Advertisement

ಶ್ರೀ ಕೋಟಿಲಿಂಗೇಶ್ವರ ದೇಗುಲದಲ್ಲಿ ಸರಳ ಕೊಡಿಹಬ್ಬ ಆಚರಣೆ : ವೈಭವದ ಉತ್ಸವಕ್ಕೆ ಕಡಿವಾಣ

06:00 PM Nov 30, 2020 | sudhir |

ಕೋಟೇಶ್ವರ: ನೆರೆದ ಭಕ್ತರ ಸಮ್ಮುಖದಲ್ಲಿ ಇಲ್ಲಿನ ಶ್ರೀ ಕೋಟಿಲಿಂಗೇಶ್ವರ ದೇಗುಲದಲ್ಲಿ ನ. 30 ರಂದು ಸರಳ ಕೊಡಿಹಬ್ಬ ಆಚರಣೆ ನಡೆಯಿತು.

Advertisement

ದೇಗುಲದ ಗರ್ಭಗುಡಿಯ ಒಳಪೌಳಿಯಲ್ಲಿ ಪ್ರಧಾನ ಅರ್ಚಕ ಪ್ರಸನ್ನ ಕುಮಾರ ಐತಾಳ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ಸಂಪ್ರದಾಯ ಬದ್ಧವಾಗಿ ನಡೆಯಿತು. ಉತ್ಸವ ಮೂರ್ತಿಯನ್ನು ಹೊತ್ತು ಹೊರಪೌಳಿಯಲ್ಲಿ ಪ್ರದಕ್ಷಿಣೆಯ ಅನಂತರ ಭಕ್ತರ ಸಮ್ಮುಖದಲ್ಲಿ ವಿಶೇಷ ಪೂಜೆ ನಡೆಯಿತು. ಸಂಕಲ್ಪದಲ್ಲಿ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಬಿ. ಎಸ., ಮಾಜಿ ಧರ್ಮದರ್ಶಿಗಳಾದ ಗೋಪಾಲ ಕೃಷ್ಣ ಶೆಟ್ಟಿ, ಪ್ರಭಾಕರ ಶೆಟ್ಟಿ , ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣದೇವ ಕಾರಂತ ಕೋಣಿ, ಮಾಜಿ ಸದ್ಯಸರು, ಊರ ಪ್ರಮುಖರು ಉಪಸ್ಥಿತರಿದ್ದರು.

ಉತ್ಸವ ತೇರು ಎಳೆಯಲು ಸ್ವಯಂಸೇವಕರಿಗೆ ಮಾತ್ರ ಅವಕಾಶ
ಕೋವಿಡ್‌ -19ರ ನಿಯಮಾನುಸಾರ ನಿಗದಿತ ಮಂದಿಗೆ ಮಾತ್ರ ರಥ ಎಳೆಯಲು ಅವಕಾಶ ಕಲ್ಪಿಸಲಾಗಿತ್ತು. ಭಕ್ತರನ್ನು ಸರತಿಯಲ್ಲಿ ನಿಂತು ದೇವರ ದರ್ಶನ ಮಾಡುವಂತೆ ಸೂಚಿಸಲಾಗಿತ್ತು. ಜನ ಜಂಗುಳಿಯಾಗದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿತ್ತು.

ಪಾನಕ ವಿತರಣೆ
ಆಗಮಿಸಿದ ಭಕ್ತರ ದಣಿವಾರಿಸಲು ದೇಗುಲದಲ್ಲಿ ಪಾನಕ ವಿತರಿಸಲಾಯಿತು. ಸಮಾಜ ಸೇವಕಿ ಪದ್ಮಮ್ಮ ಪಾನಕ ವಿತರಿಸುವಲ್ಲಿ ಹೆಚ್ಚಿನ ಕಾಳಜಿ ವಹಿಸಿದ್ದರು.

Advertisement

ದೇವರಿಗೆ ಹಣ್ಣು ಕಾಯಿ ನೀಡಲು ಅವಕಾಶ
ಆಗಮಿಸಿದ್ದ ಭಕ್ತರು ಶ್ರೀ ದೇವರಿಗೆ ಹಣ್ಣು ಕಾಯಿ ಸೇವೆ ಸಲ್ಲಿಸಲು ಅವಕಾಶ ಒದಗಿಸಲಾಗಿತ್ತು. ಆದರೆ ರಥೋತ್ಸವದ ಅನಂತರ ರಥದ ಬಳಿ ಹಣ್ಣು ಕಾಯಿ ಸೇವೆ ಗೆ ನಿರ್ಬಂಧ ಹೇರಲಾಗಿತ್ತು.

