Advertisement

ಕೊಡಗು, ದ.ಕ. ಗಡಿಯಲ್ಲಿ ಮತ್ತೆ ಭೂ ಕಂಪನ ಅನುಭವ

08:35 AM Aug 15, 2022 | Team Udayavani |

ಸುಳ್ಯ : ಹಲವು ಸಮಯಗಳಿಂದ ನೆಮ್ಮದಿಯಿಂದ ಇದ್ದ ಜನರಿಗೆ ಮತ್ತೂಮ್ಮೆ ಕೊಡಗು, ದಕ್ಷಿಣ ಕನ್ನಡ ಗಡಿಯಲ್ಲಿ ಭೂಮಿ ಕಂಪಿಸಿದ ಅನುಭವ ಆಗುವುದರೊಂದಿಗೆ ಮತ್ತೆ ಆತಂಕಗೊಂಡಿದ್ದಾರೆ. ಸುಳ್ಯ ತಾಲೂಕಿನ ಕಲ್ಮಕಾರು ಹಾಗೂ ಕಲ್ಲುಗುಂಡಿ ಪರಿಸರದಲ್ಲಿ ರವಿವಾರ ಸಂಜೆ ವೇಳೆ ಭೂಮಿ ಕಂಪಿಸಿದ ಬಗ್ಗೆ ಸ್ಥಳೀಯ ಜನರು ಮಾಹಿತಿ ನೀಡಿದ್ದಾರೆ.

Advertisement

ಕಲ್ಮಕಾರು ಪರಿಸರದಲ್ಲಿ ಸಂಜೆ 6.30ರ ಸುಮಾರಿಗೆ ದೊಡ್ಡ ಶಬ್ದದೊಂದಿಗೆ ಭೂಮಿ ಕಂಪಿಸಿರುವುದಾಗಿ ತಿಳಿದು ಬಂದಿದೆ. ತಾಲೂಕಿನ ಕಲ್ಮಕಾರು, ಮೆಂಟೆಕಜೆ, ಗುಳಿಕ್ಕಾನ ಪ್ರದೇಶದಲ್ಲಿ ಕಂಪನ ಅನುಭವವಾಗಿದೆ. ಶಬ್ದವು ಕೊಲ್ಲಮೊಗ್ರದ ವರೆಗೆ ಕೇಳಿಸಿರುವುದಾಗಿ ತಿಳಿದು ಬಂದಿದೆ.

ಕಲ್ಲುಗುಂಡಿಯ ಚಟ್ಟೆಕಲ್ಲು, ಕೊಯನಾಡಿನ ಮಂಗಳ ಪಾರೆಯಲ್ಲೂ ಭೂಮಿ ಕಂಪಿಸಿದ್ದು, ಕೆಲವು ಸೆಕೆಂಡ್‌ ದೊಡ್ಡ ಶಬ್ದ ಕೇಳಿಸಿದೆ. ಸಣ್ಣ ಮಟ್ಟಿನ ಕಂಪನದ ಅನುಭವ ಆಗಿದೆ.
ಆಗಸ್ಟ್ ಮೊದಲ ದಿನ ಸುರಿದ ಬಾರೀ ಮಳೆಗೆ ಭೂಕುಸಿತ ಸಂಭವಿಸಿ ಕಲ್ಮಕಾರು, ಕಲ್ಲುಗುಂಡಿ ವ್ಯಾಪ್ತಿಯಲ್ಲಿ ಭಾರೀ ಹಾನಿ, ಜಲಾವೃತ ಸಂಭವಿಸಿ ಅಪಾರ ನಷ್ಟ ಉಂಟಾಗಿತ್ತು. ಜನರು ಇವುಗಳಿಂದ ಅಲ್ಪ ನೆಮ್ಮದಿಗೆ ಬರುವ ವೇಳೆ ಇದೀಗ ಭೂಮಿ ಕಂಪಿಸಿರುವುದು ಜನತೆಯಲ್ಲಿ ಮತ್ತೆ ಆತಂಕ ತಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಒಂದೂವರೆ ತಿಂಗಳ ಹಿಂದೆ ಸುಳ್ಯ ತಾಲೂಕಿನ ಕೆಲವೆಡೆ ಭೂಮಿ ಏಳೆಂಟು ಬಾರಿ ಕಂಪಿಸಿತ್ತು. ಚೆಂಬು, ಅರಂತೋಡು ಕಂಪನದ ಕೇಂದ್ರದ ಬಿಂದುವಾಗಿತ್ತು. ಸಂಪಾಜೆ ವ್ಯಾಪ್ತಿಯ ಕೆಲವು ಮನೆಗಳಲ್ಲಿ ಬಿರುಕು ಮೂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next