Advertisement

ನೀವಿಲ್ಲಿಗೆ ಬಂದರೆ,ನೆರೆಸಂತ್ರಸ್ತರಿಗೆ ನೆರವಾದಂತೆ;ಕೊಡಗಿಗೆ ಕೊಡುಗೆ

03:38 PM Aug 25, 2018 | |

ಕೊಡವರ ನಾಡು ನೆರೆಯಿಂದ ತತ್ತರಿಸಿದೆ. ಅವರುಗಳ ಕಣ್ಣೀರೊರೆಸುವ ಸಲುವಾಗಿ ರಾಜಧಾನಿಯಲ್ಲಿ ಕೆಲವು ಕಾರ್ಯಕ್ರಮಗಳು ನೆರೆಸಂತ್ರಸ್ತರಿಗಾಗಿ ಸಮರ್ಪಣೆಯಾಗುತ್ತಿವೆ. ನೀವೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಪ್ರೋತ್ಸಾಹಿಸಿದರೆ, ನೆರೆಸಂತ್ರಸ್ತರ ಕಣ್ಣೀರನ್ನು ಒರೆಸಿದ ಪುಣ್ಯ ನಿಮ್ಮ ಪಾಲಾಗಲಿದೆ…

Advertisement

1. ಪ್ರೀತಿಯ ಕತೆ ನೋಡುತ್ತಾ…
ಹೆಣ್ಣು- ಗಂಡಿನ ನಡುವಿನ ಪ್ರೀತಿಯೇ ಸಹಜ. ಮಿಕ್ಕಿದ್ದೆಲ್ಲವೂ ಅಸಹಜ ಎಂದು ಅನೇಕರು ನಂಬಿರುತ್ತಾರೆ. ಈ ಸಹಜ ಪೂರ್ವಗ್ರಹವನ್ನು ತೊಲಗಿಸಲು ರಚನೆಗೊಂಡಿರುವ ನಾಟಕವೇ “ಒಂದು ಪ್ರೀತಿಯ ಕತೆ’. ಎರಡು ಹೆಣ್ಣಿನ ನಡುವಿನ ಸಲಿಂಗ ಕಾಮದ ಕಥೆಯನ್ನು ತೆರೆದಿಡುತ್ತದೆ. ಗಂಡು- ಹೆಣ್ಣಿನಂತೆಯೇ ಇಲ್ಲೂ ಸಹಜ ಪ್ರೀತಿ, ಭಾವಗಳು ಅರಳುತ್ತವೆ ಎಂಬುದನ್ನು ಈ ಕತೆ ಹೇಳುತ್ತದೆ. ಮರಾಠಿ ಲೇಖಕ ವಿಜಯ್‌ ತೆಂಡೂಲ್ಕರ್‌ ರಚಿತ ಈ ನಾಟಕವು ಕೆಲವು ವರ್ಷಗಳ ಹಿಂದೆ ತೀವ್ರ ಚರ್ಚೆ ಹುಟ್ಟುಹಾಕಿತ್ತು. ಈ ನಾಟಕವನ್ನು ಕನ್ನಡಕ್ಕೆ ತಂದವರು ವೆಂಕಟೇಶ್‌ ಪ್ರಸಾದ್‌. ಥಿಯೇಟರ್‌ ಕಲೆಕ್ಟಿವ್‌ ಸಂಸ್ಥೆಯ ಜನಪ್ರಿಯ ಪ್ರಯೋಗ ಇದಾಗಿದ್ದು, ಕೊಡಗು ನೆರೆಸಂತ್ರಸ್ತರ ನಿಧಿಗಾಗಿ ಈಗ ಎರಡು ಬಾರಿ ಪ್ರದರ್ಶನ ಕಾಣುತ್ತಿದೆ.
ಆಗಸ್ಟ್‌ 26: ಕಲಾಗ್ರಾಮ, ಮಲ್ಲತ್ತಹಳ್ಳಿ, ರಾತ್ರಿ 7.30
ಆಗಸ್ಟ್‌ 29: ರಂಗಶಂಕರ, ಜೆ.ಪಿ. ನಗರ, ರಾತ್ರಿ 7.30
ಪ್ರವೇಶ: 150 ರೂ.
ಸಂಪರ್ಕ: 9900182400

