Advertisement

ಓದಿನಿಂದ ಬಂದ ಜ್ಞಾನ ಯಾವತ್ತೂ ವ್ಯರ್ಥವಲ್ಲ

06:00 AM Nov 27, 2018 | |

ಮನುಷ್ಯನಿಗೆ ಕಷ್ಟ ಬಂದಾಗ, ಕೈಯಲ್ಲಿ ಹಣ ಇಲ್ಲದೆ ಇದ್ದಾಗ ವಿದ್ಯೆಯ ಮಹತ್ವ ಗೊತ್ತಾಗುತ್ತದೆ. ನಮ್ಮ ಹತ್ತಿರ ವಿದ್ಯೆಯೊಂದಿದ್ದರೆ ನಾವು ಯಾವುದೇ ವಯಸ್ಸಿನಲ್ಲಿ, ಎಲ್ಲಿಗೆ ಹೋದರೂ ಹಣ ಸಂಪಾದಿಸಬಹುದು. ಹಾಗಂತ ಬರೀ ದುಡಿಯುವುದಕ್ಕಾಗಿ ಹಣಗಳಿಸುವುದಕ್ಕಾಗಿ ಓದಬೇಕು, ವಿದ್ಯಾವಂತರಾಗಬೇಕು ಎಂದೇನಿಲ್ಲ. ನಾವು ನಮ್ಮ ದೇಹದ ಹಸಿವನ್ನು ನೀಗಿಸುವುದಕ್ಕಾಗಿ ಪ್ರತಿನಿತ್ಯ ಸಮಯಕ್ಕೆ ಸರಿಯಾಗಿ ಊಟಮಾಡುತ್ತೇವೆ. ಮನಸ್ಸಿನ ಹಸಿವನ್ನು ನೀಗಿಸುವಂಥದ್ದು ಪ್ರೀತಿ, ಸ್ನೇಹ, ಸಂಬಂಧಗಳು. ಹಾಗೆಯೇ ನಮ್ಮ ಬುದ್ದಿಯ ಮೆದುಳಿನ ಹಸಿವಿಗೂ ಊಟ ಹಾಕಬೇಕಲ್ಲವೇ?

Advertisement

ನಾವೆಲ್ಲ ಸಾಮಾನ್ಯವಾಗಿ ಒಂದು ಗುರಿ ಇಟ್ಟುಕೊಂಡು ಓದುತ್ತೇವೆ. ಪದವಿ, ಎಂಜಿನಿಯರಿಂಗ್‌, ವೈದ್ಯಕೀಯ, ಸ್ನಾತಕೋತ್ತರ ಪದವಿಗಳನ್ನು ಮುಗಿಸಿ ಕೆಲಸಕ್ಕೆ ಸೇರೋಣ ಎಂಬುದು ಬಹುತೇಕರ ಸಾಮಾನ್ಯ ಗುರಿ. ಒಂದು ಕೆಲಸ ಸಿಕ್ಕಿದ ನಂತರವೂ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸುವವರು ತುಂಬ ವಿರಳ. ಸಂಪಾದನೆಯ ಮಾರ್ಗ ಸಿಕ್ಕಿದ ಬಳಿಕ ಓದಿನ ಅಗತ್ಯವಿಲ್ಲ ಎಂಬುದು ಅನೇಕರಲ್ಲಿರುವ ಭಾವನೆ. ಊಟ, ನಿದ್ದೆ, ಬಟ್ಟೆ, ವಾಹನ… ಹೀಗೆ ಇವೆಲ್ಲ ನಮಗೆ ಜೀವನ ಪೂರ್ತಿ ಬೇಕು. ಅದೇ ರೀತಿ ಬುದ್ಧಿಗೆ ಆಹಾರ ನೀಡುವ ಕೆಲಸವು ಜೀವನ ಪೂರ್ತಿ ನಡೆಯಬೇಕು. ಮನುಷ್ಯನಿಗೆ ಸಹಜವಾಗಿ ಒಂದು ವಯಸ್ಸು ಮೀರಿದ ಮೇಲೆ ಒಂದಷ್ಟು ವಿಚಾರಗಳ ಮೇಲೆ ಜಿಗುಪ್ಸೆ ಬರುತ್ತದೆ. ಅಯ್ಯೋ ನನಗ್ಯಾಕೆ ಇದೆಲ್ಲಾ? ಇಷ್ಟು ವರ್ಷ ಓದಿರೋದೇ ಸಾಕು. ಈಗ ವಯಸ್ಸಾಯ್ತು. ಇನ್ನೇನು ನಾನು ಕೆಲಸ ಹುಡುಕ್ಕೊಂಡು ಹೋಗ್ಬೇಕಾ ಅಂತ ಸುಮ್ಮನೆ ಕುಳಿತುಬಿಡುತ್ತೇವೆ. ಹೀಗೆ ಸುಮ್ಮನೆ ಕುಳಿತಷ್ಟೂ ಜೀವನದ ಜಂಜಾಟ, ಬಿಡಿಸಿಕೊಳ್ಳಲಾರದಂಥ ಸಂಬಂಧಗಳ ವ್ಯಾಮೋಹ ನಮ್ಮ ತಲೆಯನ್ನು ಕೆಡಿಸಲು ಶುರುಮಾಡುತ್ತದೆ. 

