Advertisement

ಖುಷಿ ಮತ್ತು ಮರದ ಬೇರಿನ ಸಿದ್ದಾಂತ

01:08 AM Aug 12, 2019 | sudhir |

ಖುಷಿಯಾಗಿರುವುದು ಹೇಗೆ? ಇದು ಜಗತ್ತಿನ ಕೋಟ್ಯಾನುಕೋಟಿ ಜನರನ್ನು ನಿತ್ಯ ಕಾಡುತ್ತಿರುವ ಪ್ರಶ್ನೆ. ಅನೇಕ ದಾರ್ಶನಿಕರು ಅನೇಕ ರೀತಿಯಲ್ಲಿ ಖುಷಿಯಾಗಿರುವುದು ಹೇಗೆ ಎಂಬ ಬಗ್ಗೆ ಪುಂಖಾನುಪುಂಖ ಉಪನ್ಯಾಸಗಳನ್ನು ಕೊಟ್ಟಿದ್ದಾರೆ. ತತ್ವಜ್ಞಾನಿಗಳು, ಚಿಂತಕರು, ಮನಶಾÏಸ್ತ್ರಜ್ಞರು, ಸ್ಫೂರ್ತಿದಾಯಕ ಭಾಷಣ ಮಾಡುವವರು ತಮ್ಮದೇ ಆದ ವ್ಯಾಖ್ಯಾನಗಳನ್ನೂ, ಸಿದ್ಧಾಂತಗಳನ್ನೂ ಮಂಡಿಸಿದ್ದಾರೆ. ಖುಷಿಯಾಗಿರುವುದು ಹೇಗೆ ಎಂದು ಕಲಿಸುವ ಪುಸ್ತಕಗಳು ಮಾರುಕಟ್ಟೆಯಲ್ಲಿ ರಾಶಿ ಬಿದ್ದಿವೆ. ಆದರೆ ಮನುಷ್ಯ ಇನ್ನೂ ಖುಷಿಯನ್ನು ಹುಡುಕುತ್ತಲೇ ಇದ್ದಾನೆ. ಹಾಗಾದರೆ ನಿಜವಾಗಿಯೂ ಖುಷಿಯಾಗಿರುವುದು ಹೇಗೆ?

Advertisement

ದುಃಖ ನಮಗೆ ಬದುಕಿನ ಆಳದ ದರ್ಶನ ಮಾಡಿಸುತ್ತದೆ. ಖುಷಿ ಬದುಕಿನಲ್ಲಿ ಔನ್ನತ್ಯವನ್ನು ಕಾಣಿಸುತ್ತದೆ. ದುಃಖವೆಂದರೆ ಬೇರು, ಖುಷಿಯೆಂದರೆ ರೆಂಬೆಕೊಂಬೆಗಳು. ಖುಷಿಯೆಂದರೆ ಆಕಾಶದತ್ತ ಮುಖಮಾಡಿ ಬೆಳೆಯುತ್ತಿರುವ ಮರ. ದುಃಖ ಭೂಗರ್ಭದತ್ತ ಸಾಗುವ ಈ ಮರದ ಬೇರು. ಬದುಕಿಗೆ ಇದು ಎರಡೂ ಅಗತ್ಯ. ಮರ ಎತ್ತರಕ್ಕೆ ಬೆಳೆದಷ್ಟೂ ಅದರ ಬೇರುಗಳು ಭೂಮಿಯ ಆಳಕ್ಕಿಳಿಯುತ್ತವೆ. ಎತ್ತರಕ್ಕೆ ಬೆಳೆಯುವುದು ಮತ್ತು ಆಳಕ್ಕಿಳಿಯುವುದು ಇದು ಎರಡೂ ಏಕಕಾಲದಲ್ಲಿ ನಡೆಯುವ ಸಮಾನಾಂತರ ಪ್ರಕ್ರಿಯೆಗಳು. ಇದೊಂದು ರೀತಿಯಲ್ಲಿ ಸಂತುಲನಗೊಳಿಸುವ ಕ್ರಿಯೆ. ಇದನ್ನು ಜೀವನಕ್ಕೊಮ್ಮೆ ಅನ್ವಯಿಸಿ ನೋಡಿ. ಖುಷಿಯಾಗಿರುವುದು ಅಂದರೆ ಏನು ಎನ್ನುವುದು ನಿಮಗೆ ತಿಳಿಯುತ್ತದೆ. ಹೀಗೆಂದು ಹೇಳಿದವರು ಆಚಾರ್ಯ ಓಶೋ ರಜನೀಶ್‌.

