ಮುಂಬೈ: ಭಾರತೀಯ ಕ್ರಿಕೆಟ್ ನಲ್ಲಿ ಇದೀಗ ನಾಯಕತ್ವದ ಕುರಿತಾಗಿ ಹಲವು ಚರ್ಚೆಗಳು ನಡೆಯುತ್ತಿದೆ. ಕಳೆದ ವಾರ ಏಕಾಏಕಿ ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವಕ್ಕೆ ವಿದಾಯ ಹೇಳಿದ ಬಳಿಕ ಹೊಸ ನಾಯಕನ ಆಯ್ಕೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಈ ಮಧ್ಯೆ ಮಾಜಿ ನಾಯಕ ಕಪಿಲ್ ದೇವ್ ಅವರು ವಿರಾಟ್ ಕೊಹ್ಲಿಗೆ ಹಲವು ಕಿವಿಮಾತು ಹೇಳಿದ್ದಾರೆ.
ಟೆಸ್ಟ್ ನಾಯಕತ್ವವನ್ನು ತ್ಯಜಿಸಿದ ನಂತರ ವಿರಾಟ್ ಕೊಹ್ಲಿ ಹೊಸ ನಾಯಕನ ಅಡಿಯಲ್ಲಿ ಆಡಲು ತಮ್ಮ ಅಹಂಕಾರ (ಇಗೋ) ವನ್ನು ಮರೆಯುವ ಅಗತ್ಯವಿದೆ ಎಂದು ಕಪಿಲ್ ದೇವ್ ಹೇಳಿದ್ದಾರೆ.
ನಾಯಕತ್ವವನ್ನು ತ್ಯಜಿಸುವ ವಿರಾಟ್ ಕೊಹ್ಲಿಯ ನಿರ್ಧಾರವನ್ನು ಸ್ವಾಗತಿಸಿದ ಅವರು ” ವಿರಾಟ್ ಕೆಟ್ಟ ಸಮಯವನ್ನು ಎದುರಿಸುತ್ತಿದ್ದಾರೆ ಮತ್ತು ಹೆಚ್ಚು ಒತ್ತಡದಲ್ಲಿದ್ದಾರೆ” ಎಂದು ಹೇಳಿದರು.
ಇದನ್ನೂ ಓದಿ:ನಾಯಕತ್ವದ ಜವಾಬ್ದಾರಿ ನೀಡಿದರೆ ಸಂತೋಷ: ಜಸ್ಪ್ರೀತ್ ಬುಮ್ರಾ
Related Articles
ಆದರೆ ಕೊಹ್ಲಿ ಈಗ ಹೊಸ ನಾಯಕನ ಅಡಿಯಲ್ಲಿ ತಂಡದಲ್ಲಿ ಉಳಿಯಬೇಕಾದರೆ ನಾಲಿಗೆಯನ್ನು ಹಿಡಿತದಲ್ಲಿರಿಸಬೇಕಿದೆ ಎಂದು ಕಪಿಲ್ ಹೇಳಿದರು.
“ಸುನೀಲ್ ಗವಾಸ್ಕರ್ ಕೂಡ ನನ್ನ ನಾಯಕತ್ವದಡಿಯಲ್ಲಿ ಆಡಿದ್ದಾರೆ. ನಾನು ಕೆ ಶ್ರೀಕಾಂತ್ ಮತ್ತು ಮೊಹಮ್ಮದ್ ಅಜರುದ್ದೀನ್ ನಾಯಕತ್ವದಡಿಯಲ್ಲಿ ಆಡಿದ್ದೇನೆ. ನನಗೆ ಯಾವುದೇ ಅಹಂ ಇರಲಿಲ್ಲ” ಎಂದರು.
“ವಿರಾಟ್ ತನ್ನ ಇಗೋ ಬಿಟ್ಟು ಯುವ ಕ್ರಿಕೆಟಿಗನ ಅಡಿಯಲ್ಲಿ ಆಡಬೇಕಾಗುತ್ತದೆ. ಇದು ಆತನಿಗೆ ಮತ್ತು ಭಾರತೀಯ ಕ್ರಿಕೆಟ್ ಗೆ ಸಹಾಯ ಮಾಡುತ್ತದೆ. ವಿರಾಟ್ ಹೊಸ ನಾಯಕ, ಹೊಸ ಆಟಗಾರರಿಗೆ ಮಾರ್ಗದರ್ಶನ ನೀಡಬೇಕು. ನಾವು ವಿರಾಟ್ ಕೊಹ್ಲಿಯ ಬ್ಯಾಟ್ಸ್ಮನ್ ನನ್ನು ಕಳೆದುಕೊಳ್ಳಲು ಬಯಸುವುದಿಲ್ಲ” ಎಂದು ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಹೇಳಿದರು.