Advertisement

ಅಧ್ಯಕ್ಷ ಮುನಿಸ್ವಾಮಿ, ಉಪಾಧ್ಯಕ್ಷೆ ದೇವಿ ಗಣೇಶ್‌

04:56 PM Nov 01, 2020 | Suhan S |

ಕೆಜಿಎಫ್: ಹಲವಾರು ವರ್ಷಗಳ ನಂತರ ಶನಿವಾರ ರಾಬರ್ಟಸನ್‌ಪೇಟೆ ನಗರಸಭೆ ಅಧ್ಯಕ್ಷರಾಗಿ ಕಾಂಗ್ರೆಸ್‌ನ ವಳ್ಳಲ್‌ ಮುನಿಸ್ವಾಮಿ ಮತ್ತು ಉಪಾಧ್ಯಕ್ಷೆಯಾಗಿ ದೇವಿ ಗಣೇಶ್‌ ಅವಿರೋಧವಾಗಿ ಆಯ್ಕೆಯಾಗಿ ದಾಖಲೆ ಸ್ಥಾಪಿಸಿದರು.

Advertisement

ಕುದುರೆ ವ್ಯಾಪಾರ, ಅಪಹರಣ, ಹೊರ ರಾಜ್ಯಗಳ ಪ್ರವಾಸ ಮೊದಲಾದ ಚುಟುವಟಿಕೆಗಳಿಗೆ ಹೆಸರಾಗಿದ್ದ ರಾಬರ್ಟಸನ್‌ಪೇಟೆ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷೆ ಸ್ಥಾನದ ಚುನಾವಣೆ ಶನಿವಾರ ಅಪರೂಪದ ಘಟನೆಗಳಿಗೆ ಸಾಕ್ಷಿಯಾಯಿತು. ಯಾವುದೇ ಅಹಿತಕರ ಘಟನೆ ನಡೆಯದೆ ಶಾಂತಿಯುತವಾಗಿ ಮತದಾನ ನಡೆಯಿತು.

ಜೀವನತಿಯ, ಶಶಿಧರನ್‌ ಗೈರು: 13 ಸದಸ್ಯರಿದ್ದ ಕಾಂಗ್ರೆಸ್‌ ಪಕ್ಷವು ಇತರ ಪಕ್ಷ ಮತ್ತು ಪಕ್ಷೇತರರ ಜೊತೆಗೂಡಿ ಅಧಿಕಾರ ಹಿಡಿಯಿತು. ಜೆಡಿಎಸ್‌ನ 2, ಸಿಪಿಎಂ 1 ಮತ್ತು 9 ಪಕ್ಷೇತರ ಸದಸ್ಯರು ಕಾಂಗ್ರೆಸ್‌ಗೆ ಬೆಂಬಲ ನೀಡಿದರು. ಆರ್‌ಪಿಐ ಪಕ್ಷದ ಎಸ್‌. ರಾಜೇಂದ್ರನ್‌ ಮತ್ತು ಮಂಜುಳಾದೇವಿ, ಬಿಜೆಪಿಯ ರಾಮುಲಮ್ಮ, ವೇಣಿಪಾಂಡ್ಯನ್‌ ಮತ್ತು ರಾಧಾ, ಪಕ್ಷೇತರ ಸದಸ್ಯೆ ಜೀವನತಿಯ, ಶಶಿಧರನ್‌ ಸಭೆಗೆ ಗೈರು ಹಾಜರಾಗಿದ್ದರು.

ಕಾಂಗ್ರೆಸ್‌ ಪಕ್ಷದಿಂದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಜಯಪಾಲ್‌ ಸಭೆಗೆ ಗೈರಾಗಿದ್ದರು. ಅವರಿಗೆ ಹುಷಾರಿಲ್ಲದ ಕಾರಣ ಸಭೆಗೆ ಗೈರು ಹಾಜರಾಗಿದ್ದಾರೆ ಎಂದು ಶಾಸಕಿ ಎಂ.ರೂಪಕಲಾ ಸ್ಪಷ್ಟೀಕರಣ ನೀಡಿದರು. ಚುನಾವಣೆಗೂ ಮುನ್ನ ಆರ್‌ಪಿಐ ಅಧ್ಯಕ್ಷ ಚುನಾವಣಾಧಿಕಾರಿ ಮತ್ತು ಉಪವಿಭಾಗಾಧಿಕಾರಿ ಸೋಮಶೇಖರ್‌ ಅವರನ್ನು ಭೇಟಿ ಮಾಡಿ ಚುನಾವಣೆ ಪ್ರಕ್ರಿಯೆ ರದ್ದು ಮಾಡಬೇಕು ಎಂದು ಪತ್ರ ನೀಡಿದರು. ವಾಲ್ಮೀಕಿ ಜಯಂತಿಯಂದು ಚುನಾವಣೆ ನಡೆಸುವುದು ಕಾನೂನಿನ ಪ್ರಕಾರ ಸಮ್ಮತವಲ್ಲ ಎಂದು ವಾದಿಸಿದರು.

