ಬೆಂಗಳೂರು: “ಇಂಥದ್ದೇ ಪಾತ್ರ ಮಾಡಬೇಕು ಎಂದು ಕನಸು ಕಾಣುವವ ನಾನಲ್ಲ. ನನಗಾಗಿ ಕತೆ ಬರೆದವರನ್ನು ಗೌರವಿಸುವ ವ್ಯಕ್ತಿತ್ವ ನನ್ನದು. ಈಗ ನಾನು ಏನು ಮಾಡುತ್ತೇನೆಯೋ ಅದನ್ನು ಶ್ರದ್ಧೆಯಿಂದ ಮಾಡುತ್ತೇನೆ…’ ಇದು ನಟ ಕಿಚ್ಚ ಸುದೀಪ್ ಅವರ ಮನದಾಳದ ಮಾತುಗಳು.
ಚಿತ್ರ ರಂಗಕ್ಕೆ ಬಂದು 25 ವರ್ಷಗಳಾಗಿದ್ದು, ಈ ಹಿನ್ನೆಲೆಯಲ್ಲಿ ಉದಯವಾಣಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸಮ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾದರು. ಬಳಿಕ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ನನ್ನ ಕೆರಿಯರ್ನ 25 ವರ್ಷವನ್ನು ಗುರುತಿಸಿ ಸಮ್ಮಾನಿಸಿದ್ದಕ್ಕೆ ಧನ್ಯವಾದಗಳು. ಒಬ್ಬ ಕಲಾವಿದ ಸಾಧನೆ ಮಾಡಿದಾಗ ಆತನನ್ನು ಗುರುತಿಸಿ ಬೆನ್ನು ತಟ್ಟಿದರೆ ಆತ ಮತ್ತಷ್ಟು ಸಾಧನೆ ಮಾಡಬಲ್ಲ. ಕಲಾವಿದರು ಬರಬಹುದು, ಹೋಗಬಹುದು. ಆದರೆ, ಪತ್ರಿಕೆ ನಿರಂತರ. ಉದಯವಾಣಿ ಆರಂಭದಿಂದಲೂ ಚಿತ್ರರಂಗಕ್ಕೆ ಪ್ರೋತ್ಸಾಹ ನೀಡುತ್ತಲೇ ಬಂದಿದೆ. ಈ ಕೆಲಸವನ್ನು ಮುಂದುವರಿಸಿಕೊಂಡು ಹೋಗಿ. ಪತ್ರಿಕೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ’ ಎಂದು ಹಾರೈಸಿದರು.
ತಮ್ಮ ಸಿನಿಪಯಣದ ಬಗ್ಗೆ ಮಾತನಾಡಿದ ಸುದೀಪ್, ಸಿನೆಮಾವೇ ನನ್ನ ಜೀವನದ ಒಂದು ಭಾಗವಷ್ಟೇ. ಆ ಕೆಲಸವನ್ನು ತುಂಬಾ ಪ್ರೀತಿಯಿಂದ ಮಾಡುತ್ತಿದ್ದೇನೆ. ನಾನು ಜೀವನದಲ್ಲಿ ಯಾವುದನ್ನು ಆಸೆಪಟ್ಟುಕೊಂಡು ಹೋದವನಲ್ಲ. ಆ ಕ್ಷಣಕ್ಕೆ ನನ್ನ ಕೈಯಲ್ಲಿ ಏನಿದೆಯೋ ಅದನ್ನು ಅನುಭವಿಸಿದ್ದೇನೆ. ಮುಂದೆ ಆ ಪಾತ್ರ ಮಾಡಬೇಕು, ಈ ಪಾತ್ರ ಮಾಡಬೇಕು ಎಂದು ಕನಸು ಕಾಣುವವ ನಾನಲ್ಲ. ನನ್ನ ಜೀವನದಲ್ಲಿ ಯಾರು ಕೆಲಸ ಕೊಡುತ್ತಾರೋ ಅವರಷ್ಟೇ ನನಗೆ ಮುಖ್ಯ. ನಾನು “ಶಾಂತಿ ನಿವಾಸ’, “ಮುಸ್ಸಂಜೆ ಮಾತು’ನಂತಹ ಫ್ಯಾಮಿಲಿ ಓರಿಯೆಂಟೆಡ್ ಸಿನೆಮಾಗಳನ್ನೇ ಮಾಡುತ್ತಾ ಬಂದೆ. ಆದರೆ, ಚಿತ್ರರಂಗ ನನಗೆ ಬಾಕ್ಸ್ ಆಫೀಸ್ ಕಲೆಕ್ಷನ್ ಕೂಡ ಮುಖ್ಯ ಎಂಬುದನ್ನು ಸಾಕಷ್ಟು ಘಟನೆಗಳ ಮೂಲಕ ಮನವರಿಕೆ ಮಾಡಿಕೊಟ್ಟಿತು. ಅಂದಿನಿಂದ ನನ್ನ ಸಿನೆಮಾ ಆಯ್ಕೆ ಕೂಡ ಬದಲಾಯಿತು’ ಎಂದರು.
ಇದೇ ಸಂದರ್ಭದಲ್ಲಿ ತನ್ನ ಫಿಟ್ನೆಸ್ ಬಗ್ಗೆ ಕೇಳಿದ ಪ್ರಶ್ನೆಗೂ ಅವರು ಮುಕ್ತವಾಗಿ ಉತ್ತರಿಸಿದರು.
ಬಳಿಕ ಉದಯವಾಣಿ ಸಿಬಂದಿ ವರ್ಗದವರು ಹಲವಾರು ಪ್ರಶ್ನೆಗಳನ್ನು ಕೇಳಿದ್ದು, ಅವೆಲ್ಲವು ಗಳಿಗೂ ಸುದೀಪ್ ಅವರು ತಮ್ಮದೇ ಧಾಟಿಯಲ್ಲಿ ಉತ್ತರಿಸಿದರು.
ದಿನವೂ ಒಂದೂವರೆ ಗಂಟೆ ಕಾಲ ಕಠಿನ ವರ್ಕ್ ಔಟ್ ಮಾಡುತ್ತೇನೆ. ಇತ್ತೀಚೆಗೆ ಎರಡು ತಿಂಗಳಿಂದ ವರ್ಕ್ ಔಟ್ ಸಮಯ ಸ್ವಲ್ಪ ಕಡಿಮೆಯಾಗಿದೆ.
– ಸುದೀಪ್, ಖ್ಯಾತ ನಟ