Advertisement

Kerala-ಕರ್ನಾಟಕ-ತಮಿಳುನಾಡು ತ್ರಿಜಂಕ್ಷನ್‌: ಮತ್ತೆ ನಕ್ಸಲರ ಸದ್ದು?

01:26 AM Mar 19, 2024 | Team Udayavani |

ಕಾರ್ಕಳ: ಪಶ್ಚಿಮ ಘಟ್ಟ ದಲ್ಲಿ ನಕ್ಸಲರ ಚಟುವಟಿಕೆ ಕ್ಷೀಣಿಸಿದೆ ಎಂದುಕೊಂಡಿರುವ ಹೊತ್ತಿನಲ್ಲೇ ಮತ್ತೆ ಹಳ್ಳಿಗಳಲ್ಲಿ ನಕ್ಸಲರು ಕಾಣಿಸಿಕೊಳ್ಳುತ್ತಿರುವುದು ಪಶ್ಚಿಮ ಘಟ್ಟಕ್ಕೆ ನಕ್ಸಲರ ಪುನರಾಗಮನವಾಗಿದೆ ಎಂಬ ಆತಂಕಕ್ಕೆ ಕಾರಣವಾಗಿದೆ.

Advertisement

ಕೇರಳದ ನಕ್ಸಲರು ಕರ್ನಾಟಕ ಪ್ರವೇಶಿಸಿ ದ್ದಾರೆ ಎಂಬ ಮಾಹಿತಿ 2022ರ ಮೇ ತಿಂಗಳಲ್ಲೇ ಹೊರಬಿದ್ದಿತ್ತು. ಇದಕ್ಕೆ ಪುಷ್ಟಿ ಎಂಬಂತೆ ಬಳಿಕ ಕರಾವಳಿ ಭಾಗದಲ್ಲಿ ಕೆಲವೆಡೆ ನಕ್ಸಲರು ಕಂಡು ಬಂದಿದ್ದರು ಎನ್ನಲಾಗಿತ್ತು. ಹಲವೆಡೆ ನಕ್ಸಲರು ಕಂಡುಬಂದಿದ್ದರು. ಫೆಬ್ರ ವರಿ ಯಲ್ಲಿ ಉಡುಪಿ ಜಿಲ್ಲೆಯ ಬೈಂದೂರಿನ ಜಡ್ಕಲ್‌, ಮುದೂರು ಭಾಗದಲ್ಲಿ ಶಂಕಿತ ನಕ್ಸಲರು ಕಂಡು ಬಂದಿದ್ದರು ಎನ್ನಲಾಗಿತ್ತು. ಇದೀಗ ರವಿವಾರ ದ.ಕ.-ಕೊಡಗು ಗಡಿಭಾಗ ದಲ್ಲಿ ಕಾಣಿಸಿಕೊಂಡು ಗಾಬರಿ ಸೃಷ್ಟಿಸಿದ್ದಾರೆ.

ವಿಕ್ರಂ ಗೌಡ ನಾಯಕತ್ವ
ನಕ್ಸಲ್‌ನಾಯಕನಾಗಿದ್ದ ಬಿ.ಜಿ.ಕೃಷ್ಣಮೂರ್ತಿ, ಕಬಿನಿ ದಳದ ಕಮಾಂಡರ್‌ ಸಾವಿತ್ರಿ ಬಂಧನ ಹಾಗೂ ಹೊಸಗದ್ದೆ ಪ್ರಭಾ ಶರಣಾಗತಿ ಬಳಿಕ ರಾಜ್ಯದಲ್ಲಿ ನಕ್ಸಲ್‌ ಚಟುವಟಿಕೆ ಬಹುತೇಕ ಕ್ಷೀಣಿಸಿತ್ತು. ಈ ಮಧ್ಯೆ ಕೆಲವು ನಕ್ಸಲರು ಪತ್ತೆಯಾಗದೇ ತಲೆಮರೆಸಿಕೊಂಡಿದ್ದರು. ಕರ್ನಾಟಕ-ಕೇರಳ ಗಡಿಭಾಗದಲ್ಲಿ 10ರಿಂದ 12 ಮಂದಿ ನಕ್ಸಲ್‌ ನಾಯಕರು ಸಕ್ರಿಯರಾಗಿದ್ದಾರೆ ಎಂದೂ ಹೇಳಲಾಗಿತ್ತು. ಜತೆಗೆ ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳ ಗಡಿಭಾಗದಲ್ಲಿ ವಿಕ್ರಂ ಗೌಡ ನಾಯಕತ್ವದಲ್ಲಿ ಸುಮಾರು 25ಕ್ಕೂ ಹೆಚ್ಚು ನಕ್ಸಲರು ಸಕ್ರಿಯರಾಗಿದ್ದಾರೆ ಎನ್ನುವ ಶಂಕೆ ವ್ಯಕ್ತಗೊಂಡಿದೆ. ಕಡಮಕಲ್ಲಿನಲ್ಲಿ ಕಾಣಿಸಿಕೊಂಡ ನಕ್ಸಲರ ತಂಡದಲ್ಲಿ ವಿಕ್ರಂ ಗೌಡ, ಲತಾ, ದಿಶಾ ಇದ್ದಿರುವುದು ಇದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.