2. ನಕ್ಕು ನಕ್ಕು ಹಗುರಾಗಿ
ನಗುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ವೈದ್ಯರೇ ಹೇಳುತ್ತಾರೆ. ಜನರು ಹಾಸ್ಯೋತ್ಸವಗಳಿಗೆ ಹಾಜರಾತಿ ಹಾಕುವುದೂ ಇದೇ ಕಾರಣಕ್ಕೆ. ಈ ಇಂಗ್ಲೀಷ್‌ ಹಾಸ್ಯೋತ್ಸವದಲ್ಲಿ ಪಾಲ್ಗೊಳ್ಳುವುದರಿಂದ ಎರಡು ಲಾಭವಿದೆ ಒಂದು ಸ್ವಂತದ್ದಾದರೆ ಇನ್ನೊಂದು, ಈ ಕಾರ್ಯಕ್ರಮದಲ್ಲಿ ಸಂಗ್ರಹಗೊಂಡ ಹಣ ಕೊಡಗು ಪ್ರವಾಹ ಸಂತ್ರಸ್ತರ ನಿಧಿಗೆ ಸಂದಾಯವಾಗುತ್ತದೆ ಎನ್ನುವುದು. ರಾಜೇಶ್‌, ರೂಪೇನ್‌ ಮತ್ತು ಅಜಯ್‌ ಈ ಮೂವರು ಜನರನ್ನು ನಗಿಸಲು ಬರುತ್ತಿದ್ದಾರೆ. ರಾಜೇಶ್‌ಗೆ ಇಲ್ಲಿಯವರೆಗೂ ಅರ್ಥವಾಗದ್ದು ಅಂದರೆ ಎರಡು ವಿಚಾರಗಳಂತೆ ಒಂದು ಹೆಣ್ಣು, ಇನ್ನೊಂದು ತಂತ್ರಜ್ಞಾನ, ಹೀಗಾಗಿಯೇ ಅವರ ಹಾಸ್ಯ ಈ ಎರಡು ವಿಚಾರಗಳ ಸುತ್ತಲೇ ಇರುತ್ತದೆ. ಇನ್ನು ಅಜಯ್‌, ಅಂತಾರಾಷ್ಟ್ರೀಯ ಮಟ್ಟದ ಕಾಮಿಡಿಯನ್‌ ರಸೆಲ್‌ ಬ್ರಾಂಡ್‌ ಮತ್ತು ವೀರ್‌ ದಾಸ್‌ ಅವರೊಂದಿಗೆ ವೇದಿಕೆ ಹಂಚಿಕೊಂಡವರು. ಇಷ್ಟು ಹೇಳಿದ ಮೇಲೆ ಅವರ ಕುರಿತು ಹೆಚ್ಚಿನದನ್ನು ಹೇಳುವ ಅಗತ್ಯವಿಲ್ಲ.
ಎಲ್ಲಿ?: ಡಯಲಾಗ್ಸ್‌ ಕೆಫೆ, ನಂ. 57, 15ನೇ ಕ್ರಾಸ್‌, ಜೆ.ಪಿ.ನಗರ 6ನೇ ಹಂತ 
ಯಾವಾಗ?: ಆಗಸ್ಟ್‌ 25, ರಾತ್ರಿ 8 
ಪ್ರವೇಶ: 300 ರೂ.

