Advertisement

ಕೆ.ಜಿ. ಆಗಿತ್ತೆ ಕೋಡ್‌ವರ್ಡ್‌?

06:35 AM Jun 21, 2018 | |

ಬೆಂಗಳೂರು: ಸಚಿವ ಡಿ.ಕೆ.ಶಿವಕುಮಾರ್‌ ಹೈಕಮಾಂಡ್‌ಗೆ ಹಣ ತಲುಪಿಸುವಾಗ “ಕೆ.ಜಿ.’ ಕೋಡ್‌ವರ್ಡ್‌ ಬಳಸುತ್ತಿದ್ದರೇ?

Advertisement

ಇದಕ್ಕೆ ಪುಷ್ಟಿ ನೀಡುವ ಕೆಲವು ಮಾಹಿತಿಗಳು ಕೇಳಿಬರುತ್ತಿವೆ. ಈ ಹಿಂದೆ ಡಿ.ಕೆ.ಶಿವಕುಮಾರ್‌ ನಿವಾಸದ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದ ದಾಖಲೆಗಳ ಆಧಾರದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ತನಿಖೆ ನಡೆಸಿದಾಗ ಈ ಅಂಶ ಬಹಿರಂಗಗೊಂಡಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಶಿವಕುಮಾರ್‌ ವಿರುದ್ಧ ಹವಾಲ ವ್ಯವಹಾರದ ಆರೋಪ ಕೂಡ ಕೇಳಿಬಂದಿದೆ.

2017ರ ದಾಳಿ ವೇಳೆ ಪತ್ತೆಯಾದ ದಾಖಲೆಗಳ ಆಧಾರದ ಮೇಲೆ ಈ ಹಿಂದೆ ಐಟಿ ಅಧಿಕಾರಿಗಳು ಶಿವಕುಮಾರ್‌ ಅವರ ವ್ಯವಹಾರದ ಪಾಲುದಾರರು ಹಾಗೂ ಆಪ್ತರ ವಿಚಾರಣೆ ನಡೆಸಿತ್ತು. ಎಲ್ಲ ಆರೋಪಿಗಳ ವಿಚಾರಣೆ ವೇಳೆ ನೀಡಿರುವ ಹೇಳಿಕೆಗೂ, ಅವರ ಮನೆ ಮತ್ತು ಕಚೇರಿಗಳಲ್ಲಿ ಪತ್ತೆಯಾದ ದಾಖಲೆಗಳಿಗೂ ತಾಳೆ ಆಗುತ್ತಿಲ್ಲ. ಈ ಮೂಲಕ ಸುಳ್ಳು ಮಾಹಿತಿ ನೀಡಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು.

ಈ ನಡುವೆ, ವಿಚಾರಣೆ ಸಂದರ್ಭದಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂಬ ಆರೋಪದ ಮೇಲೆ ಐಟಿ ಇಲಾಖೆ ಉಪನಿರ್ದೇಶಕ ಟಿ.ಸುನಿಲ್‌ ಗೌತಮ್‌ ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ದೂರು ನೀಡಿದ್ದು, ಐಟಿ ಕಾಯ್ದೆ 277, 278, 193, 199, ಹಾಗೂ 120(ಬಿ) ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಾಗಿದೆ. 

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ ದೂರಿನಲ್ಲಿ 1ನೇ ಆರೋಪಿಯನ್ನಾಗಿ ಡಿ.ಕೆ ಶಿವಕುಮಾರ್‌, 2ನೇ ಆರೋಪಿಯಾಗಿ ಸಚಿನ್‌ ನಾರಾಯಣ್‌, 3ನೇ ಆರೋಪಿಯಾಗಿ ಸುನಿಲ್‌ ಕುಮಾರ್‌ ಶರ್ಮಾ, 4ನೇ ಆರೋಪಿಯಾಗಿ ಆಂಜನೇಯ ಹನುಮಂತಯ್ಯ, 5ನೇ ಆರೋಪಿಯಾಗಿ ಎನ್‌.ರಾಜೇಂದ್ರ ಅವರನ್ನು ಪರಿಗಣಿಸಲಾಗಿದೆ.

