ಮಂಗಳೂರು: ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ವಿಶ್ವವಿದ್ಯಾನಿಲಯ, ಕಾಲೇಜು ಇರುವ ಹಿನ್ನೆಲೆಯಲ್ಲಿ ಅದನ್ನು ನಾಲೆಜ್ ಹಬ್ ಹಾಗೂ ಧಾರ್ಮಿಕ ಪ್ರವಾಸಿ ಸರ್ಕೀಟ್ ಆಗಿ ರೂಪಿಸಲಾಗುವುದು ಎಂದು ಶಾಸಕ, ಮಾಜಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಶನಿವಾರ ಉದಯವಾಣಿ ಮಂಗಳೂರು ಕಚೇರಿಯಲ್ಲಿ ನಡೆದ “ಶಾಸಕರ ಜತೆ ನಮ್ಮ ಮಾತುಕತೆ’ ಸರಣಿಯಲ್ಲಿ ಜಿಲ್ಲೆಯ ಮೊದಲ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿ ಈ ಮಾಹಿತಿ ನೀಡಿದರು.
ಹಲವಾರು ಶಿಕ್ಷಣ ಸಂಸ್ಥೆಗಳು ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿವೆ. ಇಲ್ಲಿ ಇನ್ನಷ್ಟು ವಿ.ವಿ.ಗಳು ಬರುವುದಕ್ಕೆ ಅವಕಾಶಗಳಿವೆ. ಹಾಗೆ ಬರುವಂತಹ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಉದ್ಯೋಗಾವಕಾಶ ಸೃಷ್ಟಿಸಬಲ್ಲ ಅತ್ಯಾಧುನಿಕ ಕೋರ್ಸ್ಗಳನ್ನು ರಿಯಾಯಿತಿ ಶುಲ್ಕದಲ್ಲಿ ನೀಡು ವುದಾದರೆ ಅವರಿಗೂ ತೆರಿಗೆಯಲ್ಲಿ ವಿನಾಯಿತಿ, ಸರಕಾರದ ವತಿಯಿಂದ ಕಡಿಮೆ ದರಕ್ಕೆ ಭೂಮಿ ನೀಡಬಹುದಾಗಿದೆ. ಅದಕ್ಕೆ ಈ ನಾಲೆಜ್ ಹಬ್ ಯೋಜನೆಯಲ್ಲಿ ವ್ಯವಸ್ಥೆ ಮಾಡಲಾಗುವುದು.
ಈಗಾಗಲೇ ಕೆಲವು ಸಂಸ್ಥೆಗಳು ಮುಂದಿನ 10 ವರ್ಷಗಳಲ್ಲಿ 15 ಸಾವಿರ ವಿದ್ಯಾರ್ಥಿಗಳಿರುವ ಕ್ಯಾಂಪಸ್ ರೂಪಿಸುವುದಕ್ಕೆ ದೇರಳಕಟ್ಟೆ, ಕಿನ್ಯಾದಲ್ಲಿ ಜಾಗವನ್ನೂ ಗುರುತಿಸಿವೆ ಎಂದರು.
Related Articles
ನನ್ನ ಕ್ಷೇತ್ರದಲ್ಲಿರುವ ಪ್ರಮುಖ ಯಾತ್ರಾ ಸ್ಥಳಗಳನ್ನು ಹಾಗೂ ಶೈಕ್ಷಣಿಕ ಕೇಂದ್ರಗಳನ್ನೂ ಬಳಸಿ ಕೊಂಡು ಪ್ರವಾಸೋದ್ಯಮ ಆಕರ್ಷಿಸುವ ಕುರಿತು ಹಿಂದೆ ಸರಕಾರ ಯೋಜನೆ ರೂಪಿಸಿತ್ತು, ಈಗ ಅದಕ್ಕೆವೇಗ ಕೊಡಬೇಕಾಗಿದೆ ಎಂದರು.
