿತು ಪರಿಶೀಲನೆ ನಡೆಸಿದರು.

ಮದ್ಯ ಮಾರಾಟಕ್ಕೆ ಬ್ರೇಕ್‌ ಹಾಕಿ  :

ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ವ್ಯಾಪಕವಾಗಿದೆ. ಯುವಕರು ಮದ್ಯ ಸೇವನೆ ಮಾಡಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮನೆಯ ಯಜಮಾನರು ಮದ್ಯದವ್ಯಸನಿಗಳಾಗಿ ನಮಗೆ ನಿತ್ಯ ಹಿಂಸೆ ನೀಡುತ್ತಿದ್ದಾರೆ. ದಯವಿಟ್ಟು ನಮ್ಮೂರಿಗೆ ಬಂದಿರುವ ಅಧಿಕಾರಿಗಳು ಮದ್ಯ ಮಾರಾಟ ನಿಲ್ಲಿಸಿದರೆ ಅವರಿಗೆ ಪುಣ್ಯ ಬರುತ್ತದೆ ಎಂದು ಗ್ರಾಮದ ಮಹಿಳೆಯರು ಜಿಲ್ಲಾಧಿಕಾರಿ ಮುಂದೆ ಪ್ರಸ್ತಾಪಿಸಿದಾಗ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಮಾಸಾಶನ ಮಾಡಿಸಿಕೊಳ್ಳಲು ತಾಲೂಕು, ಜಿಲ್ಲಾಧಿಕಾರಿ ಕಚೇರಿಗೆ ಅಲೆದು ಅಲೆದು ನಮ್ಮ ಚಪ್ಲಿ ಹರಿದು ಹೋಗಿದ್ದವು. ಈಗ ಅದೇನೋ ಪುಣ್ಯವೋ.. ಏನೋ ನಮ್ಮೂರಿಗೆ ಅಧಿಕಾರಿಗಳು ಬಂದು ನಿಮ್ಮ ಪಗಾರ ಮಾಡಿ ಕೊಡ್ತೀವಿ ಅನ್ನುತ್ತಿದ್ದಾರೆ. ಏನಾದ್ರು ಮಾಡಲಿ. ನಮ್ಮೂರಿಗೆ ಒಳ್ಳೆಯದಾಗುವಂತ ಕೆಲಸ ಮಾಡಲಿ. ಸುಮ್ನ ಒಂದ್‌ ದಿನ ಬಂದ್‌ ಹೋದ್ರ ಅಲ್ಲ. – ವಿರೂಪಾಕ್ಷಪ್ಪ ಹೊರಪೇಟೆ, ಗ್ರಾಮಸ್ಥ

Advertisement

Udayavani is now on Telegram. Click here to join our channel and stay updated with the latest news.

Next