Advertisement

ಶಿವಕುಮಾರ್‌ ಅವರ ಆಪ್ತ ಶರ್ಮಾ ಟ್ರಾನ್ಸ್‌ನ್ಪೋರ್ಟ್ಸ್ ಸಂಸ್ಥೆಯ ಮಾಲೀಕ ಸುರೇಶ್‌ ಕುಮಾರ್‌ ಶರ್ಮಾ ದೆಹಲಿಯ ಸಫ‌ªರ್‌ಜಂಗ್‌ ಎನ್‌ಕ್ಲೇವ್‌ನಲ್ಲಿ 4 ಫ್ಲಾಟ್‌ ಹೊಂದಿದ್ದು, ಇವರು ನಿಧನ ಹೊಂದಿದ ಬಳಿಕ ಸುರೇಶ್‌ ಕುಮಾರ್‌ ಶರ್ಮಾ ಸಂಬಂಧಿ ಸುನಿಲ್‌ಕುಮಾರ್‌ ಶರ್ಮಾ ಮತ್ತು ಶಿವಕುಮಾರ್‌ ಫ್ಲಾಟ್‌ ನೋಡಿಕೊಳ್ಳುತ್ತಿದ್ದರು. ಐಟಿ ದಾಳಿ ವೇಳೆ ಈ ಫ್ಲಾಟ್‌ಗಳಲ್ಲಿ ಕೆಲ ಡೈರಿಗಳು ಹಾಗೂ 8.59 ಕೋಟಿ ರೂ. ನಗದು ಪತ್ತೆಯಾಗಿತ್ತು. ಇದೇ ವೇಳೆ ಶಿವಕುಮಾರ್‌ ಅವರ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ರಾಜೇಂದ್ರ ಮನೆ ಮತ್ತು ಕಚೇರಿಗಳ ಮೇಲೂ ದಾಳಿ ನಡೆಸಲಾಗಿತ್ತು. ಇಲ್ಲಿಯೂ ಡೈರಿ, ಟಿಪ್ಪಣಿಗಳು ಸಿಕ್ಕಿತ್ತು.

ಒಂದು ಲಕ್ಷ ಎಂದರೆ ಒಂದು ಕೆ.ಜಿ:
ಈ ಡೈರಿಗಳಲ್ಲಿ ಶಿವಕುಮಾರ್‌ ಕಾಂಗ್ರೆಸ್‌ ಹೈಕಮಾಂಡ್‌ಗೆ ಎಷ್ಟು ಲಕ್ಷ ರೂ. ನೀಡಿದ್ದಾರೆ ಎಂಬುದನ್ನು ಕೆ.ಜಿ. ಲೆಕ್ಕದಲ್ಲಿ ಬರೆದಿಡಲಾಗಿದೆ. ಈ ಕುರಿತು ಪ್ರಕರಣದ 4ನೇ ಆರೋಪಿ ಹಾಗೂ ದೆಹಲಿಯ ಕರ್ನಾಟಕ ಭವನದ ಅಸಿಸ್ಟೆಂಟ್‌ ಲೈಸೆನಿಂಗ್‌ ಆಫೀಸರ್‌ ಆಂಜನೇಯ ಹನುಮಂತಯ್ಯ ವಿಚಾರಣೆ ನಡೆಸಿದಾಗ ಬಾಯಿಬಟ್ಟಿದ್ದು, 1 ಕೆ.ಜಿ. ಎಂದರೆ 1ಲಕ್ಷ ರೂ. ಎಂಬಂತೆ ಪರಿಗಣಿಸಿ ಡೈರಿಯಲ್ಲಿ ನಮೂದಿಸಲಾಗಿದೆ. ಉದಾಹರಣೆಗೆ 50 ಲಕ್ಷ ರೂ. ನೀಡಿದರೆ 50 ಕೆ.ಜಿ. ಎಂದು ಪರಿಗಣಿಸಲಾಗುತ್ತಿತ್ತು ಎಂದು ಹೇಳಿಕೆ ನೀಡಿರುವುದಾಗಿ ಐಟಿ ಮೂಲಗಳು ತಿಳಿಸಿವೆ. ಆದರೆ, ಆರೋಪಿ ಸುನಿಲ್‌ಕುಮಾರ್‌ ಶರ್ಮ ತಮ್ಮ ಹೇಳಿಕೆಯಲ್ಲಿ ಈ ವಿಚಾರವನ್ನು ನಿರಾಕರಿಸಿದ್ದಾರೆ.

