Advertisement

ಸಿದ್ಧಗೊಂಡಿದೆ 57 ಅಡಿ ಎತ್ತರದ ಕೊಲ್ಲೂರು ದೇಗುಲದ ಬ್ರಹ್ಮರಥ

10:23 AM Feb 14, 2023 | Team Udayavani |

ತೆಕ್ಕಟ್ಟೆ: ಜಗನ್ಮಾತೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ನೂತನ ಬ್ರಹ್ಮರಥ ನಿರ್ಮಾಣ ಕಾರ್ಯ ಕುಂಭಾಶಿ ಶ್ರೀ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದಲ್ಲಿ ಪೂರ್ಣಗೊಂಡಿದ್ದು, ಫೆ. 15ರಂದು ಸಂಪ್ರದಾಯದಂತೆ ರವಾನೆಯಾಗಲಿದ್ದು, ಫೆ.16ರಂದು ಶ್ರೀ ದೇವರಿಗೆ ಸಮರ್ಪಿತವಾಗಲಿದೆ.

Advertisement

57 ಅಡಿ ಎತ್ತರದ ಬ್ರಹ್ಮರಥ ಕುಂದಾಪುರ ತಾಲೂಕಿನ ಕೋಟೇಶ್ವರದ ರಥಶಿಲ್ಪಿಗಳಾದ ಲಕ್ಷ್ಮೀ ನಾರಾಯಣ ಆಚಾರ್ಯ, ಶಂಕರ ಆಚಾರ್ಯ ಹಾಗೂ ರಾಜಗೋಪಾಲ ಆಚಾರ್ಯ ಅವರ ನೇತೃತ್ವದಲ್ಲಿ ರಥ ನಿರ್ಮಾಣ ಕಾರ್ಯ ಆರಂಭಗೊಂಡಿತ್ತು. ಸುಮಾರು ಒಂದು ವರ್ಷದ ಅನಂತರ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದ ಸುಮಾರು 400 ವರ್ಷಗಳ ಹಳೆದಾದ ಬ್ರಹ್ಮರಥದ ಮಾದರಿಯಲ್ಲಿಯೇ ಯಥಾವತ್ತಾಗಿ ತಂತ್ರಜ್ಞಾನಗಳನ್ನು ಬಳಸಿಕೊಂಡು ಪುನಃ ನಿರ್ಮಾಣ ಮಾಡಲಾಗಿದೆ.

ಈ ಕಲಾತ್ಮಕ ಬ್ರಹ್ಮರಥದ ಅಳತೆ, ಆಯ, ವಿನ್ಯಾಸ, ಶಿಲ್ಪಕಲಾ ಕೃತಿಗಳನ್ನೇ ಅತ್ಯಂತ ಶ್ರದ್ಧೆ ಹಾಗೂ ಕೌಶಲದಿಂದ ಈ ರಥದಲ್ಲಿ ಅಭಿವ್ಯಕ್ತಿಸಲಾಗಿದೆ. ವಾಸ್ತುಶಾಸ್ತ್ರಜ್ಞ ಮಹೇಶ್‌ ಮುನಿಯಂಗಳ ಅವರ ಮಾರ್ಗದರ್ಶನದಂತೆ ಬ್ರಹ್ಮರಥದ ಅಡಿಪಾಯದಿಂದ ಅಧಿಷ್ಠಾನದ ವರೆಗೆ ಸುಮಾರು 14.7 ಅಡಿ ಎತ್ತರ, ರಥದ ಚಕ್ರ ಸುಮಾರು 8 ಅಡಿ ಎತ್ತರ ಹಾಗೂ ಮಂಟಪ ಹಾಗೂ ಶಿಖರ ಸಹಿತ ಒಟ್ಟು 57 ಅಡಿ ಎತ್ತರ ಹೊಂದಿದ್ದು, ರಥದ ಕುಸುರಿ ಕೆತ್ತನೆ ಕಾರ್ಯದಲ್ಲಿ ಸುಮಾರು 45 ಮಂದಿ ದಾರು ಶಿಲ್ಪಿಗಳು ಅವಿರತವಾಗಿ ಶ್ರಮಿಸಿದ್ದಾರೆ.

ಫೆ.15ಕ್ಕೆ ರಥ ರವಾನೆ ಉದ್ಯಮಿ ದಿ| ಆರ್‌.ಎನ್‌. ಶೆಟ್ಟಿ ಅವರ ಪುತ್ರ ಉದ್ಯಮಿ ಸುನಿಲ್‌ ಆರ್‌. ಶೆಟ್ಟಿ ಅವರು ನೂತನ ಬ್ರಹ್ಮರಥವನ್ನು ಈ ಕ್ಷೇತ್ರಕ್ಕೆ ಕಾಣಿಕೆ ರೂಪವಾಗಿ ಸಮರ್ಪಿಸಲಿದ್ದಾರೆ. ಫೆ.15ರಂದು ಬೆಳಗ್ಗೆ ನೂತನ ರಥವು ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿ ವಾಹನ ಜಾಥಾದ ಮೂಲಕ ಕೊಲ್ಲೂರು ಪುರಪ್ರವೇಶ ಮಾಡಲಿದೆ. ಈ ಹಿಂದೆ ಶ್ರೀ ಕ್ಷೇತ್ರ ಮುರುಡೇಶ್ವರ ದೇಗುಲಕ್ಕೂ ಕೂಡ ನೂತನ ಬ್ರಹ್ಮರಥವನ್ನು ಕಾಣಿಕೆ ರೂಪದಲ್ಲಿ ನೀಡಿದ್ದಾರೆ.