ಖುಷಿಯೆಂದರೆ ಚೆನ್ನಾಗಿ ನಗುನಗುತ್ತಾ ಬದುಕುವುದು. ಪ್ರತಿಕ್ಷಣವನ್ನು ಅನುಭವಿಸುತ್ತಾ ಬದುಕುವುದು. ಖುಷಿಯಾಗಿರುವುದಕ್ಕ ಬಾಹ್ಯ ವಸ್ತುಗಳು ಅಥವಾ ಬಾಹ್ಯ ವಿಚಾರಗಳು ಅಗತ್ಯ ಇಲ್ಲ. ಅದು ನಿಮ್ಮ ಆಂತರ್ಯದಲ್ಲೇ ಇದೆ ಎಂದು ಅರಿವಾದ ಕ್ಷಣದಿಂದ ನಿಮ್ಮ ಉತ್ತಮ ಬದುಕು ಆರಂಭವಾಗುತ್ತದೆ. ಆದರೆ ಹೀಗೊಂದು ಅನುಭವವನ್ನು ದಕ್ಕಿಸಿಕೊಳ್ಳುವುದು ಮಾತ್ರ ಸುಲಭವಲ್ಲ. ಹಾಗೆಂದು ಕಷ್ಟವೂ ಅಲ್ಲ. ಹೀಗೆ ಹೇಳಿದರೆ ಇದು ಯಾವುದೋ ಸ್ವಾಮೀಜಿಯ ಪ್ರವಚನದಂತೆ ಕಾಣಬಹುದು. ಸರಳವಾಗಿ ಆಲೋಚಿಸಿದರೆ ಇದು ಎಲ್ಲರಿಗೂ ಸಾಧ್ಯವಾಗುವಂತದ್ದು.

ಕುಟುಂಬದ ಜತೆಗೆ ನೀವು ಕಳೆದ ಉತ್ತಮ ಸಮಯವನ್ನು ನೆನಪಿಸಿಕೊಳ್ಳಿ. ತಂದೆ-ತಾಯಿ ಜತೆಗೆ, ಹೆಂಡತಿ ಮಕ್ಕಳ ಜೊತೆಗೆ ಸಮಯ ಕಳೆದಾಗ ನಿಮಗಾದ ಖುಷಿಯ ಅನುಭವವನ್ನು ಮೆಲುಕು ಹಾಕಿ. ಈ ಖುಷಿ ಎಲ್ಲಿತ್ತು? ಅಂದು ನಿಮ್ಮ ಅನುಭವ ಹೇಗಾಯಿತು? ಇಂಥ ಸರಳ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರೆ ಖುಷಿ ಏನು ಎನ್ನುವುದು ನಿಮಗೆ ತಿಳಿಯುತ್ತದೆ. ಖುಷಿ ಎಲ್ಲೋ ಇರುವುದಿಲ್ಲ, ಅದು ನಮ್ಮೊಳಗೆ ಇದೆ. ಆದರೆ ಅದನ್ನು ಅನುಭವಿಸುವ ರೀತಿ ನಮಗೆ ಗೊತ್ತಿಲ್ಲ. ಹೀಗಾಗಿ ಖುಷಿಯನ್ನು ನಾವು ಬೇರೆಲ್ಲೋ ಹುಡುಕುತ್ತಿರುತ್ತೇವೆ.

