Advertisement

ಪ್ಲೇ ಆಫ್ ತೇರ್ಗಡೆಗಾಗಿ ಸೆಣಸಾಟ: ಪುಣೆ ಕೆಡಹಲು ಕೆಕೆಆರ್‌ ಪ್ರಯತ್ನ

12:42 PM May 03, 2017 | Team Udayavani |

ಕೋಲ್ಕತಾ: ಎರಡು ಬಾರಿಯ ಚಾಂಪಿಯನ್‌ ಕೋಲ್ಕತಾ ನೈಟ್‌ರೈಡರ್ ತಂಡವು ಈ ಹಿಂದಿನ ಪಂದ್ಯದ ಹೀನಾಯ ಸೋಲನ್ನು ಮರೆತು ಹೊಸ ಉತ್ಸಾಹದಿಂದ ಉತ್ತಮ ಫಾರ್ಮ್ನಲ್ಲಿರುವ ರೈಸಿಂಗ್‌ ಪುಣೆ ಸೂಪರ್‌ಜೈಂಟ್‌ ತಂಡವನ್ನು ಎದುರಿಸಲು ಸಜ್ಜಾಗಿದೆ. ಪ್ಲೇ ಆಫ್ ತೇರ್ಗಡೆಯ ಉದ್ದೇಶದಿಂದ ಎರಡೂ ತಂಡಗಳು ಗೆಲುವಿಗಾಗಿ ಶಕ್ತಿಮೀರಿ ಪ್ರಯತ್ನಿಸುವ ಸಾಧ್ಯತೆಯಿದೆ.

Advertisement

ಈ ಹಿಂದಿನ ಪಂದ್ಯದಲ್ಲಿ ಕೆಕೆಆರ್‌ ತಂಡವು ಸನ್‌ರೈಸರ್ ಹೈದರಾಬಾದ್‌ ತಂಡದೆದುರು ಈ ಋತುವಿನ ಬಲುದೊಡ್ಡ ಸೋಲು ಕಂಡಿತ್ತು. ಇದೇ ವೇಳೆ ಈ ಹಿಂದಿನ ಎರಡು ಪಂದ್ಯಗಳಲ್ಲಿ ಸತತ ಗೆಲುವು ದಾಖಲಿಸಿರುವ ಪುಣೆ ತಂಡವು ಗೆಲುವಿನ ಉತ್ಸಾಹದಲ್ಲಿದೆ. 

ಹ್ಯಾಟ್ರಿಕ್‌ ಗೆಲುವು ಮತ್ತು ಮುಂಬೈ ತಂಡಕ್ಕಿಂತ ಎರಡಂಕ ಮುನ್ನಡೆ ಸಾಧಿಸಿ ಮುನ್ನುಗ್ಗುತ್ತಿದ್ದ ಕೆಕೆಆರ್‌ ತಂಡಕ್ಕೆ ಬ್ರೇಕ್‌ ನೀಡಲು ಹೈದರಾಬಾದ್‌ ಯಶಸ್ವಿಯಾಗಿತ್ತು. ಇದರಿಂದ ಕೆಕೆಆರ್‌ ಮಾನಸಿಕವಾಗಿ ಒತ್ತಡಕ್ಕೆ ಸಿಲುಕಿದೆ. 

ಆರ್‌ಸಿಬಿಯನ್ನು ಸೋಲಿಸುವ ಮೂಲಕ 16 ಅಂಕ ಪೇರಿಸಿರುವ ಮುಂಬೈ ಇಂಡಿಯನ್ಸ್‌ ಮೊದಲ ತಂಡವಾಗಿ ಪ್ಲೇ ಆಫ್ಗೆ ತೇರ್ಗಡೆಯಾಗಿದೆ. ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಕೆಕೆಆರ್‌ ಸಾಧ್ಯವಾದಷ್ಟು ಬೇಗ ಪ್ಲೇ ಆಫ್ಗೆ ತೇರ್ಗಡೆಯಾಗುವುದನ್ನು ಖಚಿತಪಡಿಸಲು ಬಯಸಿದೆ. 