ಆರ್‌ಪಿಐ ನಿಂದ ಆಯ್ಕೆಯಾಗಿರುವ ಮಂಜುಳಾದೇವಿ ಅವರಿಗೆ ವಿಪ್‌ ಜಾರಿ ಮಾಡಲಾಗಿದೆ. ಅವರು ಪಕ್ಷದ ನಿರ್ದೇಶನ ಬಿಟ್ಟು ಬೇರೆಯವರಿಗೆ ಮತ ಹಾಕಿದರೆ ಕ್ರಿಮಿನಲ್‌ ಮೊಕದ್ದಮೆ ಹೂಡಲಾಗುತ್ತದೆ ಎಂದು ತಿಳಿಸಿದರು. ಚುನಾವಣೆ ಘೋಷಣೆಯಾದ ನಂತರ ನ್ಯಾಯಾಲಯ ಇಲ್ಲವೇ ಸರ್ಕಾರ ಸೂಚನೆ ಮಾಡಿದರೆ ಮಾತ್ರ ಚುನಾವಣೆ ರದ್ದು ಮಾಡಲು ಸಾಧ್ಯ ಎಂದು ಚುನಾವಣಾಧಿಕಾರಿಗಳು ನಂತರ ಸುದ್ದಿಗಾರರಿಗೆ ತಿಳಿಸಿದರು.

Advertisement

ಜವಾಬ್ದಾರಿಯುತವಾಗಿ ಕೆಲಸ ಮಾಡಿ: ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ಅಧಿಕಾರ ವಹಿಸಿಕೊಂಡಿದ್ದರಿಂದ ಖುಷಿಯಲ್ಲಿದ್ದ ಶಾಸಕಿ ಎಂ. ರೂಪಕಲಾ, 55 ವರ್ಷಗಳಿಂದ ಇಷ್ಟು ಸುಗಮವಾಗಿ ಚುನಾವಣೆ ನಡೆದಿರಲಿಲ್ಲ. ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲ ಸದಸ್ಯರ ಮತ್ತು ಜನತೆಯ ದೃಷ್ಟಿಯಲ್ಲಿಟ್ಟುಕೊಂಡು ಗೌರವಯುತ ಮತ್ತು ಜವಾ ಬ್ದಾರಿಯುತವಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದರು.ಶಾಸಕಿ ಕೆಜಿಎಫ್ ಅಭಿವೃದ್ಧಿಗೆ ಹಲ ವಾರು ಕನಸುಗಳನ್ನು ಕಂಡಿದ್ದಾರೆ. ಅವರ ಕನಸನ್ನುನನಸು ಮಾಡುವುದು ನನ್ನ ಉದ್ದೇಶವಾಗಿದೆ ಎಂದು ಅಧ್ಯಕ್ಷ ವಳ್ಳಲ್‌ ಮುನಿಸ್ವಾಮಿ ತಿಳಿಸಿದರು.

ತಹಶೀಲ್ದಾರ್‌ ಕೆ.ರಮೇಶ್‌, ಪೌರಾಯುಕ್ತೆ ಸರ್ವರ್‌ ಮರ್ಚೆಂಟ್‌ ಈ ಸಂದರ್ಭದಲ್ಲಿ ಹಾಜರಿದ್ದರು. ಚುನಾವಣೆ ನಂತರ ಕಾಂಗ್ರೆಸ್‌ ಕಾರ್ಯಕರ್ತರು ನಗರದಲ್ಲಿ ವಿಜಯೋತ್ಸವ ಆಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next