Advertisement

ಕೆಎಫ್‌ಡಿ; ಜರ್ಮನಿ ಪತ್ರಕರ್ತರ ತಂಡದಿಂದ ಅರಳಗೋಡಿನಲ್ಲಿ ಅಧ್ಯಯನ

08:58 PM Jan 31, 2022 | Team Udayavani |

ಸಾಗರ: ತೀವ್ರಗೊಂಡ ಮಂಗನ ಕಾಯಿಲೆಯ ಕಾರಣ ಎರಡು ವರ್ಷಗಳ ಹಿಂದೆ ೨೫ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದು, ಗ್ರಾಮಗಳೇ ಗುಳೆ ಹೋಗುವಂತಹ ಸನ್ನಿವೇಶ ತಾಲೂಕಿನ ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ಹಳ್ಳಿಗಳಲ್ಲಿ ಸೃಷ್ಟಿಯಾಗಿದ್ದ ಅರಳಗೋಡು ಗ್ರಾಮಕ್ಕೆ ಎರಡು ದಿನಗಳ ಹಿಂದೆ ಜರ್ಮನಿಯ ಪತ್ರಕರ್ತರ ತಂಡವೂ ಭೇಟಿ ನೀಡಿ ಅಧ್ಯಯನ ನಡೆಸಿದೆ.

Advertisement

ಎರಡು ವರ್ಷಗಳ ಹಿಂದೆ ಮಂಗನಕಾಯಿಲೆ ತೀವ್ರಗೊಂಡ ಸಮಯದಲ್ಲಿ ಸಾಗರ ಉಪ ವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ, ಮೆಗ್ಗಾನ್‌ಗೆ ದಾಖಲಾದ ಹಲವರು ಜೀವ ಕಳೆದುಕೊಂಡಿದ್ದರು. ಮಣಿಪಾಲಕ್ಕೆ ಹೋದವರಲ್ಲಿ ಕೆಲವರು ಬದುಕಿ ಬಂದಿದ್ದರು. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಅರಳಗೋಡು ಎಂಬ ಪುಟ್ಟ ಗ್ರಾಮ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಿತು.

ಆದರೆ ಜರ್ಮನಿಯ ಪತ್ರಕರ್ತರ ತಂಡ ಕಾಯಿಲೆಯ ಅಧ್ಯಯನಕ್ಕೆ ಬಂದಿತ್ತು. ಕೆಎಫ್‌ಡಿ ವೈರಾಣುವಿನ ಬಗ್ಗೆ ಇಲ್ಲಿಯವರೆಗೂ ಔಷಧ ಕಂಡುಹಿಡಿಯಲು ಸಾಧ್ಯವಾಗದಿರುವ ಬಗ್ಗೆ ಕುತೂಹಲಗೊಂಡಿರುವ ಜರ್ಮನಿಯ ಪತ್ರಕರ್ತರ ತಂಡ, ೨೦೧೯ರಲ್ಲೂ ಅರಳಗೋಡು ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ತೆರಳಿತ್ತು. ಇದೇ ಜನವರಿ ತಿಂಗಳ ಆರಂಭದಲ್ಲಿ ಮತ್ತೊಮ್ಮೆ ಅದೇ ತಂಡ ಭೇಟಿ ನೀಡಿ, ಸಂತ್ರಸ್ತ ಕುಟುಂಬಗಳ ಆರೋಗ್ಯ, ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿಕೊಂಡು ಹೋಗಿತ್ತು.

ಇದನ್ನೂ ಓದಿ : ಪಾರ್ಸೆಲ್ ಕೊಟ್ಟು ಬರುವಷ್ಟರಲ್ಲಿ ಸ್ಕೂಟರನ್ನೇ ಎಗರಿಸಿದ ಕಳ್ಳ : ಕಳ್ಳತನದ ದೃಶ್ಯ ಸೆರೆ

ಇದರ ನಂತರ ಬಿಸಿಲ ಬೇಗೆಯಲ್ಲಿ ಬೆಳೆದ ಕೆಎಫ್‌ಡಿ ವೈರಾಣು ಮುಂಗಾರಿನ ಅಬ್ಬರದೊಂದಿಗೆ ತಣ್ಣಗಾಗಿ ಹೋಗಿತ್ತು. ಎಲ್ಲ ಮರೆತು ಕೃಷಿ ಕೆಲಸದಲ್ಲಿ ತೊಡಗಿದ್ದ ಅರಳಗೋಡು ಜನರಿಗೆ ಸುತ್ತಲಿನ ಅರಣ್ಯದಲ್ಲಿನ ಉಣುಗುಗಳಲ್ಲಿ ಕೆಎಫ್‌ಡಿ ವೈರಾಣು ಪತ್ತೆಯಾಗಿರುವುದು ನಿದ್ದೆಗೆಡಿಸಿದೆ. ಸರ್ಕಾರ ಸಂತ್ರಸ್ತರಿಗೆ ಸ್ಪಂದಿಸಿರುವ ರೀತಿ, ಆರೋಗ್ಯ ಇಲಾಖೆ ಕೆಎಫ್‌ಡಿ ಬಾಧಿತ ಪ್ರದೇಶಗಳ ನಿವಾಸಿಗಳಿಗೆ ನೀಡಿರುವ ಸಹಾಯ, ಸಹಕಾರ ಮತ್ತು ಚಿಕಿತ್ಸೆಯ ಬಗ್ಗೆ ಜರ್ಮನಿ ಪತ್ರಕರ್ತರ ತಂಡ ಸಂತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವೀರಭದ್ರಪ್ಪ ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next