ಎಲ್ಲರಿಗೂ ಕಷ್ಟವಿದೆ 
ಓದುವುದಕ್ಕೆ ವಯಸ್ಸಿನ ಮಿತಿಯಿಲ್ಲ, ಜ್ಞಾನ ಸಂಪಾದನೆ ಮಾಡಲು ಜಾತಿ ಆಧಾರಿತ ಮೀಸಲಾತಿಯ ಚೌಕಟ್ಟಿಲ್ಲ, ಅನೇಕ ಯುವಕರು ಓದೋ ವಯಸ್ಸಿನಲ್ಲಿ ಸರಿಯಾಗಿ ಓದದೆ, ಚಿಕ್ಕವಯಸ್ಸಿನಲ್ಲೇ ಹಣ ಸಂಪಾದಿಸಿ ಅಧಿಕಾರದ ರುಚಿ ಕಂಡುಕೊಂಡಿರುತ್ತಾರೆ. ಆದರೆ ಅವರೆಲ್ಲ ಒಂದಲ್ಲ ಒಂದು ದಿನ ತನಗೆ ವಿದ್ಯೆ ಇಲ್ಲವೆಂದು ಪಶ್ಚಾತ್ತಾಪವನ್ನು ಪಟ್ಟುಕೊಂಡಿರುತ್ತಾರೆ. ಇನ್ನು ಕೆಲವರು ತಮ್ಮ ಮನೆಯಲ್ಲಿ ತುಂಬಾ ಬಡತನವಿದ್ದದ್ದರಿಂದ ಹೆಚ್ಚು ಓದಲಾಗಲಿಲ್ಲ ಎಂದು ಹೇಳುವುದುಂಟು. ಆದರೆ ನಮ್ಮ ಕಣ್ಮುಂದೆ ಇರುವ ಅನೇಕ ಸಾಧಕರು ಬಡತನದಿಂದಲೇ ಓದಿ ಮುಂದೆ ಬಂದವರು. ಜೀವನದಲ್ಲಿ ಎಷ್ಟೇ ಕಷ್ಟವಿದ್ದರೂ, ತಂದೆ ತಾಯಿ ದುಡಿಯುವ ಪರಿಸ್ಥಿತಿಯಲ್ಲಿ ಇಲ್ಲದಿದ್ದರೂ, ವಿದ್ಯೆ ನಮ್ಮ ತಲೆಗೆ ಹತ್ತದಿದ್ದರೂ ಕಷ್ಟಪಟ್ಟು ಓದಿ ನಮ್ಮ ಬುದ್ಧಿಯನ್ನು ಚುರುಕುಗೊಳಿಸಿಕೊಳ್ಳಬೇಕು. ಇವತ್ತಿಗೂ ಕೆಲವು ಮಕ್ಕಳು ತಮ್ಮ ಮನೆಯಲ್ಲಿ ಕೆಲಸಮಾಡಿ, ಬೇರೆಯವರ ಮನೆಯಲ್ಲಿ ಕೂಲಿಗೂ ಹೋಗಿ, ಶಿಕ್ಷಣವನ್ನು ಮುಂದುವರಿಸುತ್ತಾರೆ. ನಾವು ಭಾವಿಸುವಂತೆ ಯಾರ ಜೀವನವೂ ಸುಲಭವಲ್ಲ, ದೇಶದ ಪ್ರಧಾನಮಂತ್ರಿಯಿಂದ ಹಿಡಿದು ಎಲ್ಲರಿಗೂ ಅವರವರದ್ದೇ ಆದ ಕಷ್ಟವಿದೆ. 