ಅಲ್ಲದೆ, ಪ್ಲಾÂಟ್‌ನಲ್ಲಿಟ್ಟಿದ್ದ ಕೋಟ್ಯಂತರ ರೂ. ಮೊತ್ತವನ್ನು ಸಚಿವ ಶಿವಕುಮಾರ್‌ ಸೂಚನೆ ಮೇರೆಗೆ 2017 ಜ. 5ರಂದು ವಿ.ಮುಳಗುಂದ್‌ ಮೂಲಕ ಎಐಸಿಸಿಗೆ ಕೊಡುವಂತೆ ಡೈರಿಯಲ್ಲಿ ಉಲ್ಲೇಖೀಸಲಾಗಿದೆ. ಅದರಂತೆ ಆಂಜನೇಯ ಹನುಮಂತಯ್ಯ ಒಮ್ಮೆ 3.24 ಕೋಟಿ ರೂ., ಮತ್ತೂಂದು ಬಾರಿ 2 ಕೋಟಿ ರೂ. ಸೇರಿ ಒಟ್ಟು 5.24 ಕೋಟಿ ರೂ. ಕಾಂಗ್ರೆಸ್‌ ಹೈಕಮಾಂಡ್‌ಗೆ ಕೊಟ್ಟಿದ್ದಾರೆ. ಜತೆಗೆ ಫೆ. 16ರಂದು ಆಂಜನೇಯನಿಂದ 1 ಕೋಟಿ ರೂ. ಶಿವಕುಮಾರ್‌ ಪಡೆದಿದ್ದರು ಎಂಬ ಮಾಹಿತಿಯನ್ನು 5ನೇ ಆರೋಪಿ ರಾಜೇಂದ್ರ ಐಟಿ ವಿಚಾರಣೆ ವೇಳೆ ಹೇಳಿದ್ದಾರೆ. ವಿಚಾರಣೆ ವೇಳೆ ತನ್ನ ಮನೆಯಲ್ಲಿ ಐಟಿ ದಾಳಿ ವೇಳೆ ಸಿಕ್ಕ ಸುಮಾರು 12.44 ಲಕ್ಷ ರೂ. ತನ್ನದಲ್ಲ. ಅದು ಡಿ.ಕೆ.ಶಿವಕುಮಾರ್‌ಗೆ ಸೇರಿದ್ದು ಎಂದು ಆಂಜನೇಯ ಹೇಳಿರುವುದಾಗಿಯೂ ಮೂಲಗಳು ಹೇಳಿವೆ.

ಹವಾಲ ವ್ಯವಹಾರ?:
ಶಿವಕುಮಾರ್‌ ವಿರುದ್ಧ ಹವಾಲ ವ್ಯವಹಾರ ಆರೋಪ ಕೂಡ ಕೇಳಿಬಂದಿದೆ. ಈ ಹಣವನ್ನು ದೆಹಲಿಯ ಫ್ಲ್ಯಾಟ್‌ನಲ್ಲಿ ಸಂಗ್ರಹಿಸಿಟ್ಟಿದ್ದರು. ಈ ಬಗ್ಗೆ ನಾಲ್ವರು ಆರೋಪಿಗಳು ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next