Advertisement

ಕೋಚಿಮುಲ್: 67 ನಾಮಪತ್ರ ಸ್ವೀಕೃತ

03:08 PM May 08, 2019 | Team Udayavani |

ಕೋಲಾರ: ಕೋಚಿಮುಲ್(ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ) ನಿರ್ದೇಶಕ ಸ್ಥಾನಕ್ಕೆ ನಡೆಯಲಿರುವ ಚುನಾವಣೆ ರಂಗೇರಿದ್ದು, ಒಟ್ಟು 54 ಮಂದಿ ಅಭ್ಯರ್ಥಿಗಳಿಂದ 67 ನಾಮಪತ್ರ ಸಲ್ಲಿಕೆಯಾಗಿದ್ದು, ಮಂಗಳವಾರ ನಡೆದ ಪರಿಶೀಲನೆಯಲ್ಲಿ ಎಲ್ಲವೂ ಸ್ವೀಕೃತಗೊಂಡವು.

Advertisement

ನಾಮಪತ್ರ ಸಲ್ಲಿಸಲು ಕಡೆ ದಿನವಾದ ಸೋಮವಾರ 39 ಮಂದಿ 53 ಉಮೇದುವಾರಿಕೆ ಸಲ್ಲಿಕೆಯಾಗಿದ್ದು, ಮಂಗಳವಾರ ಚುನಾವಣಾಧಿ ಕಾರಿ ಸೋಮಶೇಖರ್‌ ನಾಮಪತ್ರಗಳ ಪರಿಶೀಲನೆ ನಡೆಸಿದ್ದು, ಒಟ್ಟು 54 ಮಂದಿ ಸಲ್ಲಿಸಿದ್ದ 67 ಉಮೇದುವಾರಿಕೆ ಸ್ವೀಕೃತಗೊಂಡಿವೆ.

ಕೊನೆ ದಿನ ಶಕ್ತಿ ಪ್ರದರ್ಶನ: ನಾಮಪತ್ರ ಸಲ್ಲಿಸುವ ಕೊನೆ ದಿನವಾದ ಮಂಗಳವಾರ ನಗರದ ಉಪವಿಭಾಗಾಧಿಕಾರಿ ಕಚೇರಿ ಆವರಣವು ಕಣಕ್ಕಿಳಿ ಯುವವರ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿ ಯಾಯಿತು. ಬೆಳಗ್ಗೆಯಿಂದಲೆ ಚುನಾ ವಣಾಧಿಕಾರಿಯಾದ ಉಪವಿಭಾಗಾಧಿಕಾರಿ ಕಚೇರಿ ಸಮೀಪ ಹಲವು ಮಂದಿ ಜಮಾಯಿಸಿದ್ದರು. ಕಣಕ್ಕಿಳಿಯುವ ಅಭ್ಯ ರ್ಥಿಗಳ ಬೆಂಬಲಿಗರು ಹಾಜರಾಗಿದ್ದರು. ಕೋಲಾರ ಮಾತ್ರವಲ್ಲದೆ ಅವಳಿ ಜಿಲ್ಲೆ ಚಿಕ್ಕಬಳ್ಳಾಪುರ ದಿಂದ ಆಗಮಿಸಿದ್ದ ಜನತೆ ಅಭ್ಯರ್ಥಿ ಹಾಗೂ ಅಭ್ಯರ್ಥಿಗೆ ಸಾಥ್‌ ನೀಡಿದ ನಾಯಕರಿಗೆ ಜೈಕಾರ ಹಾಕಿದರು.

ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ನಾಮಪತ್ರ ಸಲ್ಲಿಸುವವರೊಂದಿಗೆ ಕೆಲವರಿಗಷ್ಟೇ ಕಚೇರಿ ಆವರಣದೊಳಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ನಾಮಪತ್ರ ಸಲ್ಲಿಸಿ ಹೊರಬರುತ್ತಿದ್ದಂತೆ ಹೆಗಲ ಮೇಲೆ ಎತ್ತಿಕೊಂಡು ಜೈಕಾರ ಹಾಕಿದರಲ್ಲದೆ, ಮತ್ತೂಮ್ಮೆ ಕಣಕ್ಕಿಳಿದಿರುವ ಹಾಲಿ ನಿರ್ದೇಶಕ ಜಯಸಿಂಹ ಕೃಷ್ಣಪ್ಪ ಅವರು ತೆರೆದ ವಾಹನದಲ್ಲಿ ರೋಡ್‌ ಶೋ ನಡೆಸಿದರು.