ಪೋಷಕರ ಪಾಲಿದೆ 
ಹೆತ್ತವರು/ಪೋಷಕರು ತಮ್ಮ ಮಕ್ಕಳ ಸೋಂಬೇರಿತನ ಬಡಿದು ಓಡಿಸಿ, ವಿದ್ಯಾವಂತರನ್ನಾಗಿ ಮಾಡಬೇಕು. ಹೆತ್ತವರಿಗೆ ಹೆಗ್ಗಣ ಮುದ್ದು ಎಂಬಂತೆ ಸಾಮಾನ್ಯವಾಗಿ ಬಹುತೇಕ ತಂದೆತಾಯಿಗಳು ಮಕ್ಕಳು ಹೇಳಿದಂತೆ ತಲೆಯಾಡಿಸುತ್ತಾರೆ. ಕೆಲವರಂತೂ ಜಗತ್ತಲ್ಲಿ ತಮ್ಮನ್ನು ಬಿಟ್ಟು ಬೇರೆ ಯಾರೂ ಮಕ್ಕಳನ್ನೇ ಹೊಂದಿಲ್ಲವೇನೋ ಎಂಬಂತೆ ಆಡುತ್ತಾರೆ. ಮಕ್ಕಳೆಂದರೆ ಅಷ್ಟು ಮುದ್ದು ಖಂಡಿತ. ಎಷ್ಟೆಂದರೆ ನಮಗೆ ನಮ್ಮ ಮಕ್ಕಳೇ ಹೆಚ್ಚು. ಹಾಗಂತ ಈ ಮುದ್ದು, ಪ್ರೀತಿಯನ್ನು ಒಂದಷ್ಟು ವಿಷಯದಿಂದ ದೂರವಿಟ್ಟರೆ ಒಳಿತು. ಏಕೆಂದರೆ ಪ್ರತಿಯೊಬ್ಬರಿಗೂ ಮನೆಯೇ ಮೊದಲ ಪಾಠಶಾಲೆಯಲ್ಲವೇ? ಹೀಗಾಗಿ ಪ್ರತಿಯೊಬ್ಬನ ಭವಿಷ್ಯ ರೂಪಿತವಾಗುವುದು ಶಾಲೆಯಿಂದಲ್ಲ, ಮನೆಯಲ್ಲೇ. ತಂದೆ ತಾಯಿ ಹೇಳಿದಂತೆ ಮಕ್ಕಳು ಕೇಳಬೇಕು. ದೊಡ್ಡವರು ಹೇಳಿದ್ದನ್ನು ಕೇಳುವ ಶಿಸ್ತನ್ನು ಹೆತ್ತವರು ಪ್ರಾರಂಭದಲ್ಲಿಯೇ ಮಕ್ಕಳಲ್ಲಿ ಬೆಳೆಸಬೇಕು. ವ್ಯಕ್ತಿ ಎಷ್ಟೇ ಶ್ರೀಮಂತನಾಗಿರಬಹುದು, ಆತನ ಬಳಿ ಮೂರು ತಲೆಮಾರಿಗಾಗುವಷ್ಟು ಸಂಪತ್ತು ಇರಬಹುದು. ಆದರೆ ಪ್ರಾಥಮಿಕ ಶಿಕ್ಷಣವಿಲ್ಲವೆಂದರೆ ಜೀವನದಲ್ಲಿ ಸ್ನೇಹ, ಪ್ರೀತಿ, ಮದುವೆ, ಗುಣಮಟ್ಟದ ಜೀವನ, ಗೌರವ… ಇವೆಲ್ಲದರಲ್ಲೂ ರಾಜಿ ಮಾಡಿಕೊಳ್ಳುವುದು ಅನಿವಾರ್ಯವಾಗಿ ಬಿಡುತ್ತದೆ. 