ರಾಜ್ಯ ಸರಕಾರ ಈ ಹಿಂದೆ ಬಿಡುಗಡೆ ಮಾಡಿದ ನಕ್ಸಲರ ಪತ್ತೆಯ ಸೂಚನಾ ಫ‌ತ್ರದಲ್ಲಿ 22 ಮಂದಿಯ ಭಾವಚಿತ್ರಗಳಿದ್ದವು. ಅದರಲ್ಲಿ ಕೆಲವರು ಎನ್‌ಕೌಂಟರ್‌ಗೆ ಬಲಿಯಾದರೆ ಇನ್ನು ಕೆಲವರು ಶರಣಾಗತಿಯಾಗಿದ್ದರು. ಈ ಸಂಖ್ಯೆ ಸುಮಾರು 12 ಆಗಿದ್ದು, ಉಳಿದ 10 ಮಂದಿಯಲ್ಲಿ ಎಂಟು ಮಂದಿ ಇನ್ನೂ ನಕ್ಸಲ್‌ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದಾರೆ ಎನ್ನಲಾಗಿತ್ತು. ಈಗ ಕೇರಳ ಮತ್ತು ಕರ್ನಾಟಕದಲ್ಲಿ ನಕ್ಸಲ್‌ ಬಲ ಗಟ್ಟಿಗೊಳ್ಳುತ್ತಿರುವ ಶಂಕೆ ಬಲವಾಗಿದೆ.

ಕೇಂದ್ರ ಗೃಹ ಸಚಿವಾಲಯ ಎಚ್ಚರಿಕೆ
2013ರಲ್ಲಿ ಆಂತರಿಕ ಸಂವಹನದಲ್ಲಿ ಕೇಂದ್ರ ಗೃಹ ಸಚಿವಾಲಯವು ಪಶ್ಚಿಮ ಘಟ್ಟಗಳು ಮತ್ತು ತಮಿಳುನಾಡು, ಕೇರಳ-ಕರ್ನಾಟಕ ತ್ರಿಜಂಕ್ಷನ್‌ನ ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಘಟನೆಯ ನೆಲೆಯನ್ನು ವಿಸ್ತರಿಸಲು ಮಾವೋವಾದಿಗಳ ಪ್ರಯತ್ನದ ಕುರಿತು ಸುಳಿವು ನೀಡಿತ್ತು.