ಕೋಚಿಮುಲ್ ಅಧ್ಯಕ್ಷರಾದ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವರಲ್ಲದೆ, ಹಾಲಿ ನಿರ್ದೇಶಕರ ಪೈಕಿ ಬಹುತೇಕ ಮಂದಿ ಮತ್ತೂಮ್ಮೆ ಕಣಕ್ಕಿಳಿದಿದ್ದಾರೆ. ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್‌ ಮಾತ್ರವಲ್ಲದೆ, ಚಿಕ್ಕಬಳ್ಳಾಪುರ ಜಿಪಂ ಅಧ್ಯಕ್ಷ ಮಂಜುನಾಥ್‌, ಮಾಜಿ ಅಧ್ಯಕ್ಷ ಪಿ.ಎನ್‌. ಕೇಶವರೆಡ್ಡಿ, ಮುಖಂಡರಾದ ಕೇಶವರೆಡ್ಡಿ, ಯಲುವಹಳ್ಳಿ ರಮೇಶ್‌, ಚಿಕ್ಕಬಳ್ಳಾಪುರ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್‌, ಮಾಲೂರು ಮಾಜಿ ಶಾಸಕ ಮಂಜುನಾಥಗೌಡ ಸೇರಿದಂತೆ ಹಲವು ಮಂದಿ ತಮ್ಮ ಬೆಂಬಲಿತ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸುವ ವೇಳೆ ಸಾಥ್‌ ನೀಡಿದರು.

Advertisement

ಉಪವಿಭಾಗಾಧಿಕಾರಿ ಕಚೇರಿ ಆವರಣದ ಹೊರಭಾಗದಲ್ಲಿ ನಾಮಪತ್ರ ಸಲ್ಲಿಸುವ ಹಾಗೂ ಅವರಿಗೆ ಸಾಥ್‌ ನೀಡಿದ ನಾಯಕರ ಬೆಂಬಲಿಗರು ಜಮಾಯಿಸಿದ್ದರು. ಜತೆಗೆ, ಕಾರುಗಳ ಕಾರುಬಾರು ಹೆಚ್ಚಿನ ಪ್ರಮಾಣದಲ್ಲಿತ್ತು. ಇದರಿಂದ ಸಂಚಾರ ಅಸ್ತವ್ಯವಸ್ಥಗೊಂಡಿತ್ತು. ಸುಗಮ ಸಂಚಾರಕ್ಕೆ ಪೊಲೀಸರು ಹರಸಾಹಸ ಪಡಬೇಕಾಯಿತು.

ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆ ಗಿಂತಲೂ ರಂಗೇರಿರುವ ಕೋಚಿಮುಲ್ ನಿರ್ದೇಶಕ ಸ್ಥಾನ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದೆ. ಕೆಲ ನಾಯಕರು ಪ್ರತಿಷ್ಠೆಯಾಗಿ ಸ್ವೀಕರಿಸಿರುವುದು, ಒಕ್ಕೂಟದ ಅಕಾರ ಚುಕ್ಕಾಣಿ ಹಿಡಿಯುವ ಹಂಬಲ ಇದಕ್ಕೆ ಕಾರಣವಾಗಿದೆ.

ನಾಮಪತ್ರ ಸಲ್ಲಿಕೆಗೆ ಯಮಗಂಡಕಾಲ ಅಡ್ಡಿ: ಉಮೇದುವಾರಿಕೆ ಸಲ್ಲಿಸಲು ಒಳ್ಳೆ ಕಾಲಾಕ್ಕಾಗಿ ಕಾದರು ನಾಮಪತ್ರ ಸಲ್ಲಿಸುವ ಅಭ್ಯರ್ಥಿ, ನಾಯಕರಿಗೆ ಯಮಗಂಡಕಾಲವೂ ಕಾಡ ತೊಡಗಿತು. ಮಂಗಳವಾರ ಬೆಳಗ್ಗೆ 10.30ರಿಂದ ಮಧ್ಯಾಹ್ನ 12ರವರೆಗೆ ಯಮಗಂಡಕಾಲವಿದೆ. ಬಳಿಕ ಒಳ್ಳೆ ಕಾಲ ಕೂಡಿಬರಲಿದೆ ಎಂದು ಕೆಲ ಅಭ್ಯರ್ಥಿಗಳು ಹಾಗೂ ಅವರಿಗೆ ಸಾಥ್‌ ನೀಡಿದ ನಾಯಕರು ಕಾದಿದ್ದ ದೃಶ್ಯ ಕಂಡುಬಂತು. ಮಧ್ಯಾಹ್ನ 12ರ ಬಳಿಕ ನಾಮಪತ್ರ ಸಲ್ಲಿಸಲು ಮುಗಿಬಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next