ನೀವು ನಿತ್ಯ ಮಕ್ಕಳಿಗೆ ಓದು ಅಭ್ಯಾಸ ಮಾಡಿಸಿದರೆ ಮಾತ್ರ ಅವರು ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಕುಳಿತು ಓದಬಲ್ಲರು. ಉಳಿದ ದಿನವೆಲ್ಲ ಜಾಲಿಯಾಗಿ ಇರಲು ಬಿಟ್ಟು ಪರೀಕ್ಷೆ ಹತ್ತಿರ ಬಂದಾಗ ಓದು ಎಂದು ಬಲವಂತ ಮಾಡಿದರೆ ಪ್ರಯೋಜನವಿಲ್ಲ, ಹಾಗೆಯೇ ಶಿಕ್ಷಣದ ವಿಷಯ ಕೂಡ. ನಾನು ಓದಬೇಕು, ವಿದ್ಯಾವಂತನಾಗಬೇಕು ಎಂಬ ಆಲೋಚನೆಯನ್ನು ನೀವು ಮಕ್ಕಳಲ್ಲಿ ಪ್ರಾರಂಭದಿಂದಲೇ ಬೆಳೆಸುವುದು ಉತ್ತಮ.

Advertisement

ಓದಿಗೆ ವಯಸ್ಸಿನ ಮಿತಿಯಿಲ್ಲ 
ಕೆಲವರಿಗೆ ಓದಬೇಕು ಅಂತ ಆಸೆಯಿರುತ್ತದೆ. ಆದರೂ ಮುಂದೂಡುತ್ತಾ ಹೋಗುತ್ತಾರೆ. ಇವತ್ತು ಅಂದೊRಂಡಿದ್ದನ್ನು ಇವತ್ತೇ ಶುರುಮಾಡಬೇಕು. ಇನ್ನು ಕೆಲವರು ಎಲ್ಲ ಕೋರ್ಸ್‌ಗಳಿಗೆ ಸೇರಿಕೊಳ್ಳುತ್ತಾರೆ, ಆದರೆ ಯಾವುದನ್ನೂ ಪೂರ್ತಿಗೊಳಿಸುವುದಿಲ್ಲ. ಮೊದಲ ಎರಡು ದಿನ ಇರುವ ಉತ್ಸಾಹ, ಆಸಕ್ತಿ ದಿನ ಕಳೆದಂತೆ ಕಡಿಮೆಯಾಗುತ್ತದೆ. ವರ್ಷಗಳೇ ಉರುಳಿ ಹೋದರೂ ನಾವು ಏನನ್ನೂ ಪೂರ್ತಿಗೊಳಿಸಿರುವುದಿಲ್ಲ. ಹಿಡಿದ ಹಠವನ್ನು ಬಿಡದೆ ಸಾಧಿಸಬೇಕು, ಇಲ್ಲವಾದರೆ ನಿಮಗೆ ಬದುಕಿನಲ್ಲಿ ಯಾವುದನ್ನೂ ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ.

