Advertisement

Kerala Bird Flu: ದಕ್ಷಿಣ ಕನ್ನಡ ಜಿಲ್ಲೆಯ ಗಡಿಯಲ್ಲಿ ನಿಗಾ

01:19 AM Apr 22, 2024 | Team Udayavani |

ಮಂಗಳೂರು: ಕೇರಳದ ಆಲಪ್ಪುಳ ಜಿಲ್ಲೆಯ ಎರಡು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಹಕ್ಕಿ ಜ್ವರ ದೃಢಪಟ್ಟಿದ್ದು, ಕೇರಳಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗಗಳಲ್ಲೂ ವಿಶೇಷ ನಿಗಾ ಇರಿಸಲಾಗಿದೆ.

Advertisement

ಗಡಿ ಭಾಗವಾದ ತಲಪಾಡಿ, ಜಾಲ್ಸೂರು, ಸಾರಡ್ಕ ಗಡಿಯಲ್ಲಿ ವಿಶೇಷ ಚೆಕ್‌ಪೋಸ್ಟ್‌ ನಿರ್ಮಿಸಲು ತೀರ್ಮಾನಿಸಿದ್ದು, ಅದರಂತೆ ಸೋಮವಾರದಿಂದಲೇ ಇವು ಕಾರ್ಯಾಚರಣೆ ಆರಂಭಿಸಲಿವೆ. ಕೋಳಿಗಳನ್ನು ಹೊತ್ತ ಕೆಲವು ವಾಹನಗಳು ಜಿಲ್ಲೆಯಿಂದ ಕೇರಳಕ್ಕೆ ಹೋಗುತ್ತವೆ. ಮರಳಿ ಬರುವ ವೇಳೆ ಆ ವಾಹನಗಳಿಗೆ ಸ್ಯಾನಿಟೈಸರ್‌ ಸಿಂಪಡಣೆ ಮಾಡಲು ತೀರ್ಮಾನಿಸಲಾಗಿದೆ.

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ| ಅರುಣ್‌ ಕುಮಾರ್‌ “ಉದಯವಾಣಿ’ಗೆ ಪ್ರತಿಕ್ರಿಯಿಸಿ, “ಕೇರಳದ ಆಲಪ್ಪುಳದಲ್ಲಿ ಹಕ್ಕಿ ಜ್ವರ ದೃಢಪಟ್ಟಿದೆ. ಆ ಪ್ರದೇಶ ಮಂಗಳೂರಿನಿಂದ ಸುಮಾರು 400 ಕಿ.ಮೀ. ದೂರದಲ್ಲಿದೆ. ಆ ಭಾಗದಲ್ಲಿ ಸದ್ಯ ಎರಡನೇ ಬಾರಿ ಹಕ್ಕಿ ಜ್ವರ ಕಂಡುಬರುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ ಯಾವುದೇ ಪ್ರಕರಣ ಕಂಡುಬಂದಿಲ್ಲ. ಆದರೂ ನಾವು ಸನ್ನದ್ಧರಾಗಿದ್ದೇವೆ. ಜಿಲ್ಲೆಯ ಮೂರು ಗಡಿ ಭಾಗಗಳಲ್ಲಿ ಚೆಕ್‌ಪೋಸ್ಟ್‌ ನಿರ್ಮಾಣ ಮಾಡುತ್ತೇವೆ. ಸಾಮಾನ್ಯವಾಗಿ ಹಕ್ಕಿ ಜ್ವರವು ವಲಸೆ ಹಕ್ಕಿಗಳ ಮೂಲಕ ಒಂದು ಊರಿನಿಂದ ಮತ್ತೂಂದು ಊರಿಗೆ ಹರಡುತ್ತದೆ. ಈಗ ಬೇಸಗೆ ಕಾಲವಾದ್ದರಿಂದ ಹಕ್ಕಿಗಳು ಒಂದು ಕಡೆಯಿಂದ ಮತ್ತೂಂದು ಕಡೆಗೆ ವಲಸೆ ಹೋಗುವುದಿಲ್ಲ. ಈ ರೋಗಕ್ಕೆ ಕಾರಣವಾಗುವ ವೈರಸ್‌ ಕೋಳಿಯಿಂದ ಕೋಳಿಗೆ ಮತ್ತು ಕೋಳಿಯಿಂದ ಮನುಷ್ಯರಿಗೆ ಹರಡುವ ಸಾಧ್ಯತೆ ಇರುತ್ತದೆ. ಕೋಳಿ ಫಾರ್ಮ್ಗಳಲ್ಲಿ ಕೆಲಸ ಮಾಡುವವರು, ಮಾಂಸ ಸಂಸ್ಕರಣ ಘಟಕಗಳಲ್ಲಿ ಕೆಲಸ ಮಾಡುವವರು ಎಚ್ಚರಿಕೆ ವಹಿಸಬೇಕು. ಇದು ಮನುಷ್ಯರಲ್ಲಿ ಪರಸ್ಪರ ಹರಡುವುದಿಲ್ಲ’ ಎಂದಿದ್ದಾರೆ.

“ಗ್ಲ್ಯಾಂಡರ್ಸ್‌’ ಸೋಂಕು: ಜಿಲ್ಲೆಯಲ್ಲಿ ನಿಗಾ
“ರಾಜ್ಯದ ಕೆಲವು ಕಡೆ ಪ್ರಾಣಿಜನ್ಯ ಗ್ಲ್ಯಾಂಡರ್ಸ್‌ ಸಾಂಕ್ರಾಮಿಕ ರೋಗ ಕುದುರೆಗಳಲ್ಲಿ ಪತ್ತೆಯಾಗಿರುವ ಹಿನ್ನೆಲೆ ಯಲ್ಲಿಯೂ ದ.ಕ. ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಸದ್ಯ 18 ಕುದುರೆಗಳಿವೆ. ಬೇರೆ ಊರುಗಳಿಂದ ಕುದುರೆ ಖರೀದಿಸಬಾರದು ಅಥವಾ ತರಬಾರದು ಎಂಬ ಮಾಹಿತಿಯನ್ನು ಸಂಬಂಧಪಟ್ಟವರಿಗೆ ನೀಡಲಾಗಿದೆ’ ಎಂದು ಡಾ| ಅರುಣ್‌ ಕುಮಾರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next