Advertisement

ಕುದುರೆಮುಖ ಹೋರಾಟದಿಂದ ಶಕ್ತಿ
ಆಂಧ್ರಪ್ರದೇಶ, ಒಡಿಶಾ ಗಡಿಭಾಗದಲ್ಲಿ ಹೆಚ್ಚಿದ್ದ ನಕ್ಸಲ್‌ ಚಟುವಟಿಕೆ 1980ರಲ್ಲಿ ಉತ್ತರ ಕರ್ನಾಟಕದ ಬೀದರ್‌, ರಾಯಚೂರು, ಕಲಬುರಗಿಯ ಕೆಲವೆಡೆ ಸಣ್ಣ ಪ್ರಮಾಣದಲ್ಲಿ ಸಕ್ರಿಯವಾಗಿತ್ತು. 1999ರ ಅವಧಿಯಲ್ಲಿ ರಾಜ್ಯದಲ್ಲಿ ಸಾಕೇತ್‌ ರಾಜನ್‌ ಹಾಗೂ ಇತರರ ನೇತೃತ್ವದಲ್ಲಿ ನಕ್ಸಲ್‌ ಚಟುವಟಿಕೆ ಚಿಕ್ಕಮಗಳೂರು, ಶಿವಮೊಗ್ಗ, ಚಾಮರಾಜನಗರ, ಕೊಡಗು, ಮಡಿಕೇರಿ, ರಾಯಚೂರು ಸಹಿತ ಕೆಲವು ಜಿಲ್ಲೆಗಳಲ್ಲಿ ಬಲಗೊಂಡಿತ್ತು. ರಾಜ್ಯದಲ್ಲಿ ನಕ್ಸಲ್‌ ಚಟುವಟಿಕೆ ತೀವ್ರಗೊಳ್ಳಲು ಮೊದಲಿಗೆ ನೀಲಗುಳಿ ಪದ್ಮನಾಭ ಕಾರಣ ನಾಗಿದ್ದ. ಹಾಗೆಯೇ ಕುದುರೆಮುಖ ನ್ಯಾಶನಲ್‌ ಪಾರ್ಕ್‌ ಸ್ಥಾಪನೆ ವಿಷಯ ಸಂಬಂಧಿಸಿ ಸ್ಥಳೀಯ ಆದಿವಾಸಿಗಳನ್ನು ಒಕ್ಕಲೆಬ್ಬಿಸುವುದನ್ನು ವಿರೋಧಿಸಿ ಹೋರಾಟ ನಡೆಯುತ್ತಿರುವಾಗ ಕೆಲವು ಸ್ಥಳೀಯರೂ ನಕ್ಸಲರ ಸಂಪರ್ಕಕಕ್ಕೆ ಸಿಲುಕಿದ್ದರು. ಬಳಿಕ ಕರಾವಳಿ ಕರ್ನಾಟಕದಲ್ಲಿ ನಕ್ಸಲ್‌ ಚಟುವಟಿಕೆ ತುಸು ಹೆಚ್ಚಾಗಿತ್ತು.

ವಿಕ್ರಂ ಗೌಡ ಯಾರು?
ಮಾ. 16ರಂದು ದಿನಸಿ ಖರೀದಿಸಿ ತೆರಳಿದ ಶಂಕಿತ ನಕ್ಸಲರ ತಂಡದಲ್ಲಿದ್ದ ನಾಲ್ವರ ಪೈಕಿ ಮೂವರ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ವಿಕ್ರಂಗೌಡ, ಲತಾ, ದಿಶಾ ಎಂದು ಅಂದಾಜಿಸಿದೆ. ಇನ್ನೋರ್ವ ಸಂತೋಷ್‌ ಎನ್ನಲಾಗಿದೆ. ಉಡುಪಿ ಜಿಲ್ಲೆಯ ಹೆಬ್ರಿ ಮೂಲದ ಕೂಡ್ಲು ನಾಡಾ³ಲು ನಿವಾಸಿ ವಿಕ್ರಮ್‌ ಗೌಡ ಆಲಿಯಾಸ್‌ ಶ್ರೀಕಾಂತ್‌ ಕೇರಳದ ವಯನಾಡ್‌ ಕೊಯಿಕ್ಕೋಡ್‌ನ‌ಲ್ಲಿ ನಿರತವಾಗಿರುವ ಕಬಿನಿ ದಳದ ಮುಖ್ಯಸ್ಥ. ಈತನ ಪತ್ನಿ ಸಾವಿತ್ರಿ ಕೇರಳ ಪೊಲೀಸರ ವಶದಲ್ಲಿದ್ದಾಳೆ. ಮೈಸೂರಿನ ಸಾಕೇತ್‌ ರಾಜನ್‌ ಬಳಿಕ ನಕ್ಸಲರಲ್ಲಿ ವಿಕ್ರಂ ಗೌಡ ಪ್ರಭಾವಶಾಲಿಯಾಗಿದ್ದಾನೆ. ಲತಾ ಆಲಿಯಾಸ್‌ ಲೋಕಮ್ಮ ಆಲಿಯಾಸ್‌ ಶ್ಯಾಮಲಾ ಚಿಕ್ಕಮಗಳೂರು ಬುಕ್ಕಡಿಬೈಲು ಮುಂಡಗಾರಿನವಳು. ಇನ್ನುಳಿದವರಿಬ್ಬರ ಬಗ್ಗೆ ಮಾಹಿತಿ ಲಭ್ಯವಾಗಬೇಕಿದೆ.

