Advertisement

ಯಕ್ಷ ಶಾಸ್ತ್ರಜ್ಞನಿಗೆ ಕೀರಿಕ್ಕಾಡು ಪ್ರಶಸ್ತಿ

09:55 PM May 02, 2019 | Sriram |

ಕಾಸರಗೋಡಿನ ದೇಲಂಪಾಡಿಯಲ್ಲಿ ಆರೇಳು ದಶಕಗಳ ಹಿಂದೆಯೇ ಯಕ್ಷಗಾನವನ್ನು ಜೀವಂತವಾಗಿರಿಸಲು ಹೆಣಗಿದವರು ದಿ| ಕೀರಿಕ್ಕಾಡು ಮಾಸ್ಟರ್‌ ವಿಷ್ಣು ಭಟ್ಟರು . ಅವರು 1944ರಲ್ಲಿ ಹುಟ್ಟುಹಾಕಿದ ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ ಅವರ ಹೆಸರಿನಲ್ಲಿ ವರ್ಷವೂ ಕೊಡುವ ಕೀರಿಕ್ಕಾಡು ಪ್ರಶಸ್ತಿ ಈ ಬಾರಿ ಯಕ್ಷಗಾನದ ಖ್ಯಾತ ಹಿಮ್ಮೇಳ ವಾದಕ ಗುರು ಗೋಪಾಲಕೃಷ್ಣ ಕುರುಪರಿಗೆ ಸಲ್ಲಲಿದೆ.

Advertisement

ಗೋಪಾಲಕೃಷ್ಣ ಕುರುಪರು ನಿಡುಗಾಲ ಯಕ್ಷಗಾನ ಮೇಳಗಳಲ್ಲಿ ಹಿಮ್ಮೇಳ ವಾದಕರಾಗಿ ದುಡಿದ ಅನುಭವ ಸಂಪನ್ನ. ಹಿರಿಯ ಕಿರಿಯ ಬಲಿಪ ನಾರಾಯಣ ಭಾಗವತರ ಕರಾರುವಾಕ್ಕಾದ ಹಾಡಿಗೆ ಇಡಿಪೆಟ್ಟುಗಳ ನಿಖರ ನುಡಿತ. ದಿ| ಅಗರಿ ಶ್ರೀನಿವಾಸ ಭಾಗವತರ ಹಾಡಿನ ಲಾಲಿತ್ಯವನ್ನು ಪೋಷಿಸುವ ಕುರುಪರ ಲಯವಿನ್ಯಾಸದ ಸೊಗಸು ಈಗ ಚರಿತ್ರೆ. ಧರ್ಮಸ್ಥಳ, ಕೂಡ್ಲು, ಕುಂಡಾವು, ಸುರತ್ಕಲ್ಲು, ಬಳ್ಳಂಬೆಟ್ಟು, ಪೊಳಲಿ, ಕುಂಬ್ಳೆ ಮುಂತಾದ ಮೇಳಗಳಲ್ಲಿ ನಾಲ್ಕು ದಶಕಗಳಿಗೂ ಮಿಕ್ಕಿ ಹಿಮ್ಮೇಳವಾದಕರಾಗಿ ದುಡಿದ ಅನುಭವ ಅವರದು. ತೆಂಕು ತಿಟ್ಟಿನ ಪ್ರಾಥಮಿಕ ಯಕ್ಷಗಾನ ಪಾಠಗಳು, ತೆಂಕುತಿಟ್ಟು ಯಕ್ಷಗಾನ ಮದ್ದಳೆ ವಾದನದ ಕ್ರಮ, ತೆಂಕುತಿಟ್ಟು ಯಕ್ಷಗಾನ ಚೆಂಡೆವಾದನದ ಕ್ರಮ ಮತ್ತು ತಿತ್ತಿತ್ತೆç ಯಕ್ಷಗಾನ ತಾಳ ಸಂಬಂಧಿ ಅಧ್ಯಯನ ಹೀಗೆ ನಾಲ್ಕು ಶಾಸ್ತ್ರೀಯ ಕೃತಿಗಳನ್ನು ರಚಿಸಿದ್ದಾರೆ. ಯಕ್ಷಗಾನ ಕಮ್ಮಟಗಳಲ್ಲಿ ಅವರೊಬ್ಬ ಅಸಾಧಾರಣ ಸಂಪನ್ಮೂಲ ವ್ಯಕ್ತಿ.ಅವರ ವಾದನದಲ್ಲಿ ಬೆರಗು ಹುಟ್ಟಿಸುವ ಚಮತ್ಕಾರಗಳಿಲ್ಲ. ಮಾತಿನಲ್ಲಿ ಎಷ್ಟೇ ನಯವಿದ್ದರೂ, ಕಲೆಯಲ್ಲಿ ನಿಷ್ಠರತೆ. ಲಯ ಶುದ್ಧಿ, ವಾದನದ ಸ್ಪಷ್ಟತೆ, ಪೆಟ್ಟುಗಳ ಏರಿಳಿತ, ಪ್ರಸಂಗಜ್ಞಾನ, ರಂಗನಡೆ ಎಲ್ಲವೂ ತಿಳಿದ ಅವರೊಬ್ಬ ಪ್ರಬುದ್ಧ ಮದ್ದಳೆಗಾರ. ನಾಟ್ಯದ ಹೆಜ್ಜೆಗಳನ್ನೂ ಬಲ್ಲ ಅವರು ವೇಷಧಾರಿ ತಪ್ಪಿದರೆ ತಿದ್ದಿ ಹೇಳುವ ಸಾಮರ್ಥ್ಯವುಳ್ಳವರು.

ತಾಳಗಳ ಸಾಲಿನಲ್ಲಿ ಎಲ್ಲೂ ಹೆಸರಿರದ ತಿತ್ತಿತ್ತೈ, ತೆಂಕುತಿಟ್ಟಿನಲ್ಲಿ ಬಹಳ ಅಪರೂಪದಲ್ಲಿ ಹಳೆಯ ಭಾಗವತರು ಹಾಡುತ್ತಿದ್ದ ಚೌತಾಳ ಪ್ರಯೋಗದಲ್ಲೇ ಇಲ್ಲದ ಸಪ್ತತಾಳಗಳಲ್ಲಿ ಒಂದಾದ ಧ್ರುವ ತಾಳ ಇವುಗಳಿಗೆಲ್ಲ ಗೌರವಯುತ ಸ್ಥಾನ ದೊರೆಯಬೇಕೆಂದು ಹೆಣಗಿದವರು ಅವರು. ಅವುಗಳಿಗೆ ಭಿಡ್ತಿಗೆ, ಮುಕ್ತಾಯಗಳನ್ನು ರಚಿಸಿ, ಪದ್ಯದ ಅಕ್ಷರಗಳು ತಾಳಕ್ಕೆ ಹೊಂದುವ ರೀತಿಯನ್ನು ಅಧ್ಯಯನ ನಡೆಸಿ ಅದು ಹೀಗೆಯೇ ಎಂದು ಖಚಿತವಾಗಿ ನಿರೂಪಿಸಬಲ್ಲರು. ಕೆಲವು ಕಮ್ಮಟಗಳಲ್ಲಿ ಇದನ್ನು ಮಾಡಿ ತೋರಿಸಿದ್ದಾರೆ. ಭಾಗವತರಿಗೆ, ಮದ್ದಳೆವಾದಕರಿಗೆ ದಾರಿ ತೋರಿದ್ದಾರೆ.

-ವೆಂಕಟರಾಮ ಭಟ್ಟ ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next