ಕಾರ್ಕಳ: ತಾಲೂಕಿನ ಮಿಯ್ನಾರು ಗ್ರಾಮದ ಜೋಡುಕಟ್ಟೆ ಕಜಾಯ್ ನಿವಾಸಿ ಕುಮಾರಿ (29)ಎರಡೂ ಕಿಡ್ನಿಗಳ ವೈಫಲ್ಯದಿಂದ ಬಳಲುತ್ತಿದ್ದು, ಕಳೆದೊಂದು ವರ್ಷದಿಂದ ಈ ಸಮಸ್ಯೆಯಿಂದ ತತ್ತರಿಸಿಹೋಗಿದ್ದಾರೆ. ಅವರ ಚಿಕಿತ್ಸೆಗೆ ಆರ್ಥಿಕ ನೆರವು ಸಿಕ್ಕರೆ ಜೀವ ಉಳಿಯುವ ಭರವಸೆ ಹೊಂದಿದ್ದಾರೆ. ಈಗಾಗಲೇ ಇವರನ್ನು ಉಳಿಸಿಕೊಳ್ಳಲು ಮನೆ ಮಂದಿ ಸುಮಾರು ರೂ. 2 ಲಕ್ಷ ವೆಚ್ಚ ಮಾಡಿದ್ದು ಪತಿ ಕೂಲಿ ಕಾರ್ಮಿನಾಗಿರುದರಿಂದ ಮುಂದಿನ ಚಿಕಿತ್ಸಾ ವೆಚ್ಚವನ್ನು ಭರಿಸಲು ಅಸಹಾಯಕರಾಗಿದ್ದಾರೆ. ಮೂಲತಃ ಗಂಗಾವತಿಯ ನಿವಾಸಿಯಾಗಿರುವ ಪತಿ ಕುಮಾರಸ್ವಾಮಿ ಹೊಟ್ಟೆಪಾಡಿಗಾಗಿ ಮಿಯ್ನಾರಿನಲ್ಲಿ ನೆಲೆಸಿ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ. ಪತ್ನಿ ಕುಮಾರಿ ಅವರಿಗೆ 2ನೆಯ ಹೆರಿಗೆ ಸಂದರ್ಭ ಕಿಡ್ನಿ ಸಮಸ್ಯೆ ಕಂಡುಬಂದಿತ್ತು. ವೈದ್ಯರು ತಪಾಸಣೆ ನಡೆಸಿದಾಗ ಎರಡೂ ಕಿಡ್ನಿಗಳು ವೈಫಲ್ಯವಾಗಿದೆ ಎನ್ನುವ ಸುದ್ದಿ ಹೇಳಿ ಮನೆಮಂದಿ ಎಲ್ಲ ಕಂಗಾಲಾದರು. ಬಳಿಕ ಅವರನ್ನು ವಾರಕ್ಕೆರಡು ಬಾರಿ ಮಂಗಳೂರಿನ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಈಗಲೂ ಚಿಕಿತ್ಸೆ ನಡೆಯುತ್ತಿದೆ.
ಕಿಡ್ನಿ ದಾನಕ್ಕೆ ಮುಂದಾದ ತಾಯಿ
ಮಗಳು ಕುಮಾರಿ ಬದುಕಬೇಕು ಎನ್ನುವ ಆಕಾಂಕ್ಷೆಯಿಂದ ತಾಯಿ ರಾಜಮ್ಮ ತಮ್ಮದೊಂದು ಕಿಡ್ನಿಯನ್ನು ಮಗಳಿಗೆ ಕೊಡಲು ಸಿದ್ಧರಾಗಿದ್ದಾರೆ. ಆದರೆ ಕಿಡ್ನಿ ಜೋಡಿಸಲು ಸುಮಾರು 5 ಲಕ್ಷ ಖರ್ಚಾಗುತ್ತದೆ ಎಂದು ತಿಳಿದ ಮೇಲೆ ಮನೆ ಮಂದಿ ಅಷ್ಟು ವೆಚ್ಚವನ್ನು ಬರಿಸಲಾಗದೇ ಕಂಗಾಲಾಗಿದ್ದಾರೆ. ಅಲ್ಲದೇ ಡಯಾಲಿಸಿಸ್ ಚಿಕಿತ್ಸೆಗೆ ವಾರಕ್ಕೆ ರೂ. 12,000 ಖರ್ಚಾಗುತ್ತಿದೆ. ಇಷ್ಟೆಲ್ಲಾ ಅಸಹಾಯಕತೆಯ ನಡುವೆಯೂ ಪತ್ನಿಯನ್ನು ಬದುಕಿಸಲು ಹೊರಟ ಪತಿಗೆ ಸಹೃದಯಿಗಳು, ಸಂಘ ಸಂಸ್ಥೆಗಳು ಆರ್ಥಿಕವಾಗಿ ನೆರವಾದರೆ ಜೀವವೊಂದನ್ನು ಉಳಿಸಬಹುದು ಪತಿಯ ಕನಸನ್ನು ನನಸಾಗಿಸಬಹುದು.
ನೆರವು ನೀಡಲು
ಕರ್ನಾಟಕ ಬ್ಯಾಂಕ್ ಕಾರ್ಕಳ ಶಾಖೆಯಲ್ಲಿರುವ ಕುಮಾರಿ ಅವರ ಉಳಿತಾಯ ಖಾತೆ :
ಖಾತೆ ಸಂಖ್ಯೆ: 4042500101868201,
IFSC Code: KARB0000404ಗೆ ಕಳಿಸಬಹುದು, ಮೊ.
8197213533ಗೆ ಸಂಪರ್ಕಿಸಬಹುದು.