ಕಬ್ಬಿನ ವ್ಯಾಪಾರಿಗಳಿಗೆ ನಿರಾಶೆ
ಸಾಮಾನ್ಯವಾಗಿ ಕೊಡಿ ಹಬ್ಬದಂದು ದೇವರ ದರ್ಶನದ ಅನಂತರ ಮದುಮಕ್ಕಳು ಸಹಿತ ಭಕ್ತರು ಕಬ್ಬಿನ ಕೋಡಿಯೊಂದಿಗೆ ಮನೆಗೆ ಸಾಗುವ ಪದ್ಧತಿ ಇದೆ. ಆದರೆ ಈ ಬಾರಿ ಕೋವಿಡ್‌ -19 ರ ನಿಯಮಾನುಸಾರ ಕಬ್ಬು ಮಾರಾಟವನ್ನು ಪೇಟೆಯ ಹೊರಗಡೆ ನಿಗದಿತ ಸ್ಥಳದಲ್ಲಿ ಮಾತ್ರ ಏರ್ಪಾಡು ಮಾಡಿರುವುದು ಕಬ್ಬು ವ್ಯಾಪಾರಿಗಳು ಸಹಿತ ಭಕ್ತರಿಗೆ ಕಿರಿಕಿರಿ ಉಂಟು ಮಾಡಿದೆ.
ಕೋಟಿ ತೀರ್ಥ ಪುಷ್ಕರಣಿಯ ಸುತ್ತ ತೆರಳಿ ತೀರ್ಥ ಸ್ನಾನ ಸಂಪ್ರೋಕ್ಷಣೆಗೆ ಭಕ್ತರಿಗೆ ನಿರ್ಬಂಧ ಹೇರಿರುವುದರಿಂದ ಭಕ್ತರು ಹಿಂತಿರುಗಬೇಕಾಯಿತು.

ಅನ್ನ ಪ್ರಸಾದವಿಲ್ಲ
ಭಕ್ತರಿಗೆ ಮಧ್ಯಾಹ್ನ ಒದಗಿಸಲಾಗುವ ಅನ್ನಸಂತರ್ಪಣೆಗೆ ಅವಕಾಶವಿಲ್ಲವಿರುವದರಿಂದ ಅನೇಕರಿಗೆ ನಿರಾಶೆಯಾಯಿತು.

ಗರುಡ ಪ್ರದಕ್ಷಿಣೆ
ಎಂದಿನಂತೆ ಈ ಬರಿ ಕೊಡಿಹಬ್ಬದ ತೇರು ಎಳೆಯುವ ಸಂಧರ್ಭದಲ್ಲಿ ರಥಕ್ಕೆ ಗರುಡ ಪ್ರದಕ್ಷಿಣೆ ಮಾಡಿದ ಸಂದರ್ಭದಲ್ಲಿ ಭಕ್ತರು ಹರ ಹರ ಮಹಾದೇವ ಎಂಬ ಉಧೊ^àಷದೊಡನೆ ಭಾವ ಪರವಶರಾದರು.

ವಿರಳವಾದ ಭಕ್ತರು
ಕೋವಿಡ್‌ -19 ರ ಕಾನೂನು ಹಾಗು ನಿರ್ಬಂಧ ಭಕ್ತರ ಮೇಲೆ ಪರಿಣಾಮ ಬೀರಿದ್ದು ಈ ಬಾರಿ ಭಕ್ತರ ಸಂಖ್ಯೆ ಕಡಿಮೆಯಾಗಿತ್ತು. ಸಾಮಾನ್ಯವಾಗಿ 60 ,000ದ‌ಷ್ಟು ಭಕ್ತರು ಕೊಡಿಹಬ್ಬ ವೀಕ್ಷಿಸಲು ಆಗಮಿಸುತ್ತಿದ್ದರು. ಆದರೆ ಕೊರೊನಾ ವೈರಸ್‌ ಬಾಧೆಯಿಂದಾಗಿ ಸರಕಾರದ ನಿಯಮಾನುಸಾರ ಹೇರಿರುವ ಕಟ್ಟುನಿಟ್ಟಾದ ಕಾನೂನು ಕ್ರಮದಿಂದ ನಿರೀಕ್ಷೆಯಷ್ಟು ಭಕ್ತರು ಕಂಡು ಬಂದಿಲ್ಲ. ತಾತ್ಕಾಲಿಕ ಅಂಗಡಿಗಳಿಲ್ಲದೆ ಹಬ್ಬದ ವಾತಾವರಣದ ಮೇಲೆ ಪರಿಣಾಮ ಬೀರಿತ್ತು. ಎಲ್ಲೆಡೆ ಬಿಗು ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಚಿತ್ರ: ಸೌಂದರ್ಯ ಸ್ಟುಡಿಯೋ ಕೋಟೇಶ್ವರ

Advertisement

Udayavani is now on Telegram. Click here to join our channel and stay updated with the latest news.

Next