Advertisement

Kirimanjeshwar; 25 ವರ್ಷಗಳಿಂದ ನೀರಿನ ಸಮಸ್ಯೆಗೆ ಇಲ್ಲ ಮುಕ್ತಿ

03:29 PM Apr 08, 2023 | Team Udayavani |

ಉಪ್ಪುಂದ: ಸಮುದ್ರದ ನೆಂಟಸ್ಥಿಗೆ ಉಪ್ಪಿಗೆ ಬಡತನ ಎನ್ನುವಂತೆ ಗ್ರಾಮದ ಸುತ್ತಲೂ ಆವೃತವಾಗಿದ್ದರೂ ಕುಡಿಯುವ ನೀರಿನ ಬರ ಎದುರಿಸುತ್ತಿರುವುದು ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಭಾಗದ ಜನರು.

Advertisement

ಕಿರಿಮಂಜೇಶ್ವರ ಗ್ರಾ.ಪಂ. ವ್ಯಾಪ್ತಿಯ ಕೊಡೇರಿ ಗ್ರಾಮದ 5ನೇ ವಾರ್ಡ್‌ನಲ್ಲಿ 170 ಮನೆಗಳಿವೆ. ಸುಮಾರು 1,500 ಜನ ಸಂಖ್ಯೆ ಇದೆ. ಇದರಲ್ಲಿ ಬಹುತೇಕ ಮನೆಯವರು ನಳ್ಳಿ ನೀರಿನ ಆಶ್ರಯವನ್ನು ಅವಲಂಬಿಸಿದ್ದಾರೆ. ಇದರಲ್ಲಿ ಸುಮಾರು 60 ಮನೆಗಳು ಸುಮಾರು 25 ವರ್ಷಗಳಿಂದ ನಳ್ಳಿ ನೀರಿಗೂ ಪರದಾಡುತ್ತಿದ್ದು ಇಂದಿಗೂ ಪರಿಸ್ಥಿತಿ ಮಾತ್ರ ಬದಲಾಗಲಿಲ್ಲ.

ಎಲ್ಲೆಡೆ ಚುನಾವಣೆಯ ಕಾವು ಏರುತ್ತಿದೆ. ಚರ್ಚೆಗಳ ಅಬ್ಬರದಲ್ಲಿ ಇರುವಾಗ ಈ ಪ್ರದೇಶದ ಜನರಿಗೆ ಅದು ಯಾವುದೂ ಬೇಡವಾಗಿದೆ. ಒಂದಿಷ್ಟು ನೀರು ನಳ್ಳಿಯಲ್ಲಿ ಬಂದರೆ ಸಾಕಪ್ಪ ಎನ್ನುತ್ತಾರೆ ಮಹಿಳೆಯರು. ಇಲ್ಲದಿದ್ದರೆ ಒಂದೂವರೆ ಕಿ.ಮೀ. ದೂರದಿಂದ ನೀರು ಹೊತ್ತು ತರಬೇಕಾದ ಪರಿಸ್ಥಿತಿ.