3. ಕೇಳ ಬನ್ನಿ, ಬೆಂಗಳೂರ ಚರಿತೆ
ಬೆಂಗಳೂರಿನ ಇತಿಹಾಸವನ್ನು ನೀವೆಷ್ಟು ಬಲ್ಲಿರಿ? ಈ ಭಾನುವಾರ ಅದನ್ನು ತಿಳಿಯುತ್ತಲೇ ಇತಿಹಾಸ ತಜ್ಞರೊಂದಿಗೆ ರಾಜಧಾನಿಯಲ್ಲಿ ನೀವು ಹೆಜ್ಜೆ ಹಾಕಬಹುದು. ಇದು “ಹೆರಿಟೇಜ್‌ ವಾಕ್‌’ ಕಾರ್ಯಕ್ರಮ. ಇದರ ಉದ್ದೇಶ ಬೆಂಗಳೂರಿನ ನಾಗರಿಕರಿಗೆ ಇಲ್ಲಿನ ಸ್ಥಳಪರಿಚಯ ತಿಳಿಸುವುದು. ಈ ಮಹಾನಗರದಲ್ಲಿನ ದೇಗುಲ, ಚರ್ಚು, ಮಸೀದಿಗಳು ಸುಮ್ಮನೆ ಎದ್ದುನಿಂತಿಲ್ಲ. ಅವುಗಳ ಹಿಂದೆ ಸಾಕಷ್ಟು ಕತೆಗಳಿವೆ. ಇಲ್ಲಿನ ಪ್ರತಿ ಬಡಾವಣೆಗೂ ಒಂದೊಂದು ಕೌತುಕ ಇತಿಹಾಸವಿದೆ. ಅವುಗಳಿಗೆ ಇಟ್ಟಿರುವ ಹೆಸರಿನ ಹಿಂದೆಯೂ ವಿಶೇಷ ಅರ್ಥಗಳಿವೆ ಎಂಬುದನ್ನು ಈ ವಾಕ್‌ನಿಂದ ತಿಳಿದುಕೊಳ್ಳಬಹುದು. ಇದರ ಟಿಕೆಟ್‌ ಹಣವನ್ನು ನೆರೆ ಸಂತ್ರಸ್ತರ ದೇಣಿಗೆಗೆ ನೀಡಲಾಗುತ್ತಿದೆ. ಬೆಂಗಳೂರಿನ ಚರಿತೆ ತಿಳಿಯುತ್ತಲೇ, ಸಂತ್ರಸ್ತರ ಕಣ್ಣೀರು ಒರೆಸಿದ ಒಂದೊಳ್ಳೆ ಕೆಲಸವೂ ನಿಮ್ಮಿಂದಾಗುತ್ತೆ, ಪಾಲ್ಗೊಳ್ಳಿ. 
ಯಾವಾಗ?: ಆಗಸ್ಟ್‌ 26, ಭಾನುವಾರ, ಬೆಳಗ್ಗೆ 8- 10.30
ಎಲ್ಲಿ?: ಮೈಸೂರು ಬ್ಯಾಂಕ್‌ ಸರ್ಕಲ್‌
ಪ್ರವೇಶ: 0   - 1500 ರೂ.
ಹೆಚ್ಚಿನ ಮಾಹಿತಿಗೆ:  www.eventshigh.com