ನಾನು ಚಿಕ್ಕವಳಾಗಿದ್ದಾಗ ನನಗೆ ಓದುವುದೆಂದರೆ ಒಂಥರಾ ಅಲರ್ಜಿಯಾಗಿತ್ತು. ಶಾಲೆಗೆ ಸುಮ್ಮನೆ ಹೋಗುತ್ತಿದ್ದೆ. ಕಾಲೇಜಿಗೆ ಕಾಲಿಟ್ಟ ಮೇಲೂ ಓದುವ ಹುಚ್ಚಿರುವವರನ್ನು ನೋಡಿ, ಇವರೆಲ್ಲ ಹೇಗೆ ಓದುತ್ತಾರೆ? ಕೈಯಲ್ಲಿ ಪುಸ್ತಕ ಹಿಡಿದ್ರೆ ನಿದ್ದೆ ಬರಲ್ವಾ? ಓದೋದು ಎಷ್ಟು ಬೋರಿಂಗ್‌ ಕೆಲಸ ಅನ್ನಿಸುತ್ತಿತ್ತು. ಆಮೇಲೆ ದಿನಕ್ಕೆ ಒಂದೇ ಒಂದು ಪುಟವಾದರೂ ಓದಬೇಕು. ಯಾವ ಪುಸ್ತಕವಾದರೂ, ಏನು ವಿಚಾರವಿದ್ದರೂ ಪರಾÌಗಿಲ್ಲ ಅಂದುಕೊಂಡೆ, ನಾನು ಎಲ್ಲೇ ಇದ್ರೂ ಪ್ರತಿದಿನ ಒಂದು ಪುಟ ಏನನ್ನಾದರೂ ಓದಲೇಬೇಕು ಎಂದು ನಿರ್ಧರಿಸಿ ಓದುವುದನ್ನು ನಿತ್ಯ ಚಟುವಟಿಕೆಯನ್ನಾಗಿಸಿಕೊಂಡೆ. ಇವತ್ತು ನಾವು ಏನು ಓದುತ್ತೀವೋ ಅದು ವ್ಯರ್ಥ ಅಂದುಕೊಳ್ಳಬಾರದು. ಯಾವತ್ತೋ ಒಂದು ದಿನ ಆ ಜ್ಞಾನ ನಮ್ಮ ಬದುಕಿನಲ್ಲಿ ಸಹಾಯಕ್ಕೆ ಬರುತ್ತದೆ. ಒಂದು ಸಮಯದಲ್ಲಿ ನಮ್ಮನ್ನು ಕಾಪಾಡುತ್ತದೆ. ಹೀಗಾಗಿ ಪದವಿ ಸಿಗುತ್ತಿದ್ದಂತೆ, ಕೆಲಸಕ್ಕೆ ಸೇರಿಕೊಂಡ ತಕ್ಷಣ ಬದುಕಿನಲ್ಲಿ ಓದಿನ ಅಧ್ಯಾಯ ಮುಗಿಯಿತೆಂದು ಯಾವತ್ತೂ ಭಾವಿಸಬೇಡಿ.

ಏನಾದರೂ ಒಂದಷ್ಟು ಓದಿ
ದಿನಕ್ಕೆ ಒಂದು ಪುಟ ಭಗವದ್ಗೀತೆ, ಉಪನಿಷತ್ತನ್ನಾದರೂ ಓದಿ. ಕುರಾನ್‌, ಬೈಬಲ್ಲಾದ್ರೂ ಓದಿ. ಚಂದಮಾಮ, ಪಂಚತಂತ್ರವಾದರೂ ಓಕೆ. ಓದಿದ ಎಲ್ಲಾ ವಿಚಾರಗಳು ನಮ್ಮ ಜ್ಞಾನವನ್ನು ವೃದ್ಧಿಸುತ್ತವೆ. ಚಿಕ್ಕ ವಯಸ್ಸಿನಿಂದ ಯಾರ್ಯಾರು ಓದಿಗೆ ಪ್ರಾಮುಖ್ಯತೆ ಕೊಟ್ಟಿಲ್ಲವೋ ಅವರೆಲ್ಲ ಇವತ್ತಿಗೂ ಜೀವನದಲ್ಲಿ ಒದ್ದಾಡುತ್ತಿದ್ದಾರೆ. ಜ್ಞಾನದ ಕೊರತೆಯಿಂದ ಹಲವೆಡೆ ಅವಮಾನ ಎದುರಿಸುತ್ತಾರೆ.