3 ದಿನಕ್ಕೆ ನೀರು; ಈಗ ಅದೂ ಇಲ್ಲ
ಈ ಭಾಗದಲ್ಲಿ ಪ್ರತೀ ವರ್ಷ ಫೆಬ್ರವರಿಯಿಂದ ಮಳೆಗಾಲದವರೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. 5ನೇ ವಾರ್ಡ್‌ಗೆ ಮೂರು ದಿನಗಳಿಗೆ ಒಮ್ಮೆ ನೀರು ಬೀಡಲಾಗುತ್ತದೆ. ಬೆಳಗ್ಗೆ ಬಿಟ್ಟ ನೀರು ಮನೆಯ ನಳ್ಳಿಗೆ ಸಂಜೆ ಆದರೂ ಬರುವುದೇ ಇಲ್ಲ. ಸುಮಾರು 2 ಕಿ.ಮೀ. ದೂರದಲ್ಲಿ ತೆಮಕಯ್ಯನಮನೆ ಸಮೀಪ ನೀರು ಸರಬರಾಜು ಮಾಡುವ ಬಾವಿ ಇದೆ. 1 ಕಿ.ಮೀ. ದೂರದಲ್ಲಿ ಟ್ಯಾಂಕ್‌ ಇದೆ, ನೀರು ಬಿಟ್ಟರೂ ಅನಧಿಕೃತ ಒಳ ನಳ್ಳಿ ಸಂಪರ್ಕದಿಂದ, ದೊಡ್ಡ ಮಟ್ಟದ ಪೈಪ್‌ಗ್ಳ ಅಳವಡಿಕೆ ಕಾರಣ ಆರಂಭದ ಮನೆಗಳಿಗೆ ನೀರು ಸಿಗುವುದು ಬಿಟ್ಟರೆ ಗ್ರಾಮದ ಕೊನೆಯ ಭಾಗದ ಸುಮಾರು 60 ಮನೆಗಳಿಗೆ ನೀರು ತಲುಪ್ಪುತ್ತಿಲ್ಲ ಎನ್ನುವುದು ಗ್ರಾಮಸ್ಥರ ದೂರು. ನೀರಿನ ಟ್ಯಾಂಕ್‌ನ ಕೆಳಗಡೆಯೆ ನೀರು ಪೋಲಾಗುತ್ತಿದ್ದರೂ ಸಹ ದುರಸ್ತಿಗೆ ಸ್ಥಳೀಯಾಡಳಿತ ಮುಂದಾಗಲಿಲ್ಲ.

ಗ್ರಾಮ ವಾಸ್ತವ್ಯದಲ್ಲಿ ಡಿಸಿಗೆ ಮನವಿ
ಕಿರಿಮಂಜೇಶ್ವರ ಗ್ರಾಮದಲ್ಲಿ ತಿಂಗಳ ಹಿಂದೆ ನಡೆದ ಡಿಸಿ ಗ್ರಾಮ ವಾಸ್ತವ್ಯದಲ್ಲಿ ಡಿಸಿ ಕೂರ್ಮಾರಾವ್‌ ಅವರಿಗೆ ನೀರಿನ ಸಮಸ್ಯೆಗಳ ಬಗ್ಗೆ ಮನವಿ ನೀಡಲಾಗಿತ್ತು. ತತ್‌ಕ್ಷಣ ನೀರು ಸರಬರಾಜು ಮಾಡುವ ಬಗ್ಗೆ ಭರವಸೆ ನೀಡಿದ್ದರು. ಆದರೆ ಅದು ಕಡತದಲ್ಲೇ ಬಾಕಿಯಾಗಿದೆ.

