Advertisement

ಯಕ್ಷಾಂಗೀಣ ಸವ್ಯಸಾಚಿ ಕೇಶವ ಶಕ್ತಿನಗರ

03:53 PM Apr 07, 2017 | Team Udayavani |

ಎಲೆ ಮರೆಯ ಕಾಯಿ ಹಣ್ಣಾಗಿ ಕಳಚಿ ಬಿದ್ದರೂ ನಾವು ಅದರ ಇರವನ್ನು ಗಮನಿಸದೇ ಹೋಗುತ್ತೇವೆ. ರಂಗದಲ್ಲಿ ಕಲಾವಿದನಾಗಿ ಬೆಳೆದು ಪ್ರಸ್ತುತ ತೆರೆಮರೆಯಲ್ಲಿ ಪ್ರಸಾದನ ಕಲಾವಿದರಾಗಿ ಯಕ್ಷಮಾತೆಯ ಸೇವೆ ಸಲ್ಲಿಸುತ್ತಿರುವ ಪ್ರತಿಭೆ ಕೇಶವ ಶಕ್ತಿನಗರ.

Advertisement

ಕದ್ರಿ ಪರಿಸರದಲ್ಲಿ 1960ರಲ್ಲಿ ಜನಿಸಿದವರು ಕೇಶವ ಶಕ್ತಿನಗರ. 5ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದರು. ಬಡತನದ ಕಾರಣದಿಂದ ಶಾಲಾ ವಿದ್ಯಾಭ್ಯಾಸಕ್ಕೆ ಪೂರ್ಣವಿರಾಮ ಬಿದ್ದರೂ ತನ್ನ 15ನೇ ವಯಸ್ಸಿನಲ್ಲಿ ಕಾವೂರು ಕೇಶವರಿಂದ ನಾಟ್ಯಾಭ್ಯಾಸ ಮಾಡಿದರು. ಅವಿರತ ಶ್ರಮ ಮತ್ತು ಆಸಕ್ತಿಯ ಕಾರಣದಿಂದ ಮುಂದೆ ರಂಗದ ಸರ್ವಾಂಗವನ್ನೂ ಮೈಗೂಡಿಸಿಕೊಂಡು ಪಾತ್ರಕ್ಕೆ ಜೀವ ತುಂಬುವ ಕಲಾವಿದನಾಗಿ ಬೆಳೆದರು. ಕಾವೂರು ಕೇಶವರ ಸುಂಕದಕಟ್ಟೆ ಮೇಳದಲ್ಲಿ ತಿರುಗಾಟ ಆರಂಭಿಸಿದ ಕೇಶವರು ನಿತ್ಯವೇಷ, ಸ್ತ್ರೀವೇಷ, ದೇವೇಂದ್ರ ಬಲ ಮುಂತಾದ ಪಾತ್ರಗಳನ್ನು ನಿರ್ವಹಿಸುತ್ತಾ ಬೆಳೆದರು. ಮುಂದೆ ಕೊಲ್ಲೂರು ಮೇಳದಲ್ಲಿ ಎರಡು ವರ್ಷ, ತಲಕಳ ಮೇಳದಲ್ಲಿ 18 ವರ್ಷ ಹಾಗೂ ಇರುವೈಲು ಮೇಳ, ಕೂಡ್ಲು ಮೇಳ, ಅರುವ ಮೇಳ, ಅಡ್ಯಾರು ಮೇಳಗಳಲ್ಲಿಯೂ ತಿರುಗಾಟವನ್ನು ಮಾಡಿದ್ದಾರೆ. ಮಳೆಗಾಲದಲ್ಲಿ ಶಿವಾಜಿ ರಾವ್‌ ಚೌಹಾಣ್‌ ಅವರ ಜತೆಗೆ ಮುಂಬಯಿ, ಸಾಂಗ್ಲಿ, ಹುಬ್ಬಳ್ಳಿ, ಧಾರವಾಡ, ಬೆಳಗಾಂ, ಮಂತ್ರಾಲಯ ಮುಂತಾದ ಹೊರ ಜಿಲ್ಲೆ ಮತ್ತು ರಾಜ್ಯಗಳಿಗೂ ತನ್ನ ತಿರುಗಾಟವನ್ನು ವಿಸ್ತರಿಸಿಕೊಂಡಿದ್ದಾರೆ. ಯೌವನದಲ್ಲಿ ಪುಂಡು ವೇಷಗಳಲ್ಲಿ ಜನಪ್ರಿಯತೆಯನ್ನು ಗಳಿಸಿದ ಕೇಶವರು ಚಂಡ- ಮುಂಡ, ಉಂಡ-ಪುಂಡ, ಚಂಡ- ಪ್ರಚಂಡ ಮೊದಲಾದ ವೇಷಗಳನ್ನು ನಿರ್ವಹಿಸುತ್ತಿದ್ದರು. ಮುಂದೆ ರಾಜವೇಷಗಳಲ್ಲಿ ಗುರುತಿಸಿಕೊಂಡ ಕೇಶವರು ಪೌರಾಣಿಕ ಪ್ರಸಂಗಗಳಲ್ಲಿನ ರಕ್ತಬೀಜ, ದೇವೇಂದ್ರ, ಅರ್ಜುನ ಮೊದಲಾದ ಕೋಲು ಕಿರೀಟ ವೇಷಗಳನ್ನು ನಿರ್ವಹಿಸಿದ ಅನುಭವಿ.

