Advertisement

ಕೊಂಕಣ ರೈಲ್ವೇ : ಭೂಸಂತ್ರಸ್ತರಿಗಿಲ್ಲ ನೌಕರಿಯ ನೆಲೆ

12:23 AM Feb 07, 2021 | Team Udayavani |

ಉಡುಪಿ: ಕೊಂಕಣ ರೈಲ್ವೇ ನಿರ್ಮಾಣವಾಗುವಾಗ ಭೂಮಿ ಒದಗಿಸಿದ ಸಂತ್ರಸ್ತರಿಗೆ ಉದ್ಯೋಗ ನೀಡುವುದಾಗಿ ನಿಗಮವು ನೀಡಿದ್ದ ಭರವಸೆ ಕ್ಷೀಣವಾಗುತ್ತಿದೆ. ಈಗ ಅರ್ಹತೆ ಹೊಂದಿರುವ ಭೂ ಸಂತ್ರಸ್ತ ರಿಗೂ “ಅರ್ಹತೆ ಇಲ್ಲ’ ಎಂಬ ಸಬೂಬು ನೀಡಿ ಹೊರಗಿನವರನ್ನು, ವಿಶೇಷವಾಗಿ ಉತ್ತರ ಭಾರತದವರನ್ನು ನೇಮಿ ಸಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.

Advertisement

ಡಿ ದರ್ಜೆಯಲ್ಲಿಯೇ ನಿವೃತ್ತಿ!
ಕೊಂಕಣ ರೈಲ್ವೇಯಲ್ಲಿ ಸುಮಾರು 7 ಸಾವಿರ ನೌಕರರಿದ್ದಾರೆ. ಇವರಲ್ಲಿ ಸುಮಾರು 5 ಸಾವಿರ ಮಂದಿ ಡಿ ದರ್ಜೆಯವರು. ಸುಮಾರು 4 ಸಾವಿರ ಸಂತ್ರಸ್ತರಲ್ಲಿ ಡಿ ದರ್ಜೆಯವರೇ ಅಧಿಕ. ಒಟ್ಟು ನೌಕರರಲ್ಲಿ ಸುಮಾರು 2 ಸಾವಿರ ಮಂದಿ ನಿರ್ಮಾಣ ಕ್ಷೇತ್ರದವರಿದ್ದರೆ, ಸುಮಾರು 500 ಮಂದಿ ರೈಲ್ವೇ ಮಂಡಳಿ ಪರೀಕ್ಷೆ ಬರೆದು ಬಂದವರು. 1990ರ ದಶಕದಲ್ಲಿ ಸೇರಿದ ಈ 1,500 ಡಿ ದರ್ಜೆ ನೌಕರರಲ್ಲಿ ಬಹುತೇಕರು ಭಡ್ತಿಗೆ ಅರ್ಹತೆ ಇದ್ದರೂ ಡಿ ದರ್ಜೆಯಲ್ಲಿಯೇ ನಿವೃತ್ತಿಯ ವಯಸ್ಸಿಗೆ ಬರುತ್ತಿದ್ದಾರೆ. ಇವರ ಸ್ಥಾನಕ್ಕೆ ವಿದ್ಯಾರ್ಹತೆ ಇರುವ ಇವರ ಪೀಳಿಗೆಯವರನ್ನು ಸೇರಿಸಿಕೊಳ್ಳಲು ಅವಕಾಶವಿದ್ದರೂ ಈಗ ಹೊರಗಿನ ವರನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ. ಈಗಾಗಲೇ ಸುಮಾರು 450 ನೌಕರರು ಹೀಗೆ ಸೇರ್ಪಡೆಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕಾರ್ಮಿಕ ಯೂನಿಯನ್‌ ಪಾತ್ರ
ಕೊಂಕಣ ರೈಲ್ವೇಯಲ್ಲಿ ಸ್ಥಾಪಕ ಜಾರ್ಜ್‌ ಫೆರ್ನಾಂಡಿಸ್‌ ಹೆಸರಿನ ಕಾರ್ಮಿಕ ಸಂಘಟನೆ ಇದ್ದು, ಇದಕ್ಕೆ ಸಂಯೋಜನೆಗೊಂಡ ಕೊಂಕಣ ರೈಲ್ವೇ ನಿಗಮ ಕಾರ್ಮಿಕ ಯೂನಿಯನ್‌ (ಕೆಆರ್‌ಸಿಇಯು) ಇತ್ತು. ಈಗ ರಾಷ್ಟ್ರೀಯ ರೈಲ್ವೇ ಮಜ್ದೂರ್‌ ಯೂನಿಯನ್‌ ಅಧಿಕೃತ ಮಾನ್ಯತೆ ಹೊಂದಿದೆ. ನೌಕರರ ಹೆಚ್ಚು ಮತ ಪಡೆದ ಯೂನಿಯನ್‌ ಆಡಳಿತ ಮಂಡಳಿಯಲ್ಲಿ ಮಾನ್ಯತೆ ಹೊಂದುತ್ತದೆ. 2013-15ರ ಅವಧಿಯಲ್ಲಿ ಕೆಆರ್‌ಸಿಇಯು ಮಾನ್ಯತೆ ಹೊಂದಿದ್ದಾಗ ಅರ್ಹತೆ ಇರುವ ಸುಮಾರು 400 ಡಿ ದರ್ಜೆ ನೌಕರರು ಭಡ್ತಿ ಹೊಂದಿದ್ದರು.

ಹೊರ ರಾಜ್ಯ ನೌಕರರು
ಸ್ಟೇಶನ್‌ ಮಾಸ್ಟರ್‌ ಹುದ್ದೆಗೆ ಯಾವುದೇ ಪದವೀಧರರಾದರೆ ಸಾಕು, ಕಿರಿಯ ಎಂಜಿನಿಯರ್‌ (ಇಲೆಕ್ಟ್ರಿಕಲ್‌) ಹುದ್ದೆಗೆ ಡಿಪ್ಲೊಮಾ ಕಲಿಕೆ ಸಾಕು. ಆದರೆ ಭೂಸಂತ್ರಸ್ತ ಮನೆಗಳ ನೌಕರರು ಇರುವುದು ಪಾಯಿಂಟ್‌ಮನ್‌, ಟ್ರ್ಯಾಕ್‌ಮನ್‌, ಸ್ವೀಪರ್‌, ಹೆಲ್ಪರ್‌ ಇತ್ಯಾದಿ ಡಿ ದರ್ಜೆ ಹುದ್ದೆಗಳಲ್ಲಿ ಮಾತ್ರ. ಮೇಲ್ದರ್ಜೆ ಹುದ್ದೆಗಳಿಗೆ ಇವರಲ್ಲಿಯೇ ಅರ್ಹರಿದ್ದರೂ ಹೊರಗಿನವರನ್ನು ಕರೆತರುವ ಪ್ರಯತ್ನ ಕಾರ್ಮಿಕ ಸಂಘಟನೆಯಿಂದ ನಡೆಯುತ್ತಿದೆಯೇ ಎಂಬ ಸಂಶಯ ಮೂಡಿದೆ.

ಯೂನಿಯನ್‌ ಕುಮ್ಮಕ್ಕು?
ಇತ್ತೀಚಿಗೆ ರತ್ನಗಿರಿ ವಿಭಾಗದ ಸಿಂಧುದುರ್ಗದಲ್ಲಿ ಎನ್‌ಆರ್‌ಎಂ ಯೂನಿಯನ್‌ ಪ್ರಧಾನ ಕಾರ್ಯದರ್ಶಿ ವೇಣು ಪಿ. ನಾಯರ್‌ ನೀಡಿದ ಹೇಳಿಕೆ ಈ ಸಂಶಯಕ್ಕೆ ಪುಷ್ಟಿ ನೀಡುತ್ತದೆ. ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, “ಭೂಸಂತ್ರಸ್ತರಲ್ಲಿ ಸೂಕ್ತ ವಿದ್ಯಾರ್ಹತೆ ಇರುವವರು ಇಲ್ಲ. ಆದ್ದರಿಂದ ಹೊರಗಿನವರನ್ನು ಸೇರಿಸಿಕೊಳ್ಳಲಾಗುತ್ತಿದೆ’ ಎಂದಿದ್ದರು. ವಿವಿಧ ಸರಕಾರಿ ಸಂಸ್ಥೆಗಳಲ್ಲಿ ಕಾರ್ಮಿಕ ಯೂನಿಯನ್‌ ಹೆಸರಿನಲ್ಲಿ ಆಡಳಿತ ಮಂಡಳಿ ಜತೆ ಒಳ ಒಪ್ಪಂದ ಮಾಡಿಕೊಂಡು ಯೂನಿಯನ್‌ ನಾಯಕರು ತಮ್ಮ ಬೇಳೆ ಬೇಯಿಸಿಕೊಳ್ಳುವುದು ಹೊಸ ವಿಷಯವಲ್ಲ,

Advertisement

ಒಂದು ಪೀಳಿಗೆಯ ಅಂತಿಮ ಘಟ್ಟ
ಕೊಂಕಣ ರೈಲ್ವೇ ಆರಂಭವಾದಾಗ ಭೂಸಂತ್ರಸ್ತರಲ್ಲಿ ಸೌಲಭ್ಯ ಪಡೆದು ಕೊಳ್ಳುವ ವಿಶೇಷ ಕಾಳಜಿ ಇತ್ತು. ಈಗ ಒಂದು ಪೀಳಿಗೆಯ ಕಾಲ ಮುಗಿದು ಇನ್ನೊಂದು ಪೀಳಿಗೆಯ ಕಾಲ ಘಟ್ಟ. ಹೆಚ್ಚಿನವರಿಗೆ ಆ ಕಾಲದಲ್ಲಿ ಸೌಲಭ್ಯ ಪಡೆದುಕೊಳ್ಳಲು ನಡೆಸಿದ ಹೋರಾಟದ ನೆನಪೂ ಇಲ್ಲವಾಗಿದೆ. ಆಗ “ಉದಯವಾಣಿ’, “ತರಂಗ’ ಜನ ಜಾಗೃತಿ ರೂಪಿಸಿ ಸಂತ್ರಸ್ತರಿಗೆ ಪರಿಹಾರ, ಉದ್ಯೋಗ ಇತ್ಯಾದಿ ವಿಷಯಗಳಲ್ಲಿ ನ್ಯಾಯ ದೊರಕಿಸಿಕೊಡುವಲ್ಲಿ ಬಹುತೇಕ ಯಶಸ್ವಿಯಾಗಿತ್ತು.

– ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next