ಸಾಧಾರಣವಾಗಿ ಸಮಾಜದಲ್ಲಿ ಕೆಟ್ಟ ಕೆಲಸಗಳಿಗೆ ಕೈ ಹಾಕುವವರು ವಿದ್ಯೆಯ, ಅದಕ್ಕಿಂತ ಹೆಚ್ಚಾಗಿ ಬುದ್ಧಿಯ ಕೊರತೆಯುಳ್ಳವರು. ವಿದ್ಯಾವಂತರಾಗಿದ್ದರೆ ಜೀವನಮಟ್ಟ ಸುಧಾರಣೆ ಕಷ್ಟ. ಕೆಲಸದ ವಿಷಯನ್ನೇ ತೆಗೆದುಕೊಳ್ಳೋಣ, ನಿಮ್ಮ ವಿದ್ಯಾರ್ಹತೆ ಕಡಿಮೆಯಿದ್ದರೆ, ನೀವು ನಿವೃತ್ತಿಯಾಗುವವರೆಗೂ ಕೆಳಗಿನ ಹುದ್ದೆಯಲ್ಲೇ ದುಡಿಯಬೇಕು. ನಾನು ನಮ್ಮ ಬಾಸ್‌ ಥರ ಜಾಸ್ತಿ ಓದಬೇಕಿತ್ತು ಎಂದು ಆಗಾಗ ಹೇಳುವವರನ್ನು ನಾವು ಎಲ್ಲ ಕಚೇರಿಗಳಲ್ಲಿಯೂ ಕಾಣುತ್ತೇವೆ. ಅಂದರೆ ವಿದ್ಯೆ ಮಾತ್ರ ನಮಗೆ ಜೀವನದಲ್ಲಿ ಒಳ್ಳೆಯ ಗುಣಮಟ್ಟ ನೀಡಬಲ್ಲದು. ಹಣಕ್ಕೆ ಸಿಗುವ ಗೌರವಕ್ಕಿಂತ ವಿದ್ಯೆಗೆ ಸಿಗುವ ಗೌರವ ಹೆಚ್ಚು. 

ಸಿಕ್ಕಿದ್ದನ್ನೆಲ್ಲ ಓದುತ್ತೇನೆ ಎಂದು ಕೆಟ್ಟ ಸರಕುಗಳನ್ನು, ಇನ್ನೊಬ್ಬರಿಗೆ ಅನ್ಯಾಯ ಮಾಡುವುದನ್ನು ಓದಿದರೆ ಪ್ರಯೋಜನವಿಲ್ಲ. ಪ್ರತಿನಿತ್ಯ ಪತ್ರಿಕೆ ಓದುವುದನ್ನು ಅಭ್ಯಾಸ ಮಾಡಿಕೊಳ್ಳಿ. ಅದರಲ್ಲಿ ಸಕಾರಾತ್ಮಕ ಸುದ್ದಿಗಳನ್ನು ಗಮನಿಸಿ. ಋಣಾತ್ಮಕ ಓದು ನಮ್ಮ ಅಲೋಚನೆಯನ್ನು ಋಣಾತ್ಮಕವಾಗಿಸುತ್ತದೆ. ಓದಿಗೆ ಮಿತಿಯಿಲ್ಲ, ಮುಗಿಯಿತು ಎಂಬುದು ಇಲ್ಲ. ಎಷ್ಟೋ ಜನ ಸುಸ್ಥಿತಿಯಲ್ಲಿದ್ದರೂ ಓದಿನಿಂದ ಒಂದಷ್ಟು ಪದವಿ ಗಳಿಸುತ್ತಿರುತ್ತಾರೆ. ಇನ್ನು ಸಾಹಿತ್ಯ ಸಂಬಂಧಿ, ಜ್ಞಾನದ ಓದಿಗೆ ಅಂತ್ಯವೇ ಇಲ್ಲ. ಒಂದು ಸಿನಿಮಾದಂತೆ, ಔಟಿಂಗ್‌ನಂತೆ ಕೆಲವರಿಗೆ ಓದೆಂಬುದು ಮನಸ್ಸಿಗೆ ಮುದ ನೀಡುವ ಮಾರ್ಗವೂ ಹೌದು.

Advertisement

Udayavani is now on Telegram. Click here to join our channel and stay updated with the latest news.

Next