ಕೇರಳದಿಂದ ಕಾರ್ಕಳ, ಶೃಂಗೇರಿ ಕಡೆಗೆ ಸಂಚಾರ ಸಾಧ್ಯತೆ
ವಿಕ್ರಂ ಗೌಡ ತಂಡ ಕೇರಳದಲ್ಲಿ ಹೊಸ ಸದಸ್ಯರ ನೇಮಕದಲ್ಲಿ ತೊಡಗಿರುವ ಸಂಗತಿಯೂ ಈ ಹಿಂದೆಯೇ ಪೊಲೀಸ್‌ ಮೂಲಗಳಿಗೆ ತಿಳಿದಿತ್ತು. ಜನ ಸಂಚಾರ ಕಡಿಮೆ ಇರುವ ಪಶ್ಚಿಮ ಘಟ್ಟ ತಪ್ಪಲಿನ ಕಾಡು ಮಾರ್ಗಗಳಲ್ಲಿ ಆತ ಹೊಸ ಸಂಗಡಿಗರೊಂದಿಗೆ ಓಡಾಟ ನಡೆಸುತಿದ್ದ ಎನ್ನಲಾಗಿದೆ. ಕೇರಳದಿಂದ ಕೊಡಗು, ಮಡಿಕೇರಿ ಮಾರ್ಗವಾಗಿ ಬಿಸಿಲೆ ಘಾಟ್‌, ಚಾರ್ಮಾಡಿ ಕುದುರೆಮುಖ ಮಾರ್ಗವಾಗಿ ಹಲವು ಬಾರಿ ಓಡಾಡಿಕೊಂಡಿದ್ದ. ಕೂಜುಮಲೆಯಲ್ಲಿ ಕಾಣಿಸಿಕೊಂಡ ಬಳಿಕ ಜನಸಂಚಾರ ಕಡಿಮೆಯಿರುವ ಕಾಡು ದಾರಿಯಾಗಿ ಸುಬ್ರಹ್ಮಣ್ಯ ಬಿಸಿಲೆ, ಬೆಳ್ತಂಗಡಿ, ಚಾರ್ಮಾಡಿ ಕಾರ್ಕಳ, ಹೆಬ್ರಿ, ಕುಂದಾಪುರ, ಶೃಂಗೇರಿ, ಚಿಕ್ಕಮಗಳೂರು ಈ ಭಾಗಕ್ಕೆ ಪರಾರಿಯಾಗಿರುವ ಸಾಧ್ಯತೆಯಿದೆ. ಕೇರಳ, ಕರ್ನಾಟಕ ಈ ಭಾಗಗಳಿಗೆ ಸಂಧಿಸುವ ಕೇಂದ್ರ ಮಾರ್ಗ ಇದಾಗಿದ್ದು ತಪ್ಪಿಸಿಕೊಳ್ಳಲು ಸುಲಭ ಜತೆಗೆ ಸುರಕ್ಷಿತ ಎನ್ನಲಾಗಿದೆ.

ಕೊಡಗು-ದ.ಕ. ಗಡಿಭಾಗದ ಕಡಮಕಲ್ಲು ಗ್ರಾಮದಲ್ಲಿ ಕಂಡುಬಂದಿದ್ದಾರೆ ಎನ್ನಲಾದ ಶಂಕಿತ ನಕ್ಸಲರ ಬಗ್ಗೆ ಸಮಗ್ರ ತನಿಖೆ ನಡೆಸುತ್ತಿದ್ದೇವೆ. ಭೇಟಿ ನೀಡಿದ ತಂಡದಲ್ಲಿದ್ದವರು ಕೇರಳದವರಾ ಅಥವಾ ಅನ್ಯ ರಾಜ್ಯದವರೇ ಇತ್ಯಾದಿ ವಿಚಾರಗಳ ಬಗ್ಗೆ ಮಾಹಿತಿ ಸಂಗ್ರಹಿಸುತಿದ್ದೇವೆ. ಸದ್ಯ ಯಾವುದೇ ಮಾಹಿತಿ ಬಹಿರಂಗ ಪಡಿಸುವಂತಿಲ್ಲ. ಶೋಧ ಕಾರ್ಯ ಮುಂದುವರಿದಿದೆ.
– ಕೆ. ರಾಮರಾಜನ್‌,
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಕೊಡಗು ಜಿಲ್ಲೆ

- ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next