ಶ್ರೀಮಂತ ವ್ಯಕ್ತಿ ತನಗೇನು ಬೇಕೋ ಅದನ್ನೆಲ್ಲ ಪಡೆದುಕೊಳ್ಳುತ್ತಾನೆ. ಆದರೆ ಸಂತೃಪ್ತ ವ್ಯಕ್ತಿ ತನಗೆ ದಕ್ಕಿದರಲ್ಲೇ ಖುಷಿಯಾಗಿರುತ್ತಾನೆ. ಇದು ಖುಷಿಗೂ ಸಿರಿವಂತಿಕೆಗೂ ಇರುವ ವ್ಯತ್ಯಾಸ.

Advertisement

ಖುಷಿಯಾಗಿರಬೇಕೆಂದರೆ ನಮ್ಮ ಬಗ್ಗೆ ಇತರರು ಏನು ಹೇಳುತ್ತಾರೆ, ಏನು ಆಲೋಚಿಸುತ್ತಾರೆ ಎಂಬಿತ್ಯಾದಿ ನಕಾರಾತ್ಮಕ ಚಿಂತನೆಗಳನ್ನೆಲ್ಲ ಬಿಟ್ಟುಬಿಡಬೇಕು. ಯಾರೂ ನಿಮ್ಮ ಬಗ್ಗೆ ಏನೂ ಹೇಳುವುದಿಲ್ಲ. ಅವರು ಏನಾದರೂ ಹೇಳಿದರೆ ಅದು ಅವರ ಬಗ್ಗೆಯೇ. ಆದರೆ ಅವರ ಮಾತುಗಳು ನಿಮ್ಮನ್ನು ವಿಚಲಿತರನ್ನಾಗಿಸುತ್ತದೆ. ಏಕೆಂದರೆ ನೀವು ಅವರ ದೃಷ್ಟಿಯಲ್ಲಿ ನಿಮ್ಮನ್ನು ನೋಡುತ್ತಿದ್ದೀರಿ. ಅವರ ಅಭಿಪ್ರಾಯದಂತೆ ನೀವಿರಬೇಕು ಎಂಬ ಭ್ರಮೆಯೊಂದು ನಿಮ್ಮನ್ನು ಆವರಿಸಿದೆ. ಹೀಗಾಗಿ ಅವರೇನು ಹೇಳುತ್ತಾರೆ ಎಂಬುದಕ್ಕೆ ನೀವು ಹೆಚ್ಚಿನ ಮಹತ್ವ ಕೊಡುತ್ತೀರಿ. ನೀವು ಸದಾ ಅವರನ್ನು ಅನುಸರಿಸುತ್ತಾ ಇರುತ್ತೀರಿ, ಅವರನ್ನು ಖುಷಿಪಡಿಸುವ ಪ್ರಯತ್ನದಲ್ಲಿರುತ್ತೀರಿ. ಸದಾ ಗೌರವಾನ್ವಿತರಾಗಿರಬೇಕೆನ್ನುವುದು ನಿಮ್ಮ ಉದ್ದೇಶ. ಅಹಂನ್ನು ಅಲಂಕರಿಸುವುದರಲ್ಲೇ ನಿಮ್ಮ ಜೀವನ ಕಳೆದು ಹೋಗುತ್ತದೆ. ಅವರು ಏನು ಹೇಳುತ್ತಾರೆ ಎನ್ನುವುದಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳುವುದನ್ನು ಬಿಟ್ಟು ನಿವೇನು ಹೇಳುತ್ತೀರಿ ಎಂದು ಕೇಳಿಸಿಕೊಳ್ಳಿ. ಖುಷಿ ನಿಮ್ಮನ್ನಾವರಿಸುತ್ತದೆ.

– ಉಮೇಶ್‌ ಕೋಟ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next