ಕಡಲ್ಕೊರೆತ ತಡೆ
ಕಾಮಗಾರಿ ತನಿಖೆ
ಏಷ್ಯನ್ ಅಭಿವೃದ್ಧಿ ಬ್ಯಾಂಕ್ ನೆರವಿನಿಂದ ಉಳ್ಳಾಲ ಸೋಮೇಶ್ವರ ಪ್ರದೇಶ ದಲ್ಲಿ ಕೈಗೊಳ್ಳಲಾದ ಕಡಲ್ಕೊರೆತ ತಡೆಯ ಕಾಮಗಾರಿಯಲ್ಲಿ ಅವ್ಯವ ಹಾರ ನಡೆದಿರುವ ಬಗ್ಗೆ ಸಂಶಯ ವ್ಯಕ್ತವಾಗಿದ್ದು ಲಿಖೀತ ದೂರು ಬಂದಲ್ಲಿ ಈ ಬಗ್ಗೆ ವಿಧಾನ ಮಂಡ ಲದ ಅಂದಾಜು ಸಮಿತಿಗೆ ತನಿಖೆಗೆ ಕೋರಿ ಬರೆ ಯಲಾಗುವುದು ಎಂದು ಖಾದರ್ ತಿಳಿಸಿದರು.
ಕಾಮಗಾರಿಯ ಬಗ್ಗೆ ತೃತೀಯ ಪಾರ್ಟಿಯಿಂದ ಪರಿಶೀಲನೆ ನಡೆಸದೆ ಯೋಜನೆಯನ್ನು ಬಂದರು ಇಲಾಖೆ ಯವರು ಹಸ್ತಾಂತರ ಪಡೆದುಕೊಳ್ಳ ಬಾರದು ಎಂದು ನಾನು ಬಂದರು ಖಾತೆ ಸಚಿವ ಎಸ್.ಅಂಗಾರ, ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಬರೆದಿದ್ದೆ, ಆದರೆ ಬೆಂಗಳೂರಿನಲ್ಲೇ ಅದನ್ನು ಪಡೆದುಕೊಂಡಿದ್ದಾರೆ, ಈಗ ಕಡಲ್ಕೊರೆತ ಮುಂದುವರಿದಿದ್ದು, ಮೂರು ವರ್ಷಗಳಿಂದ ಇದರ ತಡೆಗೆ ಕಿಂಚಿತ್ ಹಣವೂ ಬಿಡುಗಡೆಯಾಗುತ್ತಿಲ್ಲ ಎಂದರು.
ನಾಗರಿಕರೊಂದಿಗೆ ಫೋನ್ ಇನ್ ಹಾಗೂ ಉದಯವಾಣಿ ಕಚೇರಿಯಲ್ಲಿ ನಡೆದ ಸಂವಾದದ ವೇಳೆ ಖಾದರ್ ಅವರು, ಉಳ್ಳಾಲ ಮಂಗಳೂರಿನಿಂದ ಪ್ರತ್ಯೇಕ ಗೊಂಡು ತಾಲೂಕಾ ಗಿರುವುದು, ಇದರಿಂದ ವಿವಿಧ ಕಚೇರಿಗಳು ಕ್ಷೇತ್ರದ ಹಲವು ಕಡೆ ಹರಡಿಕೊಂಡು (ಒಂದೇ ಕಡೆ ದಟ್ಟಣೆಯಾಗದ ರೀತಿ) ಅಭಿವೃದ್ಧಿಗೆ ಆದ್ಯತೆ ನೀಡಿರುವುದು, ಉಳ್ಳಾಲ ವನ್ನು ಸ್ಯಾಟಲೈಟ್ ಸಿಟಿ ಉಪನಗರವಾಗಿ ರೂಪಿಸುವ ಸಾಧ್ಯತೆಗಳು, ಸೌಹಾರ್ದ ತಾಣವನ್ನಾಗಿ ಕ್ಷೇತ್ರವನ್ನು ರೂಪಿಸುವುದು, ಇದರಿಂದ ಉದ್ಯಮಗಳು ಹೆಚ್ಚು ಬರುವ ನಿರೀಕ್ಷೆ ಇರುವ ಬಗ್ಗೆ ವಿವರ ನೀಡಿದರು.
ಉದಯವಾಣಿ ವತಿಯಿಂದ ಶಾಸಕ ಖಾದರ್ ಅವರನ್ನು ಗೌರವಿಸಲಾಯಿತು.