ಮಳೆಯಿಂದ ತೊಂದರೆಗೊಳಗಾದ ಕೆಕೆಆರ್‌ ತಂಡವು ಹೈದರಾಬಾದ್‌ ವಿರುದ್ಧ ಸೋತಿರುವುದು ತಂಡಕ್ಕೆ ದೊಡ್ಡ ತಲೆನೋವು ತಂದಿದೆ. ಯಾವುದೇ ಮೊತ್ತವಿದ್ದರೂ ನಾವು ಚೇಸ್‌ ಮಾಡುತ್ತೇವೆ ಎಂಬ ಗಂಭೀರ್‌ ಅವರ ಮಾತು ಇಲ್ಲಿ ಸುಳ್ಳಾಗಿದೆ. ಅವರ ಆತ್ಮವಿಶ್ವಾಸದ ಮಾತಿಗೆ ದೊಡ್ಡ ಹೊಡೆತ ಬಿದ್ದಿದೆ. ಮಳೆಯಿಂದಾಗಿ ಬ್ಯಾಟಿಂಗ್‌ ಮಾಡಲು ಕಷ್ಟಡವಾಗಿದ್ದರೂ ಹೈದರಾಬಾದ್‌ನ ಬೌಲಿಂಗ್‌ ಮತ್ತು ಫೀಲ್ಡಿಂಗ್‌ ಅಷ್ಟೇ ಶ್ರೇಷ್ಠ ಮಟ್ಟದಲ್ಲಿತ್ತು ಎಂಬುದರಲ್ಲಿ ಸಂಶಯವಿರಲಿಲ್ಲ. 

Advertisement

ನಾಯಕ ಡೇವಿಡ್‌ ವಾರ್ನರ್‌ ಮತ್ತು ಕೇನ್‌ ವಿಲಿಯಮ್ಸನ್‌ ಅವರ ಅಮೋಘ ಆಟದಿಂದಾಗಿ ಹೈದರಾಬಾದ್‌ ಮೊತ್ತ 200ರ ಗಡಿ ದಾಟಿತ್ತು. ವಾರ್ನರ್‌ ಶತಕ ಸಿಡಿಸಿ ಸಂಭ್ರಮಿಸಿದ್ದರು. ಹೈದರಾಬಾದ್‌ನ 209 ರನ್ನಿಗೆ ಉತ್ತರವಾಗಿ ಕೆಕೆಆರ್‌ ಬ್ಯಾಟಿಂಗ್‌ ಕುಸಿತಕ್ಕೆ ಒಳಗಾದ ಕಾರಣ 7 ವಿಕೆಟಿಗೆ 161 ರನ್‌ ಗಳಿಸಲಷ್ಟೇ ಶಕ್ತವಾಯಿತು. ರಾಬಿನ್‌ ಉತ್ತಪ್ಪ ಅವರನ್ನು ಹೊರತುಪಡಿಸಿ ಉಳಿದ ಆಟಗಾರರು ಮಿಂಚಲು ವಿಫ‌ಲರಾದರು.