Advertisement

ಒಳ ನಳ್ಳಿ ಸಂಪರ್ಕದಿಂದ ಸಮಸ್ಯೆ
ಟ್ಯಾಂಕ್‌ನಿಂದ ಬರುವ ನೀರು ಕೆಲವು ಮನೆಯವರು ಇತರ ಮಾರ್ಗದ ಮೂಲಕ ನೀರನ್ನು ಹೆಚ್ಚುವರಿಯಾಗಿ ತುಂಬಿಸಿಕೊಳ್ಳುತ್ತಾರೆ. ಇವುಗಳ ಬಗ್ಗೆ ಗ್ರಾ.ಪಂ.ಅಧಿಕಾರಿಗಳ ಗಮನಕ್ಕೆ ತಂದಾಗ ಅಂಥವರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಹೇಳುತ್ತಾರೆ ಹೊರತು ಯಾವುದೇ ಕೆಲಸ ಮಾಡುವುದಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ. ಸಮಸ್ಯೆಗಳ ಬಗ್ಗೆ ಜನರು ವಾರ್ಡ್‌ ಸಭೆ, ಗ್ರಾಮ ಸಭೆಗಳಲ್ಲಿ ನಿರಂತರ ಅಧಿಕಾರಿಗಳ ಬಗ್ಗೆ ತಿಳಿಸಿದಾಗ ನಿರ್ಣಯ ಬರೆದುಕೊಂಡು ಹೋಗುತ್ತಾರೆ. ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುವ ಬಗ್ಗೆ ಖಾತರಿ ನೀಡುತ್ತಾರೆ. ಬಳಿಕ ಈ ಸ್ಥಳಗಳಿಗೆ ಬರುವುದೇ ಇಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಪೈಪ್‌ ಲೈನ್‌ ಇದೆ ನೀರು ಯಾವಾಗ ?
ಜಲಜೀವನ್‌ ಮಿಷನ್‌ ಯೋಜನೆಯಡಿಯಲ್ಲಿ ಕುಡಿಯುವ ನೀರಿನ ಪೈಪ್‌ ಲೈನ್‌ ಕೆಲಸ ಮಾಡಲಾಗಿದೆ. ಆದರೆ ನೀರು ಯಾವಾಗ ಬರುತ್ತದೆ ಎನ್ನುವ ಸ್ಪಷ್ಟತೆ ಇಲ್ಲ. ಈ ಯೋಜನೆಯಿಂದಾಗಿ ಗ್ರಾ.ಪಂ.ಹಣದಿಂದ ಟ್ಯಾಂಕ್‌ ಮೂಲಕ ನೀರು ನೀಡುವಂತೆ ಇಲ್ಲ ಎನ್ನುತ್ತಾರೆ ಅಧಿಕಾರಿಗಳು. ಈಗ ಇರುವ ಸಮಸ್ಯೆಗಳಿಗೆ ಅನುದಾನ ಒದಗಿಸುವಂತೆಯೂ ಇಲ್ಲವಂತೆ ಹಾಗಿದ್ದರೆ ಜನರ ಗೋಳು ಕೇಳುವವರು ಯಾರು ಎನ್ನುವಂತಾಗಿದೆ. ಕುಡಿಯುವ ನೀರು ನೀಡಲು ಸಾಧ್ಯವಾಗದಿದ್ದರೆ ಬರುವ ಚುನಾವಣೆ ಬಹಿಷ್ಕಾರ ಮಾಡುವ ಕುರಿತು ಗ್ರಾಮಸ್ಥರು ಸ್ಪಷ್ಟ ನಿರ್ಧಾರ ತೆಗದುಕೊಳ್ಳುವ ಸಾಧ್ಯತೆಯನ್ನು ತಿಳಿಸಿದ್ದಾರೆ.

ಸಮಸ್ಯೆ ಬಗೆಹರಿಸಿ
ನಿತ್ಯ ನೀರಿನ ಸಮಸ್ಯೆಯಿಂದ ಕಂಗಾಲಾಗಿದ್ದೇವೆ, ಅಧಿಕಾರಿಗಳಿಗೆ ಮನವಿ ಮಾಡಿ ಸಾಕಾಗಿ ಹೋಗಿದೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಈ ಬಾರಿ ನಮ್ಮ ಮತದಾನದ ಹಕ್ಕು ಚಲಾಯಿಸುವುದಿಲ್ಲ
– ಜನಾರ್ದನ, ಹಿರಿಯ ನಾಗರಿಕ

ತುರ್ತು ಕ್ರಮ ಅಗತ್ಯ
ಅಕ್ರಮ ಮಾರ್ಗದಿಂದ, ಹೆಚ್ಚುವರಿ ನೀರು ಪಡೆಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ನೀರು ಪೋಲಾಗದಂತೆ ತಡೆಯ ಬೇಕು.ಟ್ಯಾಪ್‌ಗ್ಳನ್ನು ಅಳವಡಿಸಬೇಕು. ನೀರು ನೀಡುವ ಬಗ್ಗೆ ತುರ್ತು ಕ್ರಮ ಅಗತ್ಯವಿದೆ. – ಆನಂದ ಪೂಜಾರಿ, ಗ್ರಾ.ಪಂ. ಸದಸ್ಯರು ಕಿರಿಮಂಜೇಶ್ವರ

– ಕೃಷ್ಣ ಬಿಜೂರು

Advertisement

Udayavani is now on Telegram. Click here to join our channel and stay updated with the latest news.

Next