4. ಇಲ್ಲಿ ವಕೀಲರದ್ದೇ “ಆ್ಯಕ್ಟ್’
ಕೋರ್ಟು, ಕಟಕಟೆ ಎನ್ನುತ್ತಾ ಬದುಕು ಸಾಗಿಸುವ ವಕೀಲರೂ ಕಲಾಭಿರುಚಿಯುಳ್ಳವರು ಎನ್ನುವುದಕ್ಕೆ ಈ ಏಕಾಂಕ ನಾಟಕ ಸ್ಪರ್ಧೆ ಸಾಕ್ಷಿ. ಲಹರಿ ವಕೀಲರ ವೇದಿಕೆಯಿಂದ “ಲಹರಿ ಲಾಯರ್ಸ್‌ ಆ್ಯಕ್ಟ್- 2018′ ಈಗಾಗಲೇ (ಶುಕ್ರವಾರ) ಶುರುವಾಗಿದ್ದು, 25ರಂದು ಕೊನೆಗೊಳ್ಳಲಿದೆ. ರಾಜ್ಯದ ಹಲವು ಭಾಗದ ವಕೀಲ ಕಲಾವಿದರು ಈ ಸಂದರ್ಭದಲ್ಲಿ ವಿವಿಧ ನಾಟಕಗಳನ್ನು ಆಡಿತೋರಿಸಲಿದ್ದಾರೆ. ಎನ್‌. ಶ್ರೀನಿವಾಸ ರಚಿತ “ಕನಸಿನವರು’, ಡಾ. ಚಂದ್ರಶೇಖರ ಕಂಬಾರ ಅವರು ಬರೆದಿರುವ “ಭಾರತಾಂಬೆ’, ಕೆ.ವಿ. ಸುಬ್ಬಣ್ಣ ಅವರು ರಚಿಸಿರುವ “ಭಗವದಜ್ಜುಕೀಯಮ್‌’, ಕೆ.ಎನ್‌. ವಿಜಯಲಕ್ಷ್ಮಿ ಅವರು ಬರೆದಿರುವ “ಬ್ಲಿಡ್‌ ವೆಡ್ಡಿಂಗ್‌’ ನಾಟಕಗಳ ಪ್ರದರ್ಶನವಿರುತ್ತದೆ. ಇದನ್ನು ಕ್ರಮವಾಗಿ ಶಿವಮೊಗ್ಗ, ದಾವಣಗೆರೆ, ಮೈಸೂರು, ಬೆಂಗಳೂರಿನ ವಕೀಲ ಕಲಾವಿದರು ಅಭಿನಯಿಸಲಿದ್ದಾರೆ. ಈ ನಾಟಕಗಳಿಂದ ಸಂಗ್ರಹವಾದಂಥ ಹಣವನ್ನು ಕೊಡಗಿನ ನೆರೆಹಾವಳಿ ಪೀಡಿತ ಪ್ರದೇಶಗಳ ಸಂತ್ರಸ್ತರ ನಿಧಿಗೆ ನೀಡಲಾಗುವುದು.
ಯಾವಾಗ?: ಆಗಸ್ಟ್‌ 25, ಶನಿವಾರ, ಬೆಳಗ್ಗೆ 10
ಎಲ್ಲಿ?: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ
ಪ್ರವೇಶ: 50 ರೂ.

Advertisement

5. ಪಕ್ಕಾ ಲೋಕಲ್‌
ಬೆಂಗಳೂರಿನಲ್ಲಿ ಹಲ ವರ್ಷಗಳಿಂದ ಪಕ್ಕಾ ಲೋಕಲ್‌ ಕಾಮಿಡಿ ಮೂಲಕ ಜನರನ್ನು ನಗಿಸುತ್ತಿರುವ ತಂಡ ನೆರೆ ಪರಿಹಾರಕ್ಕೆ ನೆರವಾಗುವ ಸಲುವಾಗಿ ಹಾಸ್ಯ ಕಾರ್ಯಕ್ರಮವನ್ನು ಆಯೋಜಿಸಿದೆ. 
 ವಂಶೀಧರ್‌ ಭೋಗರಾಜು, ಸೇಜಲ್‌, ಸತೀಶ್‌ ಮತ್ತಿತರರು ನಗಿಸಲು ಬರುತ್ತಿದ್ದಾರೆ. ವಂಶೀಧರ್‌ “ಪಂಚರ್‌ ಶಾಪ್‌’ ಹಾಸ್ಯತಂಡದ ಸದಸ್ಯ ಮತ್ತು “ಹಂಬಲ್‌ ಪೊಲಿಟಿಷಿಯನ್‌ ನೊಗ್‌ರಾಜ್‌’ ಚಿತ್ರದಲ್ಲಿ ನಟಿಸಿದವರು. ಅವರ ಕಂಗ್ಲಿಷ್‌ ಹಾಸ್ಯ ಯಾರನ್ನೂ ನಗಿಸದೇ ಬಿಡದು.
ಎಲ್ಲಿ?: ಬಿಫ್ಲ್ಯಾಟ್‌, ನಂ.776, 100 ಅಡಿ ರಸ್ತೆ, ಇಂದಿರಾನಗರ
ಯಾವಾಗ?: ಆಗಸ್ಟ್‌ 26, ರಾತ್ರಿ 8

Advertisement

Udayavani is now on Telegram. Click here to join our channel and stay updated with the latest news.

Next