ಕೆಕೆಆರ್‌ ಇಷ್ಟರವರೆಗಿನ ಪಂದ್ಯಗಳಲ್ಲಿ ಅಗ್ರ ಕ್ರಮಾಂಕದ ಆಟಗಾರನ್ನು ಅವಲಂಬಿಸಿದೆ. ಆರಂಭಿಕನಾಗಿ ಸುನೀಲ್‌ ನಾರಾಯಣ್‌ ಮಿಂಚಿನಾಟ ಆಡಿದರೆ ಗಂಭೀರ್‌ ಮತ್ತು ರಾಬಿನ್‌ ಉತ್ತಪ್ಪ ಉತ್ತಮ ಆರಂಭದ ಸದುಪಯೋಗ ಮಾಡಿದರೆ ಕೆಕೆಆರ್‌ ಸುಲಭವಾಗಿ ಜಯ ಕಾಣುತ್ತಿತ್ತು. ಒಂದು ವೇಳೆ  ಈ ಮೂವರು ವೈಫ‌ಲ್ಯ ಅನುಭವಿಸಿದಾಗ ಮನೀಷ್‌ ಪಾಂಡೆ, ಯೂಸುಫ್ ಪಠಾಣ್‌ ಜವಾಬ್ದಾರಿ ಹೊರಬೇಕಾಗಿತ್ತು. ಪಾಂಡೆ ಉತ್ತಮ ಫಾರ್ಮ್ನಲ್ಲಿದ್ದರೂ ಅವರಿಗೆ ಸಮರ್ಥ ಬೆಂಬಲ ನೀಡುವ ಆಟಗಾರ ಸಿಕ್ಕಿಲ್ಲ. ಆರು ಮತ್ತು 7ನೇ ಕ್ರಮಾಂಕದಲ್ಲಿ ಕೆಕೆಆರ್‌ ಬ್ಯಾಟಿಂಗ್‌ ದುರ್ಬಲವಾಗಿದೆ. ಶೆಲ್ಡನ್‌ ಜಾಕ್ಸನ್‌ ಅಥವಾ ಸೂರ್ಯಕುಮಾರ್‌ ಯಾದವ್‌ ನಿರೀಕ್ಷಿತ ಬ್ಯಾಟಿಂಗ್‌ ಪ್ರದರ್ಶಿಸಿಲ್ಲ.

ಪುಣೆ ಉತ್ತಮ ಫಾರ್ಮ್
ತನ್ನ ಶ್ರೇಷ್ಠ ನಿರ್ವಹಣೆಯಿಂದ ಅಂಕಪಟ್ಟಿಯ ಕೆಳಗಿನ ಅರ್ಧ ಭಾಗದಿಂದ ಮೇಲೆದ್ದು ಬಂದಿರುವ ಪುಣೆ ತಂಡವು ಸದ್ಯ ನಾಲ್ಕನೇ ಸ್ಥಾನದಲ್ಲಿದ್ದು ಪ್ಲೇ ಆಫ್ ತೇರ್ಗಡೆಯ ಉತ್ಸಾಹದಲ್ಲಿದೆ. ಈ ಐಪಿಎಲ್‌ನ ದುಬಾರಿ ಆಟಗಾರ ಬೆನ್‌ ಸ್ಟೋಕ್ಸ್‌ ಅವರ ಸಾಹಸದ ಶತಕದಿಂದಾಗಿ ಸೋಮವಾರದ ಪಂದ್ಯದಲ್ಲಿ ಗುಜರಾತ್‌ ತಂಡವನ್ನು ಉರುಳಿಸಿದ ಪುಣೆ ಪ್ಲೇ ಆಫ್ ತೇರ್ಗಡೆಯ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿತು. 

ಏಕಾಂಗಿಯಾಗಿ ಗುಜರಾತ್‌ ದಾಳಿ ಯನ್ನು ಮೆಟ್ಟಿ ನಿಂತ ಸ್ಟೋಕ್ಸ್‌ ಗೆಲುವಿನ ರೂವಾರಿಯಾಗಿ ಕಾಣಿಸಿಕೊಂಡರು. ಪುಣೆ 42 ರನ್‌ ತಲುಪಿದಾಗ 4 ವಿಕೆಟ್‌ ಕಳೆದುಕೊಂಡು ಒದ್ದಾಡುತ್ತಿತ್ತು. ಆಬಳಿಕ ಪ್ರಚಂಡ ಬ್ಯಾಟಿಂಗ್‌ ಪ್ರದರ್ಶಿಸಿದ ಸ್ಟೋಕ್ಸ್‌ ಇನ್ನೊಂದು ಎಸೆತ  ಬಾಕಿ ಇರುವಾಗಲೇ ತಂಡಕ್ಕೆ ಜಯ ತಂದುಕೊಟ್ಟರು. ಅತ್ಯಂತ ಯಶಸ್ವಿ ನಾಯಕ ಧೋನಿ ಅವರ ಆಟ ನೋಡಲು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. 
 

Advertisement

Udayavani is now on Telegram. Click here to join our channel and stay updated with the latest news.

Next