ತಿರುವನಂತಪುರಂ: ವ್ಯಕ್ತಿಯೊಬ್ಬ ತನ್ನ ಕುಟುಂಬದ ಸದಸ್ಯರು ಮಲಗಿದ್ದ ವೇಳೆಯಲ್ಲಿ ಕೋಣೆಗೆ ಬೆಂಕಿ ಇಟ್ಟು, ಬಳಿಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೇರಳದ ತ್ರಿಶೂರ್ ನಲ್ಲಿ ಗುರುವಾರ(ಸೆ.14 ರಂದು) ನಡೆದಿದೆ.
ತ್ರಿಶೂರ್ ಜಿಲ್ಲೆಯ ಮನ್ನುತ್ತಿ ಬಳಿ ವಾಸಿಸುವ ಕೊಟ್ಟೆಕ್ಕಟ್ಟಿಲ್ ಜಾನ್ಸನ್ ಈ ಕೃತ್ಯವನ್ನು ಎಸಗಿದ್ದು, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಗ ಜೋಜಿ, ಸೊಸೆ ಲಿಜಿ ಮತ್ತು ಮೊಮ್ಮಗ ತೆಂಡೂಲ್ಕರ್ ಅವರ ಕೋಣೆಗೆ ಬೆಂಕಿ ಹಚ್ಚಿದ್ದಾರೆ. ಇದಾದ ಬಳಿಕ ಕೊಟ್ಟೆಕ್ಕಟ್ಟಿಲ್ ಜಾನ್ಸನ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಸುಟ್ಟ ಗಾಯಗಳಿಂದ ಎರ್ನಾಕುಲಂನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜೋಜಿ ಮತ್ತು ಮೊಮ್ಮಗ ತೆಂಡೂಲ್ಕರ್ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಸೊಸೆ ಲಿಜಿ ಸ್ಥಿತಿ ಚಿಂತಾಜನಕವಾಗಿದೆ. ಜಾನ್ಸನ್ ಅವರನ್ನು ತ್ರಿಶೂರ್ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.
ಕಳೆದ ಎರಡು ವರ್ಷಗಳಿಂದ ಜಾನ್ಸನ್ ಹಾಗೂ ಮಗ ಜೋಜಿ ನಡುವೆ ನಿತ್ಯ ಜಗಳ ನಡೆಯುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.
ಮನೆಯಿಂದ ಹೊಗೆ ಬರುತ್ತಿರುವುದನ್ನು ಕಂಡ ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿ ಪೊಲೀಸರಿಗೆ ಕರೆ ಮಾಡಿದ ಬಳಿ ಈ ಕೃತ್ಯ ಬೆಳಕಿಗೆ ಬಂದಿದೆ.