ತಲಕಳ ಮೇಳದಲ್ಲಿ ತಿರುಗಾಟದ ಸಂದರ್ಭ  ವಾಮಂಜೂರು ಕೋಟಿ ಕೋಟ್ಯಾನ್‌ ಮತ್ತು ನಾಟಕ ಕಲಾವಿದ ಭೋಜರಾಜ್‌ ವಾಮಂಜೂರರ ಅಬ್ಬು, ಶೇಕ್‌, ಕೇಶವರ ವಾವರ ಬಹಳಷ್ಟು ಪ್ರಸಿದ್ಧಿಯನ್ನು ಪಡೆದಿತ್ತು. ಹೀಗೆ ಪೌರಾಣಿಕ ಮತ್ತು ತುಳು ಪ್ರಸಂಗಗಳೆರಡಲ್ಲಿಯೂ  ಪ್ರೌಢಿಮೆ ಸಾಧಿಸಿದ್ದರು.

ಮುಮ್ಮೇಳ ಕಲಾವಿದನಾಗಿ ಬದುಕು ಆರಂಭಿಸಿದ ಸಂದರ್ಭದಲ್ಲಿಯೇ ಆನಂದ ಪುರುಷರಿಂದ ವೇಷ ಭೂಷಣ ತಯಾರಿಯ ಕೆಲಸವನ್ನು ಕಲಿತರು. ಮುಂದೆ ಲಲಿತ ಕಲಾ ಆರ್ಟ್ಸ್ನ ಹೊನ್ನಯ್ಯ ಶೆಟ್ಟಿಗಾರರ ಬಳಿ ಪಳಗಿದರು. 30ಕ್ಕೂ ಹೆಚ್ಚು  ವರ್ಷಗಳಿಂದ ವೇಷಭೂಷಣ ತಯಾರಿಕೆಯ ಅನುಭವವುಳ್ಳ ಇವರು ತಲಕಳ ಮೇಳ, ಶ್ರುತಿ ಆರ್ಟ್ಸ್

ಕಾವಳಕಟ್ಟೆ, ಭಾರತಿ ಕಲಾ ಆರ್ಟ್ಸ್ ಮುಡಿಪು, ಮೋಹಿನಿ ಕಲಾ ಸಂಪದ ಕಿನ್ನಿಗೋಳಿ, ಹವ್ಯಾಸಿ ಬಳಗ ಕದ್ರಿ, ಮಲ್ಲ ಮೇಳ, ಇರುವೈಲು ಮೇಳ, ಉಳ್ಳಾಲ ಮೇಳ, ಸಂತೋಷ್‌ ಆರ್ಟ್ಸ್ ಮೂಡಬಿದ್ರೆ, ಮುಂಬಯಿಯ ಬಂಟರ ಸಂಘ ಮತ್ತು ಗೀತಾಂಬಿಕಾ ಯಕ್ಷಗಾನ ಮಂಡಳಿಗಳಿಗೆ ವೇಷಭೂಷಣಗಳನ್ನು ತಯಾರಿಸಿ ಕೊಟ್ಟಿದ್ದಾರೆ. ಅನೇಕ ಹಿರಿಯ ವೃತ್ತಿಪರ ಕಲಾವಿದ ದಿಗ್ಗಜರ ಒಡನಾಟವುಳ್ಳ ಅನುಭವಿಯೂ ಅಗಿದ್ದಾರೆ. 

Advertisement

ಅನೇಕ ಸಂಸ್ಥೆಗಳ ಸಮ್ಮಾನಗಳು ಇವರಿಗೆ ಸಂದಿವೆ. ಇಂದಿಗೂ ಕೇಶವರ ಕೋಲು ಕಿರೀಟ, ಪಕಡಿ, ದೇವಿ ಕಿರೀಟ, ನಾಟಕೀಯ ಕಿರೀಟ, ಕೇಶವಾರಿ ತಟ್ಟಿ ಮತ್ತು ಪೇಟಗಳಿಗೆ ಅಪಾರ ಬೇಡಿಕೆಯಿದೆ. ಆದರೆ ಇವರಿಗೆ ಸಂದ ಮನ್ನಣೆ ಕಡಿಮೆ. ಕೇಶವರು ಎಂದೂ ಪ್ರಚಾರ ಬಯಸಿದವರಲ್ಲ. ಪತ್ನಿ ಶೀಲಾ, ಮೂವರು ಮಕ್ಕಳ ಜತೆಗೆ ಸಂತೃಪ್ತ ಜೀವನ ನಡೆಸುತ್ತಿದ್ದಾರೆ.

ಶರತ್‌ಕುಮಾರ್‌ ಕದ್ರಿ

Advertisement

Udayavani is now on Telegram. Click here to join our channel and stay updated with the latest news.

Next