ತಂತ್ರಜ್ಞಾನ ಬಳಸಿಕೊಂಡು ಯಥಾವತ್‌ ಪುನಃನಿರ್ಮಾಣ ರಥ ದೇಗುಲದ ಪ್ರತೀಕ, ರಥ ನಿರ್ಮಾಣ ಕಾರ್ಯವು ಒಂದು ದೇಗುಲದ ನಿರ್ಮಾಣದಂತೆ ಅತ್ಯಂತ ವಿಧಿ ವಿಧಾನಗಳೊಂದಿಗೆ ನೆರವೇರುತ್ತದೆ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದ ಸುಮಾರು 400 ವರ್ಷಗಳ ಹಳೆದಾದ ಬ್ರಹ್ಮರಥ ಶಿಥಿಲಗೊಂಡಿರುವ ಪರಿಣಾಮ ಅದೇ ಮಾದರಿಯಲ್ಲಿಯೇ ಯಥಾವತ್ತಾಗಿ ತಂತ್ರಜ್ಞಾನಗಳನ್ನು ಬಳಸಿಕೊಂಡು ಪುನರ್‌ ನಿರ್ಮಾಣ ಮಾಡಲು ಅವಕಾಶ ದೊರೆತಿದೆ. ಹಳೆಯದಾದ ರಥವನ್ನು ಸ್ವತ್ಛಗೊಳಿಸಿ, ಸ್ಕ್ಯಾನರ್‌ ಮೂಲಕ ಸ್ಕ್ಯಾನ್‌ ಮಾಡಿ ಅದೇ ಶಿಲ್ಪಕಲಾ ಪ್ರಕಾರಗಳನ್ನು ಅಳವಡಿಕೆ ಮಾಡಲಾಗಿದೆ. ಅಚ್ಚು ಮರ ಹಾಗೂ ಚಕ್ರವನ್ನು ಭೋಗಿ ಮರ ಮತ್ತೆ ಉಳಿದ ಭಾಗವನ್ನು ಸಂಪೂರ್ಣ ಸಾಗುವಾನಿ ಮರಗಳನ್ನು ಬಳಸಲಾಗಿದ್ದು, ಆಧುನಿಕ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿಯೇ ಅತೀ ಎತ್ತರದ ಬನವಾಸಿಯ ಬ್ರಹ್ಮರಥ ಹಾಗೂ ಅಯೋಧ್ಯೆಯ ಶ್ರೀರಾಮ ಮಂದಿರ ಬೃಹತ್‌ ರಥವನ್ನು ನಿರ್ಮಾಣ ಮಾಡಲಿದ್ದೇವೆ.
– ಕೋಟೇಶ್ವರ ರಾಜಗೋಪಾಲ ಆಚಾರ್ಯ, ರಥಶಿಲ್ಪಿಗಳು

Advertisement

148 ಬ್ರಹ್ಮರಥ ನಿರ್ಮಾಣ
ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಅವರು ಸುಮಾರು 148 ರಥವನ್ನು ದೇವಸ್ಥಾನಗಳಿಗೆ ನಿರ್ಮಿಸಿಕೊಟ್ಟಿರುವುದು ವಿಶೇಷ. ಇವರ ಕಲಾ ಸಾಧನೆಗೆ ರಾಜ್ಯ, ರಾಷ್ಟ್ರ, ಶಿಲ್ಪಕಲಾ ಅಕಾಡೆಮಿ, ರಾಷ್ಟ್ರೀಯ ಶಿಲ್ಪಗುರು ಹಾಗೂ ಜಕಣಾಚಾರಿ ಪ್ರಶಸ್ತಿ ಪುರಸ್ಕೃತಗೊಂಡಿದೆ. ಇವರ ಶಿಲ್ಪ ಕಲಾಕಾರ ದಿಂದ ಅರಳಿ ನಿಂತ ಶ್ರೀ ಕ್ಷೇತ್ರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದ ಬ್ರಹ್ಮರಥ ಕಲಾ ನೈಪುಣ್ಯತೆಯ ಕೈಗನ್ನಡಿ.

Advertisement

Udayavani is now on Telegram. Click here to join our channel